ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು, ಉದ್ಯೋಗಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಂಚ ನೆಮ್ಮದಿಯ ಭರವಸೆ ಮೂಡಿಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ (Income Tax) ಹಂತವನ್ನು ಮಾರ್ಪಾಡು ಮಾಡಿದ್ದಾರೆ. ಹೀಗಾಗಿ 5 ಲಕ್ಷದ ತನಕ ತೆರಿಗೆ ವಿನಾಯ್ತಿ ಇದ್ದಿದ್ದನ್ನು ಬದಲಾವಣೆ ಮಾಡಿ 7 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಇಲ್ಲೀವರೆಗೂ ವಾರ್ಷಿಕ 5 ಲಕ್ಷ ಮೇಲ್ಪಟ್ಟು ವೇತನ ಪಡೆಯುತ್ತಿದ್ದವರು ಆದಾಯ ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ ಇನ್ಮುಂದೆ 7 ಲಕ್ಷ ವಾರ್ಷಿಕ ವೇತನ ಪಡೆಯುವ ಉದ್ಯೋಗಿಗಳು ಮಾತ್ರ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಹೊಸ ಆದಾಯ ತೆರಿಗೆ ಸ್ಲ್ಯಾಬ್ ಹೀಗಿದೆ..!
ಓರ್ವ ವ್ಯಕ್ತಿ ವಾರ್ಷಿಕ 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದರೆ ಆ ಹಣಕ್ಕೆ ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. 3 ರಿಂದ 6 ಲಕ್ಷ ರೂಪಾಯಿ ತನಕ ಆದಾಯ ಬರುವಂತಿದ್ದರೆ ಆಗ ಶೇಕಡ 5ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ. 6 ಲಕ್ಷ ರೂಪಾಯಿ ಇಂದ 9 ಲಕ್ಷ ರೂಪಾಯಿ ಒಳಗೆ ಆದಾಯ ಬರುತ್ತಿದ್ದರೆ ಆಗ ಶೇಕಡ 10 ರಷ್ಟು ತೆರಿಗೆ ಪಾವತಿ ಮಾಡಬೇಕು. ಇನ್ನು 9 ಲಕ್ಷದಿಂದ 12 ಲಕ್ಷ ರೂಪಾಯಿ ಒಳಗಿದ್ದರೆ ಶೇಕಡ 15 ರಷ್ಟು ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. 12 ಲಕ್ಷ ದಿಂದ 15 ಲಕ್ಷದ ಒಳಗಿನ ಆದಾಯ ಗಳಿಸುವ ಜನರು ಶೇಕಡ 20ರಷ್ಟು ತೆರಿಗೆ ಕೊಡಬೇಕು. ಇನ್ನುಳಿದ 15 ಲಕ್ಷ ಮೇಲ್ಪಟ್ಟು ಆದಾಯ ಗಳಿಸುವ ಜನರು ವಾರ್ಷಿಕ ಶೇಕಡ 30ರಷ್ಟು ತೆರಿಗೆ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಾಗುತ್ತದೆ.
7 ಲಕ್ಷ ಆದಾಯದ ತನಕ ಟ್ಯಾಕ್ಸ್ ಕಟ್ಟಬೇಕಿಲ್ಲ ಹೇಗೆ..?
ವಾರ್ಷಿಕ 3 ಲಕ್ಷ ರೂಪಾಯಿ ಒಳಗೆ ಆದಾಯ ಗಳಿಸುವ ಜನರು ಆದಾಯ ತೆರಿಗೆ ಪಾವತಿ ಮಾಡುವಂತಿಲ್ಲ. ಆದರೆ 3 ರಿಂದ6 ಲಕ್ಷ ರೂಪಾಯಿ ಒಳಗೆ ಆದಾಯ ತೆರಿಗೆ ರೂಪದಲ್ಲಿ ಶೇಕಡ 5ರಷ್ಟು ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿ ಮಾಡಬೇಕು ಎಂದು ಕೇಂದ್ರ ಬಜೆಟ್ನಲ್ಲಿ ತಿಳಿಸಲಾಗಿದೆ. ಆದರೆ 7 ಲಕ್ಷ ರೂಪಾಯಿ ಒಳಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ ಎನ್ನುವ ಮಾತು ಕೂಡ ಜನರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ. ಆದರೆ ಟ್ಯಾಕ್ಸ್ ಹಿಂದಕ್ಕೆ ಪಡೆಯುವ ಅವಕಾಶವನ್ನು 5 ಲಕ್ಷದಿಂದ 7ಕ್ಕೆ ಹೆಚ್ಚಳ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಕಟ್ಟುವ ತೆರಿಗೆಯನ್ನು ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ವಾರ್ಷಿಕ 7 ಲಕ್ಷ ರೂಪಾಯಿ ತನಕ ವೇತನ ಪಡೆಯುವ ಜನರು ತೆರಿಗೆ ವಿನಾಯ್ತಿ ಅವಕಾಶ ಪಡೆದಿದ್ದಾರೆ.
ಆದಾಯ 7 ಲಕ್ಷ ಒಳಪಟ್ಟಿದ್ದರೆ ITR ಮಾಡಬೇಕಿಲ್ವಾ..?
ತೆರಿಗೆ ಪಾವತಿ ಮಾಡುವಂತಿಲ್ಲ, ಎನ್ನುವ ಮಾತ್ರಕ್ಕೆ ತೆರಿಗೆ ರಿಟರ್ನ್ ಮಾಡದೆ ಇರುವಂತಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನೂ ತನ್ನ ಆದಾಯ ಹಾಗು ವ್ಯಯದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೊಡಬೇಕು. ಅದರಲ್ಲಿ ಆದಾಯ 3 ಲಕ್ಷದ ಒಳಗೆ ಇದ್ದರೆ ಯಾವುದೇ ದಾಖಲೆಗಳನ್ನು ಕೊಡುವಂತಿಲ್ಲ. ಆದರೆ 7 ಲಕ್ಷದ ತನಕ ಆದಾಯ ಇದ್ದರೆ ಕೆಲವೊಂದು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕು. ಮನೆ ಬಾಡಿಗೆ, ಸಾರಿಗೆ ವೆಚ್ಚ, ಸಾಲಗಳು, ಹೂಡಿಕೆಗಳು, ಉಳಿತಾಯದ ಮಾಹಿತಿಯನ್ನು ಸಲ್ಲಿಕೆ ಮಾಡಬೇಕು. ಇದೀಗ ಎಲ್ಲರೂ ಮಾಹಿತಿಯನ್ನು ಸಲ್ಲಿಕೆ ಮಾಡುವುದು ಕಡ್ಡಾಯ. ಆದರೆ ಇದೀಗ 7 ಲಕ್ಷಕ್ಕೆ ಆದಾಯ ತೆರಿಗೆ ವಿನಾಯ್ತಿ ಕೊಟ್ಟಿರುವುದು ಮಧ್ಯಮವರ್ಗದ ಜನರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಆದರೆ ಆದಾಯ ತೆರಿಗೆಯಲ್ಲಿ ಒಂದಡಿ ಮುಂದೆ ಇಟ್ಟು ಬೇರೆ ಕಡೆ ಎಲ್ಲಿ ತೆರಿಗೆ ಏರಿಕೆ ಮಾಡಿದ್ದಾರೆ ಅನ್ನೋದನ್ನು ಗಮನಿಸಬೇಕಾಗುತ್ತದೆ.