ಹುಬ್ಬಳ್ಳಿ: ರಾಜ್ಯ ಭಾಜಪ ಪಕ್ಷದ್ದು ನರೇಂದ್ರ ಮೋದಿ ಸಂಸ್ಕೃತಿ. ಭಾರತವನ್ನು ಸಶಕ್ತ, ಸಮೃದ್ಧವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾ ನಂತರ 75 ವರ್ಷಗಳ ನಂತರ ಅವಕಾಶ ದೊರಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಪ್ರಧಾನಿ ಮೋದಿಯವರು ಅಮೃತ ಕಾಲವನ್ನು ಕರ್ತವ್ಯ ಕಾಲ ಎಂದು ಕರೆದಿದ್ದು, ಕರ್ತವ್ಯದ ಮುಖಾಂತರ ಭಾರತವನ್ನು ವಿಶ್ವದಲ್ಲಿ ಸರ್ವಶ್ರೇಷ್ಠ ಮಾಡುವ ಧ್ಯೇಯವನ್ನಿಟ್ಟುಕೊಂಡು ಆಡಳಿತ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಲಕ್ಕುಂಡಿ ಜಗತ್ಪ್ರಸಿದ್ಧವಾದ ಐತಿಹಾಸಿಕ ಸ್ಥಳ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಲಕ್ಕುಂಡಿ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆಯೂ ಸರ್ಕಾರ ಈ ತೀರ್ಮಾನ ಕೈಗೊಂಡಾಗಲೂ ತನ್ನ ಹೆಸರನ್ನು ವಿಮಾನನಿಲ್ದಾಣಕ್ಕೆ ಸೂಚಿಸುವುದು ಬೇಡ ಎಂದಿದ್ದರು. ಇತ್ತೀಚೆಗಿನ ಶಿವಮೊಗ್ಗ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರಿಂದ ಈ ಬಗ್ಗೆ ಒತ್ತಡ ಬಂದಿದೆ. ಈ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು ಎಂದರು.