ಬೆಂಗಳೂರು: ತನ್ನ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಭವಾನಿನಗರದಲ್ಲಿ ನಡೆದಿದೆ.
ಬಿಇ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ವಿಶು ಉತ್ತಪ್ಪ (೧೯ ವರ್ಷ) ಗನ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವ. ಈತ ಕೊಡಗು ಮೂಲದ ತಮ್ಮಯ್ಯ ಎಂಬುವವರ ಮಗನಾಗಿದ್ದಾನೆ. ಖಾಸಗಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ತಮ್ಮಯ್ಯ ಕೆಲಸ ಮಾಡುತ್ತಿದ್ದಾರೆ.
ಇವರು ಕಳೆದ ಹದಿನೈದು ವರ್ಷಗಳಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರದಲ್ಲಿ ವಾಸವಿದ್ದರು. ತಂದೆ ತಮ್ಮಯ್ಯ ರೇಷನ್ ತರಲೆಂದು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಿಶು ಗನ್ನಿಂದ ಗುಂಡುಹಾರಿಸಿಕೊಂಡು, ತಂದೆಗೆ ಕರೆ ಮಾಡಿ, ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾನೆ.
ವಿಷಯ ಕೇಳಿ ಗಾಬರಿಗೊಂಡು ಮನೆಗೆ ಬಂದ ತಂದೆ ನೋಡಿದಾಗ ವಿಶು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದನು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.