ಶಿವಮೊಗ್ಗ ಮಹಾನಗರ ಪಾಲಿಕೆ ಶಾಪಿಂಗ್ ಮಾಲ್ ಲೀಸ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಹಿರಂಗವಾಗಿದ್ದು ಬಿಜೆಪಿಗೆ ಕಿಕ್ಬ್ಯಾಕ್ ಪಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದು ನೋಟಿನ ಹಾರದ ಮೂಲಕ ಕಿಕ್ ಬ್ಯಾಕ್ ಅಣುಕು ಪ್ರದರ್ಶನ ಮಾಡಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಈಗಾಗಲೇ ಬಿಜೆಪಿ ಸರಕಾರದ ಮೇಲೆ ಭಷ್ಟಾಚಾರದ ನೂರೆಂಟು ಆರೋಪಗಳಿವೆ. ಈ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ತವರು ಶಿವಮೊಗ್ಗದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಿಜೆಪಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಕೋಲಾಹಲವೇ ಇಂದು ನಡೆಯಿತು. ಪಾಲಿಕೆ ವ್ಯಾಪ್ತಿಯ ಶಿವಪ್ಪ ನಾಯಕ ವಾಣಿಜ್ಯ ಸಂಕೀರ್ಣದ ಲೀಸ್ ಅವಧಿಯನ್ನು ಕಾನೂನು ಬಾಹಿರವಾಗಿ ವಿಸ್ತರಣೆ ಪ್ರಸ್ತಾಪ ಮಾಡಿರುವ ಬಿಜೆಪಿ ವಿರುದ್ಧ ಮಹಾನಗರ ಪಾಲಿಕೆ ಸದಸ್ಯರು ಪಾಲಿಕೆಯ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಜೊತೆಗೆ ಸಿಟಿ ಸೆಂಟರ್ ಮಾಲ್ ನ ಫೋಟೋಗೆ ನಕಲಿ ನೋಟುಗಳ ಹಾರ ಹಾಕಿ ಬಿಜೆಪಿ ಆಡಳಿತ ಕಿಕ್ ಬ್ಯಾಕ್ ಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಅನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಬ್ಯಾರೀಸ್ ಗ್ರೂಪ್ ಗೆ 32 ವರ್ಷಗಳ ಅವಧಿಯ ಲೀಸ್ ಗೆ ನೀಡಿತ್ತು. ಆದರೆ ಕಾನೂನು ಬಾಹಿರವಾಗಿ ಈ ಲೀಸ್ ಅವಧಿಯನ್ನು 99 ವರ್ಷಗಳ ಅವಧಿಗೆ ಏರಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿದ್ದು, ಈ ಕುರಿತು ಪಾಲಿಕೆ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಹೋರಾಟ ಆರಂಭಿಸಿದ್ದವು. ಆಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯಿಂದ ತನಿಖಾ ತಂಡ ರಚನೆ ಮಾಡಲಾಗಿತ್ತು. ತನಿಖಾ ತಂಡ ತನಿಖಾ ವರದಿ ನೀಡಿ ಆರು ತಿಂಗಳೇ ಕಳೆದಿದ್ದರೂ ಆಡಳಿತಾರೂಢ ಬಿಜೆಪಿ ಈ ವರದಿ ಬಹಿರಂಗಗೊಳಿಸಿರಲಿಲ್ಲ. ಹೀಗಾಗಿ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗೆ ಇಳಿದು ಹೋರಾಟ ಆರಂಭಿಸಿದರು. ಜೊತೆಗೆ 40 ಪರ್ಸೆಂಟ್ ಆಡಳಿತ ಎಂದು ಘೋಷಣೆ ಕೂಗುವುದಲ್ಲದೆ ಸಿಟಿ ಸೆಂಟರ್ ಮಾಲ್ ನ ಫೋಟೋಗೆ ನಕಲಿ ನೋಟುಗಳ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಕೂಡಲೇ ತನಿಖಾ ವರದಿ ಬಹಿರಂಗಪಡಿಸುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ.
ಪಾಲಿಕೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಹೋರಾಟ ಹೆಚ್ಚಾದ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೇ ತನಿಖಾ ವರದಿ ಮಂಡಿಸಲಾಯಿತು. ಈ ವರದಿಯಲ್ಲಿ ಪಾಲಿಕೆಯ ಆಡಳಿತ ಪಕ್ಷದ ನಾಯಕನೇ ಸಿಟಿ ಸೆಂಟರ್ ಮಾಲ್ ನ ಅವಧಿ ವಿಸ್ತರಿಸುವ ಪ್ರಸ್ತಾವನೆಯನ್ನು ಸಭೆ ನಡಾವಳಿಯಲ್ಲಿ ಸೇರಿಸಲು ಹೇಳಿದ್ದಾಗಿ ಅಧಿಕಾರಿ ಲಿಖಿತ ರೂಪದ ಹೇಳಿಕೆ ನೀಡಿದ್ದರು. ಇದು ವಿಕ್ಷಗಳ ಆಕ್ರೋಶ ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು. ಪಾಲಿಕೆಯಲ್ಲಿನ ಆಡಳಿತ ಪಕ್ಷ ಕಿಕ್ ಬ್ಯಾಕ್ ಪಡೆಯುತ್ತಿದೆ ಜೊತೆಗೆ 40 ಪರ್ಸೆಂಟ್ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯ ಅಡಳಿತ ಪಕ್ಷವು 2021ರಲ್ಲಿ ಮಹಾಪೌರರು, ಆಯುಕ್ತರು ಹಾಗೂ ಪರಿಷತ್ ಕಾರ್ಯದರ್ಶಿ ಗಮನಕ್ಕೆ ತರದೇ, ನಿಯಮಾನುಸಾರ ಅನುಮೋದನೆ ಪಡೆಯದೇ ಕಾನೂನು ಬಾಹಿರವಾಗಿ ಲೀಸ್ ಅವಧಿಯನ್ನು 99 ವರ್ಷಕ್ಕೆ ವಿಸ್ತರಣೆಯ ವಿಷಯ ಮಂಡಿಸಿದೆ. ಇದು ಕಾನೂನು ಬಾಹಿರ ತಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಿಗಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಕಿಡಿಕಾರಿದ್ದಾರೆ.