ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಜನ ಸಾಮಾನ್ಯರ ಜೊತೆಗೆ ಪ್ಯಾನ್ ಇಂಡಿಯಾ ನಟ ಪ್ರಭಾಸ್, ರಕ್ಷಿತ್ ಶೆಟ್ಟಿ, ರಮ್ಯಾ ಮುಂತಾದ ಸೆಲೆಬ್ರಿಟಿಗಳು ಸಹ ಚಿತ್ರವನ್ನು ನೊಡಿ ಕೊಂಡಾಡಿದ್ದಾರೆ. ಈಗ ನಟ ಸುದೀಪ್ ಚಿತ್ರವನ್ನು ನೋಡಿರುವುದಷ್ಟೇ ಅಲ್ಲ, ಅದನ್ನು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರವನ್ನೇ ಬರೆದಿದ್ದಾರೆ.
ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ. ನಮ್ಮನ್ನು ಆ ಚಿತ್ರಗಳು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ.
ಇನ್ನು, ರಿಷಭ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ತಟ್ಟುತ್ತಾರೆ. ಚಿತ್ರ ನೋಡಿ ನನಗನಿಸಿದ್ದೆಂದರೆ, ಇಂಥದ್ದೊಂದು ಚಿತ್ರ ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅಂಥನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ. ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಭ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ ನಮನ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಸಂಗೀತ ನಿರ್ದೇಶಕ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಸಂಸ್ಥೆಗೂ ನನ್ನ ಕೃತಜ್ಱತೆಗಳು. ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗಳಿಗೆ ತಕ್ಕ ಹಾಗೆ ಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ ಅಲ್ಲ, ನಮ್ಮ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.
‘ಕಾಂತಾರ’ ಚಿತ್ರವು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಚಿತ್ರವು ಹಿಂದಿಗೆ ಡಬ್ ಆಗುತ್ತಿದ್ದು, ಭಾನುವಾರ ಬೆಳೆಗ್ಗೆ ಯೂಟ್ಯೂಬ್ನಲ್ಲಿ ಹಿಂದಿ ಅವತರಣಿಕೆಯ ಟ್ರೇಲರ್ ಬಿಡುಗಡೆಯಾಗುತ್ತಿದೆ.