ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್(Thalapathy Vijay) ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’(Jana Nayagan) ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಮಲೇಷ್ಯಾದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಿನಿಮಾ ವಿಜಯ್ ಅವರ ಸಿನಿ ಜೀವನದ ಕೊನೆಯ ಚಿತ್ರವಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಸಿಕ್ಕಿದ್ದು, ವಿದೇಶದಲ್ಲಿಯೇ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಅಭಿಮಾನಿಗಳ ಸಾಗರ ಕಂಡು ಭಾವುಕರಾದ ದಳಪತಿ ವಿಜಯ್ ತಮ್ಮ ಸಿನಿಮಾ ಜೀವನದ ಮಹತ್ವದ ನಿರ್ಧಾರವನ್ನು ‘ಜನ ನಾಯಗನ್’ ವೇದಿಕೆಯಲ್ಲಿ ತಿಳಿಸಿದ್ದಾರೆ. ʼನನ್ನ ಬದುಕಿನಲ್ಲಿ ಸಿನಿಮಾ ಕೇವಲ ವೃತ್ತಿ ಅಲ್ಲ, ಅದು ನನ್ನ ಉಸಿರು. ಈ ಪ್ರಯಾಣದಲ್ಲಿ ನನ್ನೊಂದಿಗೆ ನಿಂತ ಪ್ರತಿಯೊಬ್ಬ ಅಭಿಮಾನಿಗೂ ನಾನು ಸದಾ ಋಣಿ. ನನ್ನ ಜೀವನದ ಮಹತ್ವದ ಕ್ಷಣಗಳಲ್ಲಿ ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲವೇ ನನ್ನ ಶಕ್ತಿಯಾಗಿತ್ತುʼ ಎಂದು ವಿಜಯ್ ಭಾವುಕರಾಗಿದ್ದಾರೆ.

ಇನ್ನು ‘ಜನ ನಾಯಗನ್’ ನನ್ನ ಕೊನೆಯ ಸಿನಿಮಾ ಎಂದು ಸ್ಪಷ್ಟಪಡಿಸಿದ ವಿಜಯ್, ಇದು ತಮ್ಮ ಕಲಾ ಬದುಕಿಗೆ ಯೋಗ್ಯವಾದ ಅಂತಿಮ ಅಧ್ಯಾಯವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ತಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದು, ಸಮಾಜಮುಖಿ ಸಂದೇಶವನ್ನು ಒಳಗೊಂಡ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯ್ ಮಾತನಾಡುವಾಗ ಅಭಿಮಾನಿಗಳ ಕಣ್ಣು ಕೂಡ ಒದ್ದೆಯಾಗಿದ್ದು, ಭಾವನಾತ್ಮಕ ಕ್ಷಣಗಳಿಗೆ ‘ಜನ ನಾಯಗನ್’ ಕಾರ್ಯಕ್ರಮ ಸಾಕ್ಷಿಯಾಯಿತು. ವೇದಿಕೆಯಲ್ಲಿ ‘ಜನ ನಾಯಗನ್’ ಚಿತ್ರತಂಡ ಹಾಗೂ ಅಭಿಮಾನಿಗಳು ದಳಪತಿ ವಿಜಯ್ ಹೊಸ ಹೆಜ್ಜೆಗೆ ಶುಭಾಶಯ ಕೋರಿ ಗೌರವ ಸಲ್ಲಿಸಿದರು.












