~ಡಾ. ಜೆ ಎಸ್ ಪಾಟೀಲ.
ಕಾಲಾನಂತರದಲ್ಲಿ, ಸಂಘವು ಹಿಂದುತ್ವ ಸಿದ್ಧಾಂತ ಬಿತ್ತುವ ಶಾಲೆಗಳನ್ನು ಉತ್ತರ ಪ್ರದೇಶದ ಹಲವು ಸ್ಥಳಗಳಲ್ಲಿ ಸ್ಥಾಪಿಸಿತು. ಅವು ಸುಗಮವಾಗಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ, ಸಂಘವು ರಾಜ್ಯ ಮಟ್ಟದ ಶಿಶು ಶಿಕ್ಷಾ ಪ್ರಬಂದಕ್ ಸಮಿತಿಗಳನ್ನು ಸ್ಥಾಪಿಸಿತು. ಇದೇ ಮಾದರಿಯ ಶಾಲೆಗಳನ್ನು ಉಳಿದ ರಾಜ್ಯಗಳಿಗೆ ವಿಸ್ತರಿಸಿದಾಗ, ಇಂತಹ ಸಮಿತಿಗಳನ್ನು ದೆಹಲಿ, ಬಿಹಾರ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲೂ ಸ್ಥಾಪಿಸಲಾಯಿತು. ಪಂಜಾಬ್ ಮತ್ತು ಚಂಡೀಗಢದಲ್ಲಿ ಸರ್ವ್ ಹಿತಕಾರಿ ಶಿಕ್ಷಾ ಸಮಿತಿಯನ್ನು ಮತ್ತು ಹರಿಯಾಣದಲ್ಲಿ ಹಿಂದೂ ಶಿಕ್ಷಾ ಸಮಿತಿಯನ್ನು ರಚಿಸಲಾಯಿತು. ೧೯೭೭ ರಲ್ಲಿ, ಬೇರೆ ಬೇರೆ ರಾಜ್ಯಗಳಲ್ಲಿನ ಈ ಸಮಿತಿಗಳ ನಡುವಿನ ಕಾರ್ಯ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಮತ್ತು ದೇಶದಾದ್ಯಂತ ಸಂಘ ನಡೆಸುವ ಎಲ್ಲಾ ಶಾಲೆಗಳನ್ನು ಏಕಕಾಲಕ್ಕೆ ನಿರ್ವಹಿಸಲು ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ (ವಿದ್ಯಾ ಭಾರತಿ) ಎಂಬ ಹೆಸರಿನ ಅಖಿಲ-ಭಾರತೀಯ ಸಂಸ್ಥೆಯನ್ನು ರಚಿಸಲಾಯಿತು.

ವಿದ್ಯಾಭಾರತಿ ಸಂಸ್ಥೆಯ ನೋಂದಾಯಿತ ಕಛೇರಿ ಲಕ್ನೋದಲ್ಲಿದ್ದರೆ, ಕಾರ್ಯಕಾರಿ ಪ್ರಧಾನ ಕಛೇರಿ ದೆಹಲಿಯಲ್ಲಿದೆ. “ಆರ್ಎಸ್ಎಸ್, ಸ್ಕೂಲ್ ಟೆಕ್ಸ್ಟ್ಸ್ ಅಂಡ್ ದಿ ಮರ್ಡರ್ ಆಫ್ ಮಹಾತ್ಮ ಗಾಂಧಿ: ದಿ ಹಿಂದೂ ಕಮ್ಯುನಲ್ ಪ್ರಾಜೆಕ್ಟ್” ಎಂಬ ಪುಸ್ತಕದಲ್ಲಿ, ಪ್ರೊಫೆಸರ್ಗಳಾದ ಆದಿತ್ಯ ಮುಖರ್ಜಿ, ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ಅವರು ಈ ಸಂಸ್ಥೆಯನ್ನು ರಚಿಸುವ ಹೊತ್ತಿಗೆ, “ದೇಶದಲ್ಲಿ ಈಗಾಗಲೇ ಸುಮಾರು ೫೦೦ ಆರ್ಎಸ್ಎಸ್ ಶಾಲೆಗಳು ಸ್ಥಾಪಿಸಲಾಗಿತ್ತು ಎಂದು ಬರೆದಿದ್ದಾರೆ. ಅವುಗಳಲ್ಲಿ ಸುಮಾರು ೨೦,೦೦೦ ವಿದ್ಯಾರ್ಥಿಗಳು ಓದುತ್ತಿದ್ದಾರಂತೆ. ಮುಖರ್ಜಿ-ಮಹಾಜನ್ ಅವರ ಈ ಪುಸ್ತಕವು ವಿದ್ಯಾಭಾರತಿ ಶಾಲೆಗಳ ವಿಸ್ತರಣೆಯ ಪಥವನ್ನು ಸಮಗ್ರವಾಗಿ ವಿವರಿಸುತ್ತದೆ: ೧೯೯೦ ರ ದಶಕದ ಆರಂಭದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ವಿದ್ಯಾಭಾರತಿ ಶಾಲೆಗಳ ಬೆಳವಣಿಗೆಗೆ ಉತ್ತೇಜನ ನೀಡಿದ ವಿವರಗಳು ಕೂಡ ಈ ಗ್ರಂಥದಲ್ಲಿ ವಿವರಿಸಲಾಗಿದೆಯಂತೆ.
ಅಂದಿನ ಪ್ರಾದೇಶಿಕ ಬಿಜೆಪಿ ಸರಕಾರಗಳು ತಮ್ಮದೇ ಆದ ಪಠ್ಯಕ್ರಮವನ್ನು ರೂಪಿಸಲುˌ ಕೆಳವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಶಾಲೆಗಳಿಗೆ ಅನುಮತಿ ನೀಡಿದವು. ೧೯೯೩-೯೪ ರ ಹೊತ್ತಿಗೆ ವಿದ್ಯಾಭಾರತಿ ನಡೆಸುತ್ತಿರುವ ಒಟ್ಟು ಶಾಲೆಗಳ ಸಂಖ್ಯೆ ೬,೦೦೦ ಮುಟ್ಟಿದ್ದು ಅವು ಒಟ್ಟು ೪೦,೦೦೦ ಶಿಕ್ಷಕರು ಮತ್ತು ೧೨ˌ೦೦,೦೦೦ ವಿದ್ಯಾರ್ಥಿಗಳನ್ನು ಹೊಂದಿದ್ದವಂತೆ. ೧೯೯೮ ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಲೆಗಳ ಮೇಲೆ ಆರೆಸ್ಸೆಸ್ ಪ್ರಭಾವ ಅಧಿಕಗೊಂಡಿತು. ೧೯೯೯ ರಲ್ಲಿ, ದೇಶಾದ್ಯಂತ ಒಟ್ಟು ೮೦,೦೦೦ ಶಿಕ್ಷಕರು ಮತ್ತು ೧೮ˌ೦೦,೦೦೦ ವಿದ್ಯಾರ್ಥಿಗಳನ್ನು ಹೊಂದಿರುವ ಒಟ್ಟು ೧೪,೦೦೦ ವಿದ್ಯಾಭಾರತಿ ಶಾಲೆಗಳು ಸ್ಥಾಪನೆಯಾದವಂತೆ. ಸೆಪ್ಟೆಂಬರ್ ೧೯೯೮ ರಲ್ಲಿ, ಕಲ್ಯಾಣ್ ಸಿಂಗ್ ಸರ್ಕಾರವು ಎಲ್ಲಾ ಸರಕಾರಿ ಶಾಲೆಗಳನ್ನು ಆರ್ಎಸ್ಎಸ್ ಶಾಖೆಗೆ ಜೋಡಿಸಲು ಪ್ರಯತ್ನ ಮಾಡಿತಂತೆ.

ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳು ನೈತಿಕ ಶಿಕ್ಷಣವನ್ನು ನೀಡಲು ಆರ್ಎಸ್ಎಸ್ ಪ್ರಚಾರಕರನ್ನು ನೇಮಿಸಿಕೊಳ್ಳುವುದು ಕಡ್ಡಾಯಗೊಳಿಸಲಾಯಿತು. ವಿದ್ಯಾಭಾರತಿಯ ಅಧಿಕೃತ ವೆಬ್ಸೈಟ್ ಪ್ರಕಾರ, ಇದು ಪ್ರಸ್ತುತ ಭಾರತದಾದ್ಯಂತ ೧೨,೮೨೮ ಔಪಚಾರಿಕ ಶಾಲೆಗಳನ್ನು ನಡೆಸುತ್ತಿದೆ, ಈ ಶಾಲೆಗಳಲ್ಲಿ ೩.೪ ಮಿಲಿಯನ್ಗಿಂತಲೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದಲ್ಲದೆ ವಿದ್ಯಾಭಾರತಿ ಸಂಸ್ಥೆಯು ‘ಸಂಸ್ಕಾರ ಕೇಂದ್ರಗಳು’ ಎಂಬ ಹೆಸರಿನಲ್ಲಿ ೬,೪೦೦ ಕ್ಕೂ ಹೆಚ್ಚು ಅನೌಪಚಾರಿಕ ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದೆ. ಈ ಸಂಸ್ಥೆಯ ವೆಬ್ಸೈಟ್ ನಲ್ಲಿ ವಿದ್ಯಾಭಾರತಿಯ ‘ಮಿಷನ್’ (ಗುರಿ) ಅನ್ನು ಸ್ಪಷ್ಟವಾಗಿ ಹೀಗೆ ವ್ಯಾಖ್ಯಾನಿಸುತ್ತದೆ: “ಹಿಂದುತ್ವಕ್ಕೆ ಬದ್ಧವಾಗಿರುವ ಮತ್ತು ದೇಶಭಕ್ತಿಯ ಉತ್ಸಾಹದಿಂದ ತುಂಬಿದ ಯುವ ಪೀಳಿಗೆಯನ್ನು ನಿರ್ಮಿಸಲು ಸಹಾಯ ಮಾಡುವ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.”
“ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವುದು; ಜೀವನದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯ ಒದಗಿಸುವುದು; ಹಳ್ಳಿ, ಅರಣ್ಯ, ಗುಹೆˌ ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ನಮ್ಮ ಸಹೋದರ ಸಹೋದರಿಯರ ಸೇವೆಗೆ ಸಮರ್ಪಿಸಿಕೊಳ್ಳುವುದು; ಮತ್ತು ವಂಚಿತರು ಹಾಗು ನಿರ್ಗತಿಕರು, ಸಾಮಾಜಿಕ ಅನಿಷ್ಟಗಳು ಮತ್ತು ಅನ್ಯಾಯದ ಸಂಕೋಲೆಗಳಿಂದ ಅವರನ್ನು ಬಿಡುಗಡೆಗೊಳಿಸುವುದು; ಸಾಮರಸ್ಯ, ಸಮೃದ್ಧ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ರಾಷ್ಟ್ರವನ್ನು ನಿರ್ಮಿಸುವುದು” ಎಂದು ಒತ್ತಿ ಹೇಳಲಾಗಿದೆಯಂತೆ. ದಿ ವೈರ್ ಪತ್ರಿಕೆಯು ವಿದ್ಯಾಭಾರತಿ ಶಾಲೆಗಳು ಮತ್ತು ಅವುಗಳ ಪಠ್ಯಕ್ರಮವನ್ನು ಗಮನಿಸಿದೆಯಂತೆ, ಅದು ಕೋಮು ದ್ವೇಷವನ್ನು ಉತ್ತೇಜಿಸುವ ಮತ್ತು ಸಂಘದ ಅಡಿಯಲ್ಲಿ ಹಿಂದೂ ಸೈನಿಕರನ್ನು ಉತ್ಪಾದಿಸುವ ಉದ್ದೇಶದನ್ವಯ ವಿನ್ಯಾಸಗೊಳಿಸಲಾಗಿದೆಯಂತೆ.

ವಿದ್ಯಾಭಾರತಿ ಸಂಸ್ಥೆಯ ಶಾಲೆಗಳ ಪುಸ್ತಕಗಳು, ಪಠ್ಯಕ್ರಮ ಹಾಗು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಆರ್ಎಸ್ಎಸ್ ನಡೆಸುತ್ತಿರುವ ಶಾಲೆಗಳ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಸಂದರ್ಶನಗಳಿಂದ ಈ ಕೆಳಗೆ ಹೆಸರಿಸಿದ ಹಲವು ಸಂಗತಿಗಳು ಬಹಿರಂಗಗೊಂಡಿವೆ ಎನ್ನುತ್ತದೆ ದಿ ವೈರ್ ವರದಿ. ಗೋಮೂತ್ರದಿಂದ ಉರಿಯುವ ದೀಪವನ್ನು ಕಂಡುಹಿಡಿದ ಕಾನ್ಪುರದ ಯುವ ವಿಜ್ಞಾನಿಯ ಕುರಿತು ವಿದ್ಯಾಭಾರತಿ ಶಾಲೆಗಳಲ್ಲಿ ಕಲಿಸುವ ಪುಸ್ತಕ ಸರಣಿಯಾದ ಬೋಧಮಾಲಾ ೫ ರ ಪ್ರಶ್ನೆಗಳಲ್ಲಿ ಈ ಸಂಗತಿ ಸೇರಿಸಲಾಗಿದೆ. ಹರಿಯಾಣದ ಕುರುಕ್ಷೇತ್ರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ವಿದ್ಯಾ ಭಾರತಿ ಸಂಸ್ಕೃತಿ ಶಿಕ್ಷಾ ಸಂಸ್ಥಾನ (VBSSS), ೪ ರಿಂದ ೧೨ ನೇ ತರಗತಿಗಳಿಗೆ ಬೋಧಮಾಲಾ ಎಂಬ ಪುಸ್ತಕ ಸರಣಿಯನ್ನು ಪ್ರಕಟಿಸುತ್ತದೆ. ಈ ಸರಣಿಯ ಪುಸ್ತಕಗಳು ವೈವಿಧ್ಯಮಯ ವಿಷಯಗಳನ್ನು ಚರ್ಚಿಸುತ್ತವೆ.
ಈ ಪುಸ್ತಕಗಳಲ್ಲಿ ಇತಿಹಾಸ, ಭೂಗೋಳ, ರಾಜಕೀಯ, ವ್ಯಕ್ತಿ ಪರಿಚಯ, ಹುತಾತ್ಮರು, ನೈತಿಕತೆ, ಹಿಂದೂ ಹಬ್ಬಗಳು, ಧಾರ್ಮಿಕ ಪುಸ್ತಕಗಳು, ವಿಜ್ಞಾನ, ಸಾಮಾನ್ಯ ಜ್ಞಾನ ಇತ್ಯಾದಿ ಸಂಗತಿಗಳನ್ನು ಒಳಗೊಂಡಿರುತ್ತವೆ. ವಿಷಯ ಶಿಕ್ಷಕರಿಲ್ಲದೆಯೂ, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸ್ವಂತವಾಗಿ ಓದುವಂತೆ ಸರಳೀಕರಿಸಲಾಗಿದೆ. ಈ ಪುಸ್ತಕಗಳ ಆಧಾರದ ಮೇಲೆ, ದೇಶದಾದ್ಯಂತ ಅಖಿಲ ಭಾರತ ಸಂಸ್ಕೃತಿ ಜ್ಞಾನ ಪರೀಕ್ಷೆಯನ್ನು ನಡೆಸಲಾಗುತ್ತಿದ್ದ ಇದರಲ್ಲಿ ೫೦% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಬೇರೆ ಶಾಲೆಯ ವಿದ್ಯಾರ್ಥಿಗಳೂ ಸಹ ಪರೀಕ್ಷೆಗೆ ಹಾಜರಾಗುತ್ತಾರಂತೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಸಹ ಈ ಪರೀಕ್ಷೆಗೆ ಹಾಜರಾದ ನಿದರ್ಶನಗಳಿವೆ ಎಂದು ವೈರ್ ಪತ್ತೆ ಹಚ್ಚಿದೆಯಂತೆ. ಇದು ಶಾಲೆಗಳ ಮೂಲಕ ಆಗಿರದೆ ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆಯಾಗಿದೆಯಂತೆ.
ಮುಂದುವರೆಯುವುದು…