ದಾವಣಗೆರೆಯ ಕಾಂಗ್ರೆಸ್ ನಾಯಕ ಹಾಗು ಶಾಸಕ ಶಾಮನೂರು ಶಿವಶಂಕರಪ್ಪ ಸಿಎಂ ಸೀಟ್ಗೆ ಅರ್ಜಿ ಹಾಕಿದ್ದರು. ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸ್ಥಾನ ಬೇಡ, ಕೊಡುವುದಾದರೆ ಲಿಂಗಾಯತರನ್ನೇ ಸಿಎಂ ಮಾಡಿ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ಒಳಗೇ ಬೆಂಕಿಯ ಕೆಂಡ ಎಸೆದುಬಿಟ್ಟಿದ್ದರು. ಸಿಎಂ ಜೊತೆಗೆ ಮಾತನಾಡ್ತೀರಾ..? ಎಂದಾಗ ಅವರನ್ನೇ ಕೇಳಿ ಎಂದು ಬಿರುಸಿನ ಮಾತನ್ನು ಎಸೆದಿದ್ದರು. ಆ ಬಳಿಕ ಹೈಕಮಾಂಡ್ ಏನಾದರೂ ನಿಮ್ಮನ್ನು ಸಂಪರ್ಕ ಮಾಡಿದ್ಯಾ..? ಅನ್ನೋ ಪ್ರಶ್ನೆಗೆ ಯಾವ್ ಹೈಕಮಾಂಡ್ ಇಲ್ಲ, ಏನೂ ಇಲ್ಲ ಎಂದು ಕೋಪದಲ್ಲೇ ಉತ್ತರ ಕೊಟ್ಟಿದ್ದರು. ಸಂಧಾನಕ್ಕೆ ಹೋಗಿದ್ದ ಸಚಿವ ಈಶ್ವರ ಖಂಡ್ರೆ ಜೊತೆಗೂ ಕಟು ಮಾತುಗಳಲ್ಲಿ ಮಾತನಾಡಿದ್ದ, ಶಾಮನೂರು ಶಿವಶಂಕರಪ್ಪ ಇದೀಗ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸುವ ಸಿದ್ಧತೆಯಲ್ಲಿದ್ದಾರೆ.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಎಂದಿದ್ದ ಶಾಮನೂರು..!
ಬೆಂಗಳೂರಿನಲ್ಲಿ ತಮ್ಮ ಸಮುದಾಯದ ಅಧಿಕಾರಿ ಒಬ್ಬರಿಗೆ ಪೋಸ್ಟಿಂಗ್ ಕೇಳಿದ್ದ ಶಾಮನೂರು ಮಾತಿಗೆ ಮನ್ನಣೆ ಸಿಕ್ಕಿರಲಿಲ್ಲ ಅನ್ನೋ ಕಾರಣಕ್ಕೆ ಪಕ್ಷದ ವಿರುದ್ಧ ಗುಡುಗಿದ್ದರು. ಆ ಬಳಿಕ ಬಸವರಾಜ ರಾಯರೆಡ್ಡಿ ಬೆಂಗಳೂರಲ್ಲಿ ಯಾವ ಜಾತಿಯ ಎಷ್ಟು ಅಧಿಕಾರಿಗಳು ಇದ್ದಾರೆ ಅನ್ನೋ ಬಗ್ಗೆ ಬಹಿರಂಗವಾಗಿಯೇ ಮಾಹಿತಿ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ಯಾವ ಅಧಿಕಾರಿಗೆ ಪೋಸ್ಟಿಂಗ್ ಬೇಕು ಅನ್ನೋದನ್ನು ತಿಳಿಸಿದ್ರೆ ಖಂಡಿತ ಪೋಸ್ಟಿಂಗ್ ಕೊಡಿಸುವ ಕೆಲಸ ಮಾಡ್ತೇನೆ ಎನ್ನುವ ಮೂಲಕ ಶಾಮನೂರು ಕೋಪ ಶಮನಕ್ಕೆ ಮುಂದಾಗಿದ್ರು. ಇಷ್ಟೆಲ್ಲಾ ಆದರೂ ಶಾಮನೂರು ಮನಸ್ಸು ಕರಗದಿದ್ದಾಗ ಸಿಎಂ ಸಿದ್ದರಾಮಯ್ಯ ಕೂಡ ಅಂತರ ಕಾಯ್ದುಕೊಂಡಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಯಾವುದೇ ಸಮಸ್ಯೆ ಇಲ್ಲ ಎಲ್ಲವೂ ಸರಿಯಾಗಿದೆ ಎನ್ನುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಇದೀಗ ದೆಹಲಿಯಿಂದ ಫೋನ್ ರಿಂಗಣಿಸಿದೆ.
ದೆಹಲಿಯಲ್ಲಿ ಶಾಮನೂರು ಬಗ್ಗೆ ಸಿಎಂ ಸಿದ್ದರಾಮಯ್ಯ ರಿಪೋರ್ಟ್..
ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ದ ಹಾಗೆ ಕಾಂಗ್ರೆಸ್ ಗೆಲ್ಲವ ಕಸರತ್ತು ಶುರು ಮಾಡಿದೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಚುನಾವಣೆ ಗೆದ್ದು ಬಿಜೆಪಿಯನ್ನು ಸೋಲಿಸುವ ಉಮೇದಿನಲ್ಲಿರುವ INDIA ಒಕ್ಕೂಟ ತನ್ನದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸಿದ್ದು, ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು. ಶಾಮನೂರು ಶಿವಶಂಕರಪ್ಪ ಪಕ್ಷದ ವಿರುದ್ಧವೇ ಸಿಡಿದೆದ್ದಿರುವ ಬಗ್ಗೆ ದೆಹಲಿ ನಾಯಕರಿಗೆ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಕೂಡಲೇ ಬೆಂಗಳೂರಿಗೆ ಬರುವಂತೆ ಶಾಮನೂರು ಅವರಿಗೆ ಸೂಚನೆ ಕೊಡಲಾಗಿದೆ ಎನ್ನಲಾಗಿದೆ. ಇನ್ನು ದೆಹಲಿಯ ಫೋನ್ ಕರೆ ಟ್ರಿಣ್ ಟ್ರಿಣ್ ಎನ್ನುತ್ತಿರುವಾಗಲೇ ಶಾಮನೂರು ಬೆಂಗಳೂರು ಕಡೆಗೆ ಹೊರಟಿದ್ದು, ಬೆಂಗಳೂರಿಗೆ ಹೋಗ್ತಿದ್ದೇನೆ. ಏನು ವಿಶೇಷ ಇಲ್ಲ ಪ್ರತಿ ಬಾರಿಯಂತೆ ಭೇಟಿ ಆಗ್ತಿದ್ದೀನಿ ಅಷ್ಟೇ ಎಂದಿದ್ದಾರೆ ಶಾಮನೂರು.
ಕಾಂಗ್ರೆಸ್ಗೆ ನಷ್ಟ ಏನು..? ಬಿಜೆಪಿಗೆ ನಷ್ಟ ಏನಾದ್ರು ಆಯ್ತಾ..?
ಕಾಂಗ್ರೆಸ್ ಪಕ್ಷದಲ್ಲಿ ಗೊಂದಲಗಳು ಶುರುವಾಗಿದ್ದರಿಂದ ಲಿಂಗಾಯತ ಸಮುದಾಯವನ್ನು ಮತ್ತೆ ಬಿಜೆಪಿ ಕಡೆಗೆ ಸೆಳೆಯುವ ಮನಸ್ಥಿತಿಗೆ ಹೋಗಿದ್ದ ಬಿಜೆಪಿಗೆ ಕೊಂಚ ಹಿನ್ನಡೆ ಆಗಬಹುದು. ಇಂದು ಸಿದ್ದರಾಮಯ್ಯ ಜೊತೆಗೆ ಮಾತನಾಡಿದ ಬಳಿಕ ಶಾಮನೂರು ಶಿವಶಂಕರಪ್ಪ, ಹೊಸ ಮನುಷ್ಯರ ಹಾಗೆ ಏನೂ ಆಗೇ ಇಲ್ಲ ಎನ್ನುವಂತೆ ಮಾತನಾಡಲೂಬಹುದು. ಅಥವಾ ಮನೆ ಎಂದ ಮೇಲೆ ಇದೆಲ್ಲಾ ಸಹಜ, ಮಾಧ್ಯಮಗಳು ಸಣ್ಣ ವಿಚಾರವನ್ನು ದೊಡ್ಡದು ಮಾಡಿದವು ಅಷ್ಟೆ ಎಂದು ಕಾಂಗ್ರೆಸ್ ಮಾಧ್ಯಮಗಳ ಕಡೆಗೆ ಗೂಬೆ ಕೂರಿಸಲೂ ಬಹುದು. ಆದರೆ ಎಲ್ಲವನ್ನೂ ಮೀರಿದಂತೆ ಮಾತನಾಡಿದ್ದ 92 ವರ್ಷದ ಶಾಮನೂರು ಶಿವಶಂಕರಪ್ಪ, ದೆಹಲಿಯಿಂದ ಕರೆ ಬರುತ್ತಿದ್ದ ಹಾಗೆ ಬೆಂಗಳೂರಿಗೆ ಬಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿರುವುದು. ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಎಷ್ಟು ಸುಭದ್ರ ಸ್ಥಿತಿಯಲ್ಲಿದೆ ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಅರ್ಥ ಮಾಡಿಕೊಂಡರೆ ರಾಜ್ಯಕ್ಕೆ ಉತ್ತಮ ವಿಪಕ್ಷ ಆಗಬಹುದು ಎನ್ನಬಹುದು.
-ಕೃಷ್ಣಮಣಿ