ಸ್ಥಾಪಿತ ವೈದಿಕ ಧರ್ಮದ ಆದರ್ಶಗಳು alienation ಗೆ ಸಂಬಂಧಿಸಿದ ಬಹುದೊಡ್ಡ ತೊಡಕನ್ನು ಹೊಂದಿದ್ದು ಅವು ಪ್ರತಿಪಾದಿಸುವ ತತ್ವಶಾಸ್ತ್ರವು ಹಲವು ಬಗೆಯ ಭೇದಭಾವಪೂರಿತ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಿ ˌ ಪುರೋಹಿತ ನಿಯಂತ್ರಿತ ಸಾಂಸ್ಥಿಕ ರೂಪುರೇಷೆಗಳ ಮೂಲಕ ಹಲವಾರು ಸಂಕೀರ್ಣ ಮತ್ತು ಅವೈಜ್ಞಾನಿಕ ಆಚರಣೆಗಳನ್ನು ಸಮಾಜದಲ್ಲಿ ಬೆಳೆಸಿತ್ತು. ವೈದಿಕ ಸಿದ್ಧಾಂತವು ಮನುಷ್ಯನ ಮೂಲ ಪ್ರಜ್ಞೆಗೂ ಮತ್ತು ಆತನ ಸುತ್ತಲಿನ ಪರಿಸರಕ್ಕೂ ಇರಬಹುದಾದ ಸಂಬಂಧಗಳನ್ನು ವಿವರಿಸುವಲ್ಲಿ ವಿಫಲವಾಗಿತ್ತು. ಇದರ ಅರ್ಥವೇನೆಂದರೆˌ ವೈದಿಕ ಸಿದ್ಧಾಂತದಲ್ಲಿ ಮನುಷ್ಯ ಪ್ರಜ್ಞೆಯು ನಗಣ್ಯವಾಗಿˌ ದೈವ ಪ್ರೇರಣೆಯು ಎಲ್ಲಿಲ್ಲದ ಪ್ರಾಮುಖ್ಯತೆ ಪಡೆದಿತ್ತು. ಈ ಜಗತ್ತು ದೇವರಿಂದ ಸೃಷ್ಠಿಸಲಾಗಿದೆ ಎನ್ನುವ ನಂಬಿಕೆಯು ಮನುಷ್ಯನನ್ನು ಪರಕೀಯನನ್ನಾಗಿ ಮಾಡಿತ್ತು. ದೇವರು ಮತ್ತು ಮನುಷ್ಯನನ್ನು ಪ್ರತ್ಯೇಕಿಸುವ ದ್ವೈತ ಸಿದ್ಧಾಂತವು ವೈದಿಕತೆಯ ಮೂಲ ತಿರುಳು.
ಈ ಜಗತ್ತಿನಲ್ಲಿ ಮನುಷ್ಯ ಒಂದು ರೀತಿಯಲ್ಲಿ ಆಗಂತುಕನಂತೆ ಬಾಳಿ ಬದುಕುವವ ಹಾಗು ಆತನ ಮತ್ತು ಪ್ರಪಂಚದ ಮಧ್ಯದಲ್ಲಿ ದಾಟಲಾರದ ಒಂದು ಬೃಹತ್ ಕಂದಕವನ್ನು ವೈದಿಕ ಆದರ್ಶಗಳು ಸೃಷ್ಠಿಸಿದ್ದವು. ವೈದಿಕ ಧರ್ಮದ ಈ ದೇವಪ್ರೇರಣೆಯ ಪರಿಕಲ್ಪನೆಯು ಮನುಷ್ಯನನ್ನು ತನ್ನ ಸುತ್ತಲಿನ ಪರಿಸರದಿಂದ ಪ್ರತ್ಯೇಕಗೊಳಿಸಿತ್ತು. ಮನುಷ್ಯ ಮತ್ತು ಈ ಪ್ರಪಂಚದ ನಡುವಿನ ಅವಿನಾಭಾವ ಸಂಬಂಧವನ್ನು ದೇವ ಕೇಂದ್ರಿತ ಸಿದ್ಧಾಂತವು ಆದಿಮೂಲದಲ್ಲೇ ಪ್ರತ್ಯೇಕಿಸಿತ್ತು. ಕ್ರೈಸ್ತ ಧರ್ಮದ ಆದರ್ಶಗಳಲ್ಲೂ ಕೂಡ ಇದೇ ರೀತಿಯಲ್ಲಿ ಮೂಲ ಪುರುಷ ಆದಮನನ್ನು ಸ್ವರ್ಗದಿಂದ ಹೊರಹಾಕಿದನ್ನು ನಾವು ಕಾಣುತ್ತೇವೆ. ಈ ಪರಿಕಲ್ಪನೆಯನ್ನು ಥಿಯಾಲಜಿಯಲ್ಲಿ laps-Arianism ಅಥವಾ ಮನುಷ್ಯನ ಈ ಪರಕೀಯತೆಯ ಸ್ಥಿತಿಯನ್ನು alienation ಎಂದು ಗುರುತಿಸುತ್ತಾರೆ. ಮನುಷ್ಯ ಪ್ರಧಾನ ಜಗತ್ತಿನಲ್ಲಿ ಮನುಷ್ಯನೆ ಏಕಾಂಗಿಯಾಗಿ ಬದುಕುವ ಸ್ಥಿತಿಯನ್ನು ಈ ಪರಿಕಲ್ಪನೆ ಬೆಳೆಸಿತ್ತು.

ಉತ್ಪಾದಕ ವರ್ಗದ ಹಿರಿಮೆˌ ಶ್ರಮ ಸಂಸ್ಕ್ರತಿ ಮತ್ತು ಕಾಯಕ ಪ್ರಧಾನ ಅಂಶಗಳಿಂದ ಬಸವವಾದದೊಂದಿಗೆ ಅನೇಕ ಸಾಮ್ಯತೆಗಳು ಹೊಂದಿರುವ ಮಾರ್ಕ್ಸ್ ಸಿದ್ಧಾಂತದಲ್ಲೂ ವೈದಿಕ ಹಾಗು ಕ್ರೈಸ್ತ ಸಿದ್ಧಾಂತಗಳಲ್ಲಿನಂತೆ ಇದೇ ಬಗೆಯ alienation ನನ್ನು ನಾನು ನೋಡಬಹುದಾಗಿದೆ. ಬಹುಸಂಖ್ಯಾತ ಶೂದ್ರ ವರ್ಗವನ್ನು ತನ್ನ ಕುಟಿಲ ಹುನ್ನಾರ ಹಾಗು ಶ್ರೇಷ್ಠತೆಯ ವ್ಯಸನದಿಂದ ಕ್ರೂರವಾಗಿ ಶೋಷಿಸುವ ವೈದಕ ಧರ್ಮ ಸ್ಥಾಪಿತ ಆದರ್ಶಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಬಸವಣ್ಣನವರು ಸಮಾನತೆಯ ಆಧಾರದಲ್ಲಿ ಹೊಸ ಸಾಮಾಜಿಕ ತತ್ವಶಾಸ್ತ್ರವನ್ನು ರೂಪಿಸಿ ಶರಣಮಾರ್ಗ ಮತ್ತು ಲಿಂಗಾಯತವೆಂಬ ಆದರ್ಶಗಳ ಪರಿಕಲ್ಪನೆಗೆ ಜೀವನೀಡಿದರು. ಲಿಂಗಾಯತ ಧರ್ಮ ಸಿದ್ಧಾಂತದಲ್ಲಿ ಈ alienation ಎನ್ನುವ ಪರಿಕಲ್ಪನೆಗೆ ಜಾಗವಿಲ್ಲ. ಇದುವೆ ಶರಣ ತತ್ವದ ಮೂಲ ಆಶಯವಾಗಿದೆ. ಬಸವವಾದದಲ್ಲಿ ಪೌರೋಹಿತ್ಯಕ್ಕಿಂತ ಕಾಯಕಕ್ಕೆ ಪ್ರಾಧಾನ್ಯತೆ ನೀಡಲಾಗಿದೆ.
ಮನುಷ್ಯ ಮತ್ತು ದೇವರ ನಡುವೆ ವೈದಿಕ ಸಿದ್ಧಾಂತವು ಸೃಷ್ಠಿಸಿದ್ದ ಬೃಹತ್ ಕಂದರವನ್ನು ಅಳಿಸಿ ಹಾಕಿದ ಬಸವವಾದವು ತನ್ನ ವಿಭಿನ್ನತೆಯಿಂದ ಜಗತ್ತಿನ ಗಮನವನ್ನು ಸೆಳೆಯಿತು. ಬುದ್ಧನಂತೆ ದೇವರ ಕುರಿತು ತಟಸ್ಥ ನಿಲುವು ತಾಳದೆ ಅಥವಾ ವೈದಿಕರಂತೆ ದೇವರನ್ನು ಅತಿರಂಜಿಸಿ ಸಾಮಾನ್ಯ ಮನುಷ್ಯನನ್ನು ಏಕಾಂಗಿಯಾಗಿಸದೆ ಜೀವಾತ್ಮ ಹಾಗು ದೇವಾತ್ಮ ಬೇರೆಬೇರೆಯಲ್ಲ ಎನ್ನುವ ಮೂಲಕ ಮನುಷ್ಯನೊಳಗೆ ದೈವತ್ವವವನ್ನು ಗುರುತಿಸಿˌ ಕಾಣದ ದೇವರನ್ನು ಮನುಷ್ಯನಲ್ಲಿ ಹುಡುಕುವ ವಿನೂತನ ಪ್ರಾಯೋಗಿಕ ಪರಿಕಲ್ಪನೆಯನ್ನು ಪ್ರತಿಪಾದಿಸಿತು. ಆದ್ದರಿಂದˌ ಶರಣಮಾರ್ಗ ಮತ್ತು ಬಸವವಾದದ ತತ್ವಾದರ್ಶವು ವೈದಿಕ ಸಮಾಜಶಾಸ್ತ್ರಕ್ಕೆ ಪರ್ಯಾಯವಾಗಿ ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಹಾಗಾಗಿ ಇದು ಬಸವಪೂರ್ವದ ಎಲ್ಲಾ ಬಗೆಯ ಸಿದ್ಧಾಂತಗಳಿಗೆ ಪರ್ಯಾಯವಾಗಿ ನಿಲ್ಲುತ್ತದೆ.
ಜಗತ್ತಿನ ಅತ್ಯಂತ ಸುಧಾರಿತ ತತ್ವಜ್ಞಾನ ಶಾಸ್ತ್ರಗಳೆಂದು ಗುರುತಿಸಲಾಗಿದ್ದ ಕ್ರಿಶ್ಚಿಯನ್ ಸಿದ್ದಾಂತಕ್ಕಿಂದ ಭಿನ್ನವಾಗಿಯು ಮತ್ತು ಮಾರ್ಕ್ಸ್ ಸಿದ್ಧಾಂತಗಳಿಗಿಂತ ಅನೇಕ ಶತಮಾನಗಳ ಹಿಂದೆಯೆ ಕನ್ನಡ ನೆಲದಲ್ಲಿ ಪ್ರತಿಪಾದನೆಗೊಂಡ ಶರಣಮಾರ್ಗ ಮತ್ತು ಬಸವವಾದ ಸಿದ್ಧಾಂತವು ಕೇವಲ ಮನುಷ್ಯನೊಬ್ಬನ ಒಳಿತನ್ನು ಪ್ರತಿಪಾದಿಸದೆ ತನ್ನೊಂದಿಗೆ ಸಕಲ ಜೀವಾತ್ಮರ ಒಳಿತಿನ ಆಶಯವನ್ನು ಪ್ರತಿಪಾದಿಸಿದ್ದು ಗಮನಾರ್ಹ ಸಂಗತಿಯಾಗಿದೆ. ವೈದಿಕ ಸಿದ್ಧಾಂತದ ಟೊಳ್ಳುತನವನ್ನು ಅತ್ಯಂತ ತೀಕ್ಷ್ಣ ಮಾತುಗಳಲ್ಲಿ ವಿಮರ್ಶಿಸಿದ ಬಸವವಾದ ಲೋಕಕಲ್ಯಾಣದ ಉದ್ದೇಶದಿಂದ ಸಾಂಘಿಕ ಹಾಗು ಸಾಮೂಹಿಕ ಚಳುವಳಿಯ ಮುಖೇನ ಹುಟ್ಟುಪಡೆಯಿತು. ಈ ಜಗತ್ತಿನಲ್ಲಿ ದೈವ ಸಂಕಲ್ಪನ ಅಣತಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಎನ್ನುವ ವೈದಿಕ ಹಿತಾಸಕ್ತ ಸ್ಥಾಪಿತ ಪರಾಧೀನ ತತ್ವವನ್ನು ನಿರ್ದಾಕ್ಷಿಣವಾಗಿ ಅಲ್ಲಗಳೆದದ್ದು ಬಸವವಾದದ ಅನುಪಮ ವಿಶೇಷತೆಯಾಗಿದೆ.
ಬಸವವಾದವು ಈ ಜಗತ್ತಿನಲ್ಲಿ ಮನುಷ್ಯ ನಡೆದಾಡುವ ಚಲನಶೀಲ ಜಂಗಮ ಸ್ವರೂಪಿ ಮತ್ತು ದೈವ ಸ್ವರೂಪಿ ಎಂದು ಸ್ವಷ್ಟವಾಗಿ ಪ್ರತಿಪಾದಿಸುವ ಮೂಲಕ ದೇವರು ಮತ್ತು ಮನುಷ್ಯನ ನಡುವಿನ ಅಂತರನ್ನು ದೂರವಾಗಿಸಿದೆ. ಆದ್ದರಿಂದ ಲಿಂಗಾಯತ ಸಿದ್ಧಾಂತವು ವೈದಿಕರ ಜೀವವಿರೋಧಿ ವ್ಯವಸ್ಥೆಗೆ ಪರ್ಯಾಯವಾಗಿ ರೂಪುಗೊಂಡ ಹೊಸ ಜೀವಪರ ಮತ್ತು ಜೀವನ್ಮುಖಿ ಚಿಂತನೆಯಾಗಿದೆ. ಇದು ವೈದಿಕ ಧರ್ಮದ ಪ್ರತಿಯೊಂದು ಹುನ್ನಾರಗಳು ಹಾಗು ಕೃತಕ ಆದರ್ಶಗಳನ್ನು ಹುಡಿಗೊಳಿಸಿˌ ನೆಲಮೂಲದ ಬಹುಜನರಿಗೆ ಸರ್ವಾಂಗೀಣ ಸ್ವಾತಂತ್ರ ಘೋಷಿಸಿದ ಕನ್ನಡ ಮಣ್ಣಿನ ಮೊಟ್ಟಮೊದಲ ಪರ್ಯಾಯ “ಧರ್ಮ”ವಾಗಿ ಗುರುತಿಸಿಕೊಂಡಿದೆ ಹಾಗು ಈ ವಿಶ್ವದ ಸಮಗ್ರ ಹಾಗು ಸಮಸ್ತ ಜೀವಾತ್ಮರ ಒಳಿತಿನ ಆಶಯಗಳಿಂದ ತುಂಬಿರುವ ನೈಜ ಆದರ್ಶವನ್ನು ನಮ್ಮೆಲ್ಲರ ಬದುಕಿನ ನಡುವೆ ಸ್ಥಿರವಾಗಿ ನೆಲೆಗೊಳಿಸಿದೆ.
~ ಡಾ. ಜೆ ಎಸ್ ಪಾಟೀಲ.