
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ರಾಜ್ಯ ಸರ್ಕಾರದ ಶಾಕ್ ನೀಡಿದೆ. ಬಿಡದಿ ಬಳಿಯ ಹೆಚ್.ಡಿ ಕುಮಾರಸ್ವಾಮಿ ತೋಟದ ಅಕ್ಕಪಕ್ಕದ ಜಮೀನುಗಳನ್ನು ಒತ್ತುವರಿ ಮಾಡಿಕೊಂಡ ಆರೋಪ ಎದುರಾಗಿದ್ದು, ರಾಜ್ಯ ಕಂದಾಯ ಇಲಾಖೆ ಸರ್ವೇ ಕಾರ್ಯ ಆರಂಭ ಮಾಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ರಾಮನಗರ ಕಂದಾಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ಮಾಡ್ತಿದ್ದಾರೆ. ಕುಮಾರಸ್ವಾಮಿ ತೋಟದ ಸುತ್ತಲಿನ 35ಕ್ಕೂ ಹೆಚ್ಚು ಸರ್ವೆ ನಂಬರ್ಗಳಲ್ಲಿ ಜಮೀನುಗಳ ಪರಿಶೀಲನೆ ಮಾಡಲಾಗ್ತಿದೆ.

ಕೇಂದ್ರ ಸಚಿವ ಕುಮಾರಸ್ವಾಮಿ ತೋಟದ ಸುತ್ತಲಿನ 110 ಎಕರೆಗೂ ಹೆಚ್ಚು ಜಮೀನು ಸರ್ವೆ ಮಾಡಲಾಗ್ತಿದ್ದು, ಆಧುನಿಕ ಸರ್ವೇ ಉಪಕರಣಗಳ ಮೂಲಕ ಸರ್ವೇ ಕಾರ್ಯ ನಡೆಯುತ್ತಿದೆ. ಜಮೀನುಗಳ ಮೂಲ ಮಾಲೀಕರನ್ನೂ ಸ್ಥಳಕ್ಕೆ ಕರೆಸಿ ಪರಿಶೀಲನೆ ಮಾಡಲಾಗ್ತಿದೆ. ಬಿಡದಿ ಬಳಿ 65 ಎಕರೆ ಕುಮಾರಸ್ವಾಮಿ ಜಮೀನು ಇದೆ. 1985ರಲ್ಲಿ ಖರೀದಿ ಮಾಡಿದ್ದ ಜಮೀನು ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಎನ್ನಲಾಗಿದೆ. ಕುಮಾರಸ್ವಾಮಿ ಜಮೀನಿನ ಅಕ್ಕಪಕ್ಕ ಸಂಬಂಧಿಕರ ಹೆಸರಿನಲ್ಲೂ ಜಮೀನಿದೆ ಎನ್ನಲಾಗಿದೆ.
ಮಾಜಿ ಸಚಿವ ಡಿ.ಸಿ ತಮ್ಮಣ್ಣ, ಸಂಸದ ಡಾ. ಸಿ ಎನ್ ಮಂಜುನಾಥ್, ಅನುಸೂಯ ಮಂಜುನಾಥ್ ಹೆಸರಿನಲ್ಲಿ ಜಮೀನಿದೆ. ಕುಮಾರಸ್ವಾಮಿ ಜಮೀನಿನ ಸುತ್ತಲೂ 14 ಎಕರೆಗೂ ಹೆಚ್ಚು ಜಮೀನು ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 8, 9, 10, 16, ಮತ್ತು 79ರ ಜಮೀನುಗಳಲ್ಲಿ ಒತ್ತುವರಿ ಆಗಿರುವ ಆರೋಪ ಎದುರಾಗಿದೆ. ಮೂಲ ಜಮೀನುದಾರರಿಂದ ಕಡಿಮೆ ಮೊತ್ತಕ್ಕೆ ಜಮೀನು ಖರೀದಿ ಮಾಡಿದ್ದಾರೆ ಎಂದೂ ಆರೋಪ ಇದೆ.

ಎಸ್. ಆರ್. ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯದಿಂದ ಹೈಕೋರ್ಟ್ ಮೊರೆ ಹೋಗಲಾಗಿತ್ತು. ದೂರುದಾರರ ಮನವಿಯಂತೆ ಅಕ್ರಮದ ತನಿಖೆಗೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದ ಹೈಕೋರ್ಟ್, ಫೆಬ್ರವರಿ 21ರೊಳಗೆ ಸರ್ವೇ ಮಾಡಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಶೀಘ್ರವೇ ಸರ್ವೇ ಮಾಡಿ ರಾಮನಗರ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಸೂಚನೆ ಬಂದಿದ್ದರಿಂದ ಸರ್ವೇ ಕಾರ್ಯ ನಡೆಯುತ್ತಿದೆ