ಮನುಕುಲದ ಮೌಲ್ಯಗಳನ್ನು ಸಾರುವ ಈ ಚಿತ್ರದ ಮೊದಲ ಹಾಡು ಶಾಸಕ ಅಶ್ವಥ್ ನಾರಾಯಣ ಅವರಿಂದ ಅನಾವರಣ .

ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ “ಮರಳಿ ಮನಸಾಗಿದೆ” ಚಿತ್ರದ ಮೊದಲ ಹಾಡನ್ನು ಶಾಸಕ ಆಶ್ವಥ್ ನಾರಾಯಣ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವಿನು ಮನಸು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು A2 MUSIC ಮೂಲಕ ಬಿಡುಗಡೆಯಾಗಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮತನಾಡಿದರು.

ಇದೊಂದು ಸಂಗೀತ ಪ್ರಧಾನ ಚಿತ್ರ. ವಿನು ಮನಸು ಸಂಗೀತ ನೀಡಿರುವ ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ಆ ಪೈಕಿ “ಎದುರಿಗೆ ಬಂದರೆ ಹೃದಯಕೆ ತೊಂದರೆ” ಎಂಬ ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ಆಶಿತ್ ಸುಬ್ರಹ್ಮಣ್ಯ ಹಾಗೂ ಶ್ರೀನಿಧಿ ಅವರು ಬರೆದಿರುವ ಈ ಹಾಡನ್ನು ಸಂತೋಷ್ ವೆಂಕಿ ಹಾಡಿದ್ದಾರೆ. ಇನ್ನು ಇದೊಂದು ಯುವಜನತೆಗೆ ಹತ್ತಿರವಾದ ಚಿತ್ರದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಚಿತ್ರವೂ ಹೌದು. ಇದರೊಟ್ಟಿಗೆ ಮೆಡಿಕಲ್ ಗೆ ಸಂಬಂಧಿಸಿದ ವಿಷಯ ಸಹ ಇದೆ. ಇದು ನಟ ಉಪೇಂದ್ರ ಅವರು ಹೇಳಿದ ಹಾಗೆ 2D ಸಿನಿಮಾ ಎನ್ನಬಹುದು. ಇಂಟರ್ ವೆಲ್ ಗೆ ಮುಂಚೆ ಒಂದು ಸಿನಿಮಾ. ಇಂಟರ್ ವೆಲ್ ನಂತರ ಮತ್ತೊಂದು ಸಿನಿಮಾ ಇರುತ್ತದೆ. ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ ಎಂದು ತಿಳಿಸಿದ ನಿರ್ದೇಶಕ ನಾಗರಾಜ್ ಶಂಕರ್ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು.

ನಾನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಎಂದು ಮಾತನಾಡಿದ ನಿರ್ಮಾಪಕ ಮುದೇಗೌಡ ನವೀನ್ ಕುಮಾರ್ ಆರ್. ಓ ಅವರು ನಾನು ಮೂಲತಃ ದಾವಣಗೆರೆಯವನು. ದಾವಣಗೆರೆಯಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಇನ್ನೂ ನನಗೆ ನಿರ್ಮಾಣ ಮಾಡಲು ಹುರಿದುಂಬಿಸಿದವರು ತೆಲಿಗಿ ಮಲ್ಲಿಕಾರ್ಜುನಪ್ಪ ಅವರು. ಈ ಸಂದರ್ಭದಲ್ಲಿ ಅವರಿಗೆ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನೂ ಇಂದು ಚಿತ್ರದ ಮೊದಲ ಹಾಡು ಶಾಸಕ ಅಶ್ವಥ್ ನಾರಾಯಣ್ ಅವರಿಂದ ಬಿಡುಗಡೆಯಾಗಿದೆ. ಮುಂದೆ ಇದೇ 23 ರಂದು ಕಲ್ಬುರ್ಗಿಯಲ್ಲಿ ಎರಡನೇ ಹಾಡಿನ ಅನಾವರಣವಾಗಲಿದೆ. ಉಳಿದ ಹಾಡುಗಳನ್ನು ಬೇರೆ ಬೇರೆ ಊರುಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎಂದರು.

ಮೂರುವರೆ ವರ್ಷಗಳ ನಂತರ ನನ್ನ ಅಭಿನಯದ ಕನ್ನಡ ಚಿತ್ರವೊಂದರ ಪತ್ರಿಕಾಗೋಷ್ಠಿ ನಡೆಯುತ್ತಿದೆ ಎಂದು ಮಾತನಾಡಿದ ನಾಯಕ ಅರ್ಜುನ್ ವೇದಾಂತ್, ಈಗಿನ ಪರಿಸ್ಥಿತಿಯಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದೆ ಬರುವವರೆ ಸಂಖ್ಯೆ ವಿರಳ. ಹಾಗಾಗಿ ನಮ್ಮ ಚಿತ್ರದ ನಿರ್ಮಾಪಕರಿಗೆ ಮೊದಲು ಧನ್ಯವಾದ. ಇನ್ನೂ ನಿರ್ದೇಶಕರು ಮೊದಲ ಸಲ ಕಥೆ ಹೇಳಿದಾಗಲೇ ನನಗೆ ಬಹಳ ಇಷ್ಟವಾಯಿತು. ಇಂದಿನಿಂದ ನಮ್ಮ ಚಿತ್ರದ ಪ್ರಮೋಷನ್ ಆರಂಭವಾಗಿದೆ. ಕರ್ನಾಟಕದ ಎಲ್ಲೆಡೆ ನಮ್ಮ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತೇವೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮನೋಜ್. ಜನರು ಕೊಟ್ಟ ದುಡ್ಡಿಗೆ ಬೇಸರವಾಗದಂತಹ ಪರಿಶುದ್ಧ ಮನೋರಂಜನೆಯುಳ್ಳ ಚಿತ್ರ ನಮ್ಮದು ಎಂದರು.

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್. ಆ ಪೈಕಿ ಸಮಾರಂಭ ಉಪಸ್ಥಿತರಿದ್ದ ಸ್ಮೃತಿ ತಮ್ಮ ಪಾತ್ರದ ಬಗ್ಗೆ ಹೇಳಿದರು. ಕಲಾವಿದರಾದ ರಘು ಸಿರುಂಡೆ, ಸಂಗೀತ ಚಿತ್ರದ ಕುರಿತು ಮಾತನಾಡಿದರು. ಸಂಗೀತದ ಬಗ್ಗೆ ವಿನು ಮನಸು ಮಾಹಿತಿ ನೀಡಿದರು. ಛಾಯಾಗ್ರಾಹಕ ಹಾಲೇಶ್, ಸಂಕಲನಕಾರ ಹರೀಶ್ ಕೊಮ್ಮೆ ಹಾಗೂ ವಿಜಯ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.