ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳು ಜನರು ಎಷ್ಟಿದ್ದಾರೋ ಅಷ್ಟೇ ಜನ ಅಥವಾ ಅದಕ್ಕೂ ಹೆಚ್ಚಿನ ಜನರು ವಿರೋಧ ಮಾಡುವವರೂ ಇದ್ದಾರೆ. ಅದೇ ರೀತಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಟು ಮಾತುಗಳಲ್ಲಿ ವ್ಯಂಗ್ಯ ಮಾಡುತ್ತ, ಮೋದಿ ಸರ್ಕಾರ ಮಾಡಿರುವ ಹುಳುಕುಗಳನ್ನು ಜನರ ಮುಂದಿಡುವ ಕೆಲವೇ ಕೆಲವು ನಾಯಕರಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೂಡ ಒಬ್ಬರು. ತನ್ನ ವಿಭಿನ್ನ ಮಾತಿನ ಶೈಲಿಯಿಂದಲೇ ಜನಮನ್ನಣೆ ಪಡೆದಿರುವ ಸಿದ್ದರಾಮಯ್ಯ, ಪ್ರಧಾನಿ ಅಭ್ಯರ್ಥಿ ಆಗಬೇಕು ಅನ್ನೋ ಕೂಗು ಕೂಡ ಕೇಳಿ ಬರುತ್ತಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಅಬ್ಬರದ ಪ್ರಚಾರ ಮಾಡಿಸಲು ಕಾಂಗ್ರೆಸ್ ನಾಯಕರು ತಯಾರಿ ಮಾಡುತ್ತಿದ್ದಾರೆ.
ರಾಜ್ಯದ ಮಾಸ್ ಲೀಡರ್ ಸಿದ್ದರಾಮಯ್ಯಗೆ ಪ್ರಮೋಷನ್..!

ದೇಶಾದ್ಯಂತ ಅಬ್ಬರದ ಪ್ರಚಾರ ಮಾಡುವ ಯಶಸ್ವಿ ನಾಯಕತ್ವಕ್ಕಾಗಿ ಹುಡುಕಾಟ ನಡೆಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ಪ್ರಚಾರ ಸಮಿತಿಗೆ ಸೇರಿಸಲು ಮುಂದಾಗಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಲು ಶುರು ಆಗಿದೆ ಬೆಳಗಾವಿಯ ಸಮಾವೇಶ. ಇಂದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕುರುಬ ಸಮುದಾಯದ ಸಮಾವೇಶ ಹಮ್ಮಿಕೊಂಡಿದ್ದು, ಕುರುಬ ಸಮುದಾಯದ ಅಂತಾರಾಷ್ಟ್ರೀಯ ಮಟ್ಟದ 9ನೇ ಮಹಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ತನ್ನದೇ ಸಮುದಾಯಕ್ಕೆ ಸೇರಿದ ಜನರನ್ನು ಕುರಿತು ಭಾಷಣ ಮಾಡಲಿದ್ದಾರೆ. ದೇಶಾದ್ಯಂತ ವಿವಿಧ ಹೆಸರುಗಳಲ್ಲಿ ಹರಿದು ಹಂಚಿಹೋಗಿರುವ ಕುರುಬ ಸಮುದಾಯವನ್ನು ಒಗ್ಗೂಡಿಸಿ ಸಿದ್ದರಾಮಯ್ಯ ಮೂಲಕ ಮತಸೆಳೆಯುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮಾಡಿದೆ.
ಒಂದೇ ವೇದಿಕೆಯಲ್ಲಿ 50 ಸಾವಿರ ಜನರ ಸಮಾವೇಶ..!
ಬೆಳಗಾವಿ ಜಿಲ್ಲಾ ಕ್ರೀಡಾಂಗಣದ ಸಮಾವೇಶ ಆಯೋಜನೆ ಮಾಡಲಾಗಿದ್ದು, ಇಂದಿನ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚಿನ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಮಹಾರಾಷ್ಟ್ರ, ತೆಲಂಗಾಣ, ಗೋವಾದಿಂದಲೂ ಜನರು ಬರ್ತಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಹೆಚ್.ಎಂ ರೇವಣ್ಣ ಮಾಹಿತಿ ನೀಡಿದ್ದಾರೆ. ಬೃಹತ್ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕುರುಬ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಲೋಕಸಭಾ ಚುನಾವಣೆಗೂ ಮೊದಲು ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದೆ. ಇಲ್ಲಿಂದ ಲೋಕಸಭಾ ಚುನಾವಣೆಗೆ ರಣಕಹಳೆ ಊದಲು ಕಾಂಗ್ರೆಸ್ ಚಿಂತನೆ ನಡೆಸಿದ್ದು, ನಿಮ್ಮದೇ ಸಮುದಾಯದ ನಾಯಕ ಎನ್ನುವ ಮೂಲಕ ಕುರುಬ ಸಮುದಾಯ ಸೆಳೆಯುವುದು ಪ್ರಮುಖ ಅಂಶವಾಗಿದೆ. ಜೊತೆಗೆ ಅಬ್ಬರದ ಪ್ರಚಾರ ನಡೆಸಿ ದೇಶಾದ್ಯಂತ ಸಮುದಾಯದ ಜೊತೆಗೆ ಮತ್ತಷ್ಟೂ ಜನರನ್ನು ಸೆಳೆಯುವ ಕಸರತ್ತು ಆರಂಭ ಆಗಿದೆ.
ಕಾರ್ಯಕ್ರಮಕ್ಕೆ ಯಾರೆಲ್ಲಾ ಬರ್ತಾರೆ, ಯಾರಿದರ ರೂವಾರಿ..?
ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮಿಜಿ, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಕೇಂದ್ರ ಸಚಿವ ಫಗನ್ ಸಿಂಗ್ ಕುಲಾಸ್ತೆ, ಸಂಸದ ಎಸ್.ಪಿ ಸಿಂಗ್ ಬಘೇಲ್, ಮಹಾರಾಷ್ಟ್ರದ ಹಲವು ಸಚಿವರು, ಶಾಸಕರು ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಕುರುಬ ಸಮುದಾಯದ ನಾಯಕರಾದ ಹೆಚ್.ಎಂ ರೇವಣ್ಣ ಹಾಗು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮುಂಚೂಣಿಯಲ್ಲಿದ್ದಾರೆ. ಇಬ್ಬರೂ ನಾಯಕರು ಸಿದ್ದರಾಮಯ್ಯ ರಾಷ್ಟ್ರಮಟ್ಟದ ರಾಜಕಾರಣಕ್ಕೆ ಹೋಗಬೇಕು. ಕಳಂಕ ರಹಿತ ನಾಯಕ, ರಾಷ್ಟ್ರಮಟ್ಟದಲ್ಲಿ ವಿಜೃಂಭಿಸಲಿ ಎಂದು ಹಾರೈಸಿದ್ದಾರೆ. ಇನ್ನು ಇದು ಸಮಾವೇಶ ಎನ್ನುವುದಕ್ಕಿಂತ ಕುರುಬ ಸಮುದಾಯದ ರಾಜಕೀಯ ಸಮ್ಮೇಳನ. ಈ ಕಾರ್ಯಕ್ರಮದಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಬೇಕು ಎಂದು ಒತ್ತಾಯಿಸಿ ನಿರ್ಣಯ ತೆಗೆದುಕೊಳ್ತೇವೆ ಎಂದಿದ್ದಾರೆ ಹೆಚ್.ವಿಶ್ವನಾಥ್..
-ಕೃಷ್ಣಮಣಿ