ಬಿಜೆಪಿ, ಚುನಾವಣಾ ಆಯೋಗದ ವಿರುದ್ಧ ಹರಿಪ್ರಸಾದ್ ಕೆಂಡಾಮಂಡಲ, ರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಬಾಂಬ್ ಸಿಡಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್(BK Hariprasad).

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿರುವುದು ಕಂಡುಬರುತ್ತಿದೆ. ಚುನಾವಣಾ ಆಯೋಗ ಅಂತೂ ನಾವು ಪಕ್ಷ ಸೇರಲ್ಲ, ಹೊರಗೆ ನಿಂತು ಬೆಂಬಲ ಕೋಡುತ್ತೇವೆ ಅನ್ನೋ ಪರಿಸ್ಥಿತಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆಯುವ ಸಮಯದಲ್ಲಿ ಸುಮಾರು 60 ಲಕ್ಷ ಮತದಾರರ ಸಂಖ್ಯೆ ಜಾಸ್ತಿಯಾಗಿದೆ. ಹರಿಯಾಣದಲ್ಲೂ ಅದೇ ಪರಿಸ್ಥಿತಿ ಇದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಮತಗಳ್ಳತನ ಮಾಡಿದ್ದಾರೆ. ಕಳ್ಳ ಮತದಾರರ ಪಟ್ಟಿ ಸೃಷ್ಟಿ ಮಾಡಿ ಮತಗಳನ್ನ ಹಾಕಿಸಿಕೊಂಡಿರುವುದು ಕಂಡುಬಂದಿದೆ. ಹಾಗಾಗಿ ರಾಹುಲ್ ಗಾಂಧಿ ಅವರೇ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ʻಕಾಂಗ್ರೆಸ್ ಗೆದ್ದಾಗ ಮತದಾರರ ಪಟ್ಟಿ ದುರುಪಯೋಗ ಆಗಿಲ್ವಾ?ʼ ಎಂಬ ಬಿಜೆಪಿಗರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ 136 ಹಾಗೂ 140 ಸ್ಥಾನ ಗೆದ್ದಿದ್ದೇವೆ. ಆದ್ರೆ ಕೆಲ ಭಾಗದಲ್ಲಿ ವಲಸಿಗರು ಜಾಸ್ತಿ ಇದ್ದಾರೆ. ಅವರನ್ನ ದುರುಪಯೋಗ ಮಾಡಿಕೊಂಡು ಮತದಾನ ಮಾಡಿಸಿದ್ದಾರೆ. ಬೆಂಗಳೂರಿನ ರಾಜಾಜೀನಗರ, ಮಹದೇವಪುರದಲ್ಲಿ ಇನ್ನೂ ಕೆಲ ಭಾಗಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.