ಬೀದರಿನ ಶಾಹೀನ್ ಪ್ರಾಥಮಿಕ ಶಾಲೆಯಲ್ಲಿ ನಾಟಕ ಮಾಡಿದ ಮಕ್ಕಳ ವಿಚಾರಣೆ ನಡೆಸುವಾಗ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿಎಎ) ವಿರುದ್ಧ ಬೀದರಿನ ಶಾಹೀನ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ನಡೆಸಿದ ನಾಟಕಕ್ಕೆ ಸಂಬಂಧ ಪಡಿಸಿದಂತೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದು, ವಿದ್ಯಾರ್ಥಿ ಪೋಷಕರನ್ನು ಹಾಗೂ ಶಿಕ್ಷಕರನ್ನು, ಶಾಲೆಯ ಆಡಳಿತ ಮಂಡಳಿಯನ್ನು ಆರೋಪಿಗಳಾಗಿಸಿತ್ತು.
ಈ ಸಂಬಂಧ ವಿಚಾರಣೆ ನಡೆಸುವಾಗ ಬಾಲ ನ್ಯಾಯ ಕಾಯ್ದೆ, 2015ರ ಉಲ್ಲಂಘನೆಯಾಗಿದೆಯೆಂದು ಕೋರ್ಟ್ ಹೇಳಿದೆ. ಅಲ್ಲದೆ, ಇನ್ನು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗಕೂಡದೆಂದು ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಪೊಲೀಸರು ನಡೆಸಿದ ವಿಚಾರಣೆ ರೀತಿಯನ್ನು ಪ್ರಶ್ನಿಸಿ ವಕೀಲರಾದ ನಯನಾ ಜ್ಯೋತಿ ಮತ್ತು ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಮೇಲ್ವಿಚಾರಣಾ ಸಂಸ್ಥೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರ ವಿರುದ್ಧ ತನಿಖೆ ನಡೆಸಬೇಕು ಹಾಗೂ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಅರ್ಜಿಯನ್ನು ಆಲಿಸಿದ ನ್ಯಾಯಾಲಯ, ವಿಚಾರಣೆ ನಡೆಸಿದ ಸಂಧರ್ಭದಲ್ಲಿ ತೆಗೆದ ಚಿತ್ರಗಳನ್ನು ನೋಡಿದರೆ ನಾಲ್ವರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಲ್ಲಿ ಇಬ್ಬರು ಬಂದೂಕುಗಳನ್ನು ಹೊಂದಿದ್ದರು. ಪೊಲೀಸರು ಈ ರೀತಿ ನಡೆಸಿರುವ ವಿಚಾರಣೆಯು ಬಾಲ ನ್ಯಾಯ ಕಾಯ್ದೆಯ ಉಲ್ಲಂಘನೆಯಾಗಿದೆʼ ಎಂದು ಕೋರ್ಟ್ ಹೇಳಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ʼ ಮಕ್ಕಳ ಹಕ್ಕುಗಳು ಮತ್ತು ಬಾಲ ನ್ಯಾಯ ಕಾಯ್ದೆಯ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಸಮವಸ್ತ್ರ ಧರಿಸಿ ಮತ್ತು ಬಂದೂಕುಗಳ ಸಹಿತ ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸುವ ಮೂಲಕ ಪ್ರತಿಕ್ರಿಯಿಸಲು ರಾಜ್ಯಕ್ಕೆ ನಿರ್ದೇಶನ ನೀಡುತ್ತೇವೆʼ ಎಂದು ಪೀಠ ಹೇಳಿದೆ.
ಕಳೆದ ವರ್ಷ ಸಿಎಎ ವಿರುದ್ಧ ಶಾಲೆ ಆವರಣದಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಪಾತ್ರಧಾರಿಗಳು ಮೋದಿ ವಿರುದ್ಧ ಭಾಷಣ ಕೂಗಿದ್ದರು. ಇದರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಮಾರ್ಚ್ 2020 ರಲ್ಲಿ ನ್ಯಾಯಾಲಯವು ಇದರಲ್ಲಿ ಯಾವುದೇ ದೇಶದ್ರೋಹ ಚಟುವಟಿಕೆಗಳು ಇಲ್ಲವೆಂದು ಆಡಳಿತ ಮಂಡಳಿ ಸಿಬ್ಬಂದಿಗೆ ಜಾಮೀನು ನೀಡಿತ್ತು.