ವಿವಿಧ ನ್ಯಾಯಮಂಡಳಿಗೆ ನೇಮಕಾತಿಗಳನ್ನು ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರದ ನಡೆಯ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಟ್ರಿಬ್ಯೂನಲ್ *ನ್ಯಾಯಮಂಡಳಿಗಳು) ಸದಸ್ಯರ ಆಯ್ಕೆ ಮತ್ತು ಅಧಿಕಾರಾವಧಿಯಲ್ಲಿ ಹೊಸ ಕಾನೂನನ್ನು ಅನುಕರಿಸುವ. ಅಗತ್ಯವನ್ನು ಪ್ರಶ್ನಿಸಿರುವ ನ್ಯಾಯಾಲಯ, ಈ ಹಿಂದೆ ಇಂತಹ ನಿಬಂಧನೆಗಳನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದರೂ ಕೂಡ ಕೇಂದ್ರ ಈ ಕ್ರಮಕ್ಕೆ ಮುಂದಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಸರಕಾರವು ತನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಮತ್ತು ತನ್ನ ತೀರ್ಪು, ಆದೇಶಗಳಿಗೆ ಯಾವುದೇ ಗೌರವವನ್ನು ಹೊಂದಿಲ್ಲವೆಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
“ನಾವು ಈ ವಿಷಯಗಳನ್ನು ಮೊದಲು ಆಲಿಸಿದ್ದೇವೆ ಮತ್ತು ವಿವರವಾದ ತೀರ್ಪುಗಳನ್ನು ಜಾರಿಗೊಳಿಸಿದ್ದೇವೆ. ಈ ನ್ಯಾಯಾಲಯದ ತೀರ್ಪುಗಳಿಗೆ ಯಾವುದೇ ಗೌರವವಿಲ್ಲ ಎಂದು ನಾವು ಭಾವಿಸುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಾಧೀಶರಾದ ಟಿ. ನಾಗೇಶ್ವರ ರಾವ್ ಮತ್ತು ಡಿ ವೈ ಚಂದ್ರಚೂಡ್ ಅವರ ತ್ರಿಸದಸ್ಯ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ತಿಳಿಸಿತು.
ವಿಚಾರಣೆಯ ಸಮಯದಲ್ಲಿ, ಸಿಜಿಐ ತುಷಾರ್ ಮೆಹ್ತಾ, ‘ನಮಗೆ ಕೇವಲ ಮೂರು ಆಯ್ಕೆಗಳು ಮಾತ್ರ ಉಳಿದಿವೆ – ಶಾಸನವನ್ನು ಉಳಿಸಿಕೊಳ್ಳುವುದು ಅಥವಾ ನ್ಯಾಯಮಂಡಳಿಗಳನ್ನು ಮುಚ್ಚಿ ನ್ಯಾಯಾಲಯಕ್ಕೆ ಅಧಿಕಾರಗಳನ್ನು ನೀಡುವುದು ಮತ್ತು ಮೂರನೆಯದು ನಾವು ನಮ್ಮಲ್ಲಿಯ ಜನರನ್ನು ಸದಸ್ಯರನ್ನಾಗಿ ನೇಮಿಸುವುದು’ ಎಂದು ತಿಳಿಸಿದರು.
ಕೊನೆಯ ದಿನಾಂಕದಲ್ಲಿ, ಕೆಲವು ವ್ಯಕ್ತಿಗಳು ನೇಮಕಗೊಂಡಿದ್ದಾರೆ ಎಂದು ಅವರು ತಿಳಿಸಿದರು. ಅದಕ್ಕೆ ನ್ಯಾಯಪೀಠ, “ನೀವು ಎಷ್ಟು ಜನರನ್ನು ನೇಮಕ ಮಾಡಿದ್ದೀರಿ?” ಎಂದು ಪ್ರಶ್ನಿಸಿತು.
ಕೇಂದ್ರ ಆಡಳಿತಾತ್ಮಕ ಟ್ರಿಬ್ಯೂನಲ್ಗೆ ಕೆಲವು ನೇಮಕಾತಿಗಳನ್ನು ಮಾಡಲಾಗಿದೆಯೆಂದು ಮೆಹ್ತಾ ಪ್ರತಿಕ್ರಿಯಿಸಿದರು, ಶಿಫಾರಸು ಮಾಡಿದರೆ, ನೇಮಕಾತಿಯ ಬಗ್ಗೆ ಎರಡು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮೆಹ್ತಾ ತಿಳಿಸಿದರು.

ನ್ಯಾಯಾಧೀಶ ನಾಗೇಶ್ವರ್ ರಾವ್ ಅವರು, ಕೆಲವು ನ್ಯಾಯಮಂಡಳಿಗಳು ಮುಚ್ಚುವ ಅಂಚಿನಲ್ಲಿವೆ. ಕೇವಲ ಒಬ್ಬ ಸದಸ್ಯರನ್ನು ಹೊಂದಿದ ನ್ಯಾಯಮಂಡಳಿಗಳಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ (ಎನ್ಎಲ್ಟಿಟಿ) ಮತ್ತು ನ್ಯಾಷನಲ್ ಕಂಪೆನಿ ಲಾ ಮೇಲ್ಮನಪತ್ರ ಟ್ರಿಬ್ಯೂನಲ್ನಲ್ಲಿ ನೇಮಕಾತಿ ವಿಳಂಬವನ್ನು ನ್ಯಾಯಾಧೀಶ ಚಂದ್ರಚೂಡ್ ಪ್ರಶ್ನಿಸಿದರು..
ಸದ್ಯ 19 ನ್ಯಾಯಮಂಡಳಿಗಳಿಗೆ ಅಧ್ಯಕ್ಷರಿಲ್ಲ. 110 ನ್ಯಾಯಾಂಗ ಸದಸ್ಯರ ಹುದ್ದೆಗಳು ಖಾಲಿ ಇವೆ. 111 ತಾಂತ್ರಿಕ ಸಿಬ್ಬಂದಿ ಹುದ್ದೆಗಳೂ ಖಾಲಿ ಇವೆ. ಸರ್ಕಾರದ ನೇಮಕಾತಿ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ನ್ಯಾಯಾಂಗ ನಿಂದನೆಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಕೇಂದ್ರ ಸರ್ಕಾರಕ್ಕ ಎಚ್ಚರಿಕೆಯನ್ನು ನೀಡಿದೆ.