ಲವ್ ಮಾಕ್ಟೇಲ್ 3 ಚಿತ್ರದ ಕಥೆ ಕುರಿತು ಉದ್ಭವಿಸಿದ್ದ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. ನಿರ್ದೇಶಕ ಗುರು ದೇಶಪಾಂಡೆ ಮಾಡಿದ್ದ ಆರೋಪಗಳಿಗೆ ನಟ-ನಿರ್ದೇಶಕ ಕೃಷ್ಣ ತಿರುಗೇಟು ನೀಡಿದ್ದ ಹಿನ್ನೆಲೆಯಲ್ಲಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ವಿವಾದವನ್ನು ಇತ್ಯರ್ಥಗೊಳಿಸಲಾಗಿದೆ.

ಸಭೆಯಲ್ಲಿ ಅಧ್ಯಕ್ಷೆ ಜಯಮಾಲಾ ಅವರ ಸಮ್ಮುಖದಲ್ಲಿ ಕೃಷ್ಣ, ಗುರು ದೇಶಪಾಂಡೆ ಹಾಗೂ ರಾಘವೇಂದ್ರ ನಾಯ್ಕ್ ಸೇರಿದಂತೆ ಪ್ರಮುಖರು ಭಾಗವಹಿಸಿ ತಮ್ಮ ತಮ್ಮ ವಾದ ಮಂಡಿಸಿದರು.ವಿವಾದದ ಮೂಲವಾಗಿ ‘ಲವ್ ಮಾಕ್ಟೇಲ್ 3’ ಚಿತ್ರದ ದ್ವಿತೀಯಾರ್ಧದಲ್ಲಿನ ಕೋರ್ಟ್ ರೂಂ ಭಾಗದ ಕಥೆಯೇ ಕಾರಣವಾಗಿತ್ತು. ಇಬ್ಬರೂ ಒಂದೇ ಘಟನೆಯಿಂದ ಪ್ರೇರಣೆ ಪಡೆದಿದ್ದರೂ, ಚಿತ್ರಕಥೆಗಳು ವಿಭಿನ್ನವಾಗಿವೆ ಎಂಬ ನಿರ್ಣಯಕ್ಕೆ ಸಭೆಯಲ್ಲಿ ಬರಲಾಗಿದೆ.

ಮಂಡಳಿಯ ತೀರ್ಮಾನದ ಪ್ರಕಾರ, ಇಬ್ಬರೂ ಒಂದೇ ಘಟನೆಯಿಂದ ಸ್ಫೂರ್ತಿ ಪಡೆದಿದ್ದರೂ, ಅವರ ಕಥೆ ಮತ್ತು ಚಿತ್ರಕಥೆಗಳು ವಿಭಿನ್ನವಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಸುದ್ದಿಗೋಷ್ಠಿಯಲ್ಲಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಕೃಷ್ಣ ಅವರು ಗುರು ದೇಶಪಾಂಡೆ ಅವರಿಗೆ ವೈಯಕ್ತಿಕವಾಗಿ ಕ್ಷಮೆ ಕೋರಿದ್ದಾರೆ.

ಮಂಡಳಿ ಪ್ರಕಟಣೆಯಲ್ಲಿ, ಇಂತಹ ವಿವಾದಗಳು ಚಿತ್ರರಂಗದ ಸೌಹಾರ್ದತೆಗೆ ಧಕ್ಕೆ ತರಬಾರದು ಎಂದು ಹೇಳಿ, ಮುಂದಿನ ದಿನಗಳಲ್ಲಿ ಪರಸ್ಪರ ಗೌರವದಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ‘ಲವ್ ಮಾಕ್ಟೇಲ್ 3’ ಚಿತ್ರವು ಶ್ರೀ ಕೃಷ್ಣ ಅವರ ಸ್ವತಂತ್ರ ಸೃಜನಾತ್ಮಕ ಕೃತಿಯಾಗಿದೆ ಎಂದು ಕೂಡ ಮಂಡಳಿ ಸ್ಪಷ್ಟಪಡಿಸಿದೆ.ಈ ಮೂಲಕ ಹಲವು ದಿನಗಳಿಂದ ಮುಂದುವರಿದಿದ್ದ ಆರೋಪ-ಪ್ರತ್ಯಾರೋಪಗಳಿಗೆ ಅಂತ್ಯ ಬಿದ್ದಿದ್ದು, ಚಿತ್ರರಂಗದಲ್ಲಿ ಸಮಾಧಾನದ ಸಂದೇಶ ಹರಡಿದೆ.






