ಕಾಂಗ್ರೆಸ್ ಸರ್ಕಾರದ ವಿರುದ್ಧ ಸೆಟೆದು ನಿಂತಿರುವ ಬಿಜೆಪಿ ಹಾಗು ಜೆಡಿಎಸ್ ಲೋಕಸಭಾ ಚುನಾವಣೆ ವೇಳೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಸಿದ್ಧತೆ ನಡೆಯುತ್ತಿದೆ. ಸಣ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಾಲಿಗೆ ಹೊಡೆತ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಇದೀಗ ಮೈತ್ರಿಯನ್ನು ವಿರೋಧಿಸುವ ಕೆಲಸ ಕೂಡ ಬಿಜೆಪಿಯಲ್ಲಿ ಬಹಿರಂಗವಾಗಿ ನಡೆಯುತ್ತಿದೆ. ಮೊದಲಿಗೆ ಸಿಟಿ ರವಿ ಮೈತ್ರಿ ಬಗ್ಗೆ ತುಸು ಹಿಂಜರಿಕೆ ತೋರಿಸಿದ್ದರು. ಇದೀಗ ಸಿ.ಟಿ ರವಿ ಪರಮಾಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಹಾಸನದ ಪ್ರೀತಂಗೌಡ ಬಿಜೆಪಿ ಹಾಗು ಜೆಡಿಎಸ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಯೋಗೇಶ್ವರ್ ವಿರುದ್ಧ ಪ್ರೀತಂಗೌಡ ಕೆಂಡಾಕ್ರೋಶ..!
ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಪ್ರೀತಂಗೌಡ, ಕಾಂಗ್ರೆಸ್ ಹಾಗು ಒಕ್ಕಲಿಗರ ಪರ ಬ್ಯಾಟಿಂಗ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಅವರನ್ನ ಸೋಲಿಸಲು, ನಾನು (ಯೋಗೇಶ್ವರ್) ಕುಮಾರಸ್ವಾಮಿ ಒಂದಾಗ್ತೇವೆ ಅಂತಾ ಪಾಪ ನಮ್ಮ ಪಕ್ಷದ ಲೀಡರೇ ಮಾತಾಡಿದ್ದಾರೆ. ನಾಲ್ಕು ತಿಂಗಳ ಹಿಂದೆ ನೀವು ಕುಮಾರಸ್ವಾಮಿ ವಿರುದ್ಧ ಚುನಾವಣೆ ಮಾಡಿದ್ರಿ. ನಿಮ್ಮನ್ನ ನಂಬಿಕೊಂಡ ಕಾರ್ಯಕರ್ತರಿದ್ದಾರೆ. ಆ ಕಾರ್ಯಕರ್ತರನ್ನ ಬಿಟ್ಟು, ಈಗ ಸುರೇಶ್ ಅವರನ್ನ ಸೋಲಿಸೋದಕ್ಕೆ ನಾನು (ಯೋಗೇಶ್ವರ್) ಕುಮಾರಸ್ವಾಮಿ ಒಂದಾಗ್ತೇವೆ ಅಂದ್ರೆ, ಮುಂದಿನ ಚುನಾವಣೆಯಲ್ಲಿ ನಿಮ್ಮ ಜೊತೆ ಯಾರು ನಿಲ್ತಾರೆ ಎಂದು ಪ್ರಶ್ನೆ ಮಾಡುವ ಮೂಲಕ ಸ್ವಪಕ್ಷದ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ ಸುರೇಶ್ ಮತ್ತೆ ಗೆಲ್ಲುವುದರಲ್ಲಿ ತಪ್ಪೇನಿದೆ..? ಗೆಲ್ಲಲಿ ಬಿಡಿ..

ಬಿಜೆಪಿ 2028ಕ್ಕೆ ಅಧಿಕಾರ ಸಿಗಲಿಲ್ಲ ಅಂದ್ರೆ 33ಕ್ಕೆ ಕಾಯೋಣ, ಅರ್ಜೆಂಟ್ ಏನಿದೆ..? ಯಾರನ್ನೋ ಒಬ್ಬರನ್ನ ಸೋಲಿಸೋದಕ್ಕೆ ನಾವು ಹೊಂದಾಗ್ತೀವಿ ಅನ್ನೋದು ತಪ್ಪು. ಬಿಜೆಪಿ ಗೆಲ್ಲಬೇಕು ಅನ್ನೋ ಮಾನಸಿಕತೆ ಇಟ್ಕೊಂಡು ಚುನಾವಣೆ ಮಾಡಿದ್ರೆ ಬಿಜೆಪಿ ಗೆಲ್ಲುತ್ತದೆ. ಲೋಕಸಭೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ತೀವಿ, ಅನ್ನೋದು ನನಗೆ ನಂಬಿಕೆ ಇದೆ. ಡಿಕೆ ಸುರೇಶ್ ಕೂಡ ಒಕ್ಕಲಿಗರಲ್ವಾ..? ಅವರೂ ಎಂಪಿ ಆಗಲಿ ಬಿಡಿ. ಹಿಂದೆ ಆಗಿದ್ರು, ಈಗ ಮತ್ತೆ ಆದ್ರೆ ತಪ್ಪೇನು..? ಅವರನ್ನು ಸೋಲಿಸೋದಕ್ಕೆ ಜನತಾದಳದ ಜೊತೆ ಹೋಗಬೇಕು ಎಂಬ ಮಾನಸಿಕತೆ ಯಾಕೆ ನಮ್ಮ ಪಕ್ಷದ ಲೀಡರ್ಗಳಿಗೆ ಬಂದಿದೆ. ಅ ಮಾನಸಿಕತೆಯಿಂದ ಹೊರಬರಲಿ ಎಂದು ಸಲಹೆ ನೀಡಿದ್ದಾರೆ.
ಅಧಿಕಾರಕ್ಕೆ ಏರುವ ಆಸೆಯಿಂದ ಹೊಂದಾಣಿಕೆ ದಾಳ..!
ಎರಡು ಭಾರಿ ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ರು. ಈಗ ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಅವರೂ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇನ್ನು ಮುಂದಿನ 10 ವರ್ಷದ ಬಳಿಕ ಪ್ರೀತಂಗೌಡ ನಮ್ಮವನು ಅಂತಾ ಬಿಜೆಪಿಗೂ ನಮ್ಮ ಒಕ್ಕಲಿಗ ಸಮಾಜ ಶಕ್ತಿ ತುಂಬಬಹುದು. ಈಗ ಐದು ವರ್ಷ ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ, ಕೆಲಸ ಮಾಡಲಿ ಬಿಡಿ. ಜೆಡಿಎಸ್ ಪಕ್ಷ ಉಳಿಸಿಕೊಳ್ಳೋದಕ್ಕೆ ಮೈತ್ರಿ ಅವಶ್ಯಕತೆ ಇದೆ ಅಂತಾ ಹೇಳಿದ್ದಾರೆ. ನಾವು ಜೆಡಿಎಸ್ ಪಕ್ಷ ಉಳಿಸೋದಕ್ಕೆ ಇರೋ ಕಾರ್ಯಕರ್ತರಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ಅನೇಕ ನಾಯಕರ ಮನಸ್ಸಿನಲ್ಲಿರುತ್ತದೆ. ಜೆಡಿಎಸ್ ಜೊತೆ ಹೋದ್ರೆ ನಾವೂ ತೂರ್ಕೊಂಡು ಹೋಗಿ ಬಿಡೋಣ ಎಂದುಕೊಂಡಿರಬಹುದು. ಆದರೆ ಆ ಅವಶ್ಯಕತೆ ಹಳೇ ಮೈಸೂರು ಭಾಗದ ಬಿಜೆಪಿ ಕಾರ್ಯಕರ್ತರಿಗಿಲ್ಲ ಎಂದಿದ್ದಾರೆ.

ಸೋಲಿಸಲು ಓಡಾಡಿದ್ರಿ, ಈಗ ನಮ್ಮ ಮತ ಹೇಗೆ ಕೇಳ್ತೀರಿ..?
ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಎಲ್ಲೋ ಕೂತ್ಕೊಂಡು ಯಾವುದೋ ಲೆಕ್ಕಾಚಾರ ಮಾಡುವ ಮ್ಯಾಥ್ಸ್ ವರ್ಕ್ ಆಗಲ್ಲ. ಜೆಡಿಎಸ್ಗೆ ಸ್ವಲ್ಪ ಒಳ್ಳೇದಾಗಬಹುದು. ಜೆಡಿಎಸ್ಗೆ ಸೀಟ್ ಬರುತ್ತೆ ಹಾಗಾಗಿ ಮೈತ್ರಿ ಮಾಡಿಕೊಳ್ಳೋಣ ಅಂತಾ ಹೇಳಿದ್ರೆ ಹೇಗೆ..? ನಾಲ್ಕು ತಿಂಗಳ ಹಿಂದೆ ಬಂದು ನಮ್ಮ ವಿರುದ್ಧ ಚುನಾವಣೆ ಮಾಡಿದ್ರಿ, ಈಗ ಬಿಜೆಪಿಯವರೆಲ್ಲಾ ನಮಗೆ ಓಟ್ ಹಾಕ್ತಾರೆ ಅಂತಾ ಯೋಚನೆ ಮಾಡಿದ್ರೆ ಸರೀನಾ..? ರಾಜಕಾರಣ ಮ್ಯಾಥ್ ಮೆಟಿಕ್ಸ್ ಅಲ್ಲ, ಕೆಮಿಸ್ಟ್ರಿ ಅನ್ನೋದು ನನಗಿಂತ ಹೆಚ್ಚಾಗಿ ಅವರಿಗೆ ಗೊತ್ತಿದೆ. ಆ ಕೆಮಿಸ್ಟ್ರಿ ಯಾವುದೇ ಕಾರಣಕ್ಕೂ ಹಾಸನದಲ್ಲಿ ಮಾತ್ರ ನಡೆಯಲ್ಲ. ಇದೀಗ ಬಿಜೆಪಿ ಕಾರ್ಯಕರ್ತರನ್ನ ಬಂದು ವೋಟ್ ಹಾಕಿ ಅಂತಾ ಕೇಳೋ ಮನಸ್ಥಿತಿ ಹೇಗೆ ಬರುತ್ತೆ ಎಂದು ಕಿಚಾಯಿಸಿದ್ದಾರೆ. ನಾನು ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ, ಜೆಡಿಎಸ್ ಪಕ್ಷ ಉಳಿಸೋದಕ್ಕೆ ನಾವ್ಯಾಕೆ ಸಹಕಾರ ಮಾಡಬೇಕು. ಯಾವುದೇ ಕಾರಣಕ್ಕೂ ಆಗಲ್ಲ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎನ್ನುವಂತಾಗಿದೆ.
ಕೃಷ್ಣಮಣಿ