• Home
  • About Us
  • ಕರ್ನಾಟಕ
Wednesday, June 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಪ್ರತಿಧ್ವನಿ by ಪ್ರತಿಧ್ವನಿ
June 18, 2025
in Top Story, ಕರ್ನಾಟಕ, ದೇಶ, ರಾಜಕೀಯ
0
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Share on WhatsAppShare on FacebookShare on Telegram

—-ನಾ ದಿವಾಕರ—-

ADVERTISEMENT

ಬಹುತೇಕ ಚಳುವಳಿ-ಹೋರಾಟಗಳು ತಾರ್ಕಿಕ ಅಂತ್ಯ ತಲುಪದಿರಲು ಕಾರಣ ಶೋಧಿಸಬೇಕಿದೆ

 ಇತಿಹಾಸದ ಯಾವುದೇ ಕಾಲಘಟ್ಟದಲ್ಲಾದರೂ, ಜಗತ್ತಿನ ಯಾವುದೇ ಸಮಾಜದಲ್ಲಾದರೂ ತಳಸಮಾಜ ಮತ್ತು ಪ್ರಭುತ್ವಗಳ ವಿರುದ್ಧ ಸಂಘರ್ಷ ನಿರಂತರವಾಗಿ, ಚಲನಶೀಲತೆಯಿಂದ ಹಾಗೂ ಕೆಲವೊಮ್ಮೆ ಹೆಚ್ಚು ಕ್ರಿಯಾಶೀಲವಾಗಿ ನಡೆಯುವುದನ್ನು ಗುರುತಿಸಬಹುದು. ಮಾರ್ಕ್ಸ್‌ ಹೇಳಿದಂತೆ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ದುಡಿಯುವ ಜನರು ತಮ್ಮ ಜೀವನ, ಜೀವನೋಪಾಯ, ಭವಿಷ್ಯ ಹಾಗೂ ಅಸ್ತಿತ್ವಗಳಿಗಾಗಿ, ಬಾಹ್ಯ ಸಮಾಜದಲ್ಲಿ ಲಭ್ಯವಿರುವ ಅವಕಾಶಗಳಲ್ಲೇ ತಮ್ಮ ಅವಕಾಶಗಳನ್ನು ಅರಸುತ್ತಲೇ ಇರುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಭುತ್ವಗಳು, ಪ್ರಜಾತಂತ್ರವಾಗಿರಲಿ ಅಥವಾ ಸರ್ವಾಧಿಕಾರವಾಗಿರಲಿ, ಈ ಅವಕಾಶಗಳನ್ನು ಆದಷ್ಟೂ ಸಂಕುಚಿತಗೊಳಿಸುತ್ತಾ, ಸಾಮಾಜಿಕ ಸಂಹಿತೆ, ಆರ್ಥಿಕ ಉತ್ಪಾದನೆ-ವಿತರಣೆ, ಅಧಿಕಾರದ ಬಳಕೆ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪ್ರಬಲ ವರ್ಗಗಳನ್ನು ಪೋಷಿಸುವ ಮೂಲಕ, ತನ್ನ ಅಧಿಕಾರ ಕೇಂದ್ರಗಳನ್ನು ರಕ್ಷಿಸಿಕೊಳ್ಳುತ್ತವೆ.

 ಭಾರತದ ಸಂದರ್ಭದಲ್ಲಿ ಏಳು ದಶಕಗಳಿಗೂ ಹೆಚ್ಚು ಕಾಲ ಪ್ರಜಾತಂತ್ರ-ಗಣತಂತ್ರದ ಆಳ್ವಿಕೆಯನ್ನು ಪೂರೈಸಲಾಗಿದ್ದರೂ, ಸರ್ಕಾರಗಳು ಜನಪರ ಚಳುವಳಿಗಳನ್ನು ಸಮೀಪ ದೃಷ್ಟಿ ಅಥವಾ ವಕ್ರದೃಷ್ಟಿಯಿಂದ (Myopic) ನೋಡುವ ಪರಂಪರೆಯನ್ನು ಅಳವಡಿಸಿಕೊಂಡು ಬಂದಿವೆ. ಆರ್ಥಿಕವಾಗಿ ಸಮಾಜವಾದಿ ಹೊದಿಕೆಯ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಪಾಲಿಸಿಕೊಂಡು ಬಂದಿರುವ ಸರ್ಕಾರಗಳು, ಸಾಮಾಜಿಕವಾಗಿ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ನಡೆದುಕೊಂಡುಬಂದಿವೆ. ಆದಾಗ್ಯೂ ಸ್ವತಂತ್ರ ಭಾರತ ಜನಚಳುವಳಿಗಳಿಂದ ಮುಕ್ತವಾಗಿರುವ ದಶಕವೊಂದನ್ನು ಕಾಣಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಅಂಬೇಡ್ಕರ್‌ ಅವರು ಆತಂಕ ವ್ಯಕ್ತಪಡಿಸಿದ್ದಂತೆ, ಸ್ವತಂತ್ರ ಭಾರತ ಆರ್ಥಿಕ-ಶೈಕ್ಷಣಿಕ ಸಮಾನತೆಯನ್ನು ಸಾಧಿಸಲಾಗಿಲ್ಲ.

Belagavi  : ಬೆಳಗಾವಿ ಮಹಾನಗರ ಪಾಲಿಕೆ ಸಭೆ #pratidhvani

 ಈ ಕೊರತೆಯನ್ನು ಪ್ರಾದೇಶಿಕ ಅಸಮತೋಲನ, ತಳಸಮುದಾಯಗಳ ಅಂಚಿನಲ್ಲಿಡುವಿಕೆ (Marginalisation) ಹಾಗೂ ಉತ್ಪಾದನಾ ಮೂಲಗಳ ಮೇಲಿನ ಮೇಲ್ಪದರ ಸಮಾಜದ ಯಜಮಾನಿಕೆಗಳ ಚೌಕಟ್ಟಿನಲ್ಲಿ ಕಾಣಬಹುದು. ಇದು ರಾಜಕೀಯ ಅಧಿಕಾರ ಮತ್ತು ಜನಕೇಂದ್ರಿತ ಪ್ರಜಾಪ್ರಭುತ್ವಗಳ ನಡುವಿನ ಅಂತರದ ಸೂಚನೆಯಾಗಿಯೇ ಕಾಣಬೇಕಿದೆ. ವಿಶಾಲ ಸಮಾಜವೂ ಸಹ ಈ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ್ದು 1960-70ರ ದಶಕದಲ್ಲಿ. ಇದರ ಫಲವೇ 70ರ ದಶಕದ ಜನಚಳುವಳಿಗಳು, ಹೋರಾಟಗಳು, ಶಾಂತಿಯುತ-ಸಶಸ್ತ್ರ ಬಂಡಾಯಗಳು ಹಾಗೂ ಜನಾಂಗೀಯ ಸ್ವಾಯತ್ತತೆಯ ಕೂಗು. ಕಳೆದ ಐದು ದಶಕಗಳಲ್ಲಿ  ನಮಗೆ ಪ್ರಧಾನವಾಗಿ ಕಾಣುವುದು ಶೋಷಿತ ಜನಗಳನ್ನು ಪ್ರತಿನಿಧಿಸುವ ದಲಿತರ, ಶ್ರಮಿಕರ ಅಸ್ತಿತ್ವಕ್ಕಾಗಿ ನಡೆದ ಕಾರ್ಮಿಕರ, ಪ್ರಾತಿನಿಧ್ಯ ಮತ್ತು ಘನತೆಗಾಗಿ ನಡೆದ ಮಹಿಳಾ ಸಂಕುಲದ ಹಾಗು ತಮ್ಮ ಮೂಲ ನೆಲೆಯನ್ನು ಸಂರಕ್ಷಿಸಿಕೊಳ್ಳಲು ಸಂಘರ್ಷದ ಹಾದಿ ಹಿಡಿದ ಬುಡಕಟ್ಟು ಸಮುದಾಯಗಳ ಹೋರಾಟಗಳು .

 ವರ್ತಮಾನದಲ್ಲಿ ಚಾರಿತ್ರಿಕ ಹಿನ್ನೋಟ

 ಸಮಕಾಲೀನ ಚರಿತ್ರೆಯ ಈ ಹಿನ್ನೋಟದೊಂದಿಗೆ ಕಳೆದ ಐದು ದಶಕಗಳ ಜನ ಚಳುವಳಿಗಳನ್ನು ಮತ್ತು ಹೋರಾಟಗಳನ್ನು ಮರುವಿಮರ್ಶೆಗೊಳಪಡಿಸುವ ತುರ್ತು ಈಗ ಎದುರಾಗಿದೆ. ಏಕೆಂದರೆ ಭಾರತ ಬದಲಾಗುತ್ತಿದೆ. ಪ್ರಗತಿ, ಅಭಿವೃದ್ಧಿ ಪಥಗಳನ್ನು ದಾಟಿ, ವಿಕಾಸದತ್ತ ಸಾಗಲು, ಆರ್ಥಿಕವಾಗಿ ವಿಶ್ವ ಮಾರುಕಟ್ಟೆಯಲ್ಲಿ ಅಗ್ರ ಶ್ರೇಣಿಯನ್ನು ಗಳಿಸಲು ತನ್ನ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುತ್ತಿದೆ. ಈ ನಡುವೆ ನವ ಉದಾರವಾದ ಮತ್ತು ಬಲಪಂಥೀಯ ಬಹುಸಂಖ್ಯಾವಾದದ ಪರಿಣಾಮವಾಗಿ ಸಾಮಾಜಿಕ ತಾರತಮ್ಯ, ಸಾಂಸ್ಕೃತಿಕ ಅನ್ಯೀಕರಣ (Othering), ಆರ್ಥಿಕ ಅಸಮಾನತೆ, ಮಹಿಳಾ-ಜಾತಿ ದೌರ್ಜನ್ಯ ಹಾಗೂ ಮತೀಯವಾದದ ವಿಭಜಕ ಪ್ರಕ್ರಿಯೆಗಳು ತೀವ್ರತೆ ಪಡೆದುಕೊಳ್ಳುತ್ತಿವೆ. ಈ ತಾರತಮ್ಯಗಳ ವಿರುದ್ಧ ಜನ ಚಳುವಳಿಗಳು ಹಲವು ದಿಕ್ಕುಗಳಲ್ಲಿ, ಆಯಾಮಗಳಲ್ಲಿ, ಸೈದ್ಧಾಂತಿಕ-ತಾತ್ವಿಕ ನೆಲೆಗಳಲ್ಲಿ ರೂಪುಗೊಂಡು ಕ್ರಿಯಾಶೀಲವಾಗಿವೆ.

 ಮೂಲ ಸಮಸ್ಯೆ ಇರುವುದು ಈ ಹೋರಾಟಗಳು ಕ್ರಮಿಸುತ್ತಿರುವ ಹಾದಿ ಮತ್ತು ಅನುಸರಿಸುತ್ತಿರುವ ತಾತ್ವಿಕ ಚಿಂತನಾ ವಾಹಿನಿಗಳ ವಿಭಿನ್ನತೆಗಳಲ್ಲಿ. ಇಲ್ಲಿ ಹೋರಾಟ ಮತ್ತು ಚಳುವಳಿಯ ನಡುವೆ ಇರುವ ಸೂಕ್ಷ್ಮ ಅಂತರವನ್ನು ಗ್ರಹಿಸುವುದು ವರ್ತಮಾನದ ತುರ್ತು.  ಹೋರಾಟಗಳು ಕಾಲಕಾಲಕ್ಕೆ ಜನಸಾಮಾನ್ಯರು ಎದುರಿಸುವ ಸಂಕಷ್ಟಗಳ ನಿವಾರಣೆಗಾಗಿ,  ನಾಗರಿಕ ಸೌಲಭ್ಯ-ಸೌಕರ್ಯಗಳಿಗಾಗಿ ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ರೂಪುಗೊಳ್ಳುತ್ತವೆ. ಉದ್ದೇಶ ಈಡೇರಿದ ಮರುಕ್ಷಣವೇ ಮತ್ತೊಂದು ಹೋರಾಟಕ್ಕೆ ಸಜ್ಜಾಗುವತ್ತ ಸಂಘಟನೆಗಳು ಯೋಚಿಸುತ್ತವೆ. ಈಡೇರದೆ ಹೋದರೆ ಹೋರಾಟಗಳು ತಿಂಗಳು-ವರ್ಷಗಳ ಕಾಲ ಮುಂದುವರೆಯುತ್ತವೆ. ದೆಹಲಿಯ ರೈತ ಮಷ್ಕರ ಇತ್ತೀಚಿನ ಒಂದು ಉದಾಹರಣೆ. ಇಲ್ಲಿ ಸಕ್ರಿಯವಾಗುವ ಸಂಘಟನೆಗಳು ವಿಭಿನ್ನ ತತ್ವ-ಸಿದ್ಧಾಂತಗಳ ನೆಲೆಯಲ್ಲಿ ಕಂಡರೂ, ಅಂತಿಮ ನ್ಯಾಯ ಸಾಧನೆಗಾಗಿ ಐಕ್ಯತೆಯನ್ನು ಅಪೇಕ್ಷಿಸುತ್ತವೆ, ಬಹುತೇಕ ಸಂದರ್ಭಗಳಲ್ಲಿ ಯಶಸ್ವಿಯಾಗುವುದೂ ಉಂಟು.

 ಆದರೆ ಚಳುವಳಿ ಎನ್ನುವುದು ಇಂತಹ ಹೋರಾಟಗಳ ಮಧ್ಯದಿಂದಲೇ ಇನ್ನೂ ಉನ್ನತ-ವಿಶಾಲ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ದೀರ್ಘಕಾಲಿಕ ಕಾರ್ಯಸೂಚಿಗಳನ್ನು ರೂಪಿಸಿಕೊಂಡು, ಚಲನಶೀಲ ಕ್ರಿಯಾಶೀಲ ನಿರಂತರತೆಯನ್ನು ಅಪೇಕ್ಷಿಸುತ್ತದೆ. ಇಲ್ಲಿ ಕವಿ ಸಿದ್ಧಲಿಂಗಯ್ಯ ಅವರ                       “ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ,,,,,”ಸಾಲುಗಳನ್ನು ಉಲ್ಲೇಖಿಸಬಹುದಾದರೆ, ಈ ಸಾವಿರಾರು ನದಿಗಳು ಸಾಧಿಸುವ ತಾತ್ಕಾಲಿಕ ಐಕ್ಯತೆ ಮತ್ತು ಐಕಮತ್ಯ ದೀರ್ಘಕಾಲೀನ ಏಕತೆಯಾಗಿ ಪರಿವರ್ತನೆಯಾಗದಿರುವುದನ್ನು ಇತಿಹಾಸದುದ್ದಕ್ಕೂ ಗುರುತಿಸಬಹುದು. ಈ ಏಕತೆ ಮತ್ತು ತತ್ವ ಸಿದ್ಧಾಂತಗಳನ್ನು ಮೀರಿದ ಐಕಮತ್ಯವನ್ನು ದೀರ್ಘಕಾಲ ಉಳಿಸಿಕೊಳ್ಳದೆ ಹೋದರೆ, ಚಳುವಳಿಗಳು ತಂತಾನೇ ಮುದುಡಿಹೋಗುತ್ತವೆ. ಐದು ದಶಕಗಳ ದಲಿತ-ಕಾರ್ಮಿಕ ಹೋರಾಟಗಳ ನಡುವೆ ಈ ರೀತಿ ಆಗಿರುವುದನ್ನು ಢಾಳಾಗಿ ಕಾಣಬಹುದು.                

ತತ್ವ ಸಿದ್ಧಾಂತ ಮತ್ತು ಅಸ್ಮಿತೆಗಳ ನಡುವೆ

ಭಾರತದ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ತಾತ್ವಿಕ ನೆಲೆಗಳಲ್ಲಿ ರೂಪುಗೊಳ್ಳುವ ಹೋರಾಟಗಳು ಮುಖ್ಯವಾಗಿ ಮಾರ್ಕ್ಸ್‌-ಅಂಬೇಡ್ಕರ್-ಲೋಹಿಯಾ-ಗಾಂಧಿ ವಿಚಾರಧಾರೆಗಳನ್ನು ಅವಲಂಬಿಸಿ ನಡೆಯುತ್ತವೆ. ಇಲ್ಲಿ ಕ್ರಿಯಾಶೀಲವಾಗುವ ಸಂಘಟನೆಗಳು ತಮ್ಮದೇ ಆದ ಸಾಂಘಿಕ ಅಸ್ತಿತ್ವ ಮತ್ತು ಸಾಂಸ್ಥಿಕ ಪ್ರಸ್ತುತತೆಗಾಗಿ ಶ್ರಮಿಸುತ್ತಲೇ ತಾತ್ಕಾಲಿಕವಾಗಿ ಸಿದ್ಧಾಂತಗಳನ್ನು ಬದಿಗೊತ್ತಿ ಇತರ ವಿಚಾರಧಾರೆಯ ಹೋರಾಟಗಳೊಡನೆ ಬೆರೆತು, ಸಮಾನ ಗುರಿಯತ್ತ ಸಾಗುತ್ತವೆ. ಈ ನಾಲ್ಕೂ ವಿಚಾರಧಾರೆಗಳ ಚೌಕಟ್ಟಿನಲ್ಲಿ ನೋಡಿದಾಗ, ಈ ಅಸ್ತಿತ್ವವಾದ ಮತ್ತು ಅಸ್ಮಿತೆಯ ವಾಂಛೆಗಳು ರಾಜಕೀಯ ಬೆಳವಣಿಗೆಗೂ, ಸಾಮಾಜಿಕ ಪ್ರಗತಿಗೂ, ಜನಸಂಘಟನೆಯ ಉದ್ದೇಶಗಳಿಗೂ ಪೂರಕವಾಗಿರುವುದರಿಂದ, ಕೆಲವೊಮ್ಮೆ ಇಲ್ಲಿ ಏರ್ಪಡುವ ಐಕ್ಯತೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಲೇ ವಿಘಟನೆಯತ್ತ ಸಾಗುವ ಸನ್ನಿವೇಶಗಳನ್ನೂ ನಾವು ಕಂಡಿದ್ದೇವೆ. ಇದು ಗುರಿತಲುಪುವ ಉದಾತ್ತ ಉದ್ದೇಶಗಳನ್ನು ವಿಫಲಗೊಳಿಸುವುದೂ ಉಂಟು.

 ಕಳೆದ ಐವತ್ತು ವರ್ಷಗಳಲ್ಲಿ ಮಹಿಳಾ ಹೋರಾಟ ಮತ್ತು ದಲಿತ ಹೋರಾಟಗಳಲ್ಲಿ, ದೀರ್ಘಕಾಲಿಕ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ಇದು ಕಾಲದ ಅನಿವಾರ್ಯತೆ ಹೌದಾದರೂ, ಭವಿಷ್ಯದ ಅವಶ್ಯಕತೆಯೂ ಹೌದು. ಆದರೆ ವಿಶೇಷವಾಗಿ ದಲಿತ ಹೋರಾಟಗಳನ್ನು ಗಮನಿಸುವಾಗ ಐದು ದಶಕಗಳಲ್ಲಿ ಐವತ್ತು ಹೋಳುಗಳಾಗಿ, ಮೂಲತಃ ಅಂಬೇಡ್ಕರ್‌ವಾದದಿಂದ ಪ್ರೇರಿತವಾದರೂ ಸಹ, ಸಾಂಘಿಕ ಅಸ್ತಿತ್ವಗಳ ಕಾರಣದಿಂದಲೇ ವಿಶಾಲ ಚಳುವಳಿಯನ್ನು ರೂಪಿಸುವಲ್ಲಿ ವಿಫಲವಾಗಿವೆ. ಈ ವಿಘಟನೆಯ ಪ್ರಕ್ರಿಯೆಗೆ ಇನ್ನೂ ವಿರಾಮ ಹಾಡಲಾಗಿಲ್ಲ ಎನ್ನುವುದನ್ನು ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಹೋರಾಟ ಮತ್ತು ಮಾದಿಗ ಸಮುದಾಯವನ್ನು ಪ್ರತಿನಿಧಿಸುವ ಕೆಲವು ಸಂಘಟನೆಗಳ ನಡವಳಿಕೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ದಲಿತ ಚಳುವಳಿಗಳಿಗೆ ವಿಘಟನೆಗೆ ತಾತ್ವಿಕ ಕಾರಣಗಳಿಗಿಂತಲೂ ಪ್ರಧಾನವಾಗಿ ಕಾಣುವುದು ಸಾಂಘಿಕ ಅಸ್ತಿತ್ವ-ಅಸ್ಮಿತೆ-ನಾಯಕತ್ವ ಮತ್ತು ದೂರಗಾಮಿ ರಾಜಕೀಯ ಉದ್ದೇಶಗಳು.

 ಕಾರ್ಮಿಕ ಹೋರಾಟಗಳಲ್ಲೂ ಇದೇ ಆಂತರಿಕ ವೈರುಧ್ಯಗಳನ್ನು ಗುರುತಿಸಬಹುದು. ಕಾಂಗ್ರೆಸ್ ನೇತೃತ್ವದ ಕಾರ್ಮಿಕ ಸಂಘಟನೆಯನ್ನು ಹೊರತುಪಡಿಸಿ, ಉಳಿದೆಲ್ಲವೂ ಸಹ ಮಾರ್ಕ್ಸ್‌ವಾದದಿಂದ ಪ್ರಭಾವಿತವಾಗಿವೆ.  ಇದರೊಳಗಿಂದ ಕವಲೊಡೆದ ಅಂಬೇಡ್ಕರ್‌ವಾದದ ಚಿಂತನೆಗಳು ಮೂಲತಃ ಸಾಮಾಜಿಕ ಘನತೆ ಮತ್ತು ಸಾಂವಿಧಾನಿಕ ಹಕ್ಕೊತ್ತಾಯಗಳಿಂದಾಚೆಗೆ, ವಿಶಾಲ ನೆಲೆಯ ಶ್ರಮಜೀವಿ ಕೇಂದ್ರಿತ ಹೋರಾಟಗಳನ್ನು ರೂಪಿಸಿಲ್ಲ. ಈ ಸಂಘಟನೆಗಳು ಬಹುತೇಕವಾಗಿ ಸಾರ್ವಜನಿಕ-ಖಾಸಗಿ ಕ್ಷೇತ್ರದ ಔದ್ಯಮಿಕ-ವಾಣಿಜ್ಯ ವಲಯಗಳಿಂದಾಚೆಗೆ ಸಕ್ರಿಯವಾಗಿಯೂ ಇಲ್ಲ. ಆದರೆ ಎಡಪಕ್ಷಗಳ ನೇತೃತ್ವದಲ್ಲಿರುವ ಕಾರ್ಮಿಕ ಸಂಘಟನೆಗಳು ಈ ಸಾಂಸ್ಥಿಕ ಚೌಕಟ್ಟುಗಳಿಂದಾಚೆಗೂ ವಿಸ್ತರಿಸಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯ ಮತ್ತು ಇತ್ತೀಚೆಗೆ ಐಟಿ ಕ್ಷೇತ್ರದ ಕಾರ್ಮಿಕರನ್ನೂ ಒಳಗೊಂಡಂತೆ ಹೋರಾಟಗಳನ್ನು ರೂಪಿಸಿವೆ.

ಭಾರತದ ಕಾರ್ಮಿಕ ಚಳುವಳಿಯಲ್ಲಿ ಶತಮಾನ ಪೂರೈಸಿರುವ ಎಡಪಂಥೀಯ ಸಂಘಟನೆಗಳು ಸರ್ಕಾರಗಳ ಆರ್ಥಿಕ ನೀತಿಗಳ ವಿರುದ್ಧ, ನೂತನ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ದುಡಿಯುವ ಜನರ ಉದ್ಯೋಗ, ಭದ್ರತೆ, ಯೋಗಕ್ಷೇಮ ಮತ್ತು ಸೌಲಭ್ಯಗಳಿಗಾಗಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಲೇ ಬಂದಿವೆ. ಈ ನೆಲೆಗಳಲ್ಲಿ ಒಂದು ಜಂಟಿ ವೇದಿಕೆಯ ಮೂಲಕ ಐಕಮತ್ಯ ಸಾಧಿಸಿ ಮುಷ್ಕರಗಳನ್ನು ನಡೆಸುವುದರಲ್ಲೂ ಯಶಸ್ಸು ಕಂಡಿವೆ. ಜುಲೈ 9ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರ ಒಂದು ನಿದರ್ಶನ. ಈ ಹೋರಾಟಗಳ ಒಂದು ಭಾಗವಾಗಿರುವ ಬ್ಯಾಂಕ್‌, ವಿಮೆ ಮತ್ತಿತರ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರಲ್ಲಿ, ರಾಜಕೀಯ ಪ್ರಜ್ಞೆಯನ್ನು ಬೆಳೆಸುವುದರಲ್ಲಿ ವಿಫಲವಾಗಿರುವುದನ್ನು ಗಮನಿಸಿದಾಗ, ಇದಕ್ಕೆ ಕಾರಣಗಳನ್ನೂ ಶೋಧಿಸಬೇಕಾಗುತ್ತದೆ. ಕಾರ್ಮಿಕ ಹೋರಾಟಗಳಲ್ಲಿ ಸಕ್ರಿಯವಾಗುವ ಶ್ರಮಿಕರು ಚುನಾವಣೆಗಳಲ್ಲಿ ಬೂರ್ಷ್ವಾ ಪಕ್ಷಗಳ, ಬಿಜೆಪಿಯಂತಹ ಬಲಪಂಥೀಯ ಪಕ್ಷಗಳ ಕಾಲಾಳುಗಳಂತೆ ದುಡಿಯುವ ವೈರುಧ್ಯವನ್ನೂ ಕಾಣುತ್ತಿದ್ದೇವೆ.

Siddaramaiah : ಸಾರ್ವಜನಿಕ ಸಭೆಯಲ್ಲಿ ಶಪಥ ಮಾಡಿದ ಸಿಎಂ ಸಿದ್ದರಾಮಯ್ಯ #pratidhvani

 ಐಕ್ಯತೆ ಐಕಮತ್ಯ ಮತ್ತು ಒಂದಾಗುವಿಕೆ

ಇಲ್ಲಿ ಐಕ್ಯತೆ ಮತ್ತು ಐಕಮತ್ಯಕ್ಕೂ, ಏಕತೆಗೂ ನಡುವೆ ಇರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ವಿವಿಧ ಎಡಪಕ್ಷಗಳು ತಾವೇ ನಿರ್ವಚಿಸಿಕೊಂಡ ಮಾರ್ಕ್ಸ್‌ವಾದ-ಲೆನಿನ್‌ವಾದದ ಸೈದ್ಧಾಂತಿಕ ವ್ಯಾಖ್ಯಾನಗಳು ಮತ್ತು ಅನುಸರಿಸಬೇಕಾದ ಹಾದಿಗಳು, ಮೂಲತಃ ಮಾರ್ಕ್ಸ್‌ವಾದಕ್ಕೆ ಬದ್ಧವಾಗಿದ್ದರೂ, ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಅನುಸರಿಸುವ ಹಾದಿಗಳು ಈ ಸಂಘಟನೆಗಳನ್ನು ಪರಸ್ಪರ ಅನ್ಯೀಕರಿಸುವ (Othering) ಪ್ರಕ್ರಿಯೆಗೆ ಈಡುಮಾಡಿವೆ. ರಾಜಕೀಯ ಪ್ರಜ್ಞೆ ಮುಖ್ಯವಾಗುವುದು ಇಲ್ಲಿಯೇ . ನವ ಉದಾರವಾದ ಮತ್ತು ಬಲಪಂಥೀಯ ಹಿಂದುತ್ವ ರಾಜಕಾರಣದ ವಿರುದ್ಧ ಒಂದು ನಿರ್ದಿಷ್ಟ ಆರ್ಥಿಕ ಪರ್ಯಾಯ ಮಾದರಿಯನ್ನು ನಿರ್ವಚಿಸುವಲ್ಲಿ ವಿಫಲವಾಗಿರುವ ಎಡಪಕ್ಷಗಳು, ತಮ್ಮ ವ್ಯಕ್ತಿಗತ ಕಾರ್ಮಿಕ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದಾದರೂ ಹೇಗೆ  ? ಈ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.

ಹಾಗಾಗಿಯೇ ಭಾರತದ ಕಾರ್ಮಿಕ ಹೋರಾಟಗಳು ಮೇಲ್ನೋಟಕ್ಕೆ ಒಂದೇ ಗುರಿಯತ್ತ ಸಾಗುವಂತೆ ಕಂಡರೂ, ಆಂತರಿಕವಾಗಿರುವ ಸೈದ್ಧಾಂತಿಕ ವಿರೊಧಾಭಾಸಗಳು ಮತ್ತು ವೈರುಧ್ಯಗಳು ಈ ಹೋರಾಟಗಳನ್ನು ಚಳುವಳಿಯನ್ನಾಗಿ ಪರಿವರ್ತಿಸಲು ತೊಡಕಾಗಿ ಪರಿಣಮಿಸಿವೆ. ಎಡಪಕ್ಷಗಳು ತಾವು ಕಟ್ಟಿಕೊಂಡು ಬಂದಿರುವ ಪಕ್ಷದ ಸಂರಚನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸುವುದೇ ಅಲ್ಲದೆ, ಇಲ್ಲಿ ಪ್ರಧಾನವಾಗಿ ಕಾಣುವ ಅಸ್ಮಿತೆ ಮತ್ತು ಅಸ್ತಿತ್ವದ ಕಾಣ್ಕೆಗಳು ಈ ಪಕ್ಷಗಳ ಸಮಗ್ರ ಐಕ್ಯತೆಯನ್ನು ಸಾಧ್ಯವಾಗದಂತೆ ಮಾಡಿವೆ. ಎಲ್ಲ ಎಡಪಕ್ಷಗಳೂ ವಿಸರ್ಜನೆಗೊಳಗಾಗಿ ಒಂದು ಪಕ್ಷ ಕಟ್ಟುವ ಕನಸು ಕಾಣುವುದು ಭ್ರಮೆ ಎನಿಸೀತು, ಆದರೂ ಡಿಜಿಟಲ್‌ ಆರ್ಥಿಕತೆ ಮತ್ತು ಬಲಪಂಥೀಯ ರಾಜಕಾರಣದ ಸಾಂಸ್ಕೃತಿಕ ದಾಳಿಯ ಹಿನ್ನೆಲೆಯಲ್ಲಿ, ತಮ್ಮ ವ್ಯಕ್ತಿಗತ ಅಸ್ಮಿತೆಗಳನ್ನು, ಅಡ್ಡಿಯಾಗಬಹುದಾದ ಸಾಂಘಿಕ ಹಿತಾಸಕ್ತಿ-ಪ್ರತಿಷ್ಠೆಗಳನ್ನು ಬದಿಗೊತ್ತಿ  ಒಂದು ಸಂಘಟಿತ ವೇದಿಕೆಯಾಗಿ ರೂಪುಗೊಳ್ಳುವುದು ಅಸಾಧ್ಯವೇನಲ್ಲ.

 ಹಲವು ಮಜಲುಗಳಿಂದ, ದಿಕ್ಕುಗಳಿಂದ, ವಿಭಿನ್ನ ಆಯಾಮಗಳಲ್ಲಿ ಶೋಷಣೆ,ಅಸಮಾನತೆ ಮತ್ತು ಅನ್ಯಾಯಗಳನ್ನು ಎದುರಿಸುತ್ತಿರುವ ಭಾರತದ  ತಳಸಮಾಜದ ಉಜ್ವಲ ಭವಿಷ್ಯಕ್ಕೆ ಹಾಗೂ ವರ್ತಮಾನದ ಜನವಿರೋಧಿ ಬಂಡವಾಳಶಾಹಿ-ಬಲಪಂಥೀಯ ರಾಜಕೀಯದ ವಿರುದ್ಧ ಹೋರಾಡುವುದಕ್ಕೆ ಅಗತ್ಯವಾದ ಬೌದ್ಧಿಕ ಸರಕುಗಳನ್ನು ಗಾಂಧಿ-ಅಂಬೇಡ್ಕರ್-ಲೋಹಿಯಾ-ಮಾರ್ಕ್ಸ್‌ ಮೊದಲಾದವರು ಬಿಟ್ಟುಹೋಗಿದ್ದಾರೆ. ದಲಿತ-ಮಹಿಳಾ ಚಳುವಳಿಯನ್ನೂ ಒಳಗೊಂಡಂತೆ ಎಲ್ಲ ಹೋರಾಟಗಳಿಗೂ ಈ ಸೈದ್ಧಾಂತಿಕ ಸ್ಪೂರ್ತಿಯೇ ಮೂಲ ಸೆಲೆಯಾಗಿದೆ. ಆದರೂ ಚಳುವಳಿಗಳು ಹೋರಾಟವಾಗಿ ರೂಪುಗೊಳ್ಳುವ ಒಂದು ಕ್ರಿಯಾಶೀಲ ಕಾರ್ಯಸೂಚಿ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಮಹಿಳಾ ಚಳುವಳಿಗಳು ಈ ನಿಟ್ಟಿನಲ್ಲಿ ಸಿದ್ಧಾಂತಗಳಿಂದಾಚೆಗೆ ಸಮಗ್ರ ಹೋರಾಟಗಳನ್ನು ರೂಪಿಸುವಲ್ಲಿ ಯಶಸ್ಸು ಕಾಣುತ್ತಿವೆ. ಏಕೆಂದರೆ ವಿಘಟಿತ ರೂಪದಲ್ಲಿದ್ದರೂ ಮಹಿಳಾ ಆಂದೋಲನಗಳು ಸಾಮೂಹಿಕ ನಾಯಕತ್ವದಲ್ಲಿ ಚಲನಶೀಲವಾಗಿವೆ.

 ಸಾಂಘಿಕ ನಾಯಕತ್ವದ ವೈರುಧ್ಯಗಳು

ಭಾರತದ ಸಾಮಾಜಿಕ ಹೋರಾಟಗಳು ನಿರಂತರ ವಿಘಟನೆಗೊಳಗಾಗುತ್ತಿರುವುದಕ್ಕೆ ಮೂಲ ಕಾರಣ ನಾಯಕತ್ವ ರೂಪುಗೊಳ್ಳುವ ಬಗೆ, ಅದನ್ನು ಕಾಪಿಟ್ಟುಕೊಳ್ಳುವ ಪರಿ ಮತ್ತು ಅದರ ಸುತ್ತ ಕಟ್ಟಲಾಗುವ ಆಪ್ತಕೂಟಗಳ (Coteries) ಪ್ರಭಾವ. ರೈತ ಹೋರಾಟಗಳು  ಆರಂಭದಲ್ಲಿ ಸ್ಪಷ್ಟ ಸೈದ್ಧಾಂತಿಕ ನೆಲೆಯಲ್ಲೇ ರೂಪುಗೊಂಡರೂ,  1980ರ ದಶಕದ ನಂತರದ ಅಧಿಕಾರ ರಾಜಕಾರಣ ಸೃಷ್ಟಿಸಿದ ದ್ವಂದ್ವಗಳ ನಡುವೆ ತಾತ್ವಿಕ ನೆಲೆಗಳಿಂದ ವಿಮುಖವಾಗತೊಡಗಿದವು. ಲೋಹಿಯಾವಾದದಿಂದಲೇ ಹೆಚ್ಚು ಪ್ರಭಾವಿತವಾದ ರೈತ ಹೋರಾಟಗಳು ಮಾರ್ಕ್ಸ್‌ವಾದಿ ತಾತ್ವಿಕ ನೆಲೆಗಳಿಗೆ ವಿಮುಖವಾದ ಕಾರಣ, ರೈತ ಎನ್ನುವುದು ಭೂಮಿ ಇರುವ ಅಥವಾ ಕೃಷಿಯನ್ನು ನಡೆಸುವ ಸಮಾಜಕ್ಕೆ ಸೀಮಿತವಾಯಿತು. ಭೂರಹಿತರು, ಕೃಷಿ ಕಾರ್ಮಿಕರು ಮತ್ತು ಕೃಷಿ ಅವಲಂಬಿತ ಶ್ರಮಿಕರು ಪ್ರಧಾನ ರೈತ ಹೋರಾಟಗಳ ಚೌಕಟ್ಟಿನಿಂದ ದೂರವೇ ಉಳಿಯುವಂತಾಯಿತು.

 ಹಾಗಾಗಿಯೇ ಒಂದು ವರ್ಷದ ಚಾರಿತ್ರಿಕ ರೈತ ಮುಷ್ಕರದ ಹೊರತಾಗಿಯೂ ಅಖಿಲ ಭಾರತ ಮಟ್ಟದ ರೈತ ಚಳುವಳಿಯೊಂದನ್ನು ದೂರಗಾಮಿ ದೃಷ್ಟಿಕೋನದಿಂದ ಕಟ್ಟಲು ಸಾಧ್ಯವಾಗಿಲ್ಲ. ದೆಹಲಿ ಮುಷ್ಕರವೂ ಸಹ ಕೃಷಿ ಭೂಮಿ ಇರುವ ರೈತರನ್ನೇ ಹೆಚ್ಚು ಒಳಗೊಂಡಿರುವ ಸೂಕ್ಷ್ಮವನ್ನೂ ಗಮನಿಸಬೇಕಿದೆ. ಕ್ರಮೇಣ ಲೋಹಿಯಾವಾದದ ಪ್ರಭಾವ ರೈತ ಹೋರಾಟಗಳಲ್ಲಿ ಉಳಿದಿದ್ದರೂ ಸಹ ಸೈದ್ಧಾಂತಿಕ ನೆಲೆಯಲ್ಲಿ ದುರ್ಬಲವಾಗುತ್ತಲೇ ಹೋಗಿದ್ದು ವಾಸ್ತವ. ಹಾಗಾಗಿಯೇ ಭಾರತದ ಕೃಷಿ , ಕೃಷಿಕ ಮತ್ತು ರೈತಾಪಿ ಸಮುದಾಯ ಇಂದು ಜಾಗತಿಕ ಬಂಡವಾಳದ ತೀವ್ರ ಹೊಡೆತದಿಂದ ನಲುಗುತ್ತಿದ್ದರೂ, ಹಸಿರು ಶಾಲುಗಳು ಈ ಶೋಷಿತ ಸಮುದಾಯಗಳನ್ನು ಸಮಗ್ರ ನೆಲೆಯಲ್ಲಿ ಪ್ರತಿನಿಧಿಸಿ ಚಳುವಳಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಾಯಕತ್ವ ಮತ್ತು ನಾಯಕತ್ವದ ವಿಘಟನೆಯೂ ಒಂದು ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು.

 ಇದರ ಇನ್ನೊಂದು ಆಯಾಮವನ್ನು ದಲಿತ ಚಳುವಳಿಯಲ್ಲೂ ಕಾಣಬಹುದು. ಆರಂಭದಲ್ಲಿ ಮಾರ್ಕ್ಸ್‌ವಾದದಿಂದ ಪ್ರಭಾವಿತರಾಗಿ, ಕ್ರಮೇಣ ನಿಧಾನವಾಗಿ ಲೋಹಿಯಾವಾದದ ಕಡೆಗೆ ಹೊರಳಿದ ದಲಿತ ಹೋರಾಟಗಳು, ಅಂಬೇಡ್ಕರ್‌ವಾದವು ಹೆಚ್ಚು ಪ್ರಚಲಿತವಾದ ತದನಂತರದಲ್ಲಿ ಎರಡೂ ಸಿದ್ಧಾಂತಗಳಿಂದ ವಿಮುಖವಾಗಿ, ಪ್ರತ್ಯೇಕತೆಯನ್ನು ಸ್ಥಾಪಿಸತೊಡಗಿದವು. ಈ ಮೂರೂ ಚಿಂತಕರ ಅನುಸಂಧಾನ ಮಾಡುವುದರ ಬದಲು ಮುಖಾಮುಖಿಯಾಗಿಸುವ ಮೂಲಕ ಹೋರಾಟದ ಚಹರೆಗಳೂ ಭಿನ್ನವಾದವು. ಹೋರಾಟದ ಹಾದಿಗಳೂ ಹಲವು ಕವಲುಗಳಾಗಿ ಒಡೆದವು. ತತ್ಪರಿಣಾಮವಾಗಿ ಕರ್ನಾಟಕದಲ್ಲಿ ಅಂಬೇಡ್ಕರ್‌ವಾದದ ಮೂಸೆಯಲ್ಲೇ ದಲಿತ ಹೋರಾಟಗಳು ಇಂದಿಗೂ ವಿಘಟಿತವಾಗುತ್ತಿವೆ. ಇತ್ತೀಚೆಗೆ ಉಡುಪಿಯಲ್ಲಿ ಹೊಸ ಬಣವೊಂದು ಹುಟ್ಟಿಕೊಂಡಿರುವುದನ್ನು ಸ್ಮರಿಸಬಹುದು. ನಿರ್ದಿಷ್ಟ ವಿಷಯಗಳಲ್ಲಿ, ಭಾವನಾತ್ಮಕ ವಿಚಾರಗಳಲ್ಲಿ ಐಕ್ಯತೆ ಸಾಧಿಸುವ ಈ ದಲಿತ ಸಂಘಟನೆಗಳಿಗೆ ಏಕೀಕರಣಗೊಳ್ಳುವ ಇರಾದೆಯಾಗಲೀ, ದೃಢ ನಿಶ್ಚಯವಾಗಲೀ ಇದ್ದಂತೆ ಕಾಣುವುದಿಲ್ಲ. ʼನೈಜ ಅಂಬೇಡ್ಕರ್‌ ಅನುಯಾಯಿʼ ಎಂಬ ಆತ್ಮರತದ ವ್ಯಾಖ್ಯಾನದಡಿ ದಲಿತ ಹೋರಾಟಗಳು ಛಿದ್ರವಾಗುತ್ತಲೇ ಇವೆ.

 ನಾಯಕತ್ವದ ವಿಶ್ವಾಸಾರ್ಹತೆ ಮತ್ತು ಅಸ್ತಿತ್ವ

ದಲಿತ ಹಾಗೂ ರೈತ ಹೋರಾಟಗಳ ತಾತ್ವಿಕ ವೈಫಲ್ಯ ಮತ್ತು ವಿಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಸಾಂಘಿಕ ನಾಯಕತ್ವ ಮತ್ತು ಅದರ ಸುತ್ತಲಿನ ಬೆಂಬಲಿಗರ ಆಪ್ತಕೂಟಗಳ (Coteries) ಪ್ರಭಾವ ದಟ್ಟವಾಗಿ ಕಾಣುತ್ತದೆ. ವಿಶೇಷವಾಗಿ ದಲಿತ ಚಳುವಳಿಯ ಚರಿತ್ರೆಯಲ್ಲಿ ನಾಯಕತ್ವ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದು, ಪ್ರತಿಯೊಂದು ದಲಿತ ಬಣದ ನಾಯಕರೂ ತಮ್ಮ ಸುತ್ತಲಿನ ಕಾರ್ಯಕರ್ತರಿಂದ ವ್ಯಕ್ತಿನಿಷ್ಠೆಯನ್ನು ಹೆಚ್ಚಾಗಿ ಅಪೇಕ್ಷಿಸುತ್ತಾರೆ. ಇಲ್ಲಿ ಆಂತರಿಕವಾಗಿ ಮೂಡುವ ಭಿನ್ನಮತ, ಭಿನ್ನಾಭಿಪ್ರಾಯಗಳು ಮತ್ತೊಂದು ಬಣ ಸೃಷ್ಟಿಯಾಗಲು ಕಾರಣವಾಗುತ್ತವೆ. ಇದಕ್ಕೆ ಕಾರಣವೇನು ? ಯಾವುದೇ ಸಾಮಾಜಿಕ ಹೋರಾಟಗಳಲ್ಲಿ ನಾಯಕತ್ವ ಅಥವಾ ಮುಂದಾಳತ್ವ ವಹಿಸಿಕೊಳ್ಳುವವರು, ತಮ್ಮನ್ನು ಚಳುವಳಿಯ ಒಂದು ಭಾಗ ಎಂಬ ಜವಾಬ್ದಾರಿಯುತ ಅರಿವನ್ನು ಹೊಂದಿರಬೇಕು. ತಮ್ಮಿಂದಲೇ ಚಳುವಳಿ ಎಂಬ ಮನೋಭಾವ ಸಹಜವಾಗಿಯೇ ಅನ್ಯೀಕರಣಕ್ಕೆ (Otherinģ) ಪ್ರತ್ಯೇಕತೆ, ನಿರ್ಲಕ್ಷಿತ ಭಾವನೆಗಳಿಗೆ,  ಎಡೆಮಾಡಿಕೊಡುತ್ತದೆ.

 ನಾಯಕರಾದವರು ತಮ್ಮ ಬೆಂಬಲಿಗರ ಮೇಲೆ ಊಳಿಗಮಾನ್ಯ ಮಾದರಿಯ ಯಜಮಾನಿಕೆ ಸ್ಥಾಪಿಸುವುದಕ್ಕಿಂತಲೂ, ಎಲ್ಲರನ್ನೂ ಒಳಗೊಳ್ಳುವ ಮಾದರಿ ಅನುಸರಿಸಬೇಕು. ʼ ಚಳುವಳಿಯಿಂದ ನಾನು ʼ ಅಥವಾ ʼ ಹೋರಾಟದ ನಿಮಿತ್ತ ನನ್ನ ಅಸ್ತಿತ್ವ ʼ ಎಂಬ ಪ್ರಜಾಸತ್ತಾತ್ಮಕ ಮನೋಭಾವ ಇಲ್ಲಿ ಮುಖ್ಯವಾಗುತ್ತದೆ. ಇದಕ್ಕೆ ಡಾ. ಅಂಬೇಡ್ಕರ್‌ ಅವರೇ ಅತ್ಯುತ್ತಮ ಆದರ್ಶ ಮಾದರಿಯಾಗಿ ನಮಗೆ ಕಾಣುತ್ತಾರೆ. ಆದರೆ ದಲಿತ ಚಳುವಳಿಗಳಲ್ಲಿ ಈ ಅರಿವಿನ ಕೊರತೆ ಇದೆ. ಹಾಗಾಗಿಯೇ ಎರಡನೆ ಹಂತದ ನಾಯಕತ್ವ ಬೆಳೆಯುತ್ತಿಲ್ಲ / ಬೆಳೆಯಲಾಗುವುದಿಲ್ಲ. ನಾಯಕತ್ವದ ಆಕಾಂಕ್ಷೆಗಳು ವಿಘಟಿತ ಬಣಗಳಿಗೆ ಕಾರಣವಾಗುತ್ತವೆ. ಬಹುತೇಕವಾಗಿ ಎಡಪಕ್ಷಗಳಲ್ಲೂ, ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲೂ ಇದೇ ಕೊರತೆ ಕಾಣಬಹುದು. ಇದು ʼ ಶಾಶ್ವತ ನಾಯಕತ್ವಗಳನ್ನುʼ (Eternal Leadership) ಸೃಷ್ಟಿಸುವುದರಿಂದಲೇ, ಸೈದ್ಧಾಂತಿಕ ಬದ್ಧತೆ ಇರುವ ಕಾರ್ಯಕರ್ತರೊಳಗೇ ಅಸಮಾಧಾನಗಳು ಹೆಚ್ಚಾಗುತ್ತಾ, ಪ್ರತ್ಯೇಕತೆಯ ಭಾವನೆ ಹೆಚ್ಚಾಗಿ, ವಿಘಟನೆಗೆ ಚಾಲನೆ ನೀಡುತ್ತವೆ.

DK Shivakumar :  ನವೆಂಬರ್‌ ನಲ್ಲಿ ಡಿಕೆಶಿ ಸಿಎಂ ಸ್ಥಾನಕ್ಕೆ ಅಪಶಕುನ..? #pratidhvani

 ಈ ಹಂತದಲ್ಲಿ ಎಲ್ಲ ಸಾಮಾಜಿಕ ಹೋರಾಟಗಳೂ ಸಹ ʼ ಚಳುವಳಿ ಮತ್ತು ಹೋರಾಟ ʼಗಳ ನಡುವಿನ ವ್ಯತ್ಯಾಸ ಮತ್ತು ವೈರುಧ್ಯಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ವಿಕಲ್ಪಗಳ ಕಾರಣದಿಂದಲೇ ಕರ್ನಾಟಕ ದಲಿತ-ರೈತ-ಭಾಷಾ-ಕಾರ್ಮಿಕ- ಹಕ್ಕೊತ್ತಾಯಗಳ ಹೋರಾಟಗಳು ಐದು ದಶಕಗಳಿಂದ ನಿರಂತರವಾಗಿ ಚಲನಶೀಲತೆಯನ್ನು ಉಳಿಸಿಕೊಂಡು ಬಂದಿದ್ದರೂ, ಯಾವುದೇ ನೆಲೆಯಲ್ಲಿ ಸಮಗ್ರ ನೆಲೆಯ ಅಥವಾ ಅಖಂಡ ರೂಪದ ʼ ಚಳುವಳಿಯಾಗಿ ರೂಪುಗೊಂಡಿಲ್ಲ. ಇಂದು ಸಂವಿಧಾನ ರಕ್ಷಣೆಯ ಕೂಗು ಭೂಮ್ಯಾಕಾಶಗಳನ್ನು ಒಂದು ಮಾಡಿದ್ದರೂ, ಸಂವಿಧಾನದ ಮೂಲ ಆಶಯವಾದ ʼ ಸಮನ್ವಯ ʼ ಮತ್ತು ʼ ಸಮಾನ ಅವಕಾಶಗಳ ʼ , ʼ ಲಿಂಗ ಸಮಾನತೆಯʼ  ಮೌಲ್ಯಗಳನ್ನು ಸಂಘಟನೆಗಳ ನೆಲೆಯಲ್ಲೇ ಕಾಣಲಾಗುತ್ತಿಲ್ಲ. ಇದು ದಲಿತರ, ಎಡಪಕ್ಷಗಳ, ಕಾರ್ಮಿಕರ-ಕಾರ್ಮಿಕ ಸಂಘಟನೆಗಳ ಐಕ್ಯತೆಗೆ ಬಹುದೊಡ್ಡ ತಡೆಗೋಡೆಯಾಗಿ ಪರಿಣಮಿಸುತ್ತಿದೆ.  ಹೋರಾಟಗಳ ಯಶಸ್ಸು, ಚಳುವಳಿಯ ದೀರ್ಘಕಾಲೀನ ಯಶಸ್ಸಿನ ಮೆಟ್ಟಿಲುಗಳಾಗುತ್ತವೆಯೇ ಹೊರತು, ಅದು ಬುನಾದಿ ಆಗುವುದಿಲ್ಲ.

 ಬುನಾದಿಯಾಗುವುದು ಕಾರ್ಯಕರ್ತರು, ಚಳುವಳಿಯ ಸೈದ್ಧಾಂತಿಕ ಅಡಿಪಾಯ, ತಾತ್ವಿಕ ನೆಲೆಗಟ್ಟು ಮತ್ತು ನಿರಂತರ ಹೋರಾಟಗಳ ಮೂಲಕ ಪಡೆಯಲಾಗುವ ಅನುಭವಾತ್ಮಕ ಅರಿವು, ಅನುಭಾವಾತ್ಮಕ ಜ್ಞಾನ ಹಾಗೂ ಅಂತಿಮ ಗುರಿಯ ಬಗ್ಗೆ ತಾತ್ವಿಕ ನಿಷ್ಠೆ. ಈ ವಿಚಾರಗಳನ್ನು ಸಣ್ಣ ಸಣ್ಣ ಅಧ್ಯಯನ ಶಿಬಿರಗಳ ಮೂಲಕ ಕಾರ್ಯಕರ್ತರ ನಡುವೆ ಹರಡುವುದು ಯಾವುದೇ ಸಂಘಟನೆಯ ಪ್ರಥಮ ಆದ್ಯತೆಯಾಗಬೇಕು. ಗತ ಹೋರಾಟಗಳ ಯಶಸ್ಸುಗಳನ್ನು ವೈಭವೀಕರಿಸುವ ಅಥವಾ ಹಿಂದಿನ ನಾಯಕತ್ವವನ್ನು ಎತ್ತರಕ್ಕೇರಿಸುವ ಪ್ರಯತ್ನಗಳಿಗಿಂತಲೂ, ವರ್ತಮಾನಕ್ಕೆ ಅಗತ್‌ಯವಾದ ಪರ್ಯಾಯ ಮಾರ್ಗಗಳನ್ನು, ತಾವು ಅನುಸರಿಸುವ ಸೈದ್ಧಾಂತಿಕ ಚೌಕಟ್ಟಿನ ಒಳಗೇ ನಿರ್ವಚಿಸುವುದು ಈ ಶಿಬಿರಗಳ ಕಾರ್ಯಸೂಚಿಯಾಗಬೇಕು. ತತ್ವ ಸಿದ್ಧಾಂತಗಳನ್ನು ಗ್ರಾಂಥಿಕವಾಗಿ ತೆರೆದಿಡುವ ಬದಲು, ವರ್ತಮಾನದ ಯುವ ಸಮೂಹಕ್ಕೆ (ವಿಶೇಷವಾಗಿ ಮಿಲೆನಿಯಂ ಮಕ್ಕಳಿಗೆ) ಅರ್ಥವಾಗುವಂತೆ ಸಮಕಾಲೀನ ನಿದರ್ಶನಗಳ ಮೂಲಕ, ಆಗುಹೋಗುಗಳ ಮೂಲಕ, ಸ್ಥಿತಿಗತಿಗಳ ಮೂಲಕ ವಿಷದೀಕರಿಸುವುದು ಈ ಶಿಬಿರಗಳ ಪಠ್ಯಕ್ರಮಗಳಾಗಬೇಕು.

 ಅಲ್ಲಿಂದ ಹೊರಬರುವ ಕ್ರಿಯಾಶೀಲ ಮನಸ್ಸುಗಳು ಭವಿಷ್ಯದಲ್ಲಿ ಹೋರಾಟಗಳನ್ನು ಮುನ್ನಡೆಸುವ, ಚಳುವಳಿಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಾರೆ. ಆತ್ಮಾವಲೋಕನ ಮತ್ತು ಸ್ವ-ವಿಮರ್ಶಾತ್ಮಕ ಚಿಂತನೆಗಳನ್ನು ತಮ್ಮೊಳಗೆ ಅಳವಡಿಸಿಕೊಳ್ಳುವುದು ಪ್ರತಿಯೊಂದು ಜನರ ಸಂಘಟನೆಯ ಆದ್ಯತೆಯಾದಾಗ ಮಾತ್ರವೇ ಇದು ಸಾಧ್ಯ. ಆದರೆ ಇದು ವರ್ತಮಾನದ ತುರ್ತು, ಭವಿಷ್ಯದ ಅನಿವಾರ್ಯ ಅವಶ್ಯಕತೆ.

 ಹೀಗೆ ಯೋಚಿಸೋಣವೇ ?

-೦-೦-೦-೦-

Tags: #leadershipfailure and inspirationfuture of indiagandhi and his movementsgeneral people stories and their inspirationimpact of quit india movementleaders and role modelsleadershipmahatma gandhi and the nationalistsocial life of a migrantsteve biko and the black consciousness movementstories of inspirationstories of normal peoplestories of struggles & successthe power of not reactingthe social factorwhat is leadership
Previous Post

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Next Post

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

June 17, 2025
ನಟಿ ರಚಿತಾ ರಾಮ್‌ ವಿರುದ್ದ ದೂರು ಕೊಟ್ಟ ನಟ ಶ್ರೀನಗರ ಕಿಟ್ಟಿ & ನಾಗಶೇಖರ್..!

ನಟಿ ರಚಿತಾ ರಾಮ್‌ ವಿರುದ್ದ ದೂರು ಕೊಟ್ಟ ನಟ ಶ್ರೀನಗರ ಕಿಟ್ಟಿ & ನಾಗಶೇಖರ್..!

June 17, 2025
Next Post
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Top Story

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
June 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada