ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಸಾಬರಮತಿ ನದಿ ಹಾಗೂ ಎರಡು ಕೆರೆಗಳಲ್ಲಿ ಕರೋನಾ ವೈರಾಣು ಇರುವುದನ್ನು ಐಐಟಿ ಗಾಂಧಿನಗರದ ಅಧ್ಯಯನ ತಂಡವು ಪತ್ತೆ ಹಚ್ಚಿದೆ.
ನೀರಿನ ಮಾದರಿಗಳಲ್ಲಿ ಪತ್ತೆಯಾದ ವೈರಾಣು ಜೀವಂತವಾಗಿತ್ತೋ ಅಥವಾ ನಿರ್ಜೀವವಾಗಿತ್ತೋ ಎಂಬುದರ ಕುರಿತು ಅಧ್ಯಯನ ತಂಡವು ಮಾಹಿತಯನ್ನು ಬಹಿರಂಗಪಡಿಸಿಲ್ಲ.ಈ ಅಧ್ಯಯನ ವರದಿ ಬಹಿರಂಗಗೊಂಡ ಬೆನ್ನಲ್ಲೇ, ಅಹಮದಾಬಾದ್ ಮುನಿಸಿಪಾಲ್ ಕಾರ್ಪೊರೇಷನ್, ನೀರಿನ ಮಾದರಿಗಳನ್ನು ಗುಜರಾತ್ ಬಯೋಟೆಕ್ನಾಲಜಿ ಅಧ್ಯಯನ ಕೇಂದ್ರಕ್ಕೆ (GBRC) ರವಾನಿಸಿದೆ. ನೀರಿನಲ್ಲಿ ಕೋವಿಡ್ ವೈರಾಣು ಇರುವುದನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿರು ಕಾರ್ಪೊರೇಷನ್ ಇಂಜಿನಿಯರ್ ಆಗಿರುವ ಹರ್ಪಲ್ ಸಿನ್ಹ ಝಾಲಾ ಅವರು, GBRC ಕಾರ್ಪೊರೇಷನ್ ಗಾಗಿ ಅಧಿಕೃತವಾದ ಪರೀಕ್ಷೆಗಳನ್ನು ನಡಸಲಿದ್ದಾರೆ. ಅವರಿಗೆ ಕಳೆದ ಒಂದು ವರ್ಷದಿಂದ ನಾವು ಮಾದರಿಗಳನ್ನು ಕಳುಹಿಸುತ್ತಲೇ ಬಂದಿದ್ದೇವೆ. ಅವರು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಐಐಟಿ ಅಧ್ಯಯನದ ಕುರಿತು ನಮಗೆ ಯಾವುದೇ ಮಾಹಿತಿಯಿಲ್ಲ. ಆದರೂ, ಈ ಬಾರಿ ಮತ್ತೆ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ GBRCಗೆ ಕಳುಹಿಸಿಕೊಡಲಾಗಿದೆ, ಎಂದು ಹೇಳಿದ್ದಾರೆ.

2020ರ ಸೆಪ್ಟೆಂಬರ್ ಮತ್ತು ಡಿಸೆಂಬರ್ ಸಮಯದಲ್ಲಿ ಐಐಟಿಯು ಈ ಅಧ್ಯಯನವನ್ನು ಕೈಗೊಂಡಿತ್ತು. ಸಾಬರಮತಿ ನದಿ, ಚಂಡೋಲ ಮತ್ತು ಕಂಕರಿಯಾ ಕೆರೆಗಳಿಂದ ನೀರಿನ ಮಾದರಿಗಳನ್ನು ಪಡೆಯಲಾಗಿತ್ತು.
“ಕೋವಿಡ್ ವೈರಾಣು ನೀರಿನಲ್ಲಿ ಇರುವುದು ಅಧ್ಯಯನದಿಂದ ತಿಳಿದುಬಂದಿದೆಯಾದರೂ, ನಮ್ ಅಧ್ಯಯನದಲ್ಲಿ ಆ ವೈರಾಣುಗಳು ಜೀವಂತವಾಗಿರುವುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೂ, ಅವೆಲ್ಲಾ ನಿರ್ಜೀವ ವೈರಾಣುಗಳು ಎಂದು ನಾವು ಅಲಕ್ಷಿಸುವಂತಿಲ್ಲ. ನೀರಿನಿಂದ ಕೋವಿಡ್ ಹರಡುವುದು ಇನ್ನೂ ವೈಜ್ಞಾನಿಕವಾಗಿ ಸಾಬೀತಾಗಲಿಲ್ಲ. ಈ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಮುಂಬರುವ ದೊಡ್ಡ ಅನಾಹುತವನ್ನು ತಪ್ಪಿಸಬೇಕಾಗಿದೆ,” ಎಂದು ಅಧ್ಯನಕಾರರ ತಂಡದ ಮುಖ್ಯಸ್ಥರಾಗಿರುವ ಪ್ರೊ. ಮನೀಷ್ ಕುಮಾರ್ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತರ ಮಲ ಮತ್ತು ಮೂತ್ರಗಳ ಮೂಲಕ ಈ ವೈರಾಣುಗಳು ನೀರಿನ ಮೂಲವನ್ನು ತಲುಪಿದ್ದರೆ, ಅವು ನಿರ್ಜೀವವಾಗಿರುತ್ತವೆ. ಆದರೆ, ಸೋಂಕಿತರ ಬಾಯಿಯ ಮೂಲಕ ನೀರಿನ ಮೂಲಗಳಿಗೆ ತಲುಪಿದ್ದರೆ ಅವು ಜೀವಂತವಾಗಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.