ತುಮಕೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಆಕಾಂಕ್ಷಿತ ಅಭ್ಯರ್ಥಿಗಳ ಅಭಿಪ್ರಾಯದ ಸಂಗ್ರಹ ಸಭೆ ನಡೆಸಲಾಗ್ತಿದೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿತ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ಮಾಡಿಕೊಳ್ಳಲು ಬೆಳಗಾವಿಯಲ್ಲಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಸಭೆ ನಡೆಸಲಾಗ್ತಿದೆ. ತುಮಕೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿರುವ ಕೃಷ್ಣಭೈರೇಗೌಡ, ಎಲ್ಲರ ಜೊತೆಗೆ ಸಮಗ್ರವಾಗಿ ಚರ್ಚೆ ನಡೆಸಿ ಅಂತಿಮ ವರದಿಯನ್ನು ಕಾಂಗ್ರೆಸ್ ರಾಜ್ಯ ನಾಯಕರಿಗೆ ಸಲ್ಲಿಸಲಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಚಿವ ಕೆ.ಎನ್ ರಾಜಣ್ಣ, ಟಿ.ಬಿ. ಜಯಚಂದ್ರ, ಶಾಸಕ ಎಸ್.ಆರ್ ಶ್ರೀನಿವಾಸ್, ಕೆ. ಷಡಾಕ್ಷರಿ, ಡಾ.ರಂಗನಾಥ್, ಪಾವಗಡ ಶಾಸಕ ವೆಂಕಟೇಶ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗಿಯಾಗಲಿದ್ದಾರೆ.
ತುಮಕೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದು, ಅದರ ಜೊತೆಗೆ ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿರುವ ಮಾಜಿ ಸಂಸದ ಮುದ್ದಹನುಮೇಗೌಡರನ್ನು ವಾಪಸ್ ಕಾಂಗ್ರೆಸ್ಗೆ ಕರೆ ತರುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಜೊತೆಗೆ ಪರಮೇಶ್ವರ್ ಆಪ್ತ ಮುರುಳೀಧರ ಹಾಲಪ್ಪ, ಮಾಜಿ ಶಾಸಕ ಗೌರಿಶಂಕರ್, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಕಾಂಗ್ರೆಸ್ ಮಹಿಳಾ ಮುಖಂಡೆ ಗೀತಾ ರಾಜಣ್ಣ, ಸಚಿವ ಕೆ.ಎನ್ ರಾಜಣ್ಣ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಂಚೂಣಿಯಲ್ಲಿ ಇದ್ದು ಪಕ್ಷವನ್ನು ಸಂಘಟನೆ ಮಾಡಿಕೊಂಡು ಬಂದಿದ್ದಾರೆ ಅನ್ನೋ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.
ಮೈತ್ರಿ ಅಭ್ಯರ್ಥಿ ಆಗಲು ಸೋಮಣ್ಣ ಕಸರತ್ತು
ತುಮಕೂರಿನಲ್ಲಿ ಅಖಾಡಕ್ಕೆ ಇಳಿಯಲು ಮಾಜಿ ಸಚಿವ ವಿ.ಸೋಮಣ್ಣ ಸರ್ಕಸ್ ಮಾಡ್ತಿದ್ದಾರೆ. ಇತ್ತೀಚಿಗೆ ಸಿದ್ಧಗಂಗಾ ಮಠದಲ್ಲಿ ಗುರುಭವನ ನಿರ್ಮಾಣದ ಬಳಿಕ ಇದೀಗ ತುಮಕೂರಿನಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಸಂಘಟನೆ ಕೆಲಸಕ್ಕೆ ಕೈ ಹಾಕಿದ್ದಾರೆ. ತುಮಕೂರಿನ ಕೊಲ್ಲಾಪುರದಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸೋಮಣ್ಣ, ಜೆಡಿಎಸ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾರ್ತಿಕ ಸೋಮವಾರ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸೋಮಣ್ಣ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗುವ ಮುನ್ಸೂಚನೆ ನೀಡಿದ್ದಾರೆ. ತಿಗಳ ಸಮುದಾಯದ ಮುಖಂಡರು ಹಾಗೂ ಕಾರ್ಪೋರೇಟರ್ಗಳನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ತುಮಕೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ತಿಗಳ ಸಮುದಾಯ ಬರೋಬ್ಬರಿ 2.10 ಲಕ್ಷ ಮತದಾರರನ್ನು ಹೊಂದಿದ್ದು, ಪಾಲಿಕೆ ಉಪಮೇಯರ್ ಜೆಡಿಎಸ್ನ ನರಸಿಂಹಮೂರ್ತಿ, ಜೆಡಿಎಸ್ ಕಾರ್ಪೋರೇಟರ್ಗಳಾದ ಲಿಲಿತಾ ರವೀಶ್ ಹಾಗೂ ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ್ದಾರೆ. ಮೂವರು ಜೆಡಿಎಸ್ ಸಮುದಾಯದ ಪ್ರಭಾವಿ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಮತಗಳಿಕೆ ಲೆಕ್ಕಾಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿದ್ದಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಹಾಗು ಉದ್ಘಾಟನಾ ಕಾರ್ಯಕ್ರಮದ ನೆಪದಲ್ಲಿ ಲಿಂಗಾಯತ ಮತಗಳನ್ನ ಸೆಳೆದಿರುವ ಸೋಮಣ್ಣ, ಇದೀಗ ಇದೀಗ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಿಗಳ ಸಮುದಾಯದ ಮತಗಳನ್ನು ಸೆಳೆಯುವ ಕಸರತ್ತು ಮಾಡಿದ್ದಾರೆ ಎನ್ನಬಹುದು.
ಕೃಷ್ಣಮಣಿ






