ಮಂಡ್ಯ : ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ ಸಂಸದೆ ಸುಮಲತಾ ಪಕ್ಷ ಸೇರ್ಪಡೆ ವಿಚಾರ ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಈ ನಡುವೆ ಕಾಂಗ್ರೆಸ್ ಸೇರಲು ನಡೆದಿದ್ದ ಪ್ರಯತ್ನಗಳ ಬಗ್ಗೆ ಸ್ವತಃ ಸುಮಲತಾ ಮಾತನಾಡಿದ್ದು, ಪಕ್ಷ ಸೇರ್ಪಡೆಗೆ ಅಡ್ಡಿಪಡಿಸಿದ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್. ಬಿಜೆಪಿ ಅಸೋಸಿಯಟ್ ಮೆಂಬರ್ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ರು. ಏನನ್ನು ವಿಚಾರಿಸದೇ ಅವರ ಅಭಿಪ್ರಾಯ ಹೇಳುವುದು ತಪ್ಪು. ನಾನು ಎಂಪಿಯಾಗಿರುವ ಮೂರು ವರ್ಷದ ಅವಧಿಯಲ್ಲಿ ಡಿಕೆಶಿ ಜೊತೆ ಮಾತಾಡಿಲ್ಲ. ಒಂದು ಪಕ್ಷದ ರಾಜ್ಯಾಧ್ಯಕ್ಷರಾದವರು ಜಿಲ್ಲೆಯಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಂಡು ಮಾತಾಡಬೇಕು. ನನ್ನ ಗಂಡ ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್ನಲ್ಲಿ ಇದ್ರು. ನಾನು ಆರಂಭದಲ್ಲಿ ನನ್ನ ಲೈಫ್ನಲ್ಲಿ ಮಂಡ್ಯಗೆ ಟಿಕೆಟ್ ಕೊಡಿ ಎಂದಿದ್ದು ಕಾಂಗ್ರೆಸ್ ಕಾಂಗ್ರೆಸ್ನ್ನು ಬಿಟ್ಟು ಬೇರೆ ಯಾವ ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ. ಅಂಬರೀಶ್ ಅವರಿಗೆ ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಒಡನಾಟ ಇತ್ತು. ನಾನು ಯಾರನ್ನು ಬೇಕಾದ್ರು ಟಿಕೆಟ್ ಕೇಳಬಹುದಿತ್ತು. ನಾನು ಕೇಳಿದ್ದು ಕಾಂಗ್ರೆಸ್ ಪಕ್ಷವನ್ನು ಮಾತ್ರ.
ಅಂಬರೀಶ್ ಅವರು ಇದ್ದ ಪಕ್ಷ ಎಂದು ಕಾಂಗ್ರೆಸ್ನಿಂದ ಟಿಕೆಟ್ ಕೇಳಿದ್ದೆ. ಆದರೆ ಆ ಟೈಂನಲ್ಲಿ ಟಿಕೆಟ್ ಕೊಡಲ್ಲ ಎಂದಿದ್ದೇ ಡಿ.ಕೆ.ಶಿವಕುಮಾರ್. ಮಂಡ್ಯ ಬೇಡಾ ನೀವು ಬೆಂಗಳೂರು ದಕ್ಷಿಣ ಅಥವಾ ಉತ್ತರದಲ್ಲಿ ನಿಂತುಕೊಳ್ಳಿ. ಮಂಡ್ಯದಲ್ಲಿ ತುಂಬಾ ಕಷ್ಟ ಆಗುತ್ತೆ ಮಂಡ್ಯ ಆಗಲ್ಲ ಎಂದಿದ್ದು ಡಿಕೆಶಿ.
ಈ ಮಾತನ್ನು ಹೇಳಿದ್ದಾರೋ ಇಲ್ವೋ ಅವರನ್ನ ಕೇಳಿನೋಡಿ. ಇದನ್ನು ಅವರು ಒಪ್ಪಿಕೊಳ್ಳಲೇ ಬೇಕು. ಅವರು ಟಿಕೆಟ್ ಕೊಡಲು ಆಗಲ್ಲ ಎಂದಿದ್ದಕ್ಕೆ ನಾನು ಪಕ್ಷೇತರವಾಗಿ ನಿಂತೆ. ಚಾಮುಂಡಿ ತಾಯಿ ಅಣೆ; ನನಗೆ ಅನುಕೂಲ ಮಾಡಿಕೊಡಿ ಎಂದು ಯಾವ ಪಕ್ಷವನ್ನು ಕೇಳಿಕೊಂಡಿಲ್ಲ. ಪಕ್ಷೇತರವಾಗಿ ಗೆಲ್ಲಿಸಿದ ನನ್ನ ಜನರ ಋಣವನ್ನು ನಾನು ತೀರಿಸಬೇಕು. ಆ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ. ಪಕ್ಷೇತರವಾಗಿ ಗೆದ್ದ ಶರತ್ ಬಚ್ಚೇಗೌಡ ರನ್ನು ಡಿಕೆಶಿ ಅಭಿನಂದನೆ ಮಾಡಿದ್ರು. ಮಂಡ್ಯದಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಬೇಕು ಅಂದಿದ್ರೆ ನನಗೂ ಅವರು ಅಭಿನಂದನೆ ಸಲ್ಲಿಸಬೇಕಿತ್ತು. ನನ್ನ ಉದ್ದೇಶ ಹಾಗೂ ಮುಂದಿನ ನಡೆಯನ್ನು ಕೇಳಬೇಕಿತ್ತು.
ಡಿಕೆಶಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಆಸೆ ಇದ್ಯಾ ಎಂಬ ಅನುಮಾನ ನನಗೆ ಇದೆ. ನಾನು ಕಾಂಗ್ರೆಸ್ ಸೇರಬಾರದು ಎಂಬ ರೀತಿಯಲ್ಲಿ ಡಿಕೆ ಶಿವಕುಮಾರ್ ನಡೆದುಕೊಳ್ತಿದ್ದಾರೆ. ನನ್ನ ಯಾರು ಸ್ವಾಗತಿಸುತ್ತಾರೋ ಅಲ್ಲಿಗೆ ನಾನು ಹೋಗುತ್ತೇನೆ. ನನಗೆ ಗೌರವ ಇಲ್ಲದ ಪಕ್ಷಕ್ಕೆ ನಾನು ಹೋಗಲ್ಲ ಎಂದರು.