ಇದೊಂದು ಬೆಟ್ಟದ ಮೇಲೊಂದು ಮನೆಯ ಮಾಡಿದ ಕಥೆ. ಜನಸಂಚಾರವೇ ಸಾಹಸವಾದ ಬೆಟ್ಟದ ಮೇಲಿನ ಕುಗ್ರಾಮದ ಶಾಲೆಯ ಆವರಣದಲ್ಲೇ ವಾಸ್ತವ್ಯ ಹೂಡಿ, ಕಾಡಿನ ಮಕ್ಕಳಿಗೆ ಅಕ್ಷರದ ಬೆಳಕು ತೋರಿಸುತ್ತಿರುವ ಉತ್ಸಾಹಿ ಯುವ ಶಿಕ್ಷಕರೊಬ್ಬರ ಅಪರೂಪದ ಸಾಮಾಜಿಕ ಕಾಳಜಿಯ ಸಾಹಸಗಾಥೆ.
ಹೌದು, ನಾಗರಿಕ ಸೌಲಭ್ಯ ವಂಚಿತ ಹಲವು ಹಳ್ಳಿಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಉತ್ತರಕನ್ನಡ ಜಿಲ್ಲೆಯ ಭಟ್ಕಳ ಗಡಿ ಭಾಗದ ದುರ್ಗಮ ಕಾಡು-ಕಣಿವೆಯ ನಡುವೆ ಹೂತುಹೋಗಿರುವ ಮೆಘಾನೆ ಎಂಬ ಬೆಟ್ಟದ ಮೇಲಿನ ಊರಿನ ಶಾಲೆಯಲ್ಲಿ ಅಕ್ಷರ ಸೇವೆ ಸಲ್ಲಿಸುತ್ತಿರುವ ಅನ್ವರ್ ಎಂಬ ಯುವ ಶಿಕ್ಷಕರು, ಕಳೆದ ಐದೂವರೆ ವರ್ಷಗಳಿಂದ ಪುಟ್ಟ ಶಾಲೆಯ ಆವರಣದಲ್ಲೇ ವಾಸವಿದ್ದು ಮಕ್ಕಳಿಗೆ ಪಾಠಪ್ರವಚನ ಮಾಡುತ್ತಿದ್ದಾರೆ.