ಹಾವೇರಿ : ಮಿನಿ ಟೆಕ್ಸ್ ಟೈಲ್ ಪಾರ್ಕ್ ನ್ನು ಹುಲಗೂರಿನಲ್ಲಿ ಇದೇ ವರ್ಷ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿ ಜಿಲ್ಲೆಯ ಹುಲಗೂರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮತನಾಡಿದ ಅವರು, ಹುಲಗೂರ ಗ್ರಾಮ ಅತಿಹೆಚ್ಚು ಜನಸಂಖ್ಯೆ ಇರುವ ಪ್ರದೇಶ, ಶಿಗ್ಗಾಂವಿ, ಸವಣೂರು ಮತ್ತು ಕುಂದಗೋಳ ತಾಲ್ಲೂಕಿನ ಮಧ್ಯವರ್ತಿ ಸ್ಥಳವಾಗಿದ್ದು, ಈ ಭಾಗದ ರೈತರು, ವ್ಯಾಪರಗಳಿಗೆ ಪ್ರಮುಖ ಕೇಂದ್ರವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಭಾಗದ ಸೊಸೈಟಿ, ಕೆಸಿಸಿ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತಿದ್ದು, ಇಲ್ಲಿನ ರೈತರಿಗೆ ಸಾಲ ಸೌಲಭ್ಯ ನೀಡುತ್ತಿರುವುದು ಅಭಿನಂದನೀಯ. ಅಲ್ಪಸಂಖ್ಯಾತರು ಹೆಚ್ಚಿರುವ ಈ ಪ್ರದೇಶದಲ್ಲಿ ಉರ್ದು ಶಾಲೆ ಅಭಿವೃದ್ಧಿಗೊಳಿಸಲಾಗಿದೆ.ಹುಲಗೂರಿನಲ್ಲಿ 30 ಹಾಸಿಗೆಯ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಹುಲಗೂರ ಬಸ್ ನಿಲ್ದಾಣ ಮಾಡಲಾಗಿದೆ. ಹುಲಗೂರು ಸಂಪರ್ಕಿಸುವ ರಸ್ತೆ ನಿರ್ಮಾಣ, ವಾಲ್ಮೀಕಿ ಭವನ, ಅಂಬೇಡ್ಕರ್ ಭವನ, ನಿರ್ಮಿಸಲಾಗುತ್ತಿದೆ ಎಂದರು.