• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

ನಾ ದಿವಾಕರ by ನಾ ದಿವಾಕರ
August 22, 2025
in Top Story, ಕರ್ನಾಟಕ, ರಾಜಕೀಯ
0
ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು
Share on WhatsAppShare on FacebookShare on Telegram

ಒಳಮೀಸಲಾತಿ – ಚಾರಿತ್ರಿಕ ಪ್ರಮಾದವನ್ನು ಸರಿಪಡಿಸುವ ಒಂದು ಮಾರ್ಗ ಎಂಬ ಪರಿವೆ ಇರಲಿ

ADVERTISEMENT

ನಾ ದಿವಾಕರ

ಭಾಗ  4

 ಕಳೆದ ಮೂರು ದಶಕಗಳಿಂದ ಸಾಂವಿಧಾನಿಕ ಅವಕಾಶವಂಚಿತ, ಸೌಲಭ್ಯ ವಂಚಿತ , ಆರ್ಥಿಕವಾಗಿ-ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ, ದಲಿತರಲ್ಲಿನ ಕೆಲವು ಸಮುದಾಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟಗಳನ್ನು ನಡೆಸುತ್ತಲೇ ಬಂದಿವೆ. ಆಂಧ್ರಪ್ರದೇಶದ ಮಾದಿಗ ದಂಡೋರ ಇಲ್ಲಿ ಉಲ್ಲೇಖನಾರ್ಹ. ಈ ಹಿನ್ನೆಲೆಯಲ್ಲೇ ಕರ್ನಾಟಕದಲ್ಲೂ ಒಳಮೀಸಲಾತಿಗಾಗಿ ಹಕ್ಕೊತ್ತಾಯದ ಹೋರಾಟಗಳು ರೂಪುಗೊಂಡಿದ್ದು, ರಾಜ್ಯ ಸರ್ಕಾರ ಈಗಾಗಲೇ ನೇಮಿಸಿದ್ದ ಸದಾಶಿವ ಆಯೋಗದ ಶಿಫಾರಸುಗಳಲ್ಲಿದ್ದ  ಹಲವಾರು ಲೋಪದೋಷಗಳ ಅಥವಾ ಭಿನ್ನಮತಕ್ಕೆ ಕಾರಣವಾದ ಅಂಶಗಳನ್ನು ಮನಗಂಡು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ನೇತೃತ್ವದ ಆಯೋಗವೊಂದನ್ನು ನೇಮಿಸಿತ್ತು.

Session:ಯಾವ ಬೇಸಸ್‌ ಮೇಲೆ ಅವ್ರನ್ನ ಕರೆದ್ರೀ ಎಂದು ಅಶೋಕ್‌ ಸವಾಲ್‌ #pratidhvani

 ಈ ಸಮಿತಿಯ ಶಿಫಾರಸುಗಳ ಅನುಸಾರ ಐದು ಪ್ರವರ್ಗಗಳನ್ನು ಗುರುತಿಸಲಾಗಿದ್ದು, ʼಎʼ ಪ್ರವರ್ಗದಲ್ಲಿ 90  ಸಣ್ಣಪುಟ್ಟ ಅಲೆಮಾರಿ ಸಮುದಾಯಗಳನ್ನು ಗುರುತಿಸಿ ಶೇಕಡಾ 4.7ರಷ್ಟಿರುವ ಜನಸಂಖ್ಯೆಗೆ ಶೇಕಡಾ 1ರಷ್ಟು ಮೀಸಲಾತಿಯನ್ನು,  ʼ ಬಿ ʼ ಪ್ರವರ್ಗದಲ್ಲಿ  ಮಾದಿಗ ಮತ್ತು ಇತರ ಅಧೀನ ಜಾತಿಗಳನ್ನು ಸೇರಿಸಿ ಶೇಕಡಾ 34.91ರಷ್ಟಿರುವ ಜನಸಂಖ್ಯೆಗೆ ಶೇಕಡಾ 6ರಷ್ಟು ಮೀಸಲಾತಿಯನ್ನು,  ʼಸಿ ʼ ಪ್ರವರ್ಗದಲ್ಲಿ ಹೊಲೆಯ  ಮತ್ತು ಸಮಾನಾಂತರ ಜಾತಿಗಳನ್ನು ಗುರುತಿಸಿ ಶೇಕಡಾ 28.53ರಷ್ಟು ಜನಸಂಖ್ಯೆಗೆ ಶೇಕಡಾ 5ರಷ್ಟು ಮೀಸಲಾತಿಯನ್ನು, ʼ ಡಿ ʼ ಪ್ರವರ್ಗದಲ್ಲಿ ಸ್ಪೃಶ್ಯ ಜಾತಿಗಳ ಸಂಖ್ಯೆ ಶೇಕಡಾ 26.97ರಷ್ಟಿದ್ದು ಅವರಿಗೆ ಶೇಕಡಾ 4ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಇದನ್ನು ಹೊರತುಪಡಿಸಿ ನಾಗಮೋಹನ್‌ ದಾಸ್‌ ಆಯೋಗವು  ಆಯೋಗವು ʼ ಇ ʼ ಪ್ರವರ್ಗವೊಂದನ್ನು ಗುರುತಿಸಿ ಅದರಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಅಂಧ್ರ ಸಮುದಾಯಗಳನ್ನು ಗುರುತಿಸಿ ಶೇಕಡಾ 4.52ರಷ್ಟಿರುವ ಜನಸಂಖ್ಯೆಗೆ ಶೇಕಡಾ 1ರಷ್ಟು ಮೀಸಲಾತಿಯನ್ನು ಸೂಚಿಸಿತ್ತು.

 ಈ ಕೊನೆಯ ಅಂಶವೇ ರಾಜ್ಯದಲ್ಲಿ ವಿಭಜನೆಯ ಕಿಡಿಯಾಗಿ ದಲಿತ ಸಮುದಾಯದ ಎಡಗೈ-ಬಲಗೈ ಬಣಗಳ ನಡುವೆ ಗೋಡೆ ನಿರ್ಮಿಸಲು ಕಾರಣವೂ ಆಯಿತು. ಈ ಮೂರೂ ಜಾತಿಗಳು ಹೊಲೆಯ ಸಮುದಾಯಕ್ಕೆ ಸೇರಿದವರೆಂದೂ, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸದ ಕಾರಣ ಹೊಲೆಯರಿಗೆ ಅಥವಾ ಬಲಗೈ ಪಂಗಡದವರಿಗೆ ಅನ್ಯಾಯ ಆಗಿದೆ ಎಂದೂ ಆರೋಪಿಸಲಾಗಿದ್ದು, ಬಲಗೈ ಪಂಗಡದ ದಲಿತ ಸಂಘಟನೆಗಳು ಆಯೋಗದ ವರದಿಯನ್ನೇ ತಿರಸ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿವೆ. ಮತ್ತೊಂದೆಡೆ ಎಡಗೈ ಪಂಗಡಗಳಿಗೆ ಇದೊಂದು ಚಾರಿತ್ರಿಕ ಅವಕಾಶವಾಗಿದ್ದು, ಇದನ್ನು ಯಾವುದೇ ಕೈಬಿಡಕೂಡದು ಎಂಬ ದೃಢ ನಿಶ್ಚಯದಿಂದ ಈ ಬದಿಯ ದಲಿತ ಸಂಘಟನೆಗಳು ಕೂಡಲೇ ನಾಗಮೋಹನ್‌ ದಾಸ್ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರವನ್ನು ಆಗ್ರಹಿಸಿದ್ದವು.

 ಸರ್ಕಾರದ ಆದ್ಯತೆ ಮತ್ತು ವಾಸ್ತವ

 ಸಿದ್ದರಾಮಯ್ಯ ಸರ್ಕಾರವು ನಾಗಮೋಹನ್‌ ದಾಸ್‌ ವರದಿಯನ್ನು ಜಾರಿಗೊಳಿಸುವ ಚಾರಿತ್ರಿಕ ನಿರ್ಣಯ ಕೈಗೊಂಡಿರುವುದು ದಲಿತರ ಉಭಯ ಬಣಗಳ ಪೈಪೋಟಿ ಹೋರಾಟಕ್ಕೆ ತಾತ್ಕಾಲಿಕವಾಗಿ ವಿರಾಮ ನೀಡಿದ್ದರೂ, ಮೂಲ ವರದಿಯಲ್ಲಿ ಶಿಫಾರಸು ಮಾಡಿದ್ದ 1:6:5:4:1 ಸೂತ್ರವನ್ನು ಬದಲಿಸಿ, 6:6:5 ಸೂತ್ರವನ್ನು ಅನುಸರಿಸಿ, ಪರಿಶಿಷ್ಟ ಜಾತಿಗಳಲ್ಲೇ ಅತಿ ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಒದಗಿಸಲಾಗಿದ್ದ ಶೇಕಡ 1ರ ಮೀಸಲಾತಿ ಸೌಲಭ್ಯವನ್ನು ರದ್ದುಪಡಿಸಿ, ಈ ಗುಂಪನ್ನು ಪ್ರವರ್ಗ ʼಡಿ ʼ ಜೊತೆಗೆ ಸೇರಿಸಿರುವುದು, ಈ ತೀವ್ರ ಹಿಂದುಳಿದ ಅಲೆಮಾರಿ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಲೇಖಕ ಈ ಕ್ರಮವನ್ನು ಸಾಮಾಜಿಕ ಕ್ರೌರ್ಯ ಎಂದು ಬಣ್ಣಿಸಿರುವುದು ಒಪ್ಪುವಂತಹ ಮಾತು. ಎಡಗೈ ಬಣದ ಒಳಮೀಸಲಾತಿ ಹೋರಾಟ ಸಮಿತಿಯು ಈ ಅನ್ಯಾಯವನ್ನು ಸರಿಪಡಿಸುವವರೆಗೂ ತಮ್ಮ ಹೋರಾಟ ಮುಂದುವರೆಸುವುದಾಗಿ ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆ.

 ಸಿದ್ದರಾಮಯ್ಯ ಸರ್ಕಾರದ ನಡೆಯು ಮೇಲ್ನೋಟಕ್ಕೆ ಎಲ್ಲ ಸಮುದಾಯಗಳನ್ನೂ ತೃಪ್ತಿಪಡಿಸುವ ಒಂದು ಸಕಾರಾತ್ಮಕ ಕ್ರಮವಾಗಿ ಕಂಡುಬಂದರೂ, ಬೂರ್ಷ್ವಾ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ಒಂದು ಪಕ್ಕಾ ಮಾದರಿಯನ್ನು ನಮ್ಮ ಮುಂದಿಡುತ್ತದೆ.  ಈ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ, ಜನಾಂದೋಲನಳನ್ನು ಶಮನಗೊಳಿಸುವ ದೃಷ್ಟಿಯಿಂದ ಎಲ್ಲ ಭಿನ್ನ ಬಣಗಳನ್ನು, ಸಮುದಾಯಗಳನ್ನು ಸಮಾನವಾಗಿ ತೃಪ್ತಿಗೊಳಿಸುವ ಸಮತೋಲನದ ಸೂತ್ರಗಳನ್ನು ಅನುಸರಿಸುತ್ತವೆ, ತನ್ಮೂಲಕ ಹೋರಾಟಗಳನ್ನು ತಡೆಗಟ್ಟುತ್ತವೆ. ಪ್ರಜಾಪ್ರಭುತ್ವದಲ್ಲೇ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವ ಸರ್ಕಾರಗಳು ಹೋರಾಟಗಳನ್ನೇ ಕ್ರೂರವಾಗಿ ದಮನಿಸಿ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ತನ್ನದೇ ಆದ ಸೂತ್ರಗಳನ್ನು ಅನುಸರಿಸುತ್ತದೆ. ರಾಜ್ಯ ಸರ್ಕಾರ ಮೊದಲನೆಯ ಸೂತ್ರವನ್ನು ಅನುಸರಿಸುವ ಮೂಲಕ, ತಾತ್ಕಾಲಿಕವಾಗಿ ಹೋರಾಟನಿರತ ಸಂಘಟನೆಗಳನ್ನು ತೃಪ್ತಿಪಡಿಸಿದೆ.

 ಈಗ ದಲಿತ ಸಂಘಟನೆಗಳ ಎಲ್ಲ ಗುಂಪುಗಳು ಮತ್ತು ನಾಯಕರು ಸರ್ಕಾರದ ಸೂತ್ರವನ್ನು ಸ್ವಾಗತಿಸಿದ್ದು  ಇದು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಒಂದು ಮಹತ್ತರ ನಿರ್ಣಯ ಎಂದು ಹೇಳಿದ್ದಾರೆ. ಅದರೆ ಈ ಸೂತ್ರದಿಂದ ನೊಂದ ಅಲೆಮಾರಿ ಸಮುದಾಯಗಳ ಸಂಘಟನೆಗಳು ಇದನ್ನು ವಿರೋಧಿಸಿದ್ದು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ ಅತ್ಯಂತ ಹಿಂದುಳಿದಿರುವ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಹಾಗೂ ಬುಡಕಟ್ಟು  ಸಮುದಾಯಗಳನ್ನು ಈಗಾಗಲೇ ಮುಂದುವರೆದ ಗುಂಪುಗಳೊಡನೆ ಸೇರಿಸಿರುವುದು, ಮತ್ತೊಮ್ಮೆ ಅಸಮಾನತೆಯ ಕಂದಕಗಳನ್ನು ಹಿಗ್ಗಿಸುವ, ಅಸಮಾನರ ನಡುವೆ ಪೈಪೋಟಿ ನಡೆಯುವ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಇದು ಮತ್ತಷ್ಟು ಜಟಿಲ ಪರಿಸ್ಥಿತಿಯನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಈಗ ಪ್ರಶ್ನೆ ಸರ್ಕಾರದ ಅಂಗಳಕ್ಕಿಂತಲೂ ಹೆಚ್ಚಾಗಿ, ದಲಿತ ಚಳುವಳಿಗಳ ಅಂಗಳದಲ್ಲಿ ಗಂಭೀರ ಚರ್ಚೆಗೊಳಗಾಗಬೇಕಿದೆ. ಈ ವಂಚಿತ ಸಮುದಾಯಗಳ ಪರವಾಗಿ ದಲಿತ ಸಮುದಾಯ ಒಗ್ಗಟ್ಟಿನಿಂದ, ಎಲ್ಲರನ್ನೂ ಒಳಗೊಂಡು,  ಹೋರಾಡಲು ಸಾಧ್ಯವೇ ? ಇಲ್ಲಿ ಐಕಮತ್ಯ (Solidarity) ಪ್ರದರ್ಶಿಸುವುದಕ್ಕಿಂತಲೂ ಐಕ್ಯತೆಯನ್ನು ಸಾಧಿಸಿ, ಮುನ್ನಡೆಯುವುದು ಅಗತ್ಯ. 

 ತಳಸಮಾಜದ ವಾಸ್ತವಗಳ ನೆಲೆಯಲ್ಲಿ

 ಈ ಅಂಕಿ ಸಂಖ್ಯೆಗಳನ್ನು ಹೊರತುಪಡಿಸಿ, ವಾಸ್ತವ ಪರಿಸ್ಥಿತಿಯನ್ನು ಗಮನಿಸಿದಾಗ ನಮಗೆ ಕಾಣಬೇಕಿರುವುದು ನವ ಉದಾರವಾದ –ಕಾರ್ಪೋರೇಟ್‌ ಆರ್ಥಿಕತೆಯು ಉದ್ಯೋಗ ವಲಯದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಔದ್ಯಮಿಕ ವಾತಾವರಣದಲ್ಲಿ ಸೃಷ್ಟಿಸಿರುವ ಬಿಕ್ಕಟ್ಟುಗಳು ಹಾಗೂ, ದಲಿತರ ದೃಷ್ಟಿಯಿಂದ ನಿರ್ವಾತ (Vacuum) . ಈಗಿನ ವಾಸ್ತವ ಪರಿಸ್ಥಿತಿಯನ್ನೇ ಅವಲೋಕಿಸಿದರೆ ರಾಜ್ಯ ಸರ್ಕಾರದಲ್ಲಿ ನಾಲ್ಕು ಲಕ್ಷ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಪರಿಶಿಷ್ಟ ನೌಕರರ ಹುದ್ದೆಗಳೂ 51 ಸಾವಿರದಷ್ಟು ಖಾಲಿ ಇವೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ಹಲವು ವರ್ಷಗಳಲ್ಲಿ ಪರಿಶಿಷ್ಟ ನೌಕರರ ಸಂಖ್ಯೆ ಇನ್ನೂ ಕುಸಿಯುವ ಸಾಧ್ಯತೆಗಳಿವೆ. ಜನಸಂಖ್ಯೆಯ ಪ್ರಮಾಣದಲ್ಲಿ ನೋಡಿದರೆ ಒಟ್ಟಾರೆ 1.05 ಕೋಟಿ ಇರುವ ಪರಿಶಿಷ್ಟರ ಪೈಕಿ ಸರ್ಕಾರಿ ಉದ್ಯೋಗ ಪಡೆದಿರುವವರು ಕೇವಲ 1.4 ಲಕ್ಷ ಮಾತ್ರ. ಇಲ್ಲಿ ಇನ್ನುಳಿದ ಶೇಕಡಾ 98ರಷ್ಟು ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಹೇಗೆ ?

 ಈ ಪ್ರಶ್ನೆಗೆ ಉತ್ತರ ಶೋಧಿಸುವ ಮುನ್ನ ಸರ್ಕಾರಗಳು, ಪಕ್ಷಾತೀತವಾಗಿ, ತತ್ವಾತೀತವಾಗಿ ಅನುಸರಿಸುತ್ತಿರುವ ಮಾರುಕಟ್ಟೆ ಆರ್ಥಿಕತೆಯ ಕಾರ್ಪೋರೇಟೀಕರಣ ನೀತಿಯನ್ನು ಗಮನಿಸಬೇಕಿದೆ.                ʼ ಉದ್ಯೋಗ ನೀಡುವುದು ಸರ್ಕಾರದ ಕೆಲಸ ಅಲ್ಲ ʼ ಎಂಬ ಧೋರಣೆಯೇ ಈಗಿನ ಆರ್ಥಿಕ ನೀತಿಗಳ ಮೂಲ ಮಂತ್ರವಾಗಿದೆ. ಭವಿಷ್ಯದ ತಲೆಮಾರಿಗೆ ಒಂದು ಸುಭದ್ರ ಜೀವನ, ಸುರಕ್ಷಿತ ಸಮಾಜ ಮತ್ತು ಆರೋಗ್ಯಕರ ಸಮಾಜವನ್ನು ಕಟ್ಟಿಕೊಳ್ಳುವ ಅವಕಾಶ ಇರುವುದೇ ಸುಸ್ಥಿರವಾದ ನೌಕರಿಯಲ್ಲಿ. ಆದರೆ ಈ ಸುಸ್ಥಿರತೆಗಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕಾಗಿ ಬರುವುದು ಶೋಷಿತ-ಹಿಂದುಳಿದ ಜನತೆಯ ದೃಷ್ಟಿಯಿಂದ ಅನ್ಯಾಯದ ಪರಾಕಾಷ್ಠೆಯಾಗಿ ಕಾಣುತ್ತದೆ. ದಲಿತ ಚಳುವಳಿಗಳು ಈ ಮೀಸಲಾತಿ ಸೂತ್ರಗಳನ್ನೇ ಅಂತಿಮ ನ್ಯಾಯ ಎಂದು ಪರಿಗಣಿಸುವುದು ದಲಿತ ಹೋರಾಟ ಮತ್ತು ಶೋಷಿತರ ಸಾಂವಿಧಾನಿಕ ಗುರಿಯ ದೃಷ್ಟಿಯಿಂದ ನ್ಯಾಯಯುತ ಎನಿಸುವುದಿಲ್ಲ.

Legislative Council : ಅಶೋಕ್.. ಕೇಳಿದ ಪ್ರಶ್ನೆಗೆ ಸಖತ್ತಾಗಿಯೇ ಟಾಂಗ್‌ ಕೊಟ್ಟ Siddaramaiah #pratidhvani

 ದುರದೃಷ್ಟವಶಾತ್‌ ಒಳಮೀಸಲಾತಿ ಹೋರಾಟವು ಅಂತಿಮವಾಗಿ ಎಲ್ಲರೂ ತೃಪ್ತಿಯಾಗುವ ಒಂದು ಫಲಿತಾಂಶವನ್ನು ನೀಡಿದ್ದರೂ, ಈ ಬಲಗೈ-ಎಡಗೈ ಹೋರಾಟದ ನೆಲೆಯಲ್ಲಿ ಉಂಟಾದ ವರ್ಗೀಯ ಬಿರುಕುಗಳು ಮತ್ತು ಸಾಂಘಿಕ ಕಂದಕಗಳು ಭವಿಷ್ಯದ ಐಕ್ಯತೆಗೆ ದೊಡ್ಡ ತೊಡಕಾಗಿ ಪರಿಣಮಿಸಬಹುದು. ಸೈದ್ಧಾಂತಿಕ ಸ್ಪಷ್ಟತೆ ಮತ್ತು ಚರಿತ್ರೆಯ ಅರಿವು ಇಲ್ಲದ ಯುವ-ಮಿಲೆನಿಯಂ ಸಮೂಹವು ಈ ಹೋರಾಟದ ಸಂದರ್ಭಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ಅಪಾಯವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಏಕೆಂದರೆ ಇಷ್ಟು ವರ್ಷಗಳಲ್ಲಿ ದಲಿತ ಚಳುವಳಿಗಳು ತಮ್ಮ ತಾತ್ವಿಕ ಭಿನ್ನಮತಗಳನ್ನು ಬದಿಗಿಟ್ಟು ಎಲ್ಲರನ್ನೂ ಒಳಗೊಳ್ಳುವ ಒಂದು ದಲಿತ ಅಸ್ಮಿತೆಯನ್ನು ರೂಪಿಸುವಲ್ಲಿ ವಿಫಲವಾಗಿವೆ. ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ತಾತ್ವಿಕವಾಗಿ ಭಿನ್ನ ನೆಲೆಗಳಲ್ಲಿ ತಮ್ಮ ಅಸ್ತಿತ್ವಗಳನ್ನು ಕಂಡುಕೊಂಡಿರುವ ಯುವ ಸಮೂಹವು ವಿಶಾಲ ದಲಿತ ಸಮಾಜದ ದೃಷ್ಟಿಯಿಂದ, ವ್ಯಷ್ಟಿ ನೆಲೆಯನ್ನು ದಾಟಿ ಸಮಷ್ಟಿ ನೆಲೆಯಲ್ಲಿ ತಮ್ಮ ಭವಿಷ್ಯವನ್ನು ಗುರುತಿಸಿಕೊಳ್ಳುವ  ಹಾದಿಯಲ್ಲಿ ಕ್ರಮಿಸುವುದು ಅಷ್ಟು ಸುಲಭ ಅಲ್ಲ. ಈ ತಾತ್ವಿಕ ಸವಾಲನ್ನು ದಲಿತ ಚಳುವಳಿಗಳು ಹೇಗೆ ಸ್ವೀಕರಿಸುತ್ತವೆ.

 ಚಳುವಳಿಯ ನೈತಿಕ ಜವಾಬ್ದಾರಿಗಳು

 ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಹಿರಿಯ ದಲಿತ ನಾಯಕರಾದ ದೇವನೂರು ಮಹದೇವ, ಕೋಟಿಗಾನಹಳ್ಳಿ ರಾಮಯ್ಯ ಮತ್ತು ಗೋವಿಂದಯ್ಯ ಅವರು ಒಂದೇ ಅಭಿಪ್ರಾಯಕ್ಕೆ ಬದ್ಧರಾಗಿ, ತಮ್ಮ ಬೆಂಬಲ ವ್ಯಕ್ತಪಡಿಸಿದ್ದನ್ನು ʼ ಬುದ್ಧಪ್ರಜ್ಞೆ ʼಯ ಸಂಕೇತ ಎಂದು ಹಲವು ಚಿಂತಕರು, ಸಾಮಾಜಿಕ ಮಾಧ್ಯಮಗಳು ಬಣ್ಣಿಸಿರುವುದನ್ನು ಇಲ್ಲಿ ಗಮನಿಸಬಹುದು. ವಾಸ್ತವದಲ್ಲಿ ಇದನ್ನು ಬುದ್ಧಪ್ರಜ್ಞೆ ಎಂದು ವ್ಯಾಖ್ಯಾನಿಸುವುದು, ಬುದ್ಧನಿಗೆ ಇರಲಿ, ಅಂಬೇಡ್ಕರ್‌ ಅವರಿಗೇ ಅಪಚಾರ ಎಸಗಿದಂತಾಗುತ್ತದೆ. ಏಕೆಂದರೆ ಈ ನಾಯಕರ ವರ್ತಮಾನದ ನಿಲುವು ಈಗಿನ ಪರಿಸ್ಥಿತಿಯಲ್ಲಿ ಅಪ್ಯಾಯಮಾನವಾಗಿಯೂ, ಅತ್ಯಂತ ಅವಶ್ಯಕವಾಗಿಯೂ ಕಾಣುವುದಾದರೂ, ಇದನ್ನೇ ಬುದ್ಧ ಪ್ರಜ್ಞೆ ಎನ್ನುವುದು ಅಲ್ಪತೃಪ್ತಿಯ ವೈಭವೀಕರಣವಾಗುತ್ತದೆ.

 ನಿಜವಾದ ಬುದ್ಧಪ್ರಜ್ಞೆಯನ್ನು ಕಾಣಬೇಕಿರುವುದು ಕರ್ನಾಟಕದ ವಿಶಾಲ ದಲಿತ ಚಳುವಳಿಯಲ್ಲಿ. ಒಳಮೀಸಲಾತಿಯ ವಿಚಾರವನ್ನು ಬದಿಗಿಟ್ಟು, ʼ ದಲಿತ ರಾಜಕಾರಣ ʼ ಅಥವಾ ಪರ್ಯಾಯ ದಲಿತ ರಾಜಕೀಯವನ್ನು ಕಟ್ಟುವ ನಿಟ್ಟಿನಲ್ಲಿ ಕಳೆದ ಮೂರು ನಾಲ್ಕು ದಶಕಗಳಲ್ಲಿ ಈ ನಾಯಕರು ಮತ್ತಿತರ ದಲಿತ ಚಳುವಳಿಯ ನೇತಾರರು, ಒಂದೇ ವೇದಿಕೆಯಲ್ಲಿ ನಿಂತು ಸಮಸ್ತ ದಲಿತರನ್ನೂ ಒಂದುಗೂಡಿಸಿ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪಿಸುವ ಕ್ರಮಕ್ಕೆ ಚಾಲನೆ ನೀಡಿದ್ದರೆ, ಅದನ್ನು ವಸ್ತುಶಃ ʼ ಬುದ್ಧಪ್ರಜ್ಞೆ ʼ ಎಂದು ಬಣ್ಣಿಸಬಹುದಿತ್ತು. ಆಗ ದಲಿತ ಸಂಘಟನೆಗಳ ನಡುವೆ ಅಸ್ಮಿತೆ ಮತ್ತು ಅಸ್ತಿತ್ವದ ಗೋಡೆಗಳು ಇಷ್ಟು ಗಟ್ಟಿಯಾಗಿ ಇರುತ್ತಿರಲಿಲ್ಲ.  ದಲಿತ ಚಳುವಳಿಯ ಈ ವೈಫಲ್ಯವೇ ಇಂದು ಯುವ ದಲಿತ ಸಮೂಹವನ್ನು ಅಧಿಕಾರ ರಾಜಕಾರಣದ ಅಂಗಳದಲ್ಲಿ, ಅವಕಾಶಗಳಿಗಾಗಿ ಹಂಬಲಿಸುವ ಜನಸಂಖ್ಯೆಯಾಗಿ ಗುರುತಿಸಿಕೊಳ್ಳುವ ಪರಾವಲಂಬಿ ಸಮಾಜವನ್ನಾಗಿ ಮಾಡಿದೆ. ಇದು ವಸ್ತುನಿಷ್ಠವಾಗಿ ಸ್ವೀಕರಿಸಬೇಕಾದ ವಾಸ್ತವತೆ.

 ಈಗಲೂ ಸಹ ದಲಿತ ಐಕ್ಯತೆಯ ದನಿಗೆ ಒಂದು ತಾತ್ವಿಕ ಮರುದನಿ ದೊರೆತಿರುವ ಹೊತ್ತಿನಲ್ಲಿ, ಅಕ್ಟೋಬರ್‌ ಕ್ರಾಂತಿಯ ಹೆಸರಿನಲ್ಲಿ ಎಲ್ಲ ದಲಿತ ಸಮುದಾಯಗಳ ಬೃಹತ್‌ ಸಮಾವೇಶವನ್ನು ಆಯೋಜಿಸುವ ನಿರ್ಧಾರ ಕೇಳಿಬರುತ್ತಿದೆ. ಇದು ಸ್ವಾಗತಾರ್ಹವೇನೋ ಹೌದು, ಆದರೆ ಈ ಸಮಾವೇಶದ ಮುಖ್ಯ ಬೇಡಿಕೆ ಇರುವುದು ಮುಂದಿನ ಮುಖ್ಯಮಂತ್ರಿಯಾಗಿ (ಒಂದು ವೇಳೆ ಸಿದ್ದರಾಮಯ್ಯ ಅವರ ಪದಚ್ಯುತಿ ಆದರೆ ) ದಲಿತ ಸಮುದಾಯದ ವ್ಯಕ್ತಿಯನ್ನು ಆಯ್ಕೆ ಮಾಡುವುದು. ಈ ಒಳಮೀಸಲಾತಿ ನೀತಿ ಜಾರಿ ಮಾಡಿದ ನಂತರ ಸಿದ್ದರಾಮಯ್ಯ ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡುತ್ತಿರುವ ಸಾಮಾಜಿಕ ತಾಣಗಳ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಹಕ್ಕೊತ್ತಾಯವು ಎಷ್ಟರ ಮಟ್ಟಿಗೆ ತಾರ್ಕಿಕ ಮಾನ್ಯತೆ ಗಳಿಸುತ್ತದೆ ಎನ್ನುವುದನ್ನೂ ಗ್ರಹಿಸಬಹುದು.

 ದಲಿತ ಸಮಾಜದ ಮುಂದಿರುವ ಗುರಿ, ʼ ದಲಿತ ರಾಜಕಾರಣ ʼವನ್ನು ರೂಪಿಸುವ ಒಂದು ಸೈದ್ದಾಂತಿಕ ಮಾರ್ಗವನ್ನು, ಅಂಬೇಡ್ಕರ್‌, ಫುಲೆ, ಪೆರಿಯಾರ್‌ ಇನ್ನಿತರ ಮಹನೀಯರ ಚಿಂತನೆಗಳ ನೆಲೆಯಲ್ಲಿ ರೂಪಿಸುವುದು. ವಿಶಾಲ ನೆಲೆಯಲ್ಲಿ, ಭವಿಷ್ಯದ ದೃಷ್ಟಿಯಿಂದ ನೋಡಿದಾಗ ಈ ಪ್ರಯತ್ನದಲ್ಲಿ ಅಂಬೇಡ್ಕರ್‌ವಾದದ ತಾತ್ವಿಕ ಚೌಕಟ್ಟುಗಳೊಂದಿಗೆ, ಮಾರ್ಕ್ಸ್‌ವಾದದ ವರ್ಗಪ್ರಜ್ಞೆಯ ಸೈದ್ಧಾಂತಿಕ ವಿಚಾರ ಧಾರೆಯ  ಅನುಸಂಧಾನ ಮಾಡುವ ಆಲೋಚನೆ ಖಂಡಿತವಾಗಿಯೂ ವರ್ತಮಾನದ ತುರ್ತು ಎನ್ನಬಹುದು. ಏಕೆಂದರೆ ಒಳಮೀಸಲಾತಿ ಮತ್ತು ಹೋರಾಟ ಎರಡೂ ಸಹ ಅಂತಿಮ ಫಲಿತಾಂಶದಲ್ಲಿ ನಮ್ಮ ಮುಂದೆ ತೆರೆದಿಟ್ಟಿರುವುದು ಜಾತಿ ಅಸ್ಮಿತೆಯ ಹೋರಾಟ ಮತ್ತು ವರ್ಗ ಸಂಘರ್ಷದ ತಾತ್ವಿಕ ನೆಲೆಗಳನ್ನು. ಇದನ್ನು ಮನಗಾಣದೆ ಹೋದರೆ ನಾವು ಮರಳಿ, 1980-90ರ ದಶಕಕ್ಕೆ ಹೋಗಿ ನಿಲ್ಲುತ್ತೇವೆ.

ಭವಿಷ್ಯದ ಸವಾಲುಗಳ ಕಡೆಗೆ

 ಈ ಸವಾಲು ಇಡೀ ಶೋಷಿತ ಸಮುದಾಯಗಳ ಮುಂದಿದೆ. ಸಾಮಾಜಿಕ ನ್ಯಾಯ, ಸಾಂವಿಧಾನಿಕ ಗುರಿ, ಸಮ ಸಮಾಜದ ಕನಸು ಮತ್ತು ಅಂಬೇಡ್ಕರ್‌ ಕನಸಿನ ಜಾತಿ ವಿಹೀನ ಸಮಾಜದ ನಿರ್ಮಾಣ ಸಾಧ್ಯವಾಗಬೇಕಾದರೆ ಈ ವಿಶಾಲ ಐಕ್ಯತೆ ಮತ್ತು ಒಳಗೊಳ್ಳುವ ಚಿಂತನಾ ವಿಧಾನವನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಇದು ಸುಲಭ ಸಾಧ್ಯವಲ್ಲ ಏಕೆಂದರೆ “ ಸಾಂಘಿಕ ವಿಭಜನೆ ಮತ್ತು ತಾತ್ವಿಕ ವಿಘಟನೆಯಿಂದ ಸೃಷ್ಟಿಯಾಗುವ ತಡೆಗೋಡೆಗಳು, ಚಳುವಳಿಗಳ ಮೇಲ್ಮಟ್ಟದಲ್ಲಿ ನಿರ್ಮಾಣವಾದರೆ ಅದನ್ನು ಕೆಡವುವುದು ಅಥವಾ ಸರಿಪಡಿಸುವುದು ಸುಲಭ. ಆದರೆ ಈ ತಡೆಗೋಡೆಗಳನ್ನು ಕಟ್ಟುವ ಅಡಿಗಲ್ಲುಗಳು ಸಮಾಜಗಳ ತಳಮಟ್ಟವನ್ನೂ ತಲುಪಿ ಅಲ್ಲಿರುವ ಸಾಮಾನ್ಯರನ್ನೂ ಒಳಗೊಂಡಾಗ, ಅಲ್ಲಿ ಉದ್ಬವಿಸುವ ಬೇಲಿಗಳನ್ನು ಕಿತ್ತುಹಾಕಿ ಮರಳಿ ಒಂದು ಮನೆಯನ್ನು ಕಟ್ಟುವುದು ಕಷ್ಟಕರ. ಇದು ಚಾರಿತ್ರಿಕವಾಗಿ ಕಾಣಬಹುದಾದ ಒಂದು ವಾಸ್ತವ. ”

 ದಲಿತ ಚಳುವಳಿಯ ಮುಂಚೂಣಿಯಲ್ಲಿರುವ ಹಿರಿಯ ನಾಯಕರು, ಬೌದ್ಧಿಕ ಚಿಂತಕರು, ಕ್ರಿಯಾಶೀಲ ಕಾರ್ಯಕರ್ತರು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇರುವ ವಿದ್ವಾಂಸರು ಈ ವಾಸ್ತವವನ್ನು ಈಗಲಾದರೂ ಕಣ್ತೆರೆದು ನೋಡಬೇಕಿದೆ. ಆಗ ಅಂಬೇಡ್ಕರ್‌ ಕನಸಿನ ʼ ದಲಿತ ರಾಜಕಾರಣ ʼ ಸಾಕಾರವಾಗುವ ಸಾಧ್ಯತೆಗಳು ಸೃಷ್ಟಿಯಾಗುತ್ತವೆ. ಇದು ದೀರ್ಘಕಾಲದ ನಡಿಗೆ, ಇಂದು ನಾಳೆ ನಿರ್ಧಾರವಾಗುವುದಲ್ಲ ಎಂಬ ಸತ್ಯವನ್ನು ಅರಿತುಕೊಂಡೇ, ಮೊದಲ ಹೆಜ್ಜೆಯನ್ನು ಇರಿಸುವುದು ವರ್ತಮಾನದ ವಿಷಮ ಸನ್ನಿವೇಶದಲ್ಲಿ ಅತ್ಯವಶ್ಯ. ಬೃಹತ್‌ ದಲಿತ ಸಮಾವೇಶಗಳನ್ನು ಆಯೋಜಿಸುವುದಕ್ಕಿಂತಲೂ ಹೆಚ್ಚಾಗಿ, ರಾಜ್ಯಾದ್ಯಂತ ದಲಿತ ಯುವ ಸಮೂಹದ ನಡುವೆ ಈ ಅರಿವನ್ನು ಮತ್ತು ಭವಿಷ್ಯದ ನೈತಿಕ ಜವಾಬ್ದಾರಿಯನ್ನು ಮನದಟ್ಟು ಮಾಡಿ, ಕ್ರಿಯಾಶೀಲರಾಗಿಸುವುದು ನಿಜವಾದ ʼ ಬುದ್ಧಪ್ರಜ್ಞೆ ʼಯ ಸಂಕೇತವಾಗಿ ಪರಿಣಮಿಸುತ್ತದೆ.

 ಈ ಚಾರಿತ್ರಿಕ ಅವಕಾಶವನ್ನು ಬಳಸಿಕೊಂಡಾಗ ಮಾತ್ರ ಭವಿಷ್ಯದ ತಲೆಮಾರುಗಳು ಹಿಂತಿರುಗಿ ನೋಡಿದರೂ, ಹೆಮ್ಮೆಯಿಂದ ವರ್ತಮಾನದ ಬೆಳವಣಿಗೆಗಳನ್ನು ನೆನೆಯಲು ಸಾಧ್ಯ. ಇಲ್ಲವಾದರೆ ಇತಿಹಾಸ ನಮ್ಮನು ಕ್ಷಮಿಸುವುದಿಲ್ಲ. ಈ  ಅರಿವಿನ ವಿಸ್ತಾರದೊಂದಿಗೇ ಮುಂದಿನ ಹೆಜ್ಜೆಗಳನ್ನಿಡುವ ಸಂಕಲ್ಪ ಮಾಡಲು ಸಾಧ್ಯವೇ ?

PODCAST: Guru Raghavendra ರಾಯರ ಟ್ಯಾಟೂ ಹಾಕಿಸುವುದು ಒಳ್ಳೆಯದ ಬ್ರಹ್ಮ ಟ್ಯಾಟೂ ಗಿರೀಶ್‌ ಏನಂದ್ರು..! #guru

ಅಂತಿಮ ಮನವಿ  – Post script.

 ( ನಾಲ್ಕು ಕಂತುಗಳ ಈ ಸುದೀರ್ಘ ಬರಹದಲ್ಲಿ ನಾನು ವ್ಯಕ್ತಪಡಿಸಿರುವ ಆಕ್ಷೇಪಗಳು, ಸ್ನೇಹಪೂರ್ವಕವಾಗಿ ಹೊರಿಸಿರಬಹುದಾದ ಆರೋಪಗಳು ಮತ್ತು ನಮೂದಿಸಿರುವ ಆಶಯಗಳು , ಇವೆಲ್ಲವನ್ನೂ ಸಾಮುದಾಯಿಕವಾಗಿ (ಹುಟ್ಟಿನಿಂದ) ಹೊರಗಿನವನಾಗಿ, ತಾತ್ವಿಕ ನೆಲೆಯಲ್ಲಿ ಒಳಗಿನವನಾಗಿ, ಶೋಷಿತರ-ದಲಿತರ ಹೋರಾಟದ ದೃಷ್ಟಿಯಿಂದ ಕ್ರಿಯಾಶೀಲ ಸೈದ್ಧಾಂತಿಕ ಚಿಂತನೆಯ ನೆಲೆಯಲ್ಲಿ ಮಂಡಿಸಿರುವ ಅನಿಸಿಕೆಗಳು. ನನ್ನ ನಿಲುವು ಮತ್ತು ಅಭಿಪ್ರಾಯಗಳಲ್ಲಿ ದೋಷ ಕಾಣುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾರೆ. ಆದರೆ ಈ ಬೌದ್ಧಿಕ ವಿಚಾರಧಾರೆಯ ಗುರಿ ಮತ್ತು ಧ್ಯೇಯ, ಇಂದಿಗೂ ತೀವ್ರ ಶೋಷಣೆಗೊಳಗಾಗಿರುವ ಮತ್ತು ಅವಕಾಶವಂಚಿತರಾಗಿರುವ ತಳಸಮುದಾಯಕ್ಕೆ ಸಾಮಾಜಿಕ ನ್ಯಾಯದ ಅಂತಿಮ ಫಲಿತಾಂಶವನ್ನು ತಲುಪಿಸುವುದಷ್ಟೇ ಆಗಿರುತ್ತದೆ. ಇದು ಚರ್ಚೆಯ ವಿಚಾರ. ಆರೋಗ್ಯಕರ ಚರ್ಚೆಯಾಗಲಿ. ಟ್ರೋಲ್‌ ಸಂಸ್ಕೃತಿಗೆ ಬಲಿಯಾಗುವುದು ಬೇಡ.)

-೦-೦-೦-೦-

Tags: class 10 political parties in one shotdemocracy and diversity class 10 cbse in hindidemovracy and diversity in hindieditorial analysis of the hinduhow to do well in boardsliteraturetheoriesncert civics class 10 in hindipolitical parties in one shotpolitical parties in one shot for boards 2021system of kinship in indiathe hindu analysisthe hindu newspaper today
Previous Post

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

Next Post

ಜಾಮೀನು ಸಿಕ್ರೂ ಸಮೀರ್ ಗೆ ಸಂಕಷ್ಟ ತಪ್ಪಿದ್ದಲ್ಲ – ಬ್ಯಾಂಕ್ ಅಕೌಂಟ್ ಜಾಲಾಡಲಿದ್ದಾರೆ ಪೊಲೀಸರು! 

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ಜಾಮೀನು ಸಿಕ್ರೂ ಸಮೀರ್ ಗೆ ಸಂಕಷ್ಟ ತಪ್ಪಿದ್ದಲ್ಲ – ಬ್ಯಾಂಕ್ ಅಕೌಂಟ್ ಜಾಲಾಡಲಿದ್ದಾರೆ ಪೊಲೀಸರು! 

ಜಾಮೀನು ಸಿಕ್ರೂ ಸಮೀರ್ ಗೆ ಸಂಕಷ್ಟ ತಪ್ಪಿದ್ದಲ್ಲ - ಬ್ಯಾಂಕ್ ಅಕೌಂಟ್ ಜಾಲಾಡಲಿದ್ದಾರೆ ಪೊಲೀಸರು! 

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada