ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಒಂದು ಬೃಹತ್ ಯೋಜನೆಗೆ ಕೈಹಾಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕುರಿತು ಮಾಹಿತಿಯನ್ನು ಕಲೆ ಹಾಕಿ, ಅವರ ಕುರಿತ ಪುಸ್ತಕವನ್ನು ಹೊರತರಲು ತನ್ನ ಅಂಗ ಸಂಸ್ಥೆಗಳ ಸಂಶೋಧಕರಿಗೆ ಸೂಚನೆ ನೀಡಿದೆ. ಪ್ರಸ್ತುತ ಜನರ ಮನಸ್ಸಿನಿಂದ ಅಳಿಸಿ ಹೋಗಿರುವಂತಹ ಸ್ವಾತಂತ್ರ್ಯ ಹೊರಾಟಗಾರರ ಜೀವನ ಚರಿತ್ರೆ ಕುರಿತ ಪುಸ್ತಕ ಇದಾಗಿರಲಿದೆ.
ಆರ್ಎಸ್ಎಸ್’ನ ವಿವಿಧ ಅಂಗಸಂಸ್ಥೆಗಳ ಕಾರ್ಯಕರ್ತರು ಈ ಕಾರ್ಯಕ್ಕಾಗಿ ನಿಯೊಜಿಸಲ್ಪಟ್ಟಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಇತಿಹಾಸ ಸಂಕಲನ ಸಮಿತಿ, ಲೋಕ ಪ್ರಗ್ಯಾ ಸೇರಿದಂತೆ ಇತರ ಸಂಸ್ಥೆಗಳು ಆರ್ಎಸ್ಎಸ್ ನೊಂದಿಗೆ ಕೈಜೋಡಿಸಲಿವೆ. ಯುವ ಜನರಿಗೆ ಪರಿಚಯವೇ ಇಲ್ಲದಿರುವಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪತ್ತೆ ಹಚ್ಚುವಲ್ಲಿಂದ ಹಿಡಿದು, ಅವರ ಕುರಿತ ಎಲ್ಲಾ ಮಾಹಿತಿಯನ್ನು ಕಲೆ ಹಾಕುವವರೆಗೂ ವಿವಧ ಸ್ಥರಗಳಲ್ಲಿ ಈ ಯೋಜನೆ ಮುನ್ನಡೆಯುತ್ತಿದೆ.
ಸ್ವಾತಂತ್ರ್ಯ ಹೊರಾಟದಲ್ಲಿ ಪಾಲ್ಗೊಂಡಿದ್ದಂತಹ, ಅಲ್ಲಾಸ್ಕರ್ ದತ್ತಾ, ದುಕಾರಿ ಬಾಲಾ ದೇವಿ, ಸತೀಶ್ ಚಂದ್ರ ಸಮಂತಾ, ನಾನಿಬಾಲಾ ದೇವಿ, ಬೀನಾ ದಾಸ್, ಸತ್ಯೇಂದ್ರನಾಥ ಬಸು, ಕುಂದ್ರಪ್ರಭಾ ಸೇನ್ ಗುಪ್ತಾ, ಪುಲಿನ್ ಬಿಹಾರಿ ದಾಸ್, ಮನೋರಂಜನ್ ಸೇನ್, ಬಸಂತ್ ಕುಮಾರ್ ಬಿಸ್ವಾಸ್, ಪಾರುಲ್ ಮುಖರ್ಜಿ, ಮೋತಿ ಲಾಲ್ ರಾಯ್, ಕನಯ್ ಲಾಲ್ ದತ್ತಾ, ತಾರಕ್ ನಾಥ್ ದಾಸ್ ಸೇರಿದಂತೆ ಹಲವರ ಹೆಸರುಗಳು ಇದರಲ್ಲಿ ಸೇರ್ಪಡೆಯಾಗಲಿವೆ.

ಈ ಕುರಿತಾಗಿ news18.com ಜತೆ ಮಾತನಾಡಿರುವ ರಾಷ್ಟ್ರ ಸೇವಿಕಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೌಸುಮಿ ಕರ್ಮಾರ್ಕರ್, ಈ ಪುಸ್ತಕದಲ್ಲಿ 47 ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಕುರಿತು ಮಾಹಿತಿ ಇರಲಿದೆ. ಈ ಪುಸ್ತಕವನ್ನು ಜನವರಿ ಅಷ್ಟರಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ. ಸದ್ಯಕ್ಕೆ ಪುಸ್ತಕ ರೂಪದಲ್ಲಿ ಮಾತ್ರ ಈ ಮಾಹಿತಿಯನ್ನು ನೀಡಲಿದ್ದೇವೆ. ಈ ಪುಸ್ತಕವು ಯುವಜನರಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಹೋರಾಟದ ಕುರಿತು ಉತ್ತಮ ಮಾಹಿತಿಯನ್ನು ಒದಗಿಸಲಿದೆ, ಎಂದಿದ್ದಾರೆ.
ಪ್ರಸ್ತುತ ಈ ಯೋಜನೆ ಕೇವಲ ಪುಸ್ತಕ ರೂಪಕ್ಕೆ ಸೀಮಿತವಾಗಿದ್ದರೂ, ಮುಂಬರುವ ದಿನಗಳಲ್ಲಿ ಈ ಹೋರಾಟಗಾರರ ಕುರಿತು ಸಾಕ್ಷ್ಯಾಚಿತ್ರಗಳನ್ನು ಕೂಡಾ ನಿರ್ಮಿಸಲಾಗುವುದು ಎಂಬ ಕುರಿತು ಮಾಹಿತಿ ಲಭಿಸಿದೆ. ಕೆಲವು ಸ್ವಾತಂತ್ರ್ಯ ಹೊರಾಟಗಾರರ ಕುರಿತು ದೇಶದಾದ್ಯಂತ ವಿಚಾರಗೋಷ್ಠಿಗಳನ್ನು ಏರ್ಪಡಿಸುವ ಯೋಜನೆಯೂ ಜಾರಿಯಾಗುವ ಸಾಧ್ಯತೆಯಿದೆ.
“ಇದೊಂದು ಸಂಘಟಿತ ಪ್ರಯತ್ನ. ಈವರೆಗಿನ ಅತ್ಯುತ್ತಮ ಸಂಶೋಧನಾತ್ಮಕ ಕೃತಿ ಇದಾಗಿರಲಿದೆ. ಇಂತಹ ಯೋಜನೆ ಈವರೆಗೆ ದೇಶದಲ್ಲಿ ಜಾರಿಯಾಗಿಲ್ಲ. ಈ ಪುಸ್ತಕದಲ್ಲಿ ಮಹಿಳಾ ಹೊರಾಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದೇವೆ. ಇತಿಹಾಸದ ಪುಟಗಳಿಂದ ಮರೆಯಾದ ಹೋರಾಟಗಾರರನ್ನು ಮುನ್ನೆಲೆಗೆ ತರಲಿದ್ದೇವೆ,” ಎಂದು ಆರ್ಎಸ್ಎಸ್ ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ಜಿಶ್ನು ಬಸು ಹೇಳಿದ್ದಾರೆ.

ಉದಾಹರಣೆಗೆ ನಾನಿಬಾಲಾ ದೇವಿ ಅವರು 11ನೇ ವಯಸ್ಸಿಗೆ ಮದುವೆಯಾಗಿ 15ನೇ ವಯಸ್ಸಿಗೆ ವಿಧವೆಯಾದರು. ಆ ನಂತರ ಅವರು, ಗುಪ್ತವಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಯಾರಿಗೂ ತಿಳಿಯದಂತೆ ಇತರೆ ಹೋರಾಟಗಾರರಿಗೆ ನೆರವು ನೀಡುತ್ತಿದ್ದರು. ನಂತರ ಪೇಶಾವರದಲ್ಲಿ ಬ್ರಿಟಿಷರು ಅವರನ್ನು ಬಂಧಿಸಿ ಇನ್ನಿಲ್ಲದಂತೆ ಹಿಂಸೆ ನೀಡಿದರು.
1919ರಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಇವರ ಕುರಿತು ಯಾರಿಗೂ ತಿಳಿದಿಲ್ಲ. ಇಂತಹವರ ಜೀವನ ಚರಿತ್ರೆಯನ್ನು ಜನರ ಮುಂದಿಡುತ್ತಿದ್ದೇವೆ, ಎಂದು ಅವರು ಹೇಳಿದ್ದಾರೆ.