• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಮತೋಲನದ ಭಾವ-ಮಾರುಕಟ್ಟೆಯ ಪ್ರಭಾವ: ಪ್ರಗತಿ-ಅಭಿವೃದ್ಧಿಯ ವ್ಯಾಖ್ಯಾನವು ಕಾರ್ಪೋರೇಟ್‌ ಸುಳಿಯಲ್ಲಿರುವುದನ್ನು ರಾಜ್ಯ ಬಜೆಟ್‌ ಸೂಚಿಸುತ್ತದೆ

ನಾ ದಿವಾಕರ by ನಾ ದಿವಾಕರ
February 18, 2024
in ಅಂಕಣ, ವಾಣಿಜ್ಯ
0
ರಾಜ್ಯ ಬಜೆಟ್ : ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಿದ್ದರಾಮಯ್ಯ
Share on WhatsAppShare on FacebookShare on Telegram

ನಾ ದಿವಾಕರ
ಸಮಕಾಲೀನ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನವ ಉದಾರವಾದದ ಬಂಡವಾಳಶಾಹಿ ಪ್ರವೃತ್ತಿಯು ಆಳವಾಗಿ ಬೇರೂರುತ್ತಿದ್ದು, ಆಡಳಿತಾರೂಢ ಸರ್ಕಾರಗಳ ಆಡಳಿತ ನೀತಿಗಳನ್ನು ನಿರ್ದೇಶಿಸುವಂತೆಯೇ ಆರ್ಥಿಕ ನೀತಿಗಳನ್ನೂ, ಅರ್ಥವ್ಯವಸ್ಥೆಯ ಮೂಲ ಸಂರಚನೆಗಳನ್ನೂ ಕಾರ್ಪೋರೇಟ್‌ ಮಾರುಕಟ್ಟೆಯ ಆಯ್ಕೆಗಳೇ ನಿರ್ದೇಶಿಸುತ್ತವೆ. ತಳಸಮಾಜದ ಬೇಕು-ಬೇಡಗಳಿಗೆ, ಆಗ್ರಹ-ಹಕ್ಕೊತ್ತಾಯಗಳಿಗೆ ಸ್ಪಂದಿಸುವ ಸಲುವಾಗಿ ಜನಕಲ್ಯಾಣ ಯೋಜನೆಗಳ ಕಡೆ ಮತ್ತೆ ಮತ್ತೆ ಹೊರಳುವ ಆಳ್ವಿಕೆಯ ನೀತಿಗಳ ನಡುವೆಯೇ ಹಂತಹಂತವಾಗಿ ಕ್ಷೀಣಿಸುತ್ತಿರುವ ಸಮಾಜವಾದದ ಆಶಯಗಳು ಮೂಲೆಗುಂಪಾಗುತ್ತಿರುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ತಮ್ಮ ವಾರ್ಷಿಕ ಬಜೆಟ್‌ಗಳ ಮೂಲಕ
ತಳಸಮಾಜದ ಉದ್ದೇಶಿತ ಜನತೆಯನ್ನು ತಲುಪಲು ಸರ್ವಪ್ರಯತ್ನಗಳನ್ನೂ ಮಾಡುವ ಬಂಡವಾಳಿಗ ಸರ್ಕಾರಗಳಿಗೆ, ಕಾರ್ಪೊರೇಟ್‌ ಮಾರುಕಟ್ಟೆ ವರ್ಧನೆಯೇ ʼ ಪ್ರಗತಿ ಅಥವಾ ಅಭಿವೃದ್ಧಿʼ ಎಂಬ ಭ್ರಮೆ ಆವರಿಸಿರುವುದು ಸ್ಪಷ್ಟ.

ಈ ಭ್ರಮೆಯನ್ನು ಯಥಾಸ್ಥಿತಿಯಲ್ಲಿರಿಸಲು ಗ್ಯಾರಂಟಿ ಯೋಜನೆಗಳು ಅಥವಾ ಜನಕಲ್ಯಾಣ ನೀತಿಗಳು ಮೇಲ್‌ ಹೊದಿಕೆಯಾಗಿ ಪರಿಣಮಿಸುತ್ತವೆ. ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಮಂಡಿಸುವ ವಾರ್ಷಿಕ ಬಜೆಟ್‌ಗಳು ಈ ಹೊದಿಕೆಯ ವಿತ್ತೀಯ ರೂಪ ಎನ್ನಬಹುದು. ತಳಮಟ್ಟದ ಸಮಾಜದಲ್ಲಿ ತಮ್ಮ ದುಡಿಮೆಯನ್ನೇ ಅವಲಂಬಿಸಿ ಬದುಕುವ ಕೋಟ್ಯಂತರ ಜನತೆಗೆ ಈ ಹೊದಿಕೆಯ ಹಿಂದಿರುವ ಕರಾಳ ಮಾರುಕಟ್ಟೆಯ ಬಗ್ಗೆ ಗಮನ ಇರುವುದಿಲ್ಲ. ಮೇಲ್ಪದರದ ಸಮಾಜವನ್ನು ಪ್ರತಿನಿಧಿಸುವ ಹಿತವಲಯದ ಜನತೆಗೆ ಈ ಮಾರುಕಟ್ಟೆಯೇ ಪ್ರಧಾನವಾಗಿರುತ್ತದೆ. ಇವೆರಡರ ನಡುವೆ ಚುನಾವಣೆಗಳಲ್ಲಿ ಪ್ರಧಾನ ಪಾತ್ರ ವಹಿಸುವ ಮಧ್ಯಮ ವರ್ಗಗಳಿಗೆ ಜನಕಲ್ಯಾಣ ಯೋಜನೆಗಳು ಮತ್ತು ಬಜೆಟ್‌ ಮೂಲಕ ಒದಗಿಸಲಾಗುವ ಸವಲತ್ತುಗಳು ಹೆಚ್ಚು ಅಪ್ಯಾಯಮಾನವಾಗಿ ಕಾಣುತ್ತವೆ. ಈ ಜಿಜ್ಞಾಸಾಪೂರ್ವಕ ಸನ್ನಿವೇಶದಲ್ಲಿ ಅರ್ಥಶಾಸ್ತ್ರಜ್ಞರ ವಿಶ್ಲೇಷಣೆಗಳು ನಗಣ್ಯವಾಗುವುದು ಇತ್ತೀಚಿನ ಒಂದು ವಿದ್ಯಮಾನ.

ADVERTISEMENT

ಬಜೆಟ್‌ ಎಂಬ ವಾರ್ಷಿಕ ಪ್ರಹಸನ
ಸಾಮಾನ್ಯವಾಗಿ ರಾಜ್ಯ ಬಜೆಟ್‌ಗಳಲ್ಲಿ ಪ್ರಾದೇಶಿಕ-ಸಾಮುದಾಯಿಕ ಹಾಗೂ ಸಾಮಾಜಿಕ ಸಮತೋಲನ ಪ್ರಮುಖ ಅಂಶಗಳಾಗಿರುತ್ತವೆ. ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಹೊಸ ಬಂಡವಾಳ ಹೂಡಿಕೆಯಷ್ಟೇ ಅಲ್ಲದೆ ಉದ್ಯೋಗ ಸೃಷ್ಟಿಸುವ ಔದ್ಯೋಗಿಕ ಬೆಳವಣಿಗೆ ಹಾಗೂ ಮೂಲ ಸೌಕರ್ಯಗಳ ವೃದ್ಧಿಯೂ ಮುಖ್ಯವಾಗುತ್ತವೆ. ರಾಜ್ಯ ಸರ್ಕಾರಗಳು ವಾರ್ಷಿಕ ಬಜೆಟ್‌ಗಳ ಮೂಲಕ ಒದಗಿಸುವ ಅನುದಾನ ಮತ್ತು ಹಂಚುವ ಸಂಪನ್ಮೂಲಗಳು ಈ
ಪ್ರದೇಶಗಳ ಸಾಮಾಜಿಕ ಸಮತೋಲನವನ್ನೂ ಕಾಪಾಡುವಂತೆ ಎಚ್ಚರವಹಿಸಬೇಕಾಗುತ್ತದೆ. ಇದರ ಹೊರತಾಗಿ ಆರ್ಥಿಕವಾಗಿ ಹಿಂದುಳಿದಿರುವ ತಳಸಮಾಜವನ್ನು ಕೊಂಚಮಟ್ಟಿಗಾದರೂ ಮೇಲೆತ್ತುವ ನಿಟ್ಟಿನಲ್ಲಿ ಸರ್ಕಾರಗಳು ಸಂಪನ್ಮೂಲಗಳನ್ನು ವಿತರಿಸಬೇಕಾಗುತ್ತದೆ. ಈ ಸಮತೋಲನದ ಕಸರತ್ತು ನಡೆಸುತ್ತಲೇ ಕಾರ್ಪೋರೇಟ್‌ ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡುವುದು, ಮಾರುಕಟ್ಟೆ ಶಕ್ತಿಗಳನ್ನು ಓಲೈಸುವುದು ಸರ್ಕಾರದ ಆದ್ಯತೆಯಾಗಿರುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2024-25ರ ರಾಜ್ಯ ಬಜೆಟ್‌ ಈ ಎಲ್ಲ ಅಂಶಗಳನ್ನೂ ಸಮತೂಕದಿಂದ ಪರಿಗಣಿಸುವ ಒಂದು ಪ್ರಯತ್ನವಾಗಿ ತೋರುತ್ತದೆ. ಕಳೆದ ವರ್ಷ ಜಾರಿಗೊಳಿಸಿದ ಐದು ಗ್ಯಾರಂಟಿಗಳನ್ನು ಮುಂದುವರೆಸುತ್ತಲೇ , ಕೇಂದ್ರ ಸರ್ಕಾರದ ಅಸಹಕಾರದ ಹೊರತಾಗಿಯೂ, ರಾಜ್ಯದ ಜನತೆ ಎದುರಿಸುತ್ತಿರುವ ಜಲಕ್ಷಾಮ, ಬರಗಾಲ, ನಿರುದ್ಯೋಗ, ಔದ್ಯೋಗಿಕ ಕುಸಿತ ಮತ್ತು ಸಾಮಾಜಿಕ ಕ್ಷೋಭೆಯನ್ನು ಸರಿದೂಗಿಸುವ ಒಂದು ಪ್ರಯತ್ನವನ್ನು ಸಿದ್ಧರಾಮಯ್ಯ ಮಾಡಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಬಜೆಟ್‌ ಮಂಡನೆಯಲ್ಲಿ ಕಾಣುವ ಅಂಕಿಅಂಶಗಳು ಬಿಂಬಿಸುವ ಆಶಯಗಳಿಗೂ ತಳಮಟ್ಟದ ಅನುಷ್ಟಾನದಲ್ಲಿ ಜನಸಾಮಾನ್ಯರು ಕಾಣಬಹುದಾದ ಆಡಳಿತ ವ್ಯವಸ್ಥೆಯ ನಿದರ್ಶನಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಗಮನಿಸದೆ ಹೋದರೆ ಬಹುಶಃ ಬಜೆಟ್‌ಗಳೇ ಪಕ್ಷ-ಸರ್ಕಾರದ ಸಾಧನೆಗಳ ಪ್ರಣಾಳಿಕೆಗಳಾಗಿಬಿಡುತ್ತವೆ. ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ, ಸ್ಟಾರ್ಟ್‌ಅಪ್‌ ಉದ್ಯಮ ಮುಂತಾದ ಬಜೆಟ್‌ ಮೂಲದ ಘೋಷಣೆಗಳ ಉದಾಹರಣೆಗಳು ಢಾಳಾಗಿ ಕಾಣುವಂತಿವೆ.

ಈ ಆಶಯ-ಕನಸು-ಭ್ರಮೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಆಶಾದಾಯಕ ಎನ್ನಬಹುದಾದ ಸಮತೋಲನದ ಬಜೆಟ್‌ ಮಂಡಿಸಿ ಎಲ್ಲ ಸಮುದಾಯ-ಪ್ರದೇಶಗಳ ಮನತಣಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ತಾತ್ವಿಕ ನೆಲೆಗೆ ಬದ್ಧರಾಗಿದ್ದುಕೊಂಡು ಸಾಮಾಜಿಕ ನ್ಯಾಯದತ್ತ ಹೆಚ್ಚು ಒಲವು ತೋರಿರುವ ಮುಖ್ಯಮಂತ್ರಿಗಳು ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ಜನತೆಯ ಮುಂದಿರಿಸಿದ್ದಾರೆ. ಬಹು ಚರ್ಚಿತ ಗುಜರಾತ್‌ ಅಭಿವೃದ್ಧಿ ಮಾದರಿ ಹೇಗೆ ಕಾರ್ಪೋರೇಟ್‌ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸಲು ನೆರವಾಗಿದೆ ಎನ್ನುವುದನ್ನು ಗಮನಿಸುತ್ತಲೇ ಕರ್ನಾಟಕದ ಮಾದರಿಯನ್ನೂ ನಿಷ್ಕರ್ಷೆಗೊಳಪಡಿಸಬೇಕಿದೆ. ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿದ್ದರೂ ಬಜೆಟ್ಟನ್ನು ಚುನಾವಣಾ ಕೇಂದ್ರಿತವನ್ನಾಗಿ ಮಾಡದೆ, ತಮ್ಮ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿರುವ ಮುಖ್ಯಮಂತ್ರಿಗಳು ಅಹಿಂದ, ಮಹಿಳೆ, ಅಲ್ಪಸಂಖ್ಯಾತರು ಹಾಗೂ ತಳಸಮುದಾಯಗಳನ್ನು ಕಡೆಗಣಿಸದೆ ಯೋಜನೆಗಳನ್ನು ಘೋಷಿಸಿದ್ದಾರೆ. ಕೆಲವು ಸಕಾರಾತ್ಮಕ ಅಂಶಗಳು ಬರಗಾಲದ ಬೇಗೆಯಲ್ಲಿ ಬೇಯುತ್ತಿರುವ ರೈತಾಪಿಗೆ ತಲಾ 2000 ರೂಗಳ ಪರಿಹಾರ, ಸಾಲದ ಬಡ್ಡಿ ಮತ್ತು ಸುಸ್ತಿ ಬಡ್ಡಿ ಮನ್ನಾ, ಸಹಕಾರ ರಂಗದಲ್ಲಿ ಹೆಚ್ಚಿನ ಸಾಲ ಸೌಲಭ್ಯ, ಎಪಿಎಂಸಿಗಳನ್ನು ಉನ್ನತೀಕರಿಸುವ ಯೋಜನೆಗಳು, ಹಾಲು ಹಾಲಿನ ಉತ್ಪನ್ನ ಹಾಗೂ ರೇಷ್ಮೆ ಉತ್ಪಾದಕರಿಗೆ ಉತ್ತೇಜನ ಇಂತಹ ಹಲವು ಘೋಷಣೆಗಳ ಮೂಲಕ ಬಜೆಟ್‌ ರೈತ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಗ್ರಾಮ ಸರೋವರಗಳ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ, ಏತ ನೀರಾವರಿಗೆ ಉತ್ತೇಜನ ಮುಂತಾದ ಸಕಾರಾತ್ಮಕ ಕ್ರಮಗಳ ನಡುವೆಯೇ ಮೇಕೆದಾಟು ಯೋಜನೆ, ಕೃಷ್ಣಾ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಬಗ್ಗೆ ಪ್ರಸ್ತಾಪವಿದ್ದರೂ ಯಾವುದೇ ಅನುದಾನ ಘೋಷಿಸದೆ ಇರುವುದು ದೂರದೃಷ್ಟಿಯ ಕೊರತೆಯನ್ನು ಎತ್ತಿತೋರಿಸುವಂತಿದೆ. ಮೇಕೆದಾಟು ಯೋಜನೆಯನ್ನು ಪರಿಸರ ರಕ್ಷಣೆಯ ದೃಷ್ಟಿಯಿಂದಲೂ ಪುನರಾಲೋಚನೆ ಮಾಡುವ ಅವಶ್ಯಕತೆ ಇದೆ.

ದೇವದಾಸಿ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸಹಾಯಧನ ಹಾಗೂ ಅಂಗನವಾಡಿ ನೌಕರರಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ಒದಗಿಸುವ ಯೋಜನೆಯೂ ಫಲಕಾರಿಯಾಗಲಿದೆ. ಅಲ್ಪಸಂಖ್ಯಾತ-ದಲಿತ ಸಮುದಾಯಗಳಿಗೆ ಅನುದಾನ ಹೆಚ್ಚಿಸಿರುವುದೂ ಸಹ ಶ್ಲಾಘನೀಯ. ಇದರೊಂದಿಗೆ 24 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಚಾರಿತ್ರಿಕ ನಿರ್ಧಾರದೊಂದಿಗೇ ರಾಜ್ಯ ಬಜೆಟ್‌ನಲ್ಲಿ ಕೆಲವು ಗಂಭೀರ ಸಮಸ್ಯೆಗಳನ್ನು
ನಿರ್ಲಕ್ಷಿಸಿರುವುದನ್ನು ಗಮನಿಸಬೇಕಿದೆ. ತಳಸಮಾಜದ ಆರ್ಥಿಕ ಸಂಕಷ್ಟಗಳು ಜಟಿಲವಾಗುತ್ತಿರುವ, ಜನಸಾಮಾನ್ಯರ ಬಳಿ ನಗದು ಕೊರತೆ ಎದ್ದುಕಾಣುತ್ತಿರುವ ಹೊತ್ತಿನಲ್ಲಿ ಆರ್ಥಿಕ ಪ್ರಗತಿಯ ಅಡಿಪಾಯದಂತಿರುವ ಅಸಂಘಟಿತ ಕಾರ್ಮಿಕರು, ಸ್ಕೀಮ್‌ ನೌಕರರು, ಬಿಸಿಯೂಟದ ಕಾರ್ಮಿಕರು, ಆಶಾ-ಅಂಗನವಾಡಿ-ಸಂಜೀವನೀ ನಾಕರರಿಗೆ ವೇತನ ಹೆಚ್ಚಿಸಲು ಸರ್ಕಾರ ಮುಂದಾಗದಿರುವುದು ವಿಷಾದಕರ. ಹಾಗೆಯೇ ಗ್ರಾಮೀಣ ವಲಸೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಗರೀಕರಣಕ್ಕೆ ಹೊಸ ಆಯಾಮ ನೀಡಲು ರಾಜ್ಯದ ವಿವಿಧೆಡೆ ಇಂಟಿಗ್ರೇಟೆಡ್‌ ಟೌನ್‌ಷಿಪ್‌ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ವಲಸೆ ಕಾರ್ಮಿಕರ ಜೀವನ ಮತ್ತು ಜೀವನೋಪಾಯವನ್ನು ಹದಗೊಳಿಸುವ ನಿಟ್ಟಿನಲ್ಲಿ ಒಂದು ಸ್ಪಷ್ಟ ಆರ್ಥಿಕ ನೀತಿಯನ್ನು ಜಾರಿಗೊಳಿಸಬಹುದಿತ್ತು. ವಲಸೆಕಾರ್ಮಿಕ ನೀತಿಯ ಪರಿಕಲ್ಪನೆಯೇ ಇಲ್ಲದೆ ಭಾರತದಲ್ಲಿ 25 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಮಾರುಕಟ್ಟೆ ಸೃಷ್ಟಿಸುವ ವ್ಯತ್ಯಯಗಳಿಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯನವರಂತಹ ಸಮಾಜಮುಖಿ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಯೋಚಿಸಬಹುದಿತ್ತು. ಇಂಟಿಗ್ರೇಟೆಡ್ ಟೌನ್‌ಷಿಪ್‌ಗಳು ದೊಡ್ಡ ನಗರಗಳ ಜನದಟ್ಟಣೆ-ವಾಹನದಟ್ಟಣೆಗೆ ಪರಿಹಾರವಾಗಿ ಕಂಡರೂ, ಮಧ್ಯಮ ವರ್ಗಗಳ ಆಶ್ರಯತಾಣವಾಗುವ ಈ ನವ ನಗರಗಳು
ವಲಸೆ ಕಾರ್ಮಿಕರ ಆಸರೆಯೂ ಆಗುತ್ತದೆ ಎನ್ನುವುದು ಖಚಿತ. ಸರ್ಕಾರದ ದೂರದೃಷ್ಟಿಯ ಕೊರತೆ ಇಲ್ಲಿ ಢಾಳಾಗಿ ಕಾಣುತ್ತದೆ.

ಕೆಲವು ಜಟಿಲ ಪ್ರಶ್ನೆಗಳು
ನವ ಉದಾರವಾದದ ಪರಿಸರದಲ್ಲಿ ಅಭಿವೃದ್ಧಿ ಅಥವಾ ಪ್ರಗತಿಯ ಮೂಲ ವ್ಯಾಖ್ಯಾನವೇ ರೂಪಾಂತರಗೊಂಡಿದ್ದು, ತಳಮಟ್ಟದ ಕಟ್ಟಕಡೆಯ ವ್ಯಕ್ತಿ ಈ ಹಾದಿಯ ಯಾವುದೇ ಹಂತದಲ್ಲೂ ಮುಖ್ಯವಾಗಿ ಕಾಣುವುದಿಲ್ಲ. ಜಿಡಿಪಿ ದರ, ಬೆಳವಣಿಗೆಯ ದರ ಮತ್ತು ಮಾರುಕಟ್ಟೆ ಸೂಚ್ಯಂಕಗಳನ್ನೇ ಅಭಿವೃದ್ಧಿ ಅಥವಾ ಪ್ರಗತಿಯ ಮಾನದಂಡಗಳಂತೆ ಪರಿಗಣಿಸಲಾಗುತ್ತಿರುವ ಭಾರತದ ನವ ಆರ್ಥಿಕತೆಯಲ್ಲಿ ಮೌಲ ಸೌಕರ್ಯಗಳ ನಿರ್ಮಾಣ ಮತ್ತು ಬಳಕೆಯನ್ನೇ ʼಪ್ರಗತಿʼ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮೂಲ ಸೌಕರ್ಯಗಳ ನಿರ್ಮಾಣದ ಹಂತದಲ್ಲಿ ಅಸಂಘಟಿತ ವಲಯದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ, ಬಂಡವಾಳದ ಒಳಹರಿವು ಇತರ ಆರ್ಥಿಕ ನೆಲೆಗಳನ್ನು ಪುಷ್ಟೀಕರಿಸುತ್ತವೆ,
ಮೆಟ್ರೋ ರೈಲು, ಮಾನೋರೈಲು ಮುಂತಾದ ಸಂಚಾರ ಮಾರ್ಗಗಳು ತಳಸಮಾಜದ ದುಡಿಯುವ ಜನತೆಗೆ ಪ್ರಾದೇಶಿಕ ಚಲನೆಯ ಆಯ್ಕೆಯನ್ನು ಒದಗಿಸುತ್ತವೆ. ಹಾಗೆಯೇ ಔದ್ಯೋಗಿಕ ಬೆಳವಣಿಗೆಗೂ ಸಹಾಯಕವಾಗುತ್ತವೆ. ಇವೆಲ್ಲವೂ ನಿರ್ವಿವಾದ ಅಂಶಗಳು. ಆದರೆ ಇಲ್ಲಿ ಹೂಡುವ ಬಂಡವಾಳದ ಮೂಲ ಯಾವುದು ಎಂಬ ಪ್ರಶ್ನೆ ಏಳುತ್ತದೆ. ನವ ಉದಾರವಾದದ ವಾತಾವರಣದಲ್ಲಿ ಚುನಾಯಿತ ಸರ್ಕಾರಗಳು ʼವ್ಯಾಪಾರ-ವ್ಯವಹಾರ-ಶಿಕ್ಷಣ-ಆರೋಗ್ಯ-ಯೋಗಕ್ಷೇಮ-ಹಣಕಾಸು ʼ ಈ ಎಲ್ಲವೂ ನಮ್ಮ ಕೆಲಸವಲ್ಲ ಎಂದು
ಘೋಷಿಸಿಬಿಟ್ಟಿವೆ. ಕೇಂದ್ರ ಸರ್ಕಾರ ಇದನ್ನು ಅಧಿಕೃತವಾಗಿ ಪಾಲಿಸುತ್ತಲೂ ಬಂದಿದೆ. ಹಾಗಿದ್ದರೂ ರಾಜ್ಯ ಬಜೆಟ್‌ನಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯ ಪುನಶ್ಚೇತನ ಮತ್ತು ಬಲವರ್ಧನೆಗೆ ಒತ್ತು ನೀಡಿರುವುದು ಸ್ವಾಗತಾರ್ಹ ಕ್ರಮ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಹಣ ನೀಡಿರುವುದು ಶ್ಲಾಘನೀಯ. ಹಾಗೆಯೇ ಶಿಕ್ಷಕರ ನೇಮಕಾತಿಯ ಬಗ್ಗೆ ಭರವಸೆ ಮೂಡಿಸುವ ಮಾತುಗಳೂ ಕೇಳಿಬಂದಿವೆ. ಆದರೆ 2000 ಸರ್ಕಾರಿ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವ ನಿರ್ಧಾರವನ್ನು ಹಲವು ಆಯಾಮಗಳಿಂದ ಪರಾಮರ್ಶಿಸಬೇಕಿದೆ.

ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಕೂಗು ಜೀವಂತವಾಗಿರುವಂತೆಯೇ ದ್ವಿಭಾಷಾ ಮಾಧ್ಯಮವನ್ನು ಅಳವಡಿಸುವುದರಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸತೊಡಗುತ್ತಾರೆ. ಇದರಿಂದ ಉಸಿರುಗಟ್ಟುತ್ತಿರುವ ಸರ್ಕಾರಿ ಶಾಲೆಗಳು ಭೌತಿಕವಾಗಿ ಉಸಿರಾಡತೊಡಗುತ್ತವೆ. ಕನ್ನಡ ಒಂದು ಔದ್ಯೋಗಿಕ-ಔದ್ಯಮಿಕ ಭಾಷೆಯಾಗಿ ರೂಪುಗೊಳ್ಳದಿರುವ ಕಾರಣ ಆಂಗ್ಲಭಾಷಾ ಕಲಿಕೆ ತಳಸಮುದಾಯದ ಜನತೆಗೆ ಅನಿವಾರ್ಯವಾಗಿರುವುದು ನಿಶ್ಚಿತ. ಆದರೆ ಈ ಉದ್ದೇಶಿತ 2000
ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಬೋಧಿಸುವ ತರಬೇತಿ ಪಡೆದ ಪರಿಣತ ಶಿಕ್ಷಕರು ನಮ್ಮಲ್ಲಿದ್ದಾರೆಯೇ ? ಹೊಸ ಶಿಕ್ಷಕರ ನೇಮಕಾತಿಯಲ್ಲಿ ಈ ಅಂಶವನ್ನು ಪ್ರಧಾನವಾಗಿ ಪರಿಗಣಿಸಲು ಸಾಧ್ಯವೇ ? ಅಥವಾ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸುಸ್ಥಿರ ಬದುಕಿನ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅತಿಥಿ ಶಿಕ್ಷಕರ ದಂಡಿಗೆ ಮತ್ತಷ್ಟು ಬೋಧಕರು ಸೇರ್ಪಡೆಯಾಗುತ್ತಾರೆಯೇ ? ಈ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕಿದೆ. ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯೊಂದಿಗೆ ಕರ್ನಾಟಕದ ಜನತೆಯ ಜೀವನ-ಜೀವನೋಪಾಯವೂ ಮುಖ್ಯವಾಗುವುದರಿಂದ ಆಂಗ್ಲ ಭಾಷಾ ಕಲಿಕೆ ಇಂದಿನ ಅನಿವಾರ್ಯತೆ ಎನ್ನಬಹುದು. ಈ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಬೋಧನೆಯನ್ನು ಆರಂಭಿಸಿ, ಉಳಿದ ಮಾಧ್ಯಮೇತರ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಜಾರಿಗೊಳಿಸುವ ನೀತಿ ಹೆಚ್ಚು ಉಪಯುಕ್ತವಾಗುತ್ತಿತ್ತು. ಹಾಗೆಯೇ ಕನ್ನಡ ಮಾಧ್ಯಮದ ಇಂಜಿನಿಯರಿಂಗ್-ವೈದ್ಯಕೀಯ-ಡಿಪ್ಲೊಮೋ ಕಾಲೇಜುಗಳನ್ನು ತೆರೆಯುವುದರ ಬಗ್ಗೆ ಸರ್ಕಾರ ಲಕ್ಷ್ಯ ಹರಿಸಬೇಕಿತ್ತು. ಪದವಿಯವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಕೋಟ್ಯಂತರ ಯುವ ಜನತೆ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಔದ್ಯಮಿಕ ಜಗತ್ತಿನಲ್ಲಿ ಹೊಂದಿಕೊಳ್ಳಲಾರದೆ ಪರದಾಡುತ್ತಿರುವುದು ಸರ್ಕಾರವನ್ನು ಎಚ್ಚರಿಸಬೇಕಿತ್ತು. ದೂರಗಾಮಿ ಆಲೋಚನೆಯ ಕೊರತೆ ಇಲ್ಲಿಯೂ ಎದ್ದು ಕಾಣುತ್ತದೆ.

ಪ್ರಗತಿಯ ದೃಷ್ಟಿಕೋನ ಮತ್ತು ವಾಸ್ತವ
ಎಲ್ಲಕ್ಕಿಂತಲೂ ಮಿಗಿಲಾಗಿ ಸೂಕ್ಷ್ಮವಾಗಿ ಗಮನಿಸಬೇಕಾದ್ದು ನಮ್ಮ ಆಳ್ವಿಕೆಯ ʼಪ್ರಗತಿʼಯ ದೃಷ್ಟಿಕೋನ. ಕಳೆದ ಮೂರೂವರೆ ದಶಕಗಳ ನವ ಉದಾರವಾದಿ ಆರ್ಥಿಕತೆಯಲ್ಲಿ ದೇಶದ ಪ್ರಗತಿಯನ್ನು ಮಾರುಕಟ್ಟೆಯ ಮಾಪಕಗಳ ಮೂಲಕವೇ ಅಳೆಯುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಬಜೆಟ್‌ಗಳಲ್ಲಿ ಈ ಮಾರುಕಟ್ಟೆಯನ್ನು ಪ್ರತಿನಿಧಿಸುವ ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳನ್ನು ಕಾಪಾಡುವಂತಹ ನೀತಿಗಳನ್ನೇ ಕಾಣುತ್ತಿದ್ದೇವೆ. ಇದಕ್ಕಾಗಿ ಕಾರ್ಮಿಕ ನೀತಿ, ಕೃಷಿ ನೀತಿ, ಕಂಪನಿ ಕಾನೂನುಗಳನ್ನೂ ತಿದ್ದುಪಡಿ ಮಾಡಲಾಗುತ್ತಿದ್ದು, ಇದೀಗ ಸುಪ್ರೀಂಕೋರ್ಟ್‌ನಿಂದ ತಿರಸ್ಕರಿಸಲ್ಪಟ್ಟಿರುವ ಚುನಾವಣಾ ಬಾಂಡ್‌ಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಈ ಎಲ್ಲ ನೀತಿಗಳೂ ಮಾರುಕಟ್ಟೆ ನಿರ್ದೇಶಿತವಾಗಿದ್ದು, ಬಂಡವಾಳ ಹೂಡಿಕೆ ಮತ್ತು ಲಾಭಗಳಿಕೆಯ ದೃಷ್ಟಿಯಿಂದಲೇ ಜಾರಿಗೊಳಿಸಲಾಗುತ್ತಿದೆ. ಲಾಭವಿಲ್ಲದಿದ್ದರೆ ಹುಲ್ಲು ಕಡ್ಡಿಯೂ ಅಲುಗಾಡದ ಮಾರುಕಟ್ಟೆ ಪ್ರಪಂಚ ಈಗಾಗಲೇ ಔದ್ಯೋಗಿಕ ವಲಯವನ್ನು ದಾಟಿ ಆರೋಗ್ಯ-ಶಿಕ್ಷಣ-ಯೋಗಕ್ಷೇಮದ ವಲಯವನ್ನೂ ಪ್ರವೇಶಿಸಿದೆ. ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2024-25ರ ಬಜೆಟ್‌ನಲ್ಲಿ ಆಯೋಜಿಸಲಾಗಿರುವ ಶೀತಲ ಸಂಗ್ರಹಾಗಾರಗಳು, ಆಹಾರ ಜವಳಿ ಪಾರ್ಕ್‌ಗಳು, ಕೃಷಿ ಫಾರ್ಮ್‌, ಕೃಷಿ ಉತ್ಪನ್ನಗಳ ಸಂಸ್ಕರಣ ಮತ್ತು ದಾಸ್ತಾನು, ವೈದ್ಯಕೀಯ ಸೌಲಭ್ಯಗಳು, ರಸ್ತೆ-ಮೆಟ್ರೋ-ಮಾನೋರೈಲುಗಳು, ಸೋಲಾರ್‌ ಪಾರ್ಕ್‌ಗಳು, ಪ್ರವಾಸೋದ್ಯಮ ಮತ್ತು ಇತರ ಸಂಚಾರ ವ್ಯವಸ್ಥೆಗಳು , ಬಯೋ ಸಿಎನ್‌ಜಿ ಘಟಕಗಳು ಹೀಗೆ ಮೂಲ ಸೌಕರ್ಯಗಳ ವೃದ್ಧಿಗೆ ಕಾರಣವಾಗುವ ಎಲ್ಲ ವಲಯಗಳಲ್ಲೂ ಪ್ರಧಾನವಾಗಿ ಪಿಪಿಪಿ ಮಾದರಿಯನ್ನು ಅನುಸರಿಸುವುದಾಗಿ ಘೋಷಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಈ ಯೋಜನೆಗಳು ಅಂತಿಮವಾಗಿ ಬೃಹತ್‌ ಬಂಡವಾಳಿಗರ ಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಸಾಧನಗಳಾಗುತ್ತವೆ. ಸಂಚಾರ ವ್ಯವಸ್ಥೆಯಲ್ಲಿ ಪಿಪಿಪಿ ಮಾದರಿ ಇದ್ದರೂ ಸಾರ್ವಜನಿಕರಿಗೆ, ಸಮಾಜದ ಎಲ್ಲವಲಯಗಳಿಗೂ ಅದರ ಉಪಯುಕ್ತತೆ ತಲುಪುವ ಸಾಧ್ಯತೆ ಇರುವುದರಿಂದ ಅನಪೇಕ್ಷಣೀಯ ಎನಿಸಲಾರದು.

ಆದರೆ ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಪ್ರತಿಯೊಂದು ಹೆದ್ದಾರಿ, ಮೇಲ್ಸೇತುವೆಯೂ ಕ್ರಮೇಣ ಬಡಜನತೆಯ, ಮಧ್ಯಮ ವರ್ಗಗಳ, ದುಡಿಯುವ ಜನತೆಯ ಪಾಲಿಗೆ “ ಶಾಶ್ವತ ಸುಲಿಗೆಯ ಕೇಂದ್ರ”ಗಳಾಗುತ್ತವೆ. ರಸ್ತೆ, ಉದ್ಯಾನ, ವಾಹನ ಪಾರ್ಕಿಂಗ್‌ ಮತ್ತಿತರ ಸಾರ್ವಜನಿಕ ಲಭ್ಯಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಸರ್ಕಾರಗಳು ಶ್ರೀಸಾಮಾನ್ಯನನ್ನು ಉದ್ಯಮಿಗಳ ಪಾಲಿನ ATM ಗಳಾಗಿ ಪರಿವರ್ತಿಸುತ್ತಿವೆ. ಸಾರ್ವಜನಿಕ ಬಂಡವಾಳ ಹೂಡಿಕೆಯ ಹಾದಿಯಿಂದ ಸಂಪೂರ್ಣವಾಗಿ ವಿಮುಖವಾಗುವ ಲಕ್ಷಣಗಳೊಂದಿಗೇ ರಾಜ್ಯ
ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ʼಆಸ್ತಿ ನಗದೀಕರಣʼ ಪ್ರಕ್ರಿಯೆಗೂ ಒಲವು ತೋರಿರುವುದು, ಆರ್ಥಿಕತೆಯ ಮೇಲೆ ಕಾರ್ಪೋರೇಟ್‌ ಮಾರುಕಟ್ಟೆಯ ಬಿಗಿ ಹಿಡಿತವನ್ನು ತೋರಿಸುತ್ತದೆ. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ವಸತಿ ಇಲಾಖೆಗಳಲ್ಲಿ ಆಸ್ತಿನಗದೀಕರಣದ ಬಗ್ಗೆ ಪರಾಮರ್ಶಿಸಲು ತಜ್ಞರ ಸಮಿತಿ ನೇಮಿಸುವುದಾಗಿ ಸಿದ್ಧರಾಮಯ್ಯ ಸರ್ಕಾರ ಹೇಳಿದೆ. ದುಡಿಯುವ ಜನತೆಯ ಬೆವರಿನ ಫಲವಾಗಿ ಸೃಷ್ಟಿಸಲಾಗುವ ಸಾರ್ವಜನಿಕ ಸಂಪತ್ತನ್ನು ಕಾರ್ಪೋರೇಟ್‌ ಮಾರುಕಟ್ಟೆಯ ಜಗುಲಿಯಲ್ಲಿ ಹರಾಜು ಮಾಡುವಾಗ ʼ ಆಸ್ತಿ ನಗದೀಕರಣ ʼ ಎಂಬ ಕಿವಿಗಿಂಪಾದ ಪದವನ್ನು ಬಳಸಲಾಗುತ್ತಿದೆ. ತಮ್ಮ ಜನಕಲ್ಯಾಣ ಗ್ಯಾರಂಟಿ ಯೋಜನೆಗಳ
ಮೂಲಕ ಸಮಾಜವಾದದ ಚಹರೆಯನ್ನು ಪ್ರದರ್ಶಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವೂ ಇದೇ ಹಾದಿಯನ್ನು ಅನುಸರಿಸುವುದು, ʼಪ್ರಗತಿ ಅಥವಾ ಅಭಿವೃದ್ಧಿʼಯ ವ್ಯಾಖ್ಯಾನವನ್ನೇ ಬದಲಾಯಿಸಿರುವುದರ ಸಂಕೇತವಾಗಿ ಕಾಣುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಸರ್ವತೋಮುಖ ಬೆಳವಣಿಗೆ ಎಂಬ ಪದಗಳು ನೇಪಥ್ಯಕ್ಕೆ ಸರಿದು, ಸಮತೋಲನದ ಬೆಳವಣಿಗೆಯತ್ತ ಸಾಗುತ್ತಿರುವ ನವ ಆರ್ಥಿಕತೆಯ ಮೂಲ ಲಕ್ಷಣವನ್ನೂ ಅರ್ಥಮಾಡಿಕೊಳ್ಳಬಹುದು. ಸಾಮಾಜಿಕ-ಪ್ರಾದೇಶಿಕ-ಸಾಮುದಾಯಿಕ-ವರ್ಗ ಸಮತೋಲನದ ಹಾದಿಯಲ್ಲಿ , ಸರ್ವರಿಗೂ ಸಮಪಾಲು ಘೋಷಣೆಯಲ್ಲಿ, ಎಲ್ಲೋ ಕಳೆದುಹೋಗುವ ತಳಮಟ್ಟದ ಶ್ರಮಜೀವಿಗಳು ತಮ್ಮ ಸುಸ್ಥಿರ ಬದುಕಿಗಾಗಿ ಈ ವಾರ್ಷಿಕ
ಬಜೆಟ್‌ಗಳಿಂದ ಏನು ಗಳಿಸಿಯಾರು ? ಬಂಡವಾಳ ಮತ್ತು ಮಾರುಕಟ್ಟೆ ಎಲ್ಲದಿಕ್ಕುಗಳಿಂದಲೂ ಆಕ್ರಮಿಸುತ್ತಿರುವ ಹೊತ್ತಿನಲ್ಲಿ ಇದೊಂದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

#Siddaramaiah #Congress #StateBudget #NaDivakar #SpecialArticle

Previous Post

ಜೈಸ್ವಾಲ್‌ ʻಯಶಸ್ವಿʼ ಡಬಲ್‌ ಹಂಡ್ರೆಡ್‌: 557 ರನ್‌ಗಳ ಬೃಹತ್‌ ಟಾರ್ಗೆಟ್‌ ಚೇಸ್‌ ಮಾಡಬೇಕಿದೆ ಇಂಗ್ಲೆಂಡ್‌…

Next Post

ಮಂಡ್ಯದಲ್ಲಿ ಕಾಂಗ್ರೆಸ್‌ ರಣಕಹಳೆ: ಮಳವಳ್ಳಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ

Related Posts

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!
Top Story

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

by ಪ್ರತಿಧ್ವನಿ
March 4, 2026
0

ಜಿ.ಬಿ. ಪಾಟೀಲ್‌ : ಬರಹಗಾರರು.. ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ದಿನಕಳೆಂದತೆ ಹೆಚ್ಚಾಗುತ್ತಿದೆ. ಈಗಾಗಲೇ ಅಂದುಕೊಂಡಂತೆ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಅಮೆರಿಕ ಹಾಗೂ ಇಸ್ರೇಲ್‌...

Read moreDetails
ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

March 3, 2026
ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!

ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!

March 2, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ

ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ

February 27, 2026
Next Post
ಮಂಡ್ಯದಲ್ಲಿ ಕಾಂಗ್ರೆಸ್‌ ರಣಕಹಳೆ: ಮಳವಳ್ಳಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ

ಮಂಡ್ಯದಲ್ಲಿ ಕಾಂಗ್ರೆಸ್‌ ರಣಕಹಳೆ: ಮಳವಳ್ಳಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada