ಉಚ್ಛ ನ್ಯಾಯಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಕೇಂದ್ರ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಈಗಾಗಲೆ ಹಲವು ಹೈ ಕೋರ್ಟ್ ಗಳಲ್ಲಿ ಶೇಕಡ 40ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿ ಮಾಡದೇ ನೀವು ತ್ವರಿತ ತೀರ್ಪು ಕೇಳುವುದು ಸರಿಯಲ್ಲ ಎಂದು ಸುಪ್ರೀಂ ಹೇಳಿದೆ.
ಪ್ರಮುಖ ಪ್ರಕರಣಗಳಲ್ಲಿ ಸಹ ನ್ಯಾಯಾಧೀಶರಿಲ್ಲದೆ ಇರುವುದು ನ್ಯಾಯಾಂಗ ವ್ಯವಸ್ಥೆಯ ಕಾರ್ಯವನ್ನು ನಿಲ್ಲಿಸಿದಂತೆ ಎಂದು ಎಚ್ಚರಿಸಿದೆ. ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಾಪೀಠವು ಹೈಕೋರ್ಟ್ ವಿಚಾರವಾಗಿ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದಿದೆ.
ಅಲ್ಲದೇ ಈ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಹೈ ಕೋರ್ಟ್ ನ್ಯಾಯಧೀಶರನ್ನು ನೇಮಕ ಮಾಡಲು ಗಡುವು ಸಹ ನಿಗಧಿ ಮಾಡಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಸುಪ್ರೀಂ ಕೋಪಕ್ಕೆ ಕಾರಣವಾಗಿದೆ. ಇನ್ನು ಕೇಂದ್ರ ಸರ್ಕಾರ ಕೂಡ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಹ ವಿಚಾರಣೆ ಮತ್ತು ತೀರ್ಪು ವಿಳಂಬವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಸುಗಮವಾಗಿ ಕಾರ್ಯನಿರ್ವಹಿಸುವ ನ್ಯಾಯಾಂಗವು ಸಮರ್ಥ ಪ್ರಜಾಪ್ರಭುತ್ವಕ್ಕೆ ಅಗತ್ಯವಾಗಿದೆ. ಆದರೆ, ಭಾರತದಲ್ಲಿ, ನ್ಯಾಯಾಂಗ ಹುದ್ದೆ ಒಂದು ಶಾಶ್ವತ ಸಮಸ್ಯೆಯಾಗಿದೆ. ಕೆಲವು ಉನ್ನತ ನ್ಯಾಯಾಲಯಗಳಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇರುವುದು ತೀವ್ರ ಕಳವಳಕಾರಿಯಾಗಿದ್ದು, ಈ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕು ಎಂದು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಲ್ಲದೇ, ನೀವು ನ್ಯಾಯಾಂಗ ವ್ಯವಸ್ಥೆಯನ್ನು ಪ್ಯಾರಲೈಸ್ ಮಾಡಿದರೆ ಅಥವಾ ನಿಧಾನಗೊಳಿಸಿದರೆ ನಿಮ್ಮ ವ್ಯವಸ್ಥೆಯ ಕೆಲಸಗಳು ಸಹ ನಿಧಾನವಾಗುತ್ತದೆ. ಇದನ್ನು ಸರ್ಕಾರವು ಬೇಗನೆ ಅರಿತುಕೊಳ್ಳಬೇಕು. ನ್ಯಾಯಾಧೀಶರನ್ನು ನೇಮಿಸದಿದ್ದರೆ ಪ್ರಕರಣಗಳ ಸರಿಯಾದ ವಿವಾದದ ಸಮಯ ಮತ್ತು ಸರಿಯಾದ ತೀರ್ಪನ್ನು ಪಡೆಯಲು ಸಾಧ್ಯವಿಲ್ಲ ಎಂದಿದೆ. ಜನರು ವಿವಾದದ ತೀರ್ಪನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕು, ಆದರೆ ಹೈಕೋರ್ಟ್ಗಳಲ್ಲಿನ ದೊಡ್ಡ ಹುದ್ದೆಗಳು ಖಾಲಿ ಇರುವುದರಿಂದ ಜನರಿಗೆ ಸಮಸ್ಯೆಗಳಾಗುತ್ತಿವೆ. ಜನರಿಗೆ ಸಮಸ್ಯೆಯಾದರೆ, ನಿಮಗೂ ತೊಂದರೆಯಾಗುತ್ತದೆ ಎಂದು ನ್ಯಾಯಾಲಯವು ಕೇಂದ್ರಕ್ಕೆ ಎಚ್ಚರಿಸಿದ್ದು, ಬೇಗನೆ ಹೈಕೋರ್ಟ್ಗಳ ಕಾರ್ಯವಿಧಾನದ ಸಮಸ್ಯೆಯನ್ನು ಪರಿಹರಿಸಲು ಹೇಳಿದೆ.
ಅಲ್ಲದೇ ಆಮದು ಮಾಡಿದ ಸೋಲಾರ್ ಸೆಲ್ಗಳ ಪ್ರಕರಣದ ತೀರ್ಪನ್ನು ಹೈಕೋರ್ಟ್ ಎರೆಡುವರೆ ತಿಂಗಳ ನಂತರ ಪ್ರಕಟಿಸಿದೆ. ಈ ಬಗ್ಗೆ ಪ್ರಶ್ನಿಸಿ ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಅಟಾರ್ನಿ ಜನರಲ್ ಮಾಧವಿ ದಿವಾನ್, ಈ ಸಮಸ್ಯೆಯನ್ನು ಎರಡು ತಿಂಗಳಿಗಿಂತ ಹೆಚ್ಚು ಕಾಲ ಮುಂದೂಡುವುದು ಸರಿಯಲ್ಲ ಮತ್ತು ಇದು ಆರ್ಥಿಕತೆಗೆ ಸಂಬಂಧಿಸಿರುವುದರಿಂದ ಈ ಕುರಿತು ಬೇಗ ತೀರ್ಪು ನೀಡುವ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಸಿರುವ ದೆಹಲಿ ಹೈಕೋರ್ಟ್ ಕೇವಲ 50 ಪ್ರತಿಶತದಷ್ಟು ಮಾತ್ರ ಕೆಲಸವಾಗುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ತ್ವರಿತ ತೀರ್ಪು ಅಸಾಧ್ಯ ಎಂದಿತ್ತು.
ದೆಹಲಿ ಹೈಕೋರ್ಟ್ ಹೇಳಿರುವುದನ್ನ ಬೆಂಬಲಿಸಿರುವ ಸುಪ್ರೀಂ, ನೀವು ವ್ಯವಸ್ಥೆಯನ್ನು ಸರಿಯಾಗಿ ಜಾರಿಗೊಳಿಸದ ಕಾರಣ ಆರ್ಥಿಕತೆಯು ಸಹ ತೊಂದರೆಗೊಳಗಾಗಲಿ. ಸಮಯದ ಮಿತಿಯೊಂದಿಗೆ ವಿವಾದಗಳ ತೀರ್ಪು ಇರಬೇಕು ಎಂದು ನಾವು ಒಪ್ಪುತ್ತೇವೆ. ಆದರೆ ನ್ಯಾಯಾಧೀಶರ ನೇಮಕಾತಿಗಾಗಿ ನಾವು ಸಮಯದ ಮಿತಿ ನೀಡಿದ್ದೇವೆ. ಆದರೆ ಅದನ್ನೂ ಸಹ ನೀವು ಪಾಲಿಸಿಲ್ಲ. ಹಾಗಾಗಿ ನಾವು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಾಧೀಶರ ಕೊರತೆಯಿರುವಾಗ ಪ್ರಕರಣವನ್ನು ಬೇಗನೆ ತೆಗೆದುಕೊಳ್ಳುವಂತೆ ನಾವು ಹೈಕೋರ್ಟ್ಗೆ ಒತ್ತಡ ಹೇರಲು ಸಾಧ್ಯವಿಲ್ಲ. ನ್ಯಾಯಾಂಗವು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಸರ್ಕಾರಿ ಅಧಿಕಾರಿಗಳು ಅರಿತುಕೊಳ್ಳಬೇಕು. ಇದು ನ್ಯಾಯಾಂಗ ವ್ಯವಸ್ಥೆಯನ್ನು ನಿಲ್ಲಿಸಲು ಪ್ರಯತ್ನಿಸಿದಂತೆ. ನಾವು ನಿಮ್ಮೊಂದಿಗೆ ಸಹಕಾರ ನೀಡಿದ್ದೇವೆ. ಆದರೆ ನಾವು ಆದೇಶಿಸಿದ್ದನ್ನು ಸರ್ಕಾರವೇ ಮಾಡದಿದ್ದಾಗ ನಾವು ಏನು ಮಾಡಬಹುದು ಎಂದು ಸುಪ್ರೀಂ ಪ್ರಶ್ನಿಸಿದೆ.