ಹಾಸನ: ಕಾಂಗ್ರೆಸ್ ಅಭ್ಯರ್ಥಿಯನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಐತಿಹಾಸಿಕ ನಿರ್ಧಾರವನ್ನು ನೀವು ಮಾಡಬೇಕು. ಆ ಮೂಲಕ ಧರ್ಮರಾಜ್ಯ ಸ್ಥಾಪನೆ ಮಾಡಬೇಕು ಎಂದು ಸಂಸದ ಡಿ ಕೆ ಸುರೇಶ್ ಮನವಿ ಮಾಡಿದರು.
ಹೊಳೆನರಸೀಪುರ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು. ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ. ಆದರೆ ಧೃತರಾಷ್ಟ್ರ ಪ್ರೇಮದಿಂದ ಅವರಿಗೆ ಐದು ಗ್ರಾಮ ಸಿಗೋದಿಲ್ಲ. ಕೊನೆಗೆ ಕುರುಕ್ಷೇತ್ರ ಯುದ್ಧ ನಡೆಯಿತು. ಧರ್ಮರಾಜ್ಯ ಸಂಸ್ಥಾಪನೆ ಆಯಿತು. ನೀವು ಹೊಳೆನರಸೀಪುರದ ಜನ ಈ ಧರ್ಮ ಸೂಕ್ಷ್ಮ ಅರ್ಥ ಮಾಡಿಕೊಂಡು, ಇಂಥದ್ದೇ ಇತಿಹಾಸ ಸೃಷ್ಟಿ ಮಾಡಬೇಕು ಎಂದರು.
![](https://pratidhvani.com/wp-content/uploads/2023/02/IMG-20230228-WA0025-1024x682.jpg)
ಅಣ್ಣ (ರೇವಣ್ಣ) ಕೋಣನಾದ್ರೂ ಬಲಿ ಕೊಡ್ಲಿ. ನಿಂಬೆ ಹಣ್ಣನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ. ಆದರೆ ಈಗ ನಿಂಬೆ ಹಣ್ಣು ವರ್ಕೌಟ್ ಆಗಲ್ಲ. ಎಲ್ಲ ರಿವರ್ಸ್ ಹೊಡಿತದೆ. ಈಗಾಗ್ಲೇ ಹೊಡೀತಾ ಇದೆ. ಹೊಳೆನರಸೀಪುರದಲ್ಲಿ ಫ್ಲೈ ಓವರ್ ಕಟ್ಟಿದ್ದಾರೆ. ಆದರೆ ಅದು ಜನಸಾಮಾನ್ಯರಿಗೆ ಉಪಯೋಗವಾಗದೇ ದೊಡ್ಡವರ ಮನೆಯವರ ಚೌಲ್ಟ್ರಿ, ಥಿಯೇಟರ್ ಗೆ ದಾರಿ ಮಾಡಿಕೊಳ್ಳಲು ಉಪಯೋಗವಾಗಿದೆ ಎಂದು ಹರಿಹಾಯ್ದರು.
ನಾವು ಯಾವುದೊ ಒಂದು ಕುಟುಂಬ ರಕ್ಷಣೆಗೆ ಬದ್ಧರಾಗಿಲ್ಲ.ಅದಕ್ಕಾಗಿ ಕೆಲಸ ಮಾಡೋರಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರೋ ಸಂವಿಧಾನದ ನೆರಳಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಎಲ್ಲ ವರ್ಗದವರ ರಕ್ಷಣೆಗೆ ಕಾಂಗ್ರೆಸ್ ಕಟಿಬದ್ಧವಾಗಿದೆ. ನಿಮ್ಮೆಲ್ಲರ ರಕ್ಷಣೆಗೆ ನಾವು ಇದ್ದೇವೆ. ಪ್ರಜಾಧ್ವನಿಯನ್ನು ನಿಮ್ಮ ಮುಂದೆ ತಂದಿದ್ದೇವೆ. ನಿಮ್ಮ ರಕ್ಷಣೆಗೆ ಬಂದಿದ್ದೇವೆ. ನೀವು ತೀರ್ಮಾನ ಮಾಡಿ, ಬದಲಾವಣೆ ತನ್ನಿ. ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ. ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
![](https://pratidhvani.com/wp-content/uploads/2023/02/IMG-20230228-WA0026-1024x460.jpg)