ಭಾರತದ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರದ ನಿರ್ಧಾರಗಳಿಗೆ ಮಣೆ ಹಾಕದೆ ಸ್ವತಂತ್ರವಾಗಿ ಚುನಾವಣೆಗಳನ್ನು ನಡೆಸುವುದಕ್ಕೆ ಸಂವಿಧಾನದ ಅನ್ವಯ ಸ್ಥಾಪನೆ ಆಗಿರುವ ಸಂಸ್ಥೆ. ಆದರೆ ಇತ್ತೀಚಿಗೆ ಚುನಾವಣಾ ಆಯೋಗದ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ NDA ಸರ್ಕಾರದ ಆಣತಿಯಂತೆ ಚುನಾವಣಾ ಆಯುಕ್ತರು ಕೆಲಸ ಮಾಡುತ್ತಿರುವ ಅನುಮಾನವಿದೆ ಎಂದು ನೇರವಾಗಿಯೇ ಆಕ್ರೋಶ ಹೊರಬಿದ್ದಿತ್ತು. ಕಳೆದ ವರ್ಷ ನಡೆದ ಗುಜರಾತ್ ಹಾಗು ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಚುನಾವಣಾ ಆಯೋಗದ ವಿರುದ್ಧ ರಾಜಕೀಯ ಪಕ್ಷಗಳು ಕಿಡಿಕಾರಿದ್ದವು. ಒಂದೇ ಬಾರಿಗೆ ಚುನಾವಣೆ ನಿಗದಿಯಾಗಿದ್ದರೂ ಬಿಜೆಪಿಗೆ ಸಹಾಯ ಮಾಡುವ ಉದ್ದೇಶದಿಂದ ಗುಜರಾತ್ನಲ್ಲಿ ಚುನಾವಣೆ ಘೋಷಣೆ ಮಾಡದೆ ಚುನಾವಣಾ ಆಯೋಗ ಕೂಡ ಕೇಂದ್ರ ಸರ್ಕಾರದ ಪರವಾಗಿ ನಿಂತಿದೆ ಅನ್ನೋ ಚರ್ಚೆಗಳು ನಡೆದಿದ್ದವು. ಆ ವೇಳೆ ಚುನಾವಣಾ ಆಯೋಗ ಎಲ್ಲಾ ಆರೋಪಗಳನ್ನು ನಿರಾಕರಿಸುವ ಮೂಲಕ, ಕೆಲವೊಂದು ಸಿದ್ಧತೆಗಳು ಆಗಬೇಕಿರುವ ಕಾರಣ ಘೋಷಣೆ ಮಾಡಿಲ್ಲ ಎನ್ನುವ ಸಬೂಬು ನೀಡಿತ್ತು. ಇದೀಗ ಸುಪ್ರೀಂಕೋರ್ಟ್ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಹೊಸ ಕಾನೂನು..!
ಮುಖ್ಯ ಚುನಾವಣಾ ಆಯುಕ್ತರು ಹಾಗು ಚುನಾವಣಾ ಆಯುಕ್ತರ ನೇಮಕದ ಬಗ್ಗೆ ಸುಪ್ರೀಂಕೋರ್ಟ್ನ ಸಂವಿಧಾನ ಪೀಠ ಮಹತ್ವದ ಆದೇಶ ಮಾಡಿದೆ. ಐವರು ನ್ಯಾಯಮೂರ್ತಿಗಳು ಒಂದೇ ತೀರ್ಪು ನೀಡಿದ್ದು, ನ್ಯಾಯಾಂಗ ವ್ಯವಸ್ಥೆಯಂತೆಯೇ ಪ್ರಧಾನಿ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗು ಲೋಕಸಭೆ ವಿಪಕ್ಷ ನಾಯಕರ ಸಮಿತಿಯನ್ನು ರಚನೆ ಮಾಡಿ ಆಯ್ಕೆ ಮಾಡುವುದು ಸೂಕ್ತ ಎನ್ನುವ ಮಹತ್ವದ ಸೂಚನೆ ನೀಡಿದೆ. ಇಲ್ಲೀವರೆಗೂ ಕೇಂದ್ರ ಸರ್ಕಾರ ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗ್ತಿತ್ತು. ಆದರೆ ಇನ್ಮುಂದೆ ಮುಖ್ಯ ಚುನಾವಣಾ ಆಯುಕ್ತರು ಹಾಗು ಚುನಾವಣಾ ಆಯುಕ್ತರ ಆಯ್ಕೆಗೆ ಸಮಿತಿ ಮೂಲಕ ಆಯ್ಕೆ ಮಾಡಲು ಸೂಚನೆ ಕೊಡಲಾಗಿದೆ. ಒಂದು ವೇಳೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರು ಇಲ್ಲದೆ ಹೋದ ಸಮಯದಲ್ಲೂ ಆಡಳಿತ ಪಕ್ಷ ಹೊರತು ಪಡಿಸಿ ಹೆಚ್ಚಿನ ಸ್ಥಾನವನ್ನು ಗಳಿಸುವ ಪಕ್ಷದ ನಾಯಕನನ್ನೇ ಈ ಸಮಿತಿಗೆ ಪರಿಗಣಿಸಬೇಕು ಎನ್ನುವ ಮೂಲಕ ಕಳೆದ 9 ವರ್ಷದಿಂದ ಅಧಿಕೃತ ವಿರೋಧ ಪಕ್ಷ ಇಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋ ಬಗ್ಗೆಯೂ ಸುಪ್ರೀಂಕೋರ್ಟ್ ಉತ್ತರ ಕೊಟ್ಟಿದೆ.
![](https://pratidhvani.com/wp-content/uploads/2023/02/modi-new-pti1-1024x768.jpg)
ಲೋಕಸಭೆಗೂ ಮುನ್ನವೇ ಹೊಸ ಚುನಾವಣಾ ಆಯುಕ್ತರು..!
2014ರ ಲೋಕಸಭಾ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಿದ್ದ ನರೇಂದ್ರ ಮೋದಿ 2019ರಲ್ಲಿ ಮತ್ತೆ ಗೆಲುವಿನ ನಗೆ ಬೀರಿದ್ದರು. ಪ್ರಧಾನಿ ನರೇಂದ್ರ ಮೋದಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಟ್ಯಾಂಪರಿಂಗ್ ಮಾಡ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ EVM ಬಳಕೆ ವಿರುದ್ಧ ಕಾಂಗ್ರೆಸ್ ಸೇರಿದಂತೆ ಸಾಕಷ್ಟು ಪಕ್ಷಗಳು ವಿರೋಧ ಮಾಡಿದ್ದವು. ಆದರೂ ಅಂತಿಮವಾಗಿ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಳಕೆಯನ್ನು ಮುಂದುವರಿಸಿತ್ತು. ಇದೀಗ ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಯಾಗಬೇಕಿದೆ. ಈಗ ಹಾಲಿ ಚುನಾವಣಾ ಆಯುಕ್ತರ ಅವಧಿ 2024ರ ಫೆಬ್ರವರಿಗೆ ಅಂತ್ಯವಾಗಲಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಹೊಸ ಸಮಿತಿ ಮುಂದಿನ ಚುನಾವಣಾ ಆಯುಕ್ತರ ಆಯ್ಕೆಯನ್ನು ಪಾರದರ್ಶಕವಾಗಿ ಆಯ್ಕೆ ಮಾಡಬೇಕಿದೆ. ಸಂವಿಧಾನ ಉಳಿಸುವುದಕ್ಕೆ ಇರುವ ಏಕೈಕ ಮಾರ್ಗ ಎಂದಿದ್ದೆ ಸುಪ್ರೀಂಕೋರ್ಟ್. ಸುಪ್ರೀಂಕೋರ್ಟ್ ಈ ನಿರ್ಧಾರವನ್ನು ಕಾಂಗ್ರೆಸ್ ಮಾತ್ರವಲ್ಲದೆ ಬಹುತೇಕ ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಸಂತಸ ವ್ಯಕ್ತಪಡಿಸಿವೆ.
![](https://pratidhvani.com/wp-content/uploads/2023/03/Capture-1024x523.png)
ಚುನಾವಣೆ ಪ್ರಜಾಪ್ರಭುತ್ವದ ಅಡಿಪಾಯ ಎಂದ ಸುಪ್ರೀಂ..!
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಈ ಮಹತ್ವದ ಆದೇಶ ಮಾಡಿದ್ದು, ಚುನಾವಣೆ ಪ್ರಜಾಪ್ರಭುತ್ವದ ಅಡಿಪಾಯ. ಪ್ರಜಾಪ್ರಭುತ್ವಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವುದಕ್ಕೆ ಚುನಾವಣೆ ಪಾರದರ್ಶಕವಾಗಿ ನಡೆಯಬೇಕಾದ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್, ಅಜೆಯ್ ರಸ್ತೋಗಿ, ಅನಿರುದ್ಧ ಬೋಸ್, ಋಷಿಕೇಶ್ ರಾಯ್ ಮತ್ತು ಸಿ.ಟಿ ರವಿಕುಮಾರ್ ನೇತೃತ್ವದ ನ್ಯಾಯಮೂರ್ತಿಗಳು ಒಂದೇ ತೀರ್ಪು ನೀಡಿರುವುದು ವಿಶೇಷ. ಚುನಾವಣೆಯಲ್ಲಿ ಸ್ವಚ್ಛತೆ ಕಾಪಾಡುವುದು ಪ್ರಜಾಪ್ರಭುತ್ವದ ರಕ್ಷಣೆಗೆ ಇರುವ ಕ್ರಮ ಎಂದಿರುವ ನ್ಯಾಯಮೂರ್ತಿಗಳು, ಸಂವಿಧಾನ ರಚನಕಾರರು ಚುನಾವಣಾ ಆಯುಕ್ತರ ನೇಮಕದ ಬಗ್ಗೆ ಕಾನೂನು ರೂಪಿಸಲು ಸಂಸತ್ಗೆ ಅವಕಾಶ ಕೊಟ್ಟಿದ್ದರು. ಆದರೆ ಕಳೆದ 7 ದಶಕಗಳಿಂದ ರಾಜಕೀಯ ಪಕ್ಷಗಳು ದ್ರೋಹ ಮಾಡಿವೆ ಎಂದು ಕಟುವಾಗಿ ಟೀಕಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಈ ಆದೇಶ ಬಿಸಿ ತುಪ್ಪ ಆಗಿದ್ರೆ, ವಿರೋಧ ಪಕ್ಷಗಳಿಗೆ ಆನಂದಬಾಷ್ಪ ಉಕ್ಕುವಂತೆ ಮಾಡಿದೆ ಅಂತಾನೇ ಹೇಳಬಹುದು.