ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹಾತ್ವಾಕಾಂಕ್ಷೆಯ ಆದಿತ್ಯ-ಎಲ್1 ನೌಕೆಯು ಶನಿವಾರ (ಸೆಪ್ಟೆಂಬರ್ 2) ಯಶಸ್ವಿಯಾಗಿ ಸೂರ್ಯನೆಡೆಗೆ ಸಾಗಿದೆ. ಇಸ್ರೊದ ಈ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ವಿಶ್ವವನ್ನು ಅರಿಯುವ ಇಸ್ರೊ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
“ಎಲ್ಲ ಮಾನವರ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಉತ್ತಮ ಅರಿಯುವಿಕೆಯನ್ನು ಅಭಿವೃದ್ಧಿಪಡಿಸುವ ನಮ್ಮ ನಿರಂತರ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯಲಿ” ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶನಿವಾರ ಬೆಳಿಗ್ಗೆ ನಿಗದಿಪಡಿಸಿದ ಸಮಯ 11.50ಕ್ಕೆ ಆದಿತ್ಯ-ಎಲ್1 ಯಶಸ್ವಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು.
ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ನೌಕೆಯು ತನ್ನ ನಾಲ್ಕು ತಿಂಗಳ ಪ್ರಯಾಣದಲ್ಲಿ ಸೂರ್ಯನ ಹೊರ ಪದರಗಳನ್ನು ಅಧ್ಯಯನ ಮಾಡಲಿದೆ.