ಸಂವಿಧಾನ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದೊಳಗೆ ಧಾರ್ಮಿಕ ಮತಾಂಧತೆ ಬೆಳೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ (RSS) ಹೇಳಿದೆ.
ಆರ್ಎಸ್ಎಸ್ ಶನಿವಾರ ಬಿಡುಗಡೆಗೊಳಿಸಿದ ತನ್ನ 2022ರ ವಾರ್ಷಿಕ ವರದಿಯಲ್ಲಿ ʼಆಡಳಿತ ಯಂತ್ರವನ್ನು ಪ್ರವೇಶಿಸಲು ನಿರ್ದಿಷ್ಟ ಸಮುದಾಯವು ವಿಸ್ತಾರವಾದ ಯೋಜನೆಗಳನ್ನು ಹೊಂದಿದೆʼ ಎಂದು ಹೇಳಿದೆ. ಹಾಗೂ ಈ ಬೆದರಿಕೆಯನ್ನು ಸೋಲಿಸಲು ಸಂಘಟಿತ ಶಕ್ತಿಯೊಂದಿಗೆ ಎಲ್ಲಾ ರೀತಿಯ ಪ್ರಯತ್ನಗಳಿಗೆ ಆರ್ಎಸ್ಎಸ್ ಕರೆ ಕೊಟ್ಟಿದೆ.
ʼದೇಶದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮತಾಂಧತೆಯ ಅಸಾಧಾರಣ ರೂಪವು ಹಲವೆಡೆ ಮತ್ತೆ ತಲೆ ಎತ್ತಿದೆ. ಕೇರಳ, ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ಈ ಬೆದರಿಕೆಗೆ ಉದಾಹರಣೆ. ಕೋಮು ಉನ್ಮಾದ, ಮೆರವಣಿಗೆಗಳು, ಪ್ರತಿಭಟನೆಗಳು, ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನೆಪದಲ್ಲಿ ಸಾಮಾಜಿಕ ಶಿಸ್ತು, ಸಂಪ್ರದಾಯಗಳ ಉಲ್ಲಂಘನೆ, ಕ್ಷುಲ್ಲಕ ಕಾರಣಗಳನ್ನು ಪ್ರಚೋದಿಸುವ ಮೂಲಕ ಹಿಂಸಾಚಾರ, ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವುದು ಇತ್ಯಾದಿ ಕ್ರೂರ ಕೃತ್ಯಗಳ ಸರಣಿ ಹೆಚ್ಚುತ್ತಿದೆ,ʼ ಎಂದು ಸಂಘ ಹೇಳಿದೆ.
ಸರ್ಕಾರಿ ಯಂತ್ರವನ್ನು ಸೇರಿಕೊಳ್ಳಲು ನಿರ್ದಿಷ್ಟ ಸಮುದಾಯವು ವಿಸ್ತಾರವಾದ ಯೋಜನೆಗಳು ಹಾಕಿಕೊಂಡಿದೆ. ಇದೆಲ್ಲದರ ಹಿಂದೆ ದೀರ್ಘಾವಧಿ ಗುರಿಯೊಂದಿಗಿನ ಆಳವಾದ ಷಡ್ಯಂತ್ರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಆರ್ಎಸ್ಎಸ್ ವರದಿಯಲ್ಲಿ ಹೇಳಿದೆ.
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬೈಠಕ್ನಲ್ಲಿ ಕಳೆದ ಒಂದು ವರ್ಷದಲ್ಲಿ ಸಂಘವು ಮಾಡಿದ ಕಾರ್ಯಗಳ ಅವಲೋಕನ, ಭವಿಷ್ಯದ ಕ್ರಮಗಳನ್ನು ರೂಪಿಸಲು ಮತ್ತು ರಾಷ್ಟ್ರೀಯ ಮಹತ್ವದ ಸಮಸ್ಯೆಗಳನ್ನು ಚರ್ಚಿಸಲು ವರದಿಯನ್ನು ಬಿಡುಗಡೆ ಮಾಡಲಾಗಿದೆ. ಎಬಿಪಿಎಸ್, ಆರ್ಎಸ್ಎಸ್ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದದ್ದು, ಭಾನುವಾರ, ಸಭೆಯಲ್ಲಿ ನಿರುದ್ಯೋಗ ನಿವಾರಣೆಗೆ ಏನು ಮಾಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸುವ ನಿರೀಕ್ಷೆಯಿದೆ.

ವಾರ್ಷಿಕ ವರದಿಯಲ್ಲಿ ಸಂಘವು ಧಾರ್ಮಿಕ ಮತಾಂತರದ ವಿಷಯವನ್ನೂ ಪ್ರಸ್ತಾಪಿಸಿದೆ.
ಪಂಜಾಬ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ದೇಶದ ವಿವಿಧ ಭಾಗಗಳಲ್ಲಿ ಹಿಂದೂಗಳ ಯೋಜಿತ ಮತಾಂತರದ ಬಗ್ಗೆ ನಿರಂತರ ಮಾಹಿತಿ ಇದೆ. ಈ ಸವಾಲಿಗೆ ಸುದೀರ್ಘ ಇತಿಹಾಸವಿದೆ, ಆದರೆ, ತಡವಾಗಿ, ಹೊಸ ಗುಂಪುಗಳನ್ನು ಪರಿವರ್ತಿಸುವ ವಿಭಿನ್ನ, ಹೊಸ ಮಾರ್ಗಗಳು ಅಳವಡಿಸಿಕೊಳ್ಳಲಾಗುತ್ತಿದೆ. ಹಿಂದೂ ಸಮಾಜದ ಸಾಮಾಜಿಕ ಮತ್ತು ಧಾರ್ಮಿಕ ನಾಯಕತ್ವ ಮತ್ತು ಸಂಸ್ಥೆಗಳು ಸ್ವಲ್ಪ ಮಟ್ಟಿಗೆ ಎಚ್ಚೆತ್ತುಕೊಂಡು ಈ ಪ್ರವೃತ್ತಿಯನ್ನು ತಡೆಯಲು ಸಕ್ರಿಯವಾಗಿವೆ ಎಂಬುದು ನಿಜ. ಈ ದಿಕ್ಕಿನಲ್ಲಿ ಹೆಚ್ಚು ಯೋಜಿತ ರೀತಿಯಲ್ಲಿ ಜಂಟಿ ಮತ್ತು ಸಂಘಟಿತ ಪ್ರಯತ್ನಗಳನ್ನು ಮಾಡುವುದು ಅಗತ್ಯವೆಂದು ತೋರುತ್ತದೆ, ”ಎಂದು ವರದಿ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರ ಮತ್ತು ಪಂಜಾಬ್ ಚುನಾವಣೆಯ ಸಂದರ್ಭದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ತಡೆ ಬಳಿಕ ಭದ್ರತಾ ಲೋಪದ ಕಾರಣವಿಟ್ಟು ಹಿಂತಿರುಗಿರುವುದನ್ನು ಕೂಡಾ ಸಂಘ ವರದಿಯಲ್ಲಿ ಉಲ್ಲೇಖಿಸಿದೆ.
“ರಾಜಕೀಯ ಕ್ಷೇತ್ರದಲ್ಲಿ ಸ್ಪರ್ಧೆ ಅತ್ಯಗತ್ಯ, ಆದರೆ ಅದು ಆರೋಗ್ಯಕರ ಮನೋಭಾವದಲ್ಲಿರಬೇಕು ಮತ್ತು ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿರಬೇಕು; ಜನಾಂಗವು ಸೈದ್ಧಾಂತಿಕ ಚಿಂತನ ಮಂಥನವನ್ನು ಸುಗಮಗೊಳಿಸಬೇಕು ಮತ್ತು ಸಮಾಜದ ಅಭಿವೃದ್ಧಿಯನ್ನು ಬಲಪಡಿಸಬೇಕು… ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರು ನಿಗದಿತ ಕಾರ್ಯಕ್ರಮಕ್ಕೆ ಹೋಗುವಾಗ ರೈತರ ಆಂದೋಲನದ ಹೆಸರಿನಲ್ಲಿ ಅವರ ಬೆಂಗಾವಲು ವಾಹನವನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿರುವದು ಅತ್ಯಂತ ಖಂಡನೀಯ ಘಟನೆ, ಭದ್ರತೆಗೆ ಖಂಡಿತವಾಗಿಯೂ ಸವಾಲಾಗಿತ್ತು; ಆದರೆ ಅದೇ ಸಮಯದಲ್ಲಿ, ಈ ಹೇಯ ಕೃತ್ಯವು ರಾಜಕೀಯ ಸೌಹಾರ್ದತೆ, ಕೇಂದ್ರ-ರಾಜ್ಯ ಸಂಬಂಧ, ಸಾಂವಿಧಾನಿಕ ಹುದ್ದೆಗಳ ಬಗೆಗಿನ ಭಾವನೆ ಇತ್ಯಾದಿಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿ ಹೇಳಿದೆ.