ಬಿಜೆಪಿಯನ್ನು ಎಲ್ಲಾ ರೀತಿಯಿಂದ ನಿಯಂತ್ರಿಸುವ ಸಂಸ್ಥೆ ಎಂದರೆ ಬ್ರಾಹ್ಮಣರ ಹಿತಾಸಕ್ತಿಗಾಗಿ ಇಪ್ಪತ್ತನೆ ಶತಮಾನದ ಆರಂಭದಲ್ಲಿ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರು ಸ್ಥಾಪಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ.
ಈ ಸಂಘದ ವಂಚಕ ನಡೆಯನ್ನು ಬಹಳ ಹತ್ತಿರದಿಂದ ನೋಡಿದವರು ದಿವಂಗತ ಎ ಕೆ ಸುಬ್ಬಯ್ಯನವರು. ಆ ಕುರಿತು ಅವರು ಆರ್.ಎಸ್.ಎಸ್ ಅಂತರಂಗ ಎಂಬ ಒಂದು ಕಿರು ಹೊತ್ತಿಗೆಯನ್ನು ಬರೆದಿದ್ದಾರೆ. ವಂಚನೆಗೆ ಪರ್ಯಾಯ ಶಬ್ಧವೆ ಸಂಘ ಎನ್ನುವುದನ್ನು ಸುಬ್ಯಯ್ಯ ಈ ಕೆಳಗಿನಂತೆ ಬಹು ಮಾರ್ಮಿಕವಾಗಿ ಹೇಳಿದ್ದಾರೆ:
‘ವಂಚಿಕಾ’ ಹೀಗೆಂದರೇನು?
“ಆರ್ ಎಸ್ ಎಸ್ ಯಾರೊಡನೆಯೂ ನೇರವಾಗಿ ಮುಖಾಮುಖಿಯಾಗಿ ಯುದ್ಧಕ್ಕಿಳಿಯುವುದಿಲ್ಲ. ಆನಂತರವೂ ಅವರು ನಡೆಸುವ ಯುದ್ಧ ಪರೋಕ್ಷವಾದದ್ದು. ಹೋರಾಟ ವ್ಯಕ್ತಿಯೊಡನೆಯಾದರೂ ಸರಿ; ಯಾವ ಸಂಘಟನೆಯ ಜೊತೆಯಾದರೂ ಸರಿ. ಯುದ್ಧದಲ್ಲಿ ಇವರು ಅನುಸರಿಸುವುದು ಬೆನ್ನಿಗೆ ಇರಿಯುವ ತಂತ್ರವೇ ವಿನಹ, ನ್ಯಾಯ ಯುದ್ಧವಲ್ಲ. ನಂಬಿಸಿ ವಂಚಿಸುವುದು ಆರ್ ಎಸ್ ಎಸ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ.
ಇವರು ಮೈದಾನದಲ್ಲಿ ಆಟೋಟಗಳನ್ನು ನಡೆಸುವಾಗಲೂ ವಂಚನೆಯನ್ನು ಅವರು ಮರೆಯುವುದಿಲ್ಲ. ಎದುರಾಳಿಗೆ ಮೋಸ ಮಾಡುವುದನ್ನು ‘ವಂಚಿಕಾ’ ಎಂದು ಆರ್ ಎಸ್ ಎಸ್ ನವರು ಕರೆಯುತ್ತಾರೆ. ಹಾಗೂ ವಂಚಿಕಾದ ಬಗ್ಗೆ ವಿಶೇಷ ತರಬೇತಿ ಸಹ ನೀಡಲಾಗುವುದು. ಇಂಥ ತರಬೇತಿಯ ಪರಿಣಾಮವಾಗಿ ಆರ್ ಎಸ್ ಎಸ್ ನಲ್ಲಿ ಬೆಳೆದವರು ನಯವಂಚಕರಾಗಿಯೇ ತಯಾರಾಗುತ್ತಾರೆ. ವಂಚನೆಯ ಸಾಧನೆಗಾಗಿ ಜನತೆಯ ಭಾವನಾತ್ಮಕ ವಿಚಾರವನ್ನು ಬುದ್ಧಿಪೂರ್ವಕವಾಗಿಯೇ ಆಯ್ಕೆ ಮಾಡಿಕೊಳ್ಳಲಾಗುವುದು.
~ ಎ.ಕೆ. ಸುಬ್ಬಯ್ಯ.

(ಮಾಜಿ ಆರ್ ಎಸ್ ಎಸ್ ಮುಖಂಡ ಹಾಗೂ ಆರ್ ಎಸ್ ಎಸ್ ನ ಕುತಂತ್ರಗಳನ್ನು ದಿಕ್ಕರಿಸಿ ಹೊರ ಬಂದು ಪ್ರಗತಿಪರ ವಿಚಾರಗಳನ್ನು ಕಟ್ಟಿದ ವಿಚಾರವಾದಿ).
ಹೀಗೆ ಸಂಘದ ವಿಚಾರಧಾರೆಯ ಪೂರ್ವಜರು ಹಿಂದಿನಿಂದಲೂ ಈ ನೆಲದಲ್ಲಿ ಮಾಡಿಕೊಂಡು ಬಂದಿರುವ ವಂಚನೆಗಳಿಗೆ ದೊಡ್ಡ ಇತಿಹಾಸವಿದೆ. ಸಂಘಿ ವಿಚಾರಧಾರೆ ತಮ್ಮ ಹಿತಾಸಕ್ತಿಗೆ ಧಕ್ಕೆಯಾಗುವ ವ್ಯಕ್ತಿ ಅಥವಾ ಸಿದ್ಧಾಂತವನ್ನು ಮೊದಲ ಹಂತದಲ್ಲಿ ಮುಗಿಸಲು ಪ್ರಯತ್ನಿಸುತ್ತದೆ. ಅದಾಗ್ಯೂ ಆ ವ್ಯಕ್ತಿ/ಸಿದ್ಧಾಂತ ಮತ್ತಷ್ಟು ಜನಪ್ರೀಯವಾದರೆ ತನ್ನ ಎರಡನೆ ಹಂತದ ಕಾರ್ಯಾಚರಣೆಯಂತೆ ಆ ವ್ಯಕ್ತಿ/ಸಿದ್ಧಾಂತದ ಕುರಿತು ನಿರಂತರ ಅಪಪ್ರಚಾರ ಮಾಡುತ್ತದೆ. ತಮ್ಮ ಅಸ್ತಿತ್ವಕ್ಕೆ ಧಕ್ಕೆ ತರಬಲ್ಲ ವ್ಯಕ್ತಿ/ಸಿದ್ಧಾಂತವನ್ನು ಅತ್ತ ಮುಗಿಸಲು ಆಗದೆ ಹಾಗು ನಿರಂತರ ಅಪಪ್ರಚಾರದ ಹೊರತಾಗಿಯೂ ಆ ವ್ಯಕ್ತಿ/ಸಿದ್ಧಾಂತ ಮತ್ತಷ್ಟು ಜನಪ್ರೀಯವಾದಾಗ ಆ ವ್ಯಕ್ತಿ/ಸಿದ್ಧಾಂತ ನಮ್ಮದು ಎಂದು ಪ್ರತಿಪಾದಿಸಿˌ ಕ್ರಮೇಣ ಅದರೊಳಗೆ ಹೊಕ್ಕು ಮುಗಿಸುವುದು ಸಂಘಿ ವಿಚಾರಧಾರೆಯ ಮೂರನೇ ಹಂತದ ಕಾರ್ಯಾಚರಣೆ.
ಇದನ್ನು ನಾವು ಇತಿಹಾಸದುದ್ದಕ್ಕೂ ನೋಡಿಕೊಂಡು ಬಂದಿದ್ದೇವೆ. ದ್ರಾವಿಡ-ಶಿವಸಂಸ್ಕೃತಿಯನ್ನು ಹುಡಿಗೊಳಿಸಿದ ಆರ್ಯ ವೈದಿಕರು ಕ್ರಮೇಣ ಆ ಶಿವನಿಗೆ ಜನಿವಾರ ತೊಡೆಸಿ ವೈದಿಕ ಪುರಾಣಗಳ ಭಾಗವಾಗಿಸಿದ್ದು ಮತ್ತು ಗೌತಮ ಬುದ್ಧನನ್ನು ಕಾಲ್ಪನಿಕ ವಿಷ್ಣುವಿನ ದಶಾವತಾರದ ಭಾಗವಾಗಿಸಿದ್ದು ಸನಾತನ ಸಂಘಿ ವಿಚಾರಧಾರೆಯ ಅತ್ಯಂತ ಮಹತ್ವದ ಉದಾಹರಣೆಗಳು. ಇದು ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ಘಟಿಸಿದ ಪಲ್ಲಟವಾಗಿದ್ದು ಮೂಲ ಭಾರತಿಯತೆಯೆ ಇಂದು ಆರ್ಯ-ವೈದಿಕಮಯಗೊಂಡಿದೆ. ಆ ಪ್ರಾಚೀನ ಸನಾತನ ವಂಚಕ ಸಿದ್ಧಾಂತದ ಅಧುನಿಕ ರೂಪವೆ ಇಂದಿನ ಸಂಘಿ ಸಿದ್ಧಾಂತ. ಈಗ ಇಡೀ ಭಾರತದ ಆಡಳಿತ ಚುಕ್ಕಾಣಿಯು ಸಂಘಿ ಸಿದ್ಧಾಂತದ ಕೈವಶವಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿದ ಮೇಲೆ ಮತ್ತೆ ಪುನರಾಯ್ಕೆಯ ಭರವಸೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಎರಡು ಅವಧಿಗೆ ಅನೈತಿಕ ಮಾರ್ಗದಿಂದ ಸರಕಾರ ರಚಿಸಿದರೂ ಕೂಡ ರಚನಾತ್ಮಕ ಕಾರ್ಯ ಮಾಡಲು ವಿಫಲವಾಗಿರುವ ಬಿಜೆಪಿ ತಮ್ಮ ಮೂಲ ಸಿದ್ದಾಂತವಾಗಿರುವ ಹಿಂಸೆˌ ಅಸಹಿಷ್ಣತೆˌ ಭಾವನಾತ್ಮಕ ಪ್ರಚೋದನೆಗಳ ಮೊರೆಹೋಗಿದೆ. ಎಂದಿಗೂ ಅಭಿವೃದ್ಧಿ ˌ ಜನರ ಸಮಸ್ಯೆಗಳ ಕುರಿತು ಮಾತನಾಡದ ಬಿಜೆಪಿ ಮತ್ತು ಸಂಘ ಇಲ್ಲಿ ಕಳೆದ ಒಂದೆರಡು ವರ್ಷಗಳಿಂದ ಪಠ್ಯಪುಸ್ತಕ ತಿರುಚುವಿಕೆˌ ಟಿಪ್ಪು ನಿಂದನೆˌ ಹಿಜಾಬ್ ಮುಂತಾದ ಸಂಘಿ ವಿಕೃತ ಸಿದ್ಧಾಂತದ ಹಳಸಲು ಭಾಷೆಯಲ್ಲಿ ಹಲಬುತ್ತಿದೆ. ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಡಿ ಕೆ ಶಿವಕುಮಾರ್ ಎನ್ನುವ ವ್ಯಕ್ತಿ ಮತ್ತು ಇನ್ನೂ ಅನೇಕ ಕಾಂಗ್ರೆಸ್ಸಿಗಳ ಮನಸ್ಥಿತಿ ಸಂಘಿ-ಬಿಜೆಪಿ ಮನಸ್ಥಿತಿಗಿಂತ ಭಿನ್ನವಾಗಿ ಇಲ್ಲ.
ಸಂಘಿ-ಬಿಜೆಪಿಯನ್ನು ಸೈದ್ಧಾಂತಿಕವಾಗಿ ಹಾಗು ಸಮರ್ಥವಾಗಿ ಎದುರಿಸುವ ಏಕೈಕ ಕಾಂಗ್ರೆಸ್ ನಾಯಕನೆಂದರೆ ಸಿದ್ಧರಾಮಯ್ಯ ಮಾತ್ರ. ಸಿದ್ಧರಾಮಯ್ಯನವರು ಮಾಸ್ ಲೀಡರ್ ಮಾತ್ರವಲ್ಲದೆ ಸಂಘಿ-ಬಿಜೆಪಿಯನ್ನು ಎಲ್ಲಾ ಬಗೆಯಲ್ಲೂ ಕಾಡುವ ನಾಯಕ. ಐದು ವರ್ಷಗಳ ಸಿದ್ಧರಾಮಯ್ಯ ಆಡಳಿತ ಕಾಲದಲ್ಲೂ ಬಿಜೆಪಿಯ ಸಾಕು ಮಾಧ್ಯಮಗಳು ಅವರ ಬಗ್ಗೆ ಮಾಡಿದ ಅಪಪ್ರಚಾರ ಅಷ್ಟಿಷ್ಟಲ್ಲ. ಆದರೂ ಸಿದ್ದರಾಮಯ್ಯನವರ ಒಂದು ಕೂದಲನ್ನು ಕೂಡ ಕೊಂಕಿಸುವಲ್ಲಿ ಸಂಘಿ-ಬಿಜೆಪಿ ಸಫಲವಾಗಿಲ್ಲ. ಯಡಿಯೂರಪ್ಪನವರು ಬಿಜೆಪಿ ಮುನ್ನೆಡೆಸುವಾಗ ಬಿಜೆಪಿಯ ನಾಯಕರ ಮಾತಿನ ಮೇಲೆ ಅಂಕುಶವಿರುತ್ತಿತ್ತು. ಈಗ ಆ ಪಕ್ಷದ ಯಾವ ಪುಢಾರಿಯ ನಾಲಿಗೆ ಮೇಲೂ ಅಂಕುಶವಿಲ್ಲ. ಹಾಗೆಂದು ಅವರೆಲ್ಲ ತಮ್ಮ ಸ್ವಂತ ಮನಸ್ಸಿನಿಂದ ಹೀಗೆ ವಿಕೃತವಾಗಿ ಹಲಬುತ್ತಿಲ್ಲ. ಈಶ್ವರಪ್ಪ ˌ ಸಿ ಟಿ ರವಿˌ ಕಟೀಲ್ˌ ಅಶ್ವತ್ಥನಾರಾಯಣ ಮುತಾದವರ ವಿಕೃತ ಹೇಳಿಕೆಗಳ ಹಿಂದೆ ಅದೇ ಕೇಶವಕೃಪಾದ ಅನಾಗರಿಕ ಆಚಾರ್ಯರಿದ್ದಾರೆ ಎನ್ನುವ ಸಂಗತಿ ಗುಟ್ಟಿನದೇನಲ್ಲ.
ಎಂದಿಗೂ ಅನಾಗರಿಕರಂತೆ ಮಾತನಾಡದ ಈ ಬಿಜೆಪಿ ಪುಢಾರಿಗಳು ಸರಣಿ ಸರಣಿ ರೂಪದಲ್ಲಿ ಅಸಂಬದ್ಧವಾಗಿ ಬಡಬಡಿಸುತ್ತಿರುವುದು ಕೇಶವಕೃಪಾದ ಅನಾಗರಿಕ ಶಕ್ತಿಗಳ ಪ್ರಚೋದನೆಯಿಂದಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೊನ್ನೆ ರಾಮನಗರದಾಚೆಗೆ ಯಾರಿಗೂ ಗೊತ್ತಿಲ್ಲದ ಅಶ್ವತ್ಥನಾರಾಯಣ ಎನ್ನುವ ಅಪರಿಚಿತ ಸಚಿವ ಸಿದ್ಧರಾಮಯ್ಯನವರನ್ನು ಟಿಪ್ಪುಗೆ ಕೊಂದಂತೆ ಕೊಲ್ಳಬೇಕು ಎನ್ನುವ ದಾಟಿಯಲ್ಲಿ ನಾಲಿಗೆ ಹರಿಬಿಟ್ಟಿದ್ದರ ಹಿಂದೆ ಕೂಡ ಅದೇ ಅನಾಗರಿಕ ಪಡೆ ಇತ್ತು. ಪಾಪ ಅಶ್ವತ್ಥನಾರಾಯಣ ಮಾತನಾಡಿ ಮಂಗನಾಗಿದ್ದು ಈಗ ಹಳೆಯ ಸಂಗತಿ. ಆಶ್ಚರ್ಯದ ಸಂಗತಿ ಎಂದರೆ ಬಿಜೆಪಿ ಪುಢಾರಿಗಳ ಈ ಬೌದ್ಧಿಕ ದಿವಾಳಿತನದ ಪ್ರಲಾಪವನ್ನು ಒಗ್ಗಟ್ಟಿನ ಧ್ವನಿಯಲ್ಲಿ ವಿರೋಧಿಸಬೇಕಾದ ಕಾಂಗ್ರೆಸ್ಸಿಗರು ಮೌನತಾಳಿದ್ದು. ಸಿದ್ಧರಾಮಯ್ಯನವರ ಶಕ್ತಿಗೆ ಸಂಘಿ-ಬಿಜೆಪಿ ಎಷ್ಟು ಬೆದರಿದೆಯೊ ಅದಕ್ಕಿಂತ ಹೆಚ್ಚು ಬೆದರಿದ್ದು ಕಾಂಗ್ರೆಸ್ ಪಕ್ಷದೊಳಗಿರುವ ಸಂಘಿ-ಬಿಜೆಪಿ ಮನಸ್ಥಿತಿಯವರು.
೨೦೧೪ ರಲ್ಲಿ ಮಣಿಶಂಕರ ಅಯ್ಯರ್ ಹೇಳಿದ ಹೇಳಿಕೆಯನ್ನು ಅನುಕಂಪ ಗಿಟ್ಟಿಸಲು ಬಳಸಿ ಯಶಸ್ವಿಯಾಗಿ ದಿಲ್ಲಿ ಗದ್ದುಗೆ ಏರಿದ ಮೋದಿಯ ಅನಾಹುತಕಾರಿ ಮಾದರಿ ಕಾಂಗ್ರೆಸ್ಸಿಗರಿಗೆ ಆಕರ್ಶಿಸಲೆಯಿಲ್ಲ. ಸಿದ್ಧರಾಮಯ್ಯನವರನ್ನು ಮುಗಿಸಬೇಕು ಎನ್ನುವ ಅಶ್ವತ್ಥನಾರಾಯಣನ ಹೇಳಿಕೆಯನ್ನು ಬಳಸಿಕೊಂಡು ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಬಿಜೆಪಿ ವಿರುದ್ಧ ಒಂದು ಭಾವನಾತ್ಮಕ ರಣತಂತ್ರ ಹೆಣೆಯಬಹುದಿತ್ತು. ಆದರೆ ಕಾಂಗ್ರೆಸ್ಸಿಗರಿಂದ ಒಂದು ಕನಿಷ್ಟ ಖಂಡನೆಯ ಹೇಳಿಕೆ ಬರದಿರುವುದು ಆ ಪಕ್ಷದ ದಿವಾಳಿತನವನ್ನು ತೋರಿಸುತ್ತದೆ. ೬೦-೭೦ ರ ದಶಕದ ಗರಿಬಿ ಹಠಾವೊˌ ೨೦ ಅಂಶದ ಕಾರ್ಯಕ್ರಮಗಳುˌ ಭೂಸುಧಾರಣೆ ಮುಂತಾದ ಹಳೆಯ ವಿಷಯಗಳ ಮೇಲೆ ಅವಲಂಬನೆಯಾಗಿರುವ ಕಾಂಗ್ರೆಸ್ ೧೯೯೦ ರ ನಂತರದ ಪೀಳಿಗೆಯ ಮನಸ್ಸಿನ ಮೇಲೆ ಬಿಜೆಪಿ ಮಾಡಿದ ಬೌದ್ಧಿಕ ದಾಳಿಯನ್ನು ಮರೆತಂತಿದೆ. ಬಿಜೆಪಿಯನ್ನು ಬಿಜೆಪಿಯ ತಂತ್ರಗಳ ಮೂಲಕವೆ ಎದುರಿಸುವ ಕಾಂಗ್ರೆಸ್ ನಾಯಕತ್ವ ಇಂದು ತುಂಬಾನೆ ಅಗತ್ಯವಿದೆ. ಇಲ್ಲದಿದ್ದರೆ ಸಿದ್ಧರಾಮಯ್ಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಳಿವು ಅನುಮಾನಾಸ್ಪದವಾಗಿದೆ.