
ಬಿಜಾಪುರ್: ಛತ್ತೀಸ್ಗಡದಲ್ಲಿ ಗುತ್ತಿಗೆದಾರನೊಬ್ಬನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದಿದ್ದ 28 ವರ್ಷದ ಪತ್ರಕರ್ತನ ಶವ, ಅದೇ ಗುತ್ತಿಗೆದಾರನಿಗೆ ಸೇರಿದ ಸ್ಥಳದ ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆಯಾಗಿದೆ. ಜನವರಿ 1ರಿಂದ ನಾಪತ್ತೆಯಾಗಿದ್ದ ಹವ್ಯಾಸಿ ಪತ್ರಕರ್ತ ಮುಕೇಶ್ ಚಂದ್ರಕಾರ್ ಮೃತದೇಹವನ್ನು ಶುಕ್ರವಾರ ಸಂಜೆ ಬಿಜಾಪುರ್ ಜಿಲ್ಲೆಯ ಚಟ್ಟನಪರ ಬಸ್ತಿ ಎಂಬಲ್ಲಿ ಪತ್ತೆ ಮಾಡಲಾಗಿದೆ.

ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದರು.ಈ ವರದಿಯು ಗುತ್ತಿಗೆದಾರನ ಚಟುವಟಿಕೆಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿತ್ತು.

ಪತ್ರಕರ್ತ ಮುಕೇಶ್ ಜನವರಿ 1ರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಗುತ್ತಿಗೆದಾರ ಸುರೇಶ್ ಚಂದ್ರಕಾರ್ನ ಸಹೋದರ ರಿತೇಶ್, ತನ್ನ ಕುಟುಂಬಕ್ಕೆ ಸೇರಿದ ಸ್ಥಳದೊಂದರಲ್ಲಿ ಮುಕೇಶ್ ಜತೆ ಸಭೆ ಆಯೋಜಿಸಿದ್ದ. ಆದರೆ ಇದರ ಬಳಿಕ ಮುಕೇಶ್ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಮುಕೇಶ್ ಅವರ ಅಣ್ಣ ಯುಕೇಶ್ ಚಂದ್ರಕಾರ್ ಅವರು ಪೊಲೀಸರಿಗೆ ಕಾಣೆ ದೂರು ಸಲ್ಲಿಸಿದ್ದರು. ಮಾತುಕತೆಗಾಗಿ ಚಟ್ಟನಪರದಲ್ಲಿನ ಸುರೇಶ್ನ ಸ್ಥಳಕ್ಕೆ ತೆರಳಿದ್ದ ಮುಕೇಶ್, ಅದೇ ಜಾಗದಲ್ಲಿನ ನೀರಿನ ಟ್ಯಾಂಕ್ನಲ್ಲಿ ಜನವರಿ 3ರಂದು ಶವವಾಗಿ ಪತ್ತೆಯಾಗಿದ್ದಾರೆ.