• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ತಳಸಮಾಜದ ದನಿಯೂ ವರ್ಗಹಿತಾಸಕ್ತಿಯ ಮೇಲಾಟವೂ

ಪ್ರತಿಧ್ವನಿ by ಪ್ರತಿಧ್ವನಿ
August 14, 2024
in Top Story, ಅಂಕಣ, ಇದೀಗ, ದೇಶ, ರಾಜಕೀಯ, ವಿದೇಶ, ವಿಶೇಷ
0
Share on WhatsAppShare on FacebookShare on Telegram

ತಳಮಟ್ಟದ ಜನತೆಯ ಹತಾಶೆ ಒಂದು ಹಂತದಲ್ಲಿ ಉಳ್ಳವರ ಆಸರೆಯ ತಾಣವಾಗುತ್ತದೆ

ADVERTISEMENT

(ಅಭಿವೃದ್ಧಿಯ ಮರೀಚಿಕೆಯೂ ತಳಸಮಾಜದ ಹತಾಶೆಯೂ – ಲೇಖನದ ಮುಂದುವರೆದ ಭಾಗ)

ಸಮಕಾಲೀನ ಜಗತ್ತಿನ ರಾಜಕಾರಣದಲ್ಲಿ ಬಹುಮಟ್ಟಿಗೆ ಸರ್ವಸಮ್ಮತಿಯಿಂದ ಸ್ವೀಕೃತಿ ಪಡೆದಿರುವ ಪ್ರಜಾಪ್ರಭುತ್ವದ ಆಳ್ವಿಕೆಯ ಮಾದರಿ ಸಂಪೂರ್ಣವಾಗಿ ದೋಷರಹಿತವಾಗಬೇಕಾದರೆ ಈ ಆಳ್ವಿಕೆಯ ವಾರಸುದಾರಿಕೆ ಹೊರುವ ಶಕ್ತಿಗಳು ಪ್ರಜಾಸತ್ತಾತ್ಮಕ ಧೋರಣೆಯನ್ನು ಹೊಂದಿರಬೇಕು. ಇಲ್ಲವಾದರೆ ಚುನಾವಣೆ ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಕ್ತವಾಗುವ ಪ್ರಜಾಪ್ರಭುತ್ವ ಮೇಲಿನಿಂದ ಕೆಳಕ್ಕೆ ಇಳಿಯುತ್ತಾ ಹೋದಂತೆ ತನ್ನ ಅಂತಃಸತ್ವವನ್ನು ಕಳೆದುಕೊಂಡು, ತಳಮಟ್ಟ ತಲುಪುವ ವೇಳೆಗೆ ತಳಸಮಾಜದ ಆಶಯಗಳಿಗೆ ವಿಮುಖವಾಗಿರುತ್ತದೆ. ಅಧಿಕಾರ ಕೇಂದ್ರಗಳ ಹೊರಗೆ ನಿಂತು ನೋಡಿದಾಗ ಭಾರತವನ್ನೂ ಸೇರಿದಂತೆ ಎಲ್ಲ ಆಳ್ವಿಕೆಗಳಲ್ಲೂ ಈ ದೋಷವನ್ನು ಗುರುತಿಸಬಹುದು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರ ಆಯ್ಕೆಯೇ ಅಂತಿಮ ಎಂದಾದರೂ, ಆಳ್ವಿಕೆಯ ಸ್ತರದಲ್ಲಿ ಈ ಜನರ ದನಿ ಕ್ಷೀಣಿಸುತ್ತಲೇ ಹೋಗುವುದು ಇದರ ಒಂದು ಲಕ್ಷಣ.

 ಏಕೆಂದರೆ ಜನರಿಂದಲೇ, ಜನರಿಗಾಗಿ, ಜನರೇ ಆಯ್ಕೆ ಮಾಡುವ ಈ ಸರ್ಕಾರಗಳೂ ಸಹ ಸಮಾಜದಲ್ಲಿ ಸಾಮಾಜಿಕ ಪ್ರಾಬಲ್ಯ-ಆರ್ಥಿಕ ಪಾರಮ್ಯ ಸಾಧಿಸಿರುವ ಕೆಲವೇ ವರ್ಗಗಳ ಹಿಡಿತದಲ್ಲಿರುತ್ತವೆ. ರಾಜಕೀಯ ಪರಿಭಾಷೆಯಲ್ಲಿ ಇದನ್ನು ಆಳುವ ವರ್ಗಗಳು ಎಂದೇ ನಿರ್ವಚಿಸಲಾಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಡಾ. ಬಿ. ಆರ್.‌ ಅಂಬೇಡ್ಕರ್‌ ಹೀಗೆ ಹೇಳುತ್ತಾರೆ : “ ಆಳುವ ಸರ್ಕಾರಕ್ಕೆ ಆಳುವ ಸಾಮರ್ಥ್ಯ ಮತ್ತು ಕಾರ್ಯದಕ್ಷತೆ ಇದ್ದರಷ್ಟೇ ಸಾಲದು,,,,,,,,, ಅದು ವರ್ಗಗಳ ಹಿತಾಸಕ್ತಿಯಿಂದ ಹೊರಬಂದು ಅಂತರಿಕ ಮಿತಿಗಳನ್ನು ಮೀರಿಕೊಳ್ಳಬೇಕು,,,,,,ಸರ್ಕಾರದ ಸಾಧನಗಳನ್ನು ಆಯ್ದುಕೊಳ್ಳುವಾಗ ಅವುಗಳಲ್ಲಿ ವರ್ಗಹಿತಾಸಕ್ತಿಯ ಧೋರಣೆಗಳಿರುತ್ತವೆ,,,,,,ಇದನ್ನು ಮೊಟ್ಟಮೊದಲು ಗುರುತಿಸಿವರು ಕಾರ್ಲ್‌ ಮಾರ್ಕ್ಸ್‌ ,,,” (ಅಂಬೇಡ್ಕರ್‌ ಬರಹ-ಭಾಷಣಗಳು ಸಂಪುಟ 7 ಪುಟ 449). ಅಂಬೇಡ್ಕರ್‌ ಅವರ ಈ ದಾರ್ಶನಿಕ ನುಡಿಗಳನ್ನು ವರ್ತಮಾನದಲ್ಲಿಟ್ಟು ನೋಡಿದಾಗ ವಾಸ್ತವದ ಅರಿವಾಗುತ್ತದೆ.

 ಜನಾಂದೋಲನಗಳ ರಾಜಕೀಯ ಆಯಾಮ

 ಬಾಂಗ್ಲಾದೇಶದಲ್ಲಿ ಆಗಸ್ಟ್‌ 5ರಂದು ನಡೆದ ದಂಗೆ ಮತ್ತು ಅದಕ್ಕೆ ಮುನ್ನ ನಡೆದ ಸುದೀರ್ಘ ಜನಾಂದೋಲನಗಳ ಫಲಶ್ರುತಿಯನ್ನು ಕುರಿತು ಯೋಚಿಸುವಾಗ, ಈ ಅಮೂಲ್ಯ ನುಡಿಗಳು ಕಣ್ತೆರೆಸುತ್ತವೆ. ಏಕೆಂದರೆ ನಿರುದ್ಯೋಗ, ಬೆಲೆ ಏರಿಕೆ ಮತ್ತು ತಳಸಮಾಜದ ನಿತ್ಯ ಬವಣೆಗಳ ಹಿನ್ನೆಲೆಯಲ್ಲಿ ಸ್ಪೋಟಗೊಂಡ ಒಂದು ಜನಾಂದೋಲನ ಅಂತ್ಯ ಕಾಣುವ ವೇಳೆಗೆ, ಇಡೀ ಚಳುವಳಿಯ ನಾಯಕತ್ವವು ಧಾರ್ಮಿಕ ಮೂಲಭೂತವಾದಿಗಳ ಹಾಗೂ ಮತ್ತೊಂದು ಬದಿಯ ಬಂಡವಾಳಶಾಹಿಗಳ ಕೈಸೇರಿದೆ. ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರಕ್ಕೆ ನೊಬೆಲ್‌ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮೊಹಮ್ಮದ್‌ ಯೂನುಸ್‌ ಮುಖ್ಯ ಸಲಹೆಗಾರರಾಗಿ ನೇಮಕವಾಗಿದ್ದರೂ, ಇಡೀ ಆಡಳಿತ ವ್ಯವಸ್ಥೆ ಖಾಲಿದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ) ಮತ್ತು ಅದರ ನಿಕಟವರ್ತಿ ಇಸ್ಲಾಮಿಕ್‌ ಪಕ್ಷ ಜಮಾತ್‌-ಎ-ಇಸ್ಲಾಮಿ ಸಂಘಟನೆಯ ಹಿಡಿತದಲ್ಲಿರುತ್ತದೆ. ಈ ಎರಡೂ ಸಂಘಟನೆಗಳಿಗೆ ನಿಕಟವಾಗಿರುವ ಸೇನೆ ಆಳ್ವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

 15 ವರ್ಷಗಳ ಸುದೀರ್ಘ ಆಳ್ವಿಕೆಯ ನಂತರ ಆವಾಮಿ ಲೀಗ್‌ ಪಕ್ಷದ ಶೇಕ್‌ ಹಸೀನಾ ಪದಚ್ಯುತವಾಗಲು ಮೂಲ ಕಾರಣ ವಿದ್ಯಾರ್ಥಿಗಳ ದೇಶವ್ಯಾಪಿ ಮುಷ್ಕರ. ಯಾವುದೇ ದೇಶದಲ್ಲಾದರೂ, ಯಾವ ಕಾಲಘಟ್ಟದಲ್ಲಾದರೂ ಜನಾಂದೋಲನಗಳು ರೂಪುಗೊಳ್ಳುವುದು ತಳಸಮಾಜದ ಸಂಕಟಗಳ ನಡುವೆ. ಈ ಸಮಾಜದಲ್ಲಿ ವಿದ್ಯಾರ್ಥಿ ಯುವಜನತೆ, ಮಹಿಳೆಯರು, ಅವಕಾಶವಂಚಿತರು ಹಾಗೂ ಶೋಷಿತರು ಎದುರಿಸುವ ನಿತ್ಯ ಬದುಕಿನ ಸವಾಲುಗಳ ನಡುವೆ. ಆರ್ಥಿಕ ಅಭಿವೃದ್ಧಿಯ ಫಲಾನುಭವಿ ಹಿತವರ್ಗಗಳಿಗೆ ಮತ್ತು ಆರ್ಥಿಕವಾಗಿ ಮುಂದುವರೆದ ಮೇಲ್ವರ್ಗಗಳಿಗೆ ಸಾಮಾನ್ಯವಾಗಿ ಅರ್ಥವಾಗದ ನಿತ್ಯ ಜೀವನದ ಸಂಕಷ್ಟಗಳನ್ನು ಈ ಕೆಳವರ್ಗದ ಜನತೆ ಅನುಭವಿಸುತ್ತಲೇ ಇರುತ್ತವೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಕುಸಿದ ಆರ್ಥಿಕತೆಯ ವ್ಯತಿರಿಕ್ತ ಪರಿಣಾಮವನ್ನು ಈ ವರ್ಗಗಳೇ ಅನುಭವಿಸುತ್ತಿರುತ್ತವೆ. ಬಾಂಗ್ಲಾದೇಶ ಶೇಕ್‌ ಹಸೀನಾ ಆಳ್ವಿಕೆಯಲ್ಲಿ ಅನುಸರಿಸಿದ ನವ ಉದಾರವಾದಿ ಆರ್ಥಿಕ ಮಾದರಿ ಮತ್ತು ಅದರಿಂದ ಉಂಟಾಗುವ ತಳಮಟ್ಟದ ಹತಾಶೆಯನ್ನು ದಮನಿಸುವ ಸರ್ವಾಧಿಕಾರಿ ತಂತ್ರಗಳು ಬಾಂಗ್ಲಾದ ಯುವಜನತೆಯನ್ನು ಸಹಜವಾಗಿಯೇ ಕೆರಳಿಸಿವೆ.

 ಆದರೆ ಇತಿಹಾಸದತ್ತ ತಿರುಗಿ ನೋಡಿದಾಗ, ಯಾವುದೇ ದೇಶದಲ್ಲಾದರೂ ಇಂತಹ ತಳಮಟ್ಟದ ಹತಾಶೆ, ಆಕ್ರೋಶ ಮತ್ತು ಅಸಮಾಧಾನಗಳಿಂದ ಉಗಮಿಸುವ ಜನಾಂದೋಲನಗಳು ತಾರ್ಕಿಕ ಅಂತ್ಯ ತಲುಪುವ ಮುನ್ನವೇ ಆಳುವ ವರ್ಗಕ್ಕೇ ಸೇರಿದ ಮತ್ತೊಂದು  ಪಕ್ಷದ ಅಥವಾ ಗುಂಪಿನ ಹಿಡಿತಕ್ಕೆ ಸಿಲುಕಿರುವುದನ್ನು ಗುರುತಿಸಬಹುದು. ಭಾರತದ ಸಮಕಾಲೀನ ಚರಿತ್ರೆಯನ್ನು ಗಮನಿಸಿದರೂ ಇದು ಕಾಣುತ್ತದೆ. 1960-70ರ ದಶಕಗಳ ಸಾಮಾಜಿಕ ಪ್ರಕ್ಷುಬ್ದತೆ, ಆರ್ಥಿಕ ಕ್ಷೋಭೆ, ತುರ್ತುಪರಿಸ್ಥಿತಿಯ ವಿರುದ್ಧ ನಡೆದ ಜನಾಂದೋಲನಗಳು, 1980-90ರ ಮಂಡಲ್‌ ಚಳುವಳಿಗಳು, 2010ರ ದಶಕದ ಪೂರ್ವಾರ್ಧದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ ಈ ಎಲ್ಲ ಘಟನೆಗಳ ಅಂತಿಮ ರಾಜಕೀಯ ಫಲಾನುಭವಿ ಬಿಜೆಪಿ ಮತ್ತು ಅದರ ಹಿಂದುತ್ವ ಬಲಪಂಥೀಯ ರಾಜಕಾರಣವೇ ಆಗಿತ್ತು.

 ನಾಗರಿಕ ಸಮಾಜದ ಪಾತ್ರ

 ಈ ಜನಾಂದೋಲನಗಳನ್ನು ಎಡಪಂಥೀಯ ರಾಜಕಾರಣ ತನ್ನದಾಗಿಸಿಕೊಳ್ಳಲು (Appropriate ಮಾಡಿಕೊಳ್ಳಲು) ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಲ್ಲಿ ನಾಗರಿಕ ಸಮಾಜದ ನಡುವೆ (Civil Society) ಅಗತ್ಯವಾದ ಇರಬೇಕಾದ ಸಾಂಘಿಕ ನೆಲೆಗಳ ಮತ್ತು ಸಾಂಸ್ಥಿಕ ಚೌಕಟ್ಟುಗಳ ಕೊರತೆಯನ್ನು ಗುರುತಿಸಬೇಕಾಗಿದೆ. ದಮನಕಾರಿ, ಶೋಷಕ ಹಾಗೂ ಅಸಮಾನತೆಯನ್ನು ಹೆಚ್ಚಿಸುವ ಆಳುವ ವರ್ಗಗಳ ವಿರುದ್ಧ ತಳಸಮಾಜದ ಅಸಮಾಧಾನಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಒಂದು ಸಂಘಟನಾತ್ಮಕ ಭೂಮಿಕೆಯನ್ನು ಈ ಆಧುನಿಕ-ಸುಶಿಕ್ಷಿತ-ಹಿತವಲಯದ ನಾಗರಿಕ ಸಮಾಜದ ನಡುವೆ  ನಿರ್ಮಿಸುವಲ್ಲಿ ಎಡಪಂಥೀಯ ಅಥವಾ ಪ್ರಗತಿಪರ-ಸೆಕ್ಯುಲರ್-ಸಮಾಜವಾದಿ ಸಂಘಟನೆಗಳು ವಿಫಲವಾಗುತ್ತವೆ. ಇಲ್ಲಿ ಉದ್ಭವಿಸುವ ನಿರ್ವಾತವನ್ನು ಬಲಪಂಥೀಯ ರಾಜಕಾರಣವು ರಾಷ್ಟ್ರೀಯತೆ, ಧರ್ಮ, ಜಾತಿ ಮತ್ತಿತರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಳಸಿಕೊಳ್ಳುತ್ತದೆ.

 ಬಾಂಗ್ಲಾದೇಶದ ಪ್ರಸ್ತುತ ಬೆಳವಣಿಗೆಗಳಲ್ಲೂ ಇದನ್ನೇ ಗಮನಿಸಬಹುದು. ವಿದ್ಯಾರ್ಥಿ ಯುವಸಮೂಹದ ಒಂದು ಕ್ರಾಂತಿಕಾರಕ ಆಂದೋಲನವು ತನ್ನ ತಾರ್ಕಿಕ ಅಂತ್ಯ ತಲುಪುವ ವೇಳೆಗೆ, ಬಲಪಂಥೀಯ ಧೋರಣೆಯ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ) ಮತ್ತು ಧಾರ್ಮಿಕ ಮೂಲಭೂತವಾದವನ್ನು ಪ್ರತಿಪಾದಿಸುವ  ಜಮಾತ್‌-ಎ-ಇಸ್ಲಾಮಿ ಪಕ್ಷವು ಇಡೀ ಜನಾಂದೋಲನದಲ್ಲಿ ಪ್ರಧಾನ ಭೂಮಿಕೆಯನ್ನು ಆಕ್ರಮಿಸುತ್ತವೆ. ತಮ್ಮ ಅಸಮಾಧಾನಗಳನ್ನು ನಿವಾರಿಸಿಕೊಳ್ಳಲು ಅಥವಾ ಅನ್ಯಾಯಗಳನ್ನು ಸರಿಪಡಿಸಲು ವಿದ್ಯಾರ್ಥಿ ಯುವ ಸಮೂಹಗಳು ಈ ಪಕ್ಷಗಳಲ್ಲೇ ಒಂದು ಪರ್ಯಾಯವನ್ನೂ ಕಂಡುಕೊಳ್ಳುತ್ತವೆ. ಹಾಗಾಗಿಯೇ ಬಾಂಗ್ಲಾ ವಿಮೋಚನೆಯ ಮುಂಚೂಣಿ ನಾಯಕ, ಬಂಗಬಂಧು, ರಾಷ್ಟ್ರಪಿತ ಎಂಬ ಖ್ಯಾತಿ ಪಡೆದಿದ್ದ ಶೇಕ್‌ ಮುಜೀಬುರ್‌ ರಹಮಾನ್‌ ಸಹ ಜನಾಕ್ರೋಶಕ್ಕೆ ತುತ್ತಾಗುತ್ತಾರೆ. ಉದ್ರಿಕ್ತ ಗುಂಪುಗಳು ಅವರ ಪ್ರತಿಮೆಯನ್ನು ಧ್ವಂಸಗೊಳಿಸುತ್ತವೆ. ತಾವು ಎದುರಿಸುತ್ತಿರುವ ಅಸಮಾನತೆಗಳಿಗೆ ಮೂಲ ಕಾರಣವನ್ನು ಅವರಲ್ಲಿ ಗುರುತಿಸುವಂತೆ ಮಾಡುವ ಭಾವನಾತ್ಮಕ-ಮತೀಯ-ಮೂಭೂತವಾದಿ ರಾಜಕಾರಣ ಇಡೀ ಆಂದೋಲನದ ಉಸ್ತುವಾರಿ ವಹಿಸಿಕೊಳ್ಳುತ್ತದೆ.

 ಅಲ್ಪಸಂಖ್ಯಾತರ ಸ್ಥಿತಿಗತಿಗಳು

 ಹಾಗಾಗಿಯೇ ಬಾಂಗ್ಲಾ ದಂಗೆಗಳ ಸಂದರ್ಭದಲ್ಲಿ ಮತ್ತು ಶೇಕ್‌ ಹಸೀನಾ ಪದಚ್ಯುತಿಯ ನಂತರದಲ್ಲೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳು ಮತೀಯ ಸಂಘಟನೆಗಳ ಹಿಂಸಾತ್ಮಕ ದಾಳಿಗೆ ತುತ್ತಾಗಿವೆ. ಭಾರತದಲ್ಲಿ ಬಹುತೇಕ ಮಾಧ್ಯಮಗಳು ಬಾಂಗ್ಲಾ ದಂಗೆಗಳಲ್ಲಿ ಹಿಂದೂಗಳ ಮೇಲೆ ಅವ್ಯಾಹತ ದಾಳಿ ನಡೆಯುತ್ತಿವೆ ಎಂದೇ ಬಿಂಬಿಸುತ್ತಿವೆ. ಇದು ಒಂದು ಹಂತದವರೆಗೆ ಸತ್ಯವೂ ಹೌದು. ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರೈಸ್ತ ಏಕತಾ ಮಂಡಲಿ (BHBCUC) ಸಂಘಟನೆ ಸಮಸ್ತ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು ಇದರ ವಕ್ತಾರರೂ ಸಹ 15ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಮೇಲೆ, ಹಿಂದೂಗಳ 300ಕ್ಕೂ ಹೆಚ್ಚು ಮನೆಗಳ ಮೇಲೆ  ದಾಳಿ ನಡೆದಿದೆ ಎಂದು ಆರೋಪಿಸಿದೆ.  ಇಲ್ಲಿ ಆವಾಮಿ ಲೀಗ್‌ ಪಕ್ಷಕ್ಕೆ ಸೇರಿದ ಕಾರ್ಯಕರ್ತರ ಮನೆಗಳೂ ಇರುವುದರಿಂದ, ಈ ದಾಳಿಗಳನ್ನು ಕೇವಲ ಮತೀಯ ದೃಷ್ಟಿಯಿಂದಲೇ ನೋಡಲಾಗುವುದಿಲ್ಲ. ರಾಜಕೀಯ ದ್ವೇಷವೂ ಇಲ್ಲಿ ಪ್ರಧಾನವಾಗಿ ಕಾಣುತ್ತದೆ.

 ಯಾವುದೇ ಭಾವಾವೇಷದ ಹೋರಾಟಗಳಲ್ಲೂ ಸಂಭವಿಸುವಂತೆ ಇಲ್ಲೂ ಸಹ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂ ಸಮುದಾಯದ ಅಮಾಯಕರು ದಾಳಿಗೊಳಗಾಗಿದ್ದಾರೆ. ಆದರೆ ಇದರ ಮತ್ತೊಂದು ಮುಖವನ್ನೂ ಗಮನಿಸಿದಾಗ ಆಂದೋಲನದ ಮುಂದಾಳತ್ವ ವಹಿಸಿದ ವಿದ್ಯಾರ್ಥಿ ಸಂಘಟನೆಗಳು ಹಿಂದೂದೇವಾಲಯಗಳನ್ನು ಮತ್ತು ಕ್ರೈಸ್ತರ ಚರ್ಚುಗಳನ್ನು ರಕ್ಷಿಸಲು ತಮ್ಮದೇ ಆದ ಪಡೆಗಳನ್ನು ರೂಪಿಸಿರುವುದೂ ಇದೆ. ಜಮಾತ್‌-ಎ—ಇಸ್ಲಾಮಿ ಪಕ್ಷವೂ ಸಹ ಹಿಂದೂಗಳ ಮೇಲಿನ ದಾಳಿಗಳನ್ನು ಖಂಡಿಸಿದ್ದು ರಾಷ್ಟ್ರೀಯ ಏಕತೆಗಾಗಿ ಕರೆ ನೀಡಿದೆ. ಹಲವು ಪ್ರಕ್ಷುಬ್ಧ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಪೂಜಾಸ್ಥಳಗಳನ್ನು, ವಸತಿಗಳನ್ನು ರಕ್ಷಿಸುವ ಸಲುವಾಗಿ ವಿದ್ಯಾರ್ಥಿಗಳೇ ರಾತ್ರಿಯಿಡೀ ಕಾವಲು ಕಾಯುತ್ತಿರುವ ಪ್ರಸಂಗಗಳೂ ವರದಿಯಾಗಿವೆ. ರಾಜಧಾನಿ ಢಾಕಾದಲ್ಲಿರುವ ಢಾಕೇಶ್ವರಿ ದೇವಾಲಯವನ್ನು, ಹಿಂದೂ ಸೋದರರನ್ನು ರಕ್ಷಿಸುವ ಸಲುವಾಗಿ ಇಸ್ಲಾಮಿಕ್‌ ಮದರಸಾದ ವಿದ್ಯಾರ್ಥಿಗಳೂ ಸಹ ಟೊಂಕಕಟ್ಟಿ ನಿಂತಿರುವುದಾಗಿ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.

 ಜನಾಂದೋಲನದ ಮೂಲ ಆಶಯ

ಈ ಎರಡೂ ಆಯಾಮಗಳಿಂದ ನೋಡಿದಾಗ ಬಾಂಗ್ಲಾದೇಶದ ದಂಗೆಯನ್ನು ಕೋಮುವಾದಿ ದೃಷ್ಟಿಯಿಂದ, ಧಾರ್ಮಿಕ ನೆಲೆಯಲ್ಲಿ ವ್ಯಾಖ್ಯಾನಿಸುವುದು, ಮತೀಯ ಶಕ್ತಿಗಳಿಗೆ ಅನುಕೂಲಕರವಾದರೂ, ಬಾಂಗ್ಲಾದೇಶದ ಸಮನ್ವಯ-ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತದೆ. ನೆರೆ ರಾಷ್ಟ್ರವಾಗಿ ಭಾರತವೂ ಬಾಂಗ್ಲಾದೇಶದ ಬೆಳವಣಿಗೆಗಳಿಂದ ಪ್ರಭಾವಿತವಾಗುತ್ತದೆ. ಈಗಾಗಲೇ ಸಾವಿರಾರು ನಿರಾಶ್ರಿತರು ಈಶಾನ್ಯ ರಾಜ್ಯಗಳ, ಪಶ್ಚಿಮ ಬಂಗಾಲದ ಬಾಂಗ್ಲಾ ಗಡಿ ಪ್ರದೇಶಗಳಲ್ಲಿ ಆಸರೆಗಾಗಿ ನಿಂತಿರುವುದಾಗಿ ವರದಿಯಾಗಿದೆ. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸುವ ಭಾವಾವೇಷದಲ್ಲಿ ಭೌಗೋಳಿಕ ಅಂಶಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಥವಾ ಭಾರತದ ಸಿಎಎ ಕಾಯ್ದೆಯಡಿ ಬಾಂಗ್ಲಾದಿಂದ ಭಾರತಕ್ಕೆ ಬರಲಿಚ್ಛಿಸುವ ಹಿಂದೂಗಳಿಗೆ ಪೌರತ್ವ ನೀಡುವುದೂ ಸುಲಭವಲ್ಲ. ಭಾರತದ ಮುಖ್ಯವಾಹಿನಿ ಮಾಧ್ಯಮಗಳು, ಸಾಮಾಜಿಕ ತಾಣಗಳು ಈ ನಿಟ್ಟಿನಲ್ಲಿ ಕೊಂಚ ಪ್ರಬುದ್ಧತೆಯಿಂದ ವರ್ತಿಸಬೇಕಿದೆ.

 ಮೊಹಮದ್‌ ಯೂನುಸ್‌ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾದ ಬಾಂಗ್ಲಾದೇಶದ ಹೊಸ ಆಳ್ವಿಕೆಯನ್ನು ಮೂಲತಃ ನಿಯಂತ್ರಿಸುವುದು ಖಾಲಿದಾ ಜಿಯಾ ಅವರ ಬಿಎನ್‌ಪಿ ಮತ್ತು ಜಮಾತ್-ಎ-ಇಸ್ಲಾಮಿ ಪಕ್ಷ. ಈ ಪಕ್ಷಗಳ ರಾಜಕೀಯ ಧೋರಣೆ ಮತ್ತು ಮುಂಬರುವ ದಿನಗಳಲ್ಲಿ ಅನುಸರಿಸುವ ಆರ್ಥಿಕ ನೀತಿಗಳೂ ಸಹ ಬಾಂಗ್ಲಾದೇಶದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗುತ್ತದೆ. ಬಾಂಗ್ಲಾದೇಶದ ಒಂದು ವೈಶಿಷ್ಟ್ಯ ಎಂದರೆ ಅಲ್ಲಿ ತಳಮಟ್ಟದ ಸಮಾಜದಲ್ಲಿ ಜನತೆಯ ನಡುವೆ ಸೋದರತ್ವ-ಬಂಧುತ್ವ-ಸೌಹಾರ್ದತೆಯನ್ನು ಕಾಪಾಡುವುದು ಬಾಂಗ್ಲಾ ಭಾಷೆ. ಮೇಲ್ಪದರದ ಅಧಿಕಾರ ರಾಜಕಾರಣ ಮತ್ತು ಅದರ ಸುತ್ತಲಿನ ನಿರೂಪಣೆಗಳಲ್ಲಿ ಇದನ್ನು ಧಾರ್ಮಿಕ ನೆಲೆಯಲ್ಲಿ ಪರಿಗಣಿಸಲಾಗುತ್ತದೆ. ತಳಸಮಾಜದಲ್ಲಿ ಉಂಟಾಗಬಹುದಾದ ಯಾವುದೇ ವ್ಯತ್ಯಯಗಳನ್ನು ಸರಿಪಡಿಸಬೇಕಾದರೆ ಅಲ್ಲಿನ ಆಳ್ವಿಕೆಯ ಕೇಂದ್ರಗಳನ್ನು ಆಕ್ರಮಿಸುವ ಪಕ್ಷಗಳಿಗೆ ಬಾಂಗ್ಲಾದೇಶದ ಈ ಸಾಂಸ್ಕೃತಿಕ ವೈಶಿಷ್ಟ್ಯದ ಅರಿವು ಇರಬೇಕಾಗುತ್ತದೆ.

 ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಮೊಹಮ್ಮದ್‌ ಯೂನುಸ್‌ ಅವರ ಮಾರ್ಮಿಕ ನುಡಿಗಳು ಈ ಅರಿವಿನ ದ್ಯೋತಕವಾಗಿ ಕಾಣುತ್ತದೆ. ಸಾಮಾಜಿಕ ಮಾಧ್ಯಮಗಳ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿರುವ ಯೂನುಸ್‌ ಅವರು ಎಲ್ಲ ರೀತಿಯ ಹಿಂಸೆಯನ್ನೂ ಕೊನೆಗೊಳಿಸುವಂತೆ ದೇಶಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿಲ್ಲದೆ ಹೋದರೆ ತಾವು ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದಾರೆ. ಧಾರ್ಮಿಕ ಮೂಲಭೂತವಾದಿಗಳ ಪಾರಮ್ಯ, ಸೇನೆಯ ಪ್ರಾಬಲ್ಯ ಮತ್ತು ರಾಜಕೀಯ ಪಕ್ಷಗಳ ಸೈದ್ದಾಂತಿಕ ನಿಲುವುಗಳ ಹಿನ್ನೆಲೆಯಲ್ಲಿ ಯೂನುಸ್‌ ಅವರ ಈ ಘೋಷಣೆ ಮಹತ್ವ ಪಡೆದುಕೊಳ್ಳುತ್ತದೆ. ಆದರೆ ಬಾಂಗ್ಲಾದೇಶದ ಭವಿಷ್ಯದ ದಿನಗಳನ್ನು ನಿರ್ಧರಿಸುವಲ್ಲಿ ಈ ತಾತ್ವಿಕ ನಿಲುವು ಎಷ್ಟರಮಟ್ಟಿಗೆ ನಿರ್ಣಾಯಕವಾಗುತ್ತದೆ ಎಂದು ಕಾದು ನೋಡಬೇಕಿದೆ.

ಭವಿಷ್ಯದ ಆತಂಕಗಳು

 ಬಿಎನ್‌ಪಿ ಮತ್ತು ಜಮಾತ್‌ ಪಕ್ಷಗಳು ವಿದ್ಯಾರ್ಥಿ ಯುವಸಮೂಹವನ್ನು ಸಂಘಟಿಸುವ ಮೂಲಕ ಒಂದು ಸರ್ವಾಧಿಕಾರಿ ಆಳ್ವಿಕೆಯನ್ನು ಕೊನೆಗೊಳಿಸುವುದರಲ್ಲಿ ಯಶಸ್ವಿಯಾಗಿದ್ದರೂ, ಬಾಂಗ್ಲಾದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಿ ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಈ ಪಕ್ಷಗಳು ಆಗಸ್ಟ್‌ 5ರಂದು ಪರ್ಯವಸಾನ ಹೊಂದಿದ ಜನಾಂದೋಲನದ ಮೂಲ ಆಶಯಗಳಿಗೆ ಮಾನ್ಯತೆ ನೀಡುವುದು ಅತ್ಯವಶ್ಯ. ಈ ಯುವ ಸಮೂಹ ಎದುರಿಸುತ್ತಿರುವ ಜೀವನ-ಜೀವನೋಪಾಯ ಹಾಗೂ ಭವಿಷ್ಯದ ಪ್ರಶ್ನೆಗಳಿಗೆ ಸೂಕ್ತ ಪರಿಹಾರ ಗುರುತಿಸುವುದೇ ಅಲ್ಲದೆ, ದೇಶವನ್ನು ಕಾಡುತ್ತಿರುವ ನಿರುದ್ಯೋಗ ಮತ್ತು ಅಸಮಾನತೆಯನ್ನು ಹೋಗಲಾಡಿಸುವುದು ಹೊಸ ಆಳ್ವಿಕೆಯ ನೈತಿಕ ಜವಾಬ್ದಾರಿಯಾಗಿರುತ್ತದೆ. ತಳಸಮಾಜದ ಮೂಲಭೂತ ಅವಶ್ಯಕತೆಗಳನ್ನು ಕಡೆಗಣಿಸಿ, ಭಾವನಾತ್ಮಕ ನೆಲೆಯಲ್ಲಿ  ದಮನಕಾರಿ ಆಡಳಿತ ನಡೆಸುವ ಎಲ್ಲ ಸರ್ವಾಧಿಕಾರಿಗಳಿಗೂ ಬಾಂಗ್ಲಾ ದಂಗೆಗಳು ಪಾಠ ಕಲಿಸಬೇಕಿದೆ.

 ಇತಿಹಾಸದಿಂದ ಪಾಠ ಕಲಿಯಬೇಕು ನಿಜ ಆದರೆ ಸಮಕಾಲೀನ ಯುಗದಲ್ಲಿ ವರ್ತಮಾನದಿಂದಲೂ ಪಾಠ ಕಲಿಯಬೇಕಿದೆ. ನವ ಉದಾರವಾದ, ಧಾರ್ಮಿಕ ಮೂಲಭೂತವಾದ, ಮತಾಂಧತೆ ಇದಾವುದೂ ತಳಸಮಾಜದ ಬದುಕನ್ನು ಹಸನಾಗಿಸಲು ನೆರವಾಗುವುದಿಲ್ಲ. ಅಂತಿಮವಾಗಿ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಜನತೆ ಬಯಸುವುದು ರೋಟಿ-ಕಪಡಾ-ಮಕಾನ್‌ ಮಾತ್ರ, ಅದನ್ನು ಖಚಿತಪಡಿಸುವ ಉಜ್ವಲ ಭವಿಷ್ಯವನ್ನು ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಅಧಿಕಾರ ಪಡೆಯುವ ರಾಜಕೀಯ ವ್ಯವಸ್ಥೆಗಳು ಈ ಅಂಶವನ್ನು ಸದಾ ನೆನಪಿನಲ್ಲಿಡಬೇಕಾಗುತ್ತದೆ. ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ “ ಆಳುವ ಸರ್ಕಾರಕ್ಕೆ ಆಳುವ ಸಾಮರ್ಥ್ಯ ಮತ್ತು ಕಾರ್ಯದಕ್ಷತೆ ಇದ್ದರಷ್ಟೇ ಸಾಲದು,,,,,,,,, ಅದು ವರ್ಗಗಳ ಹಿತಾಸಕ್ತಿಯಿಂದ ಹೊರಬಂದು ಅಂತರಿಕ ಮಿತಿಗಳನ್ನು ಮೀರಿಕೊಳ್ಳಬೇಕು ” ಎಂಬ ದಾರ್ಶನಿಕ ನುಡಿಗಳು ಆಳ್ವಿಕೆಯನ್ನು ಸದಾ ಎಚ್ಚರಿಸುತ್ತಲೇ ಇರಬೇಕು. ಇದು ದೇಶಾತೀತ ಹಾಗೂ ಸಾರ್ವತ್ರಿಕ ಸತ್ಯ ಅಲ್ಲವೇ ?

-೦-೦-೦-೦

Tags: BangladeshBJPCongress PartyNaa DivakaraSave HindhurSave Hindhusಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ನಟ ದರ್ಶನ್ & ಗ್ಯಾಂಗ್ ಗೆ ಜೈಲೇ ಗತಿ : ಆ.28 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ..!

Next Post

ಬೆಂಗಳೂರು: ‘ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ ಕತ್ತರಿ ಹಾಕಲ್ಲ’- ಡಿಕೆ ಶಿವಕುಮಾರ್

Related Posts

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
0

ಇಂದು ನೆಲಮಂಗಲದ (Nelamangala) ಬಳಿಯಿರೋ ನಗರೂರಿನಲ್ಲಿ ಸಿದ್ಧಗೊಂಡಿರುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ‌ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಭಾಗಿಯಾಗಿದ್ದಾರೆ. ನಗರೂರಿನಲ್ಲಿ ಆರಂಭಿಸಿರುವ ಬಿಜಿಎಸ್ ಎಂಸಿಎಚ್...

Read moreDetails

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

June 20, 2025

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇರಪ್ರಸಾರ

June 20, 2025
Next Post

ಬೆಂಗಳೂರು: 'ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ ಕತ್ತರಿ ಹಾಕಲ್ಲ'- ಡಿಕೆ ಶಿವಕುಮಾರ್

Recent News

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
Top Story

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇರಪ್ರಸಾರ

by ಪ್ರತಿಧ್ವನಿ
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada