2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ರಾಜ್ಯದಲ್ಲಂತೂ ಚುನಾವಣಾ ಕಾವು ಜೋರಾಗಿದ್ದು, ಪಕ್ಷದ ನಾಯಕರು, ಮುಖಂಡರು ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ. ವರುಣ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಬಿರುಸಿನ ಮತಪ್ರಚಾರ ಮಾಡ್ತಿದ್ದಾರೆ. ಇಂದು ವರುಣ ಅಖಾಡಕ್ಕೆ ಧುಮುಕಿರುವ ಸಿದ್ದರಾಮಯ್ಯ, ಮೊದಲು ವರುಣ ಕ್ಷೇತ್ರ ವ್ಯಾಪ್ತಿಯ ಕಾರ್ಯ ಗ್ರಾಮದ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಸಿದ್ದರಾಮೇಶ್ವರನ ದರ್ಶನ ಪಡೆದರು.

ಈ ವೇಳೆ ಸಿದ್ದರಾಮಯ್ಯರಿಗೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು. ಇನ್ನು ವರುಣ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೂಗು ಮತ್ತೆ ಮುನ್ನೆಲೆಗೆ ಬಂದಿದ್ದು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಸಿದ್ದು ಅಭಿಮಾನಿಗಳು ಘೋಷಣೆ ಕೂಗಿದರು. ಕಾರ್ಯ ಗ್ರಾಮದಲ್ಲಿ ಸಿದ್ದರಾಮಯ್ಯ ಭರ್ಜರಿ ಮತಬೇಟೆ ಮಾಡಿದ್ದು, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಕಾರ್ಯ ಗ್ರಾಮಸ್ಥರು ಸಿದ್ದರಾಮಯ್ಯನವರಿಗೆ ಹೂವಿನ ಮಳೆಗೈದರು. ಕಾರ್ಯ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಿದ್ದು ರೋಡ್ ಶೋ ನಡೆಸಿದ್ದು, ಸಿದ್ದರಾಮಯ್ಯಗೆ ಶಾಸಕ ಡಾ ಯತೀಂದ್ರ, ನಟ ಸಾಧುಕೋಕಿಲ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದ್ರು.

ಇನ್ನು ವರುಣ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಆಗಮಿಸಿದ ವೇಳೆ ಮಾತ್ನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜಕೀಯ ದ್ವೇಷದಿಂದ ರಾಜಕಾರಣ ಮಾಡಿದರೆ ಜನರು ಒಪ್ಪುವುದಿಲ್ಲ.ದ್ವೇಷದ ರಾಜಕಾರಣವನ್ನು ಜನರು ಎಂದಿಗೂ ಒಪ್ಪಲ್ಲ. ವರುಣ ಕ್ಷೇತ್ರದ ಜನರಿಗೆ ನನ್ನ ಮೇಲೆ ಪ್ರೀತಿ ಇದೆ ಜನರ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. 1978 ರಿಂದಲೂ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿನ ಜನ ನನ್ನನ್ನು ಕಾನ್ಫಿಡೆಂಟ್ ಆಗಿ ಇರಿ ಎಂದಿದ್ದಾರೆ. ವರುಣದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ಬಿ.ಎಲ್ ಸಂತೋಷ್ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ.ಆರ್ಎಸ್ಎಸ್ ನವರು, ಬಿಜೆಪಿಯವರು ರಾಜಕೀಯ ದ್ವೇಷದಿಂದ ನನ್ನನ್ನು ಸೋಲಿಸಲೇಬೇಕು ಅಂತ ನಿಂತಿದ್ದಾರೆ. ಸಂತೋಷ್ ಅವರೇನು ಇಲ್ಲಿನ ಮತದಾರರಲ್ಲ. ವರುಣ ಕ್ಷೇತ್ರದ ಬಗ್ಗೆ ನನಗೆ ಆತಂಕ ಇದೆ ಎಂಬುದು ಸುಳ್ಳು. ಕೊನೆಯ ಎರಡು ದಿನ ಕೂಡ ಪ್ರಚಾರಕ್ಕೆ ಬರುತ್ತೇನೆ ಅಂತ ಹೇಳಿದರು.

ಅಲ್ಲದೇ ಸಿದ್ದರಾಮಯ್ಯಗೆ ಭಯವಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರದ ಕುರಿತಾಗಿಯೂ ಮಾತ್ನಾಡಿದ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಯಾರ್ ರೀ..? ಅವರಿಗೂ ವರುಣಕ್ಕೂ ಏನು ಸಂಬಂಧ? ಅಂತ ಕೇಳಿದ್ರು. ಇನ್ನು ಸಿದ್ದರಾಮಯ್ಯಗೆ ಸೋಲುವ ಭೀತಿ ಎದುರಾಗಿದೆ ಎಂಬ ಸಿಎಂ ಹೇಳಿಕೆಗೆ, ಮೊದಲು ಅವರು ತಮ್ಮ ಕ್ಷೇತ್ರ ನೋಡಿಕೊಳ್ಳಲಿ ಹೇಳಿ ಅಂತ ತಿರುಗೇಟು ಕೊಟ್ರು.











