ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿಗಳು ಮಾಜಿ ಸಚಿವ, ಹಾಲಿ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ.
ಇಬ್ಬರೂ ಹಿರಿಯ ಮುಖಂಡರು ತಮ್ಮ ಪಕ್ಷಗಳ ಸಿದ್ಧಾಂತಗಳ ಆಧಾರದ ಮೇಲೆಯೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿಕೊಂಡರೂ, ಒಂದೇ ವೇದಿಕೆ ಮೇಲೆ ಕೆಲವು ಭಾರಿ ಕಂಡರೂ ಸಹ ಸೈಂದಾಂತಿಕ ಭಿನ್ನಾಭಿಪ್ರಾಯ ಹಾಗೂ ರಾಜಕಾರಣದಲ್ಲಿ ವಿಭಿನ್ನ ದೃಷ್ಟಿಕೋನ ಇಟ್ಟುಕೊಂಡವರು. ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಲವು ಸುದ್ದಿಗೋಷ್ಟಿಗಳನ್ನ ನಡೆಸಿ ಆರಗ ಅವರ ಅಜ್ಞಾನದ ಬಗ್ಗೆ ಕುಟುಕಿದ್ದಾರೆ. ತೀರ್ಥಹಳ್ಳಿಯ ಘನತೆ ಅನಾನುಭವಿ ಮಂತ್ರಿಯಿಂದ ಹರಾಜಾಗಿದೆ ಎಂದು ಅವಲತ್ತುಕೊಂಡಿದ್ದಾರೆ. ರಾಜಕಾರಣದಲ್ಲಿ ದಡ್ಡ ಎಂದು ಪದೇ ಪದೇ ಹೇಳಿ ಜನರನ್ನ ಸೆಳೆಯುವುದೂ ರಾಜಕಾರಣ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಮಟ್ಟಿಗೆ ಕಿಮ್ಮನೆ ರತ್ನಾಕರ್ ಆರಗ ಜ್ಞಾನೇಂದ್ರ ವಿರುದ್ಧ ಟೊಂಕ ಕಟ್ಟಿ ನಿಂತಂತೆ ಕಾಣುತ್ತಿದೆ. ಈ ಮೊದಲು ಎರಡು ಮೂರು ಸಲ ಏಳು ವರ್ಷದ ಹಿಂದಿನ ನಂದಿತಾ ಅಸಹಜ ಸಾವು ಪ್ರಕರಣದ ಬಗ್ಗೆ ವಿಷಯ ಮಂಡಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಈಗ ನೇರವಾಗಿ ಜ್ಞಾನೇಂದ್ರಗೆ ಸವಾಲು ಹಾಕುತ್ತಿದ್ದಾರೆ. ಕಿಮ್ಮನೆ ಮಂತ್ರಿಯಾಗಿದ್ದಾಗ ಎದ್ದ ಕೋಮು ಗಲಭೆ ಹಾಗೂ ಆರೋಪ ಹೊರಿಸಲು ನಡೆದ ಪ್ರಯತ್ನಗಳನ್ನ ಮತ್ತೆ ಬಯಲಿಗೆ ಎಳೆಯಲು ಸನ್ನದ್ಧರಾಗಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿರುವ ಕಿಮ್ಮನೆ ರತ್ನಾಕರ್, ನಂದಿತಾ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ. ಜ.೩೦ರಂದು ತೀರ್ಥಹಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುವೆ. ನಾನು ಸಚಿವನಾಗಿದ್ದಾಗ ಅರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಮುಖಂಡರು ನಂದಿತಾ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಅರಗ ಜ್ಞಾನೇಂದ್ರ ಎಂಬ ಕೋಮುವಾದಿ ಗೃಹಮಂತ್ರಿ ನನ್ನನ್ನು ಸೋಲಿಸಲು ಯಾವುದೇ ರಾಜಕೀಯ ಆಯುಧ ಸಿಗದೇ ಹತಾಶರಾಗಿ ನಂದಿತಾ ಆತ್ಮಹತ್ಯೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಕೊಲೆ ಅತ್ಯಾಚಾರವೆಂದು ಬಿಂಬಿಸಿ ಕೋಮುಗಲಭೆ ಸೃಷ್ಠಿಸಿ ರಾಜಕೀಯ ಲಾಭಕ್ಕಾಗಿ ಕೃಷ್ಣ ಪೂಜಾರಿ ಕುಟುಂಬವನ್ನು ರಸ್ತೆಗೆ ತಂದು ನಿಲ್ಲಿಸಿದರು. ನನ್ನ ಮೇಲೆ ಆಪಾದನೆ ಹೊರಿಸಿದ್ದರು. ಈ ಆರೋಪದ ಹಿಂದೆ ಅನೇಕ ಭ್ರಷ್ಟರು ನಂಬಿಕೆ ದ್ರೋಹಿಗಳು ಕೂಡ ಸೇರಿಕೊಂಡು ನನ್ನನ್ನು ಸೋಲಿಸಲು ಕಳ್ಳದಾರಿ ಮಾಡಿಕೊಂಡರು ಎಂದು ಆರೋಪಿಸಿದರು.
ಇಂದು ಅರಗ ಜ್ಞಾನೇಂದ್ರ ಅವರೇ ಗೃಹ ಮಂತ್ರಿಗಳಾಗಿದ್ದಾರೆ. ಅವರು ನಿರ್ಭಿತಿಯಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದಾಗಿದೆ. ನಾನು ಹಸ್ತಕ್ಷೇಪ ಮಾಡಿದೆ ಎಂಬ ಆರೋಪವನ್ನು ಕೂಡ ಅವರು ಹೊರಿಸಿದ್ದಾರೆ. ೨೦೧೪ರಿಂದ ನಂದಿತಾ ಸಾವಿನ ನಂತರ ಇದೇ ಅರಗ ಜ್ಞಾನೇಂದ್ರ ಅವರು ೩ವರ್ಷಗಳ ಕಾಲ ವೈಕುಂಠ ಸಮಾರಾಧನೆ ಮಾಡಿದ್ದರು. ಗೆದ್ದ ಮೇಲೆ ವೈಕುಂಠ ಸಮಾರಾಧನೆ ಮಾಡಲಿಲ್ಲ. ೨೦೧೮ರ ಚುನಾವಣೆ ಸಂದರ್ಭದಲ್ಲಿ ನಂದಿತ ಮನೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮೀತ್ ಶಾ ಕೂಡ ಸಿಬಿಐ ತನಿಖೆಗೆ ಒಳಪಡಿಲಾಗುವುದು ಎಂದಿದ್ದರು. ಈಗ ಸಿಬಿಐ ತನಿಖೆ ನಡೆಸಲಿ ಎಂದು ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.

ಸಿಬಿಐ ತನಿಖೆಯಲ್ಲಿ ಒಂದು ವೇಳೆ ತಾವು ತಪ್ಪಿತಸ್ತರು ಎಂದು ಕಂಡು ಬಂದರೆ ಸಾಕ್ಷಿ ಸಮೇತ ಸಾಬೀತು ಆದರೆ ನಾನು ರಾಜಕೀಯ ಕ್ಷೇತ್ರದಿಂದ ನಿವೃತ್ತಿ ಘೋಷಿಸುತ್ತೇನೆ. ೬ ತಿಂಗಳೊಳಗೆ ಸಿಬಿಐ ತನಿಖಾ ವರದಿ ಕೊಡಿ ಇಲ್ಲವೇ ಶಾಸಕ ಸ್ಥಾನಕ್ಕೆ ನೀವು ರಾಜೀನಾಮೆ ನೀಡಿ ಇಂತಹ ಸುಳ್ಳು ಆರೋಪಗಳಿಂದ ಜನರ ಭಾವನೆಗಳನ್ನು ದಿಕ್ಕು ತಪ್ಪಿಸಿದ್ದಿರಿ. ಮಾನ್ಯ ಮುಖ್ಯಮಂತ್ರಿಗಳು ಈ ಎಲ್ಲಾ ಘಟನೆಗಳ ಹಿನ್ನಲೆಯಲ್ಲಿ ಅಗರ ಜ್ಞಾನೇಂದ್ರ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ತೀರ್ಥಹಳ್ಳಿಯ ಅರಣ್ಯಾಧಿಕಾರಿಗಳು ಗೃಹ ಸಚಿವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ದೌರ್ಜನ್ಯ ವೆಸಗುತ್ತಿದ್ದಾರೆ. ಇದನ್ನು ಖಂಡಿಸಿ ಫೆ.೩ರಂದು ಗುಡ್ಡೆಕೊಪ್ಪದಿಂದ ತೀರ್ಥಹಳ್ಳಿ ಅರಣ್ಯ ಸಂರಕ್ಷಾಧಿಕಾರಿಗಳ ಕಚೇರಿಯವೆರಗೆ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳುವೆ ಎಂದರು.
ಇನ್ನು ಮತಾಂತರದ ಬಗೆಗೆ ತಮ್ಮ ನಿಲುವು ಗಾಂಧೀಜಿಯ ನಿಲುವನೇ ಹೊಂದಿದೆ. ಗಾಂಧೀಜಿಯವರು ಮತಾಂತರಕ್ಕೆ ಸಂಬಂಧಿಸಿದಂತೆ ಸಮನ್ವಯ ದೃಷ್ಠಿಯನ್ನು ಸಾರಿದ್ದರು. ಅದೇ ತತ್ವದ ಅಡಿಯಲ್ಲಿ ನಾವಿದ್ದೇವೆ ಎಂದ ಅವರು, ಅರಗ ಜ್ಞಾನೇಂದ್ರ ಅವರು ಎಲ್ಲಾ ಕೋವಿಡ್ ನಿಯಮಗಳನ್ನು ಮೀರಿದ್ದಾರೆ. ತೀರ್ಥಹಳ್ಳಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ ಮಾಡಿ ಸಮರ್ಥಿಸಿಕೊಂಡಿದ್ದಾರೆ. ಶಂಕುಸ್ಥಾಪನೆ, ಉದ್ಘಾಟನೆ, ಪೂಜೆಗಳು ಇವುಗಳನ್ನೆಲ್ಲ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಕೋವಿಡ್ ನಿಯಮ ಗೃಹ ಸಚಿವರಿಗೊಂದು ಸಾರ್ವಜನಿಕರಿಗೊಂದು ಇರುತ್ತದೆಯೇ ಎಂದು ಪ್ರಶ್ನೆ ಮಾಡಿದರು.