ಮೈಸೂರು: ಸದ್ಯದ ಮಟ್ಟಿಗೆ ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಸರಿಗಟ್ಟುವ ನಾಯಕ ಬೇರೆ ಯಾರು ಇಲ್ಲ ಎನ್ನುವ ಮೂಲಕ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿಗೆ ಬಹುಪರಾಕ್ ಎಂದಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಆಗುವ ಅರ್ಹತೆ, ಜನ ಬೆಂಬಲ ಮೋದಿಯನರನ್ನು ಬಿಟ್ಟರೆ ಬೇರೆ ಇನ್ಯಾರಿಗೂ ಇಲ್ಲ. ಮೋದಿಗೆ ಪರ್ಯಾಯ ನಾಯಕ ದೇಶದಲ್ಲಿ ಇನ್ಯಾರೂ ಇಲ್ಲ. 21ನೇ ಶತಮಾನದ ಆಧುನಿಕ ಯುಗದಲ್ಲಿ ದೇಶದ ಏಕತೆ, ಅಖಂಡತೆ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಮೋದಿ ಅವರಿಂದ ಮಾತ್ರ ಸಾಧ್ಯ. ಇನ್ಯಾರೂ ಅವರಿಗೆ ಸಮಾನರಿಲ್ಲ. ಅವರನ್ನು ಮತ್ತೆ ಪ್ರಧಾನಿಯಾಗಿಸುವ ಏಕೈಕ ಗುರಿ ಬಿಟ್ಟರೆ ಬೇರೇನು ಇಲ್ಲ. ಮೋದಿಯನ್ನು ಸರಿಗಟ್ಟುವ ನಾಯಕರು ಇಂಡಿಯಾ ಮೈತ್ರಿಕೂಟದಲ್ಲೂ ಇಲ್ಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಕೂಡ ನರೇಂದ್ರ ಮೋದಿಯನ್ನು ಸರಿಗಟ್ಟುವ ನಾಯಕರಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂಡಿಯಾ ಮೈತ್ರಿಕೂಟದಲ್ಲಿರುವ ಪಕ್ಷಗಳ ಹಲವು ನಾಯಕರೂ ಕೂಡ ಎನ್ ಡಿ ಎ ಮೈತ್ರಿ ಕೂಟದತ್ತ ಬರಲಿದ್ದಾರೆ. ನಮಗೆ ಎಷ್ಟು ಸ್ಥಾನ ಬೇಕು ಬೇಡ ಅನ್ನೋದು ಮುಖ್ಯ ಅಲ್ಲ ಈ ರಾಷ್ಟ್ರಕ್ಕೆ ಮೋದಿ ಅವರ ನೇತೃತ್ವ ಬೇಕು ಅಷ್ಟೇ.
ಅದಕ್ಕಾಗಿ ನಾವು ನಮಗೆ ಇಷ್ಟೇ ಸೀಟು ಬೇಕು, ಆ ಕ್ಷೇತ್ರ ಬೇಡ ಅಂತ ಬೇಡಿಕೆ ಇಟ್ಟಿಲ್ಲ. ಈಗಾಗಲೇ ಜೆಡಿಎಸ್ ಗೆ 5 ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿಯವರು ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ಪಕ್ಷ ಎಲ್ಲೆಲ್ಲಿ ಶಕ್ತಿಯುತವಾಗಿದೆಯೋ ಅಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತೇವೆ. ಗೆಲ್ಲುವ ಪ್ರಯತ್ನ ಮಾಡಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಷ್ಟೇ ನಮ್ಮ ಸದ್ಯದ ಏಕೈಕ ಗುರಿ.