ಶಿವಮೊಗ್ಗ(shivamogga) ಜಿಲ್ಲೆ ರಾಜ್ಯ ರಾಜಕಾರಣಕ್ಕೆ ತನ್ನದೇ ಕೊಡುಗೆ ನೀಡಿದೆ. ಜಿಲ್ಲೆಯಿಂದ ನಾಲ್ವರು ಸಿಎಂಗಳಾಗಿದ್ದು, ರಾಜಕೀಯ ಚಟುವಟಿಕೆಗಳ ಪ್ರಯೋಗ ಶಾಲೆಯಾಗಿದೆ. ಕಳೆದ ಸಲ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನ ಗೆದ್ದು ಬೀಗಿದ್ದ ಬಿಜೆಪಿಗೆ ಈ ಚುನಾವಣೆ ಕಠಿಣವಾಗಿ ಪರಿಣಮಿಸಿದೆ. ಎಲ್ಲಾ ಪಕ್ಷದಲ್ಲಿಯೂ ಕುಟುಂಬ ಸದಸ್ಯರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಾಗರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(BJP) ಶಾಸಕರ ಪುತ್ರರು ಹಲವು ವರ್ಷಗಳಿಂದ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದು ಚುನಾವಣಾ(election) ಪ್ರಚಾರದಲ್ಲಿದ್ದಾರೆ. ಸಾಗರ ಶಾಸಕ ಹರತಾಳು ಹಾಲಪ್ಪ ಪುತ್ರ ಚೇತನ್ ಹಾಲಪ್ಪ ಅವರಿಗೆ ಮೂವತ್ತೊಂದು ವರ್ಷ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿ ಒಡೆತನ ಹೊಂದಿರುವ ಚೇತನ್ ಸುಮಾರು ಮೂರು ಸಾವಿರ ವಿದ್ಯಾವಂತ ಯುವಕರಿಗೆ ಕೆಲಸ ನೀಡಿದ್ದಾರೆ. ಚಾಕಚಕ್ಯತೆ, ತೀಕ್ಷ್ಣ ರಾಜಕಾರಣಕ್ಕೆ(politics) ಸಾಕ್ಷಿಯಾಗಿರುವ ಹರತಾಳು ಹಾಲಪ್ಪ ಅವರನ್ನ ನಿಭಾಯಿಸೋದು ಕಷ್ಟ. ಹಾಲಪ್ಪ ಪುತ್ರ ಚೇತನ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾ ತಂದೆ ಪರ ಮತಯಾಚನೆ ಮಾಡುತ್ತಾರೆ. ಈ ಸಮಯದಲ್ಲಿ ಕಾರ್ಯಕರ್ತರಿಗೆ ತಂದೆ ಸ್ಪಂದಿಸಲು ಆಗದೇ ಹೋದರೆ ಚೇತನ್ ಸ್ಪಂದಿಸುತ್ತಾರೆ. ಬಿಇ( ಮೆಕ್ಯಾನಿಕಲ್) ಆರ್ ವಿ ಎಂಜಿನಿಯರಿಂಗ್ ಕಾಲೇಜ್(college) ಹಾಗೂ ಎಂಬಿಎ ಲೀಡ್ಸ್ ವಿವಿ, ಲಂಡನ್ನಲ್ಲಿ ಮುಗಿಸುರುವ ಚೇತನ್ ಗೆ ಹಳ್ಳಿ ಜನರ ಒಡನಾಟ ಇದೆ. ತಂದೆ ಸೊರಬದಲ್ಲಿ ಚುನಾವಣೆಗೆ ನಿಂತಾಗಲೂ ಸಹ ಚೇತನ್ ಕೆಲಸ ಮಾಡಿದ್ದರು. ಸಾಗರದಲ್ಲಿ ಮರು ಆಯ್ಕೆ ಬಯಸಿರುವ ಹಾಲಪ್ಪ ಪರ ಮಗ ಚೇತನ್ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆಗಳನ್ನೂ ಆಲಿಸುತ್ತಾರೆ. ಆದರೆ ಚೇತನ್ ಗೆ ತಾವು ರಾಜಕಾರಣಿ ಆಗಬೇಕು ಎಂಬ ಇಂಗಿತ ಇಲ್ಲ. ಈ ಕುರಿತು ಮಾತನಾಡಿದ ಚೇತನ್(chetan) ತಾವು ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದರೂ ಸಹ ಸಾಮಾಜಿಕ ಜಾಲತಾಣದ(social media) ಪ್ರಚಾರದಿಂದ ಏನೂ ಪ್ರಯೋಜನ ಇಲ್ಲ. ಜನರ ಬಳಿ ಹೋಗುವ ಸಾಂಪ್ರದಾಯಿಕ ಶೈಲಿಯೇ ಮತದಾರರನ್ನ ಸೆಳೆಯಲು ಅನುಕೂಲ ಎನ್ನುತ್ತಾರೆ.

ಇನ್ನು ಸೊರಬದಲ್ಲಿ ಅಜ್ಜ ಹಾಗೂ ಅಪ್ಪನ ಹಾದಿಯಲ್ಲೇ ಕ್ಷೇತ್ರದ ಜನರ ಪ್ರೀತಿ ಗಳಿಸಲು ಸಫಲರಾಗಿರುವ ಅರ್ಜುನ್ ಬಂಗಾರಪ್ಪ ಕೂಡ ತಂದೆ ಕುಮಾರ್ ಬಂಗಾರಪ್ಪ ಅವರ ಮರು ಆಯ್ಕೆಗಾಗಿ ಹಳ್ಳಿಗಳ್ಳನ್ನ ಸುತ್ತುತ್ತಿದ್ದಾರೆ. ಪ್ರತಿ ದಿನ ಹತ್ತಾರು ಕಿಲೋಮೀಟರ್ ಕ್ರಮಿಸುವ ಅರ್ಜುನ್ ಕ್ಷೇತ್ರದಲ್ಲಿ ಚಿರಪರಿಚಿತ ಮುಖ. ಇಪ್ಪತ್ತೊಂಬತ್ತು ವರ್ಷ ವಯಸ್ಸಿನ ಅರ್ಜುನ್ ಬಂಗಾರಪ್ಪ(arjun bangarappa) ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ. ತಂದೆ ಒಡೆತನದ ಶ್ರೀ ರೇಣುಕಾಂಬ ಸ್ಟುಡಿಯೋ ಸೇರಿ ಕುಟುಂಬದ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇವೆಲ್ಲದಕ್ಕೂ ಮಿಗಿಲಾಗಿ ಸಿನಿಮಾ ನಟನೆಯ ತರಬೇತಿ ಚೆನೈನಲ್ಲಿ ಪಡೆದಿದ್ದು ಇನ್ನೆರಡು ವರ್ಷಗಳಲ್ಲಿ ಅರ್ಜುನ್ ನಟನಾಗಿ ಕೂಡ ತೆರೆ ಮೇಲೆ ಕಾಣಲಿದ್ದಾರೆ. ತಂದೆ ಕುಮಾರ್ ಬಂಗಾರಪ್ಪ ಕೂಡ 80-90 ದಶಕದಲ್ಲಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಅರ್ಜುನ್ ಕಿರುಚಿತ್ರ ನಿರ್ಮಾಣ ಮಾಡಿದ್ದು, ಚುನಾವಣೆ ಮುಗಿಯುತ್ತಿದ್ದಂತೆ ಚಿತ್ರ ಬಿಡುಗಡೆಯಾಗಲಿದೆ. ಈ ಕುರಿತು ಮಾತನಾಡಿದ ಅರ್ಜುನ್ ಎಂಜಿನಿಯರಿಂಗ್, ರಾಜಕಾರಣ(politics) ಹಾಗೂ ಸಿನಿಮಾ ಮೂರೂ ಕ್ಷೇತ್ರದಲ್ಲಿ ಜವಾಬ್ದಾರಿ ಇದ್ದು ಸಿನಿಮಾದಲ್ಲಿ ಆಸಕ್ತಿ ಹೆಚ್ಚಿದೆ ಎನ್ನುತ್ತಾರೆ. ಸೊರಬ(soraba) ಕ್ಷೇತ್ರ ಹೊಸದೇನಲ್ಲ ಗ್ರಾಮಸ್ಥರ ಖಾಸಗಿ ಕಾರ್ಯಕ್ರಮ ಆಮಂತ್ರಣಕ್ಕೆ ಯಾವಾಗಲೂ ತಪ್ಪಿಸಿಲ್ಲ. ಹಾಗಾಗಿ ಜನರಿಗೆ ತಮ್ಮ ಪರಿಚಯ ಇದೆ ಎನ್ನುತ್ತಾರೆ.ಉಭಯ ಬಿಜೆಪಿ(BJP) ನಾಯಕರ ಪುತ್ರರು ಪಕ್ಷದ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿರೋದಾಗಿ, ಜನರ ಪ್ರತಿಕ್ರಿಯೆ ತಮ್ಮ ಪರವಾಗಿ ಇರೋದಾಗಿ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ.