ಭಾರತದಲ್ಲಿ ಬ್ರಾಹ್ಮಣರು ತಮ್ಮ ಸ್ವಹಿತಾಸಕ್ತಿಗಾಗಿ ಹುಟ್ಟುಹಾಕಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ(RSS) ಮತ್ತು ಇಟಲಿಗೂ ಇರುವ ನಂಟೇನು ಎನ್ನುವ ಕುರಿತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಬಾಲಕೃಷ್ಣ ಶಿವರಾಮ ಮೂಂಜೆ ಎನ್ನುವ ದೇಶಸ್ಥ ಋಗ್ವೇದಿ ಬ್ರಾಹ್ಮಣ ವ್ಯಕ್ತಿ ಈ ಸಂಘವನ್ನು ಒಂದು ರಾಷ್ಟ್ರಮಟ್ಟದ ಹಿಂದೂ ಸೈನಿಕ ಮಾದರಿಯ ಸಂಘಟನೆಯಾಗಿ ರೂಪಿಸಲು ಇಟಲಿಯ ಸರ್ವಾಧಿಕಾರಿ ಮತ್ತು ಇಟಾಲಿಯನ್ ನ್ಯಾಷನಲ್ ಫ್ಯಾಸಿಷ್ಟ್ ಪಕ್ಷದ ಮುಖ್ಯಸ್ಥ ಮುಸೊಲಿನಿಯನ್ನು ಭೇಟಿಯಾದ ಕುತೂಹಲದ ಸಂಗತಿ ಭಾರತೀಯರೆಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ. ಮಾತೆತ್ತಿದರೆ ಸೋನಿಯಾ ಗಾಂಧಿಯ ಮೂಲವನ್ನು ಹಿಡಿದು ಹಿಯಾಳಿಸುವ ಬಿಜೆಪಿ ಮತ್ತು ಸಂಘದ ಅನುಯಾಯಿಗಳು ಸ್ವತಃ ಸಂಘದ ಬೆಳವಣಿಗೆಯು ಇಟಲಿ ಮೂಲದ ಸಲಹೆ ಸೂಚನೆಗಳಿಂದ ರೂಪುಗೊಂಡಿದೆ ಎನ್ನುವ ಸಂಗತಿ ತಿಳಿದುಕೊಳ್ಳಬೇಕಿದೆ.
೨೦೧೬ ಮಾರ್ಚ್ ೨೨ ರ ಕೋಲ್ಡ್ ನೂನ್ ಎಂಬ ಇಂಗ್ಲೀಷ್ ವೆಬ್ ಮ್ಯಾಗ್ಜೀನ್ ನಲ್ಲಿ ಹುಜೇಫಾ ಓಮೇರ್ ಸಿದ್ದಕಿ ಎಂಬ ಅಂಕಣಕಾರರು ಬರೆದ ಲೇಖನವನ್ನಾದರಿಸಿ ಅಂದಿನ ಹಿಂದೂ ಮಹಾಸಭಾದ ನಾಯಕ ಮೂಂಜೆ ಮತ್ತು ಇಟಲಿ ಸರ್ವಾಧಿಕಾರಿ ಮುಸೊಲಿನಿ ನಡುವಿನ ನಂಟು ಕುರಿತು ಅನೇಕ ಸಂಗತಿಗಳನ್ನು ನಾನು ಇಲ್ಲಿ ಚರ್ಚಿಸಿದ್ದೇನೆ. ಮಾನವ ಇತಿಹಾಸದುದ್ದಕ್ಕೂ ಅತ್ಯಂತ ಉತ್ಸಾಹಭರಿತ, ಸಾಹಸಮಯ ಮತ್ತು ದಣಿವರಿಯದ ಅನೇಕ ಸಾಹಸಿ ಪ್ರಯಾಣಿಕರು ಗೋಚರಿಸುತ್ತಾರೆ. ಅಂತಹ ಸಾಹಸಿ ಪ್ರಯಾಣಿಕರ ಕುರಿತು ಆಗಾಗ್ಗೆ ತಪ್ಪು ತಿಳುವಳಿಕೆಗಳು ಹುಟ್ಟಿಕೊಳ್ಳುತ್ತವೆ. ಕೆಲವೊಮ್ಮೆ ಇತಿಹಾಸದಲ್ಲಿ ಬಹಳ ಪ್ರಜ್ಞಾಪೂರ್ವಕವಾಗಿ ಕೆಲವು ಕಲ್ಪನೆಗಳನ್ನು ಹರಡಲೆಂದೇ ಅದಕ್ಕೆ ಅಗತ್ಯವಿರುವ ಬೀಜಗಳನ್ನು ಬಿತ್ತಲಾಗುತ್ತದೆ. ಮತ್ತೆ ಕೆಲವು ಸಮಯಗಳಲ್ಲಿ ಸತ್ಯ ಸಂಗತಿಗಳನ್ನು ಅತ್ಯಂತ ಅಪಾಯಕಾರಿ ಸೋಂಕುಗಳೆಂಬಂತೆ ಅವುಗಳ ಪ್ರಸಾರವನ್ನು ತಡೆಯಲಾಗುತ್ತದೆ. ಕೆಲವೊಮ್ಮೆ ಈ ಎರಡೂ ಪ್ರಕ್ರಿಯೆಗಳು ಸಾಮಾನ್ಯವಾಗಿ ಏಕಕಾಲದಲ್ಲಿ ಮತ್ತು ಪೂರಕ ಕೂಡ ಆಗಿರುತ್ತವೆ.
ವಿಶ್ವವಿದ್ಯಾನಿಲಯಗಳು ಹೊಸ ಹೊಸ ಆಲೋಚನೆಗಳ ಹುಟ್ಟಿಗೆ ಹೆಚ್ಚು ಫಲವತ್ತಾದ ಸ್ಥಳವಾಗಿರುತ್ತವೆ. ಆದರೆ ಯಥಾಸ್ಥಿತಿವಾದಿ ಚಿಂತನೆಗಳಿಂದ ದೂರ ಸರಿದು
ಹೊಸ ಆಲೋಚನೆ ಹುಟ್ಟಿಸುವ ವಿವಿಗಳಲ್ಲಿ ಕಳೆದ ಆರೇಳು ವರ್ಷಗಳಲ್ಲಿ ಕ್ರೀಯಾಶೀಲ ವಿದ್ಯಾರ್ಥಿಗಳನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸುವ ಮೂಲಕ ಯುವಜನರ ಧ್ವನಿಯನ್ನು ದಮನಿಸುವ ಪ್ರಸ್ತುತ ಸರ್ಕಾರದ ಪ್ರಯತ್ನಗಳು ಈ ಹೊಸ ಆಲೋಚನೆಗಳ ಉತ್ಪಾದನಾ ಸ್ಥಳವನ್ನೆ ನಾಶಗೊಳಿಸುವ ಪ್ರಯತ್ನದ ಸಂಕೇತವಾಗಿದೆ ಎನ್ನುತ್ತಾರೆ ಸಿದ್ದಕಿಯವರು. ಪ್ರೊ. ಪರಾಂಜಪೆಪವರು ಜೆ ಎನ್ ಯು ಆಯೋಜಿಸಿದ್ದ ಸರಣಿ ಉಪನ್ಯಾಸದಲ್ಲಿ ಹಿಂದೂ ಮಹಾಸಭಾದ ನಾಯಕ ಡಾ. ಬಿ.ಎಸ್. ಮೂಂಜೆ ಅವರು ಇಟಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಮುಸೊಲಿನಿಯನ್ನು ಭೇಟಿಯಾದ ಬಗ್ಗೆ ಪ್ರಾಸ್ತಾಪಿಸುತ್ತಾರೆ ಸಿದ್ದಕಿಯವರು.
ಎಂ.ಎಸ್. ಗೋಲ್ವಾಲ್ಕರ್ ಅವರು ಆರ್ಎಸ್ಎಸ್ನ ಖ್ಯಾತ ಮಾರ್ಗದರ್ಶಕರಾಗಿದ್ದರುˌ ಹಾಗೆಂದೆ ಸಂಘಿಗಳು ಅವರನ್ನು ಇಂದಿಗೂ ಗುರೂಜಿ ಎಂದೆ ಸಂಭೋದಿಸುತ್ತಾರೆ. ಅದರಂತೆ ಸಂಘದ ಇನ್ನೊಬ್ಬ ಚಿರಪರಿಚಿತ ನಾಯಕ ಡಾ. ಬಿ.ಎಸ್. ಮೂಂಜೆ. ಉಗ್ರಗಾಮಿ ಹಿಂದೂ ರಾಷ್ಟ್ರೀಯತೆಯ ತತ್ವಗಳ ರಚನೆಯಲ್ಲಿ ಮೂಂಜೆಯವ ಪ್ರಭಾವ ಮತ್ತು ಕೊಡುಗೆಯೇನು ಕಡಿಮೆಯಿಲ್ಲ. ಕಣ್ಣಿನ ಪೊರೆಗೆ ಚಿಕಿತ್ಸೆ ನೀಡುವ ಹೊಸ ವಿಧಾನವನ್ನು ಕಂಡುಹಿಡಿದ ಅದ್ಭುತ ನೇತ್ರಶಾಸ್ತ್ರಜ್ಞರಾಗಿದ್ದ ಮೂಂಜೆಯವರು

೧೯೨೭ ರಿಂದ ೧೯೩೭ ರವರೆಗೆ ಹಿಂದೂ ಮಹಾಸಭಾದ ಮುಖ್ಯಸ್ಥರಾಗಿದ್ದರು. ಅವರು ಹೆಗ್ಡೇವಾರ್ ಅವರ ಆತ್ಮೀಯ ಸ್ನೇಹಿತ ಮತ್ತು ಮಾರ್ಗದರ್ಶಕರು ಕೂಡ ಆಗಿದ್ದರು. ೧೯೩೧ ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ, ಮೂಂಜೆ ಯುರೋಪ್ ಪ್ರವಾಸಕ್ಕೆ ಹೋಗಿದ್ದರಂತೆ. ಆಗ ಅವರು ಇಟಲಿಯಲ್ಲಿ ಬಹಳಷ್ಟು ದಿನ ತಂಗಿದ್ದರಂತೆ. ಆಗ ಅವರು ಆ ವರ್ಷದ ಮಾರ್ಚ್ ೨೦ ರಂದು ಮುಸೊಲಿನಿಯನ್ನು ಭೇಟಿಯಾದ ಬಗ್ಗೆ ಮತ್ತು ಉಭಯತರ ನಡುವೆ ನಡೆದ ಸಂಭಾಷಣೆ, ಇಟಾಲಿಯನ್ ಸರ್ವಾಧಿಕಾರಿಯ ಬಗ್ಗೆ ಮೂಂಜೆಯ ಅನಿಸಿಕೆಗಳು ಅವರ ವೈಯಕ್ತಿಕ ದಿನಚರಿಯಲ್ಲಿ ದಾಖಲಾಗಿವೆ ಎನ್ನುತ್ತಾರೆ ಸಿದ್ದಕಿಯವರು.
ಮೂಂಜೆ ಅವರು ಭಾರತೀಯ ಯುವಕರಿಗೆ ಮಿಲಿಟರಿ ತರಬೇತಿ ನೀಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು ಮತ್ತು ತಮ್ಮ ಪ್ರಯಾಣದ ಜರ್ನಲ್ನಲ್ಲಿ ಬರೆದಂತೆ, ಅವರು ಇಂಗ್ಲೆಂಡ್, ಜರ್ಮನಿ ಮತ್ತು ಫ್ರಾನ್ಸ್ ಮತ್ತು ಇಟಲಿಯಲ್ಲಿರುವ ಸೈನಿಕ ಶಾಲೆಗಳಿಗೆ ಭೇಟಿ ನೀಡಲು ಯೋಜಿಸಿದ್ದರೆಂದು ಸಿದ್ದಕಿ ಬರೆದಿದ್ದಾರೆ. ಮೂಂಜೆ ಅವರು ತಮ್ಮ ದಿನಚರಿಯಲ್ಲಿ ಭಾರತೀಯ ಹಿಂದೂಗಳಿಗೆ ಒಂದು ಮಿಲಿಟರಿ ಮಾದರಿ ಸಂಘಟನೆಯ ಅಗತ್ಯವಿದೆ ಎಂದು ಸಾಕಷ್ಟು ಸ್ಪಷ್ಟವಾಗಿ ದಾಖಲಿಸಿದ್ದಾರಂತೆ. ಅವರು ಮುಸೊಲಿನಿಯ ಬಲಿಲಾ ಮತ್ತು ಫ್ಯಾಸಿಸ್ಟ್ ಸಂಘಟನೆಗಳಿಂದ ಬಹಳ ಪ್ರಭಾವಿತರಾಗಿದ್ದರಂತೆ. ಮುಸೊಲಿನಿಯೊಂದಿಗಿನ ತಮ್ಮ ಭೇಟಿಯ ಸಮಯದಲ್ಲಿ ಮೂಂಜೆಯವರು ಇಟಲಿಯ ಬಲಿಲಾ ಮತ್ತು ಫ್ಯಾಸಿಷ್ಟ್ ಸಂಘಟನೆಗಳ ಉದ್ದೇಶಗಳ ಮಾದರಿಯಂತೆ ಭಾರತದಲ್ಲಿ ಇದೇ ರೀತಿಯ ಸಂಸ್ಥೆಯನ್ನು ಕಟ್ಟುವ ಬಯಕೆ ವ್ಯಕ್ತಪಡಿಸಿದರಂತೆ. ಸಂಘದ ಸಮವಸ್ತ್ರವಾಗಿರುವ ಕಪ್ಪು ಟೋಪಿ ಮತ್ತು ಖಾಕಿ ಹಾಫ್ ಪ್ಯಾಂಟ್ ಮುಸೊಲಿನಿಯ ಸಲಹೆ ಮೇರೆಗೆ ಮೂಂಜೆ ಆಯ್ಕೆಗೊಳಿಸಿದ್ದರು ಎನ್ನುತ್ತಾರೆ ಸಿದ್ದಕಿಯವರು.
ಭಾರತಕ್ಕೆ ಇಟಲಿ ಮಾದರಿ ಫ್ಯಾಸಿಸ್ಟ್ ಉಗ್ರಗಾಮಿ ಸಿದ್ಧಾಂತವನ್ನು ಆಮದು ಮಾಡಿಕೊಂಡು ಅವನ್ನು ಜಾರಿಗೆ ತಂದಿದ್ದಕ್ಕಾಗಿ ಮೂಂಜೆ ಅವರನ್ನು ಟೀಕಿಸುವ ಮೊದಲುˌ ಮೂಂಜೆ ಮುಸೊಲಿನಿಯನ್ನು ಭೇಟಿ ಮಾಡಿದ ಏಕೈಕ ಭಾರತೀಯ ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು ಎನ್ನುತ್ತಾರೆ ಸಿದ್ದಕಿಯವರು. ಏಕೆಂದರೆ ಸಿದ್ದಕಿಯವರ ಪ್ರಕಾರ, ಮಹಾತ್ಮ ಗಾಂಧಿಯವರು ಕೂಡ ಮುಸೊಲಿನಿಯನ್ನು ಭೇಟಿಯಾಗಿದ್ದರಂತೆ. ಅದರಂತೆ ಖ್ಯಾತ ಹಿಂದಿ ಕವಿ ಸರ್ ಮುಹಮ್ಮದ್ ಇಕ್ಬಾಲ್ ಕೂಡ ಮೂಸೊಲಿನಿಯನ್ನು ಭೇಟಿ ಮಾಡಿದ್ದರಂತೆ. ಮುಸೊಲಿನಿ-ಇಕ್ಬಾಲ್ ನಡುವೆ ನಡೆದ ಸಂಭಾಷಣೆಯ ಅಧಿಕೃತ ದಾಖಲೆಗಳಿಲ್ಲ. ಆದರೆ ಸ್ಪಷ್ಟವಾಗಿ ಮುಸೊಲಿನಿ ಇಕ್ಬಾಲ್ಗೆ “ನಾವು ಇಟಾಲಿಯನ್ನರು ಏನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ?” ಎಂದು ಪ್ರಶ್ನಿಸಿದಾಗˌ ಇಕ್ಬಾಲ್ ಅವರುˌ “ಯುರೋಪ್ ಇಂದು ಯಾವುದೇ ನೈತಿಕ ಮೌಲ್ಯಗಳನ್ನು ಹೊಂದಿಲ್ಲˌ ಯುರೋಪ್ ಅನ್ನು ಕುರುಡಾಗಿ ಅನುಸರಿಸುವುದನ್ನು ನಿಲ್ಲಿಸಿ ಮತ್ತು ಪೂರ್ವದಿಂದ ಕಲಿಯಿರಿ” ಎಂದು ಮುಸೊಲಿನಿಗೆ ಸಲಹೆ ನೀಡಿದ್ದರಂತೆ. ಇಲ್ಲಿ ಮುಸೊಲಿನಿ ಭೇಟಿ ಮಾಡುವ ಮೂಂಜೆ ಮತ್ತು ಇಕ್ಬಾಲ್ ಅವರ ನಡುವಿನ ಪ್ರಾಥಮಿಕ ವ್ಯತ್ಯಾಸವನ್ನು ನಾವು ಗ್ರಹಿಸಬೇಕೆಂದು ಸಿದ್ದಕಿ ಅಭಿಪ್ರಾಯಪಡುತ್ತಾರೆ.
ಭಾರತೀಯ ಹಿಂದೂಗಳಿಗೆ ಮಿಲಿಟರಿ ತರಬೇತಿ ಹೇಗೆ ನೀಡಬೇಕು ಎಂಬುದರ ಕುರಿತು ಮೂಂಜೆ ಅವರು ಮುಸೊಲಿನಿಯಿಂದ ಸಲಹೆ ಪಡೆದರೆ, ಇಕ್ಬಾಲ್ ಅವರು ಯುರೋಪ್ ಕಳೆದುಕೊಂಡಿರುವ ನೈತಿಕ ಮೌಲ್ಯಗಳನ್ನು ಮುಸೊಲಿನಿಗೆ ಕಲಿಸಲು ಬಯಸಿದ್ದರೆಂದು ಸಿದ್ದಕಿ ಬರೆಯುತ್ತಾರೆ. ಕವಿ ಇಕ್ಬಾಲ್ ಅವರು ೧೯೩೧ ಮತ್ತು ೧೯೩೫ ರಲ್ಲಿ ‘ಮುಸೊಲಿನಿ’ ಎಂಬ ಶೀರ್ಷಿಕೆಯ ಎರಡು ಕವನಗಳನ್ನು ಬರೆದಿದ್ದರಂತೆ. ಮೊದಲ ಕವಿತೆಯಲ್ಲಿ, ಇಕ್ಬಾಲ್ ಮುಸೊಲಿನಿಯ ಆಡಳಿತದಲ್ಲಿ ಇಟಲಿಯ ಯೌವನದ ಚೈತನ್ಯವನ್ನು ಮೆಚ್ಚಿ ಬರೆದಿದ್ದರೆˌ ಕವನದ ಕೊನೆಯ ಎರಡು ಸಾಲುಗಳಲ್ಲಿ ಇಟಲಿಯಲ್ಲಿನ ಈ ಬದಲಾವಣೆಯಲ್ಲಿ ಮುಸೊಲಿನಿಯ ಪಾತ್ರವನ್ನು ಪ್ರಶಂಸಿಸಲಾಗಿದೆ ಎನ್ನುತ್ತಾರೆ ಸಿದ್ದಕಿಯವರು. ಮುಸೊಲಿನಿಯನ್ನು ಭೇಟಿಯಾಗಿದ್ದಕ್ಕಾಗಿ ನಾವು ಮೂಂಜೆಯನ್ನು ತಪ್ಪಿತಸ್ಥರೆಂದು ಭಾವಿಸಿದರೆ ಕವಿ ಇಕ್ಬಾಲ್ ಕೂಡ ನಮ್ಮ ಟೀಕೆಗೆ ಗುರಿಯಾಗಬೇಕು. ಆದರೆ ಟೀಕೆಯ ಭರದಲ್ಲಿ ಈ ಇಡೀ ಘಟನೆಗಳಿಂದ ನಾವು ಕಲಿಯಬಹುದಾದ ಪ್ರಮುಖ ಪಾಠದ ಕುರಿತು ಮರೆಯಬಾರದು ಎನ್ನುತ್ತಾರೆ ಸಿದ್ದಕಿಯವರು.
ಮೂಂಜೆ ಮತ್ತು ಇಕ್ಬಾಲ್ ಇಬ್ಬರೂ ಮುಸೊಲಿನಿಯಿಂದ ಪ್ರಭಾವಿತರಾಗಿದ್ದರು ಎಂಬುದು ನಿಜ. ಮುಸೊಲಿನಿಯನ್ನು ಇವರಿಬ್ಬರು ಮೆಚ್ಚಿದ ಕಾರಣಗಳ ಬಗ್ಗೆ ನಾವು ಯೋಚಿಸಬೇಕು. ಕವಿ ಇಕ್ಬಾಲ್ ಅವರಿಗೆ ಇಟಲಿಯ ಬಲಿಲಾದ ಮಿಲಿಟರಿ ತರಬೇತಿ ಶಾಲೆಗಳಲ್ಲಿ ಆಸಕ್ತಿ ಇರಲಿಲ್ಲ, ಮತ್ತು ಮೂಂಜೆಗೆ ಮುಸೊಲಿನಿಗೆ ಪೂರ್ವಾತ್ಯ ಜಗತ್ತಿಗ ಮೌಲ್ಯಗಳನ್ನು ಕಲಿಸಲು ಆಸಕ್ತಿ ಇರಲಿಲ್ಲ. ಇಕ್ಬಾಲ್ರ ಕವನಗಳನ್ನು ಓದಿದಾಗ ಅವರಿಗೆ ಪ್ರಭಾವಿಸಿದ ವಿಷಯವೆಂದರೆ ಮುಸೊಲಿನಿಯ ಅಸಾಧಾರಣ ವ್ಯಕ್ತಿತ್ವ ˌ ಮತ್ತು ಸಂಪೂರ್ಣವಾಗಿ ಬಲಿತ ಆತನ ಅಹಂ. ಮೂಂಜೆ ಅವರನ್ನು ಪ್ರಭಾವಿಸಿದ್ದು ಮುಸೊಲಿನಿಯ ಸಿದ್ಧಾಂತದ ಆಳದಲ್ಲಿ ಬೇರೂರಿರುವ ಫ್ಯಾಸಿಸ್ಟ್ ಮತ್ತು ಮಿಲಿಟರಿ ಪ್ರವೃತ್ತಿಗಳು. ಮುಸೊಲಿನಿಯೊಂದಿಗಿನ ಮೂಂಜೆ ಭೇಟಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು, ನಾವು ಕಲ್ಪನೆ ಮತ್ತು ಸಿದ್ಧಾಂತದ ನಡುವೆ ಸೂಕ್ಷ್ಮ ಮತ್ತು ಅಗತ್ಯ ವ್ಯತ್ಯಾಸವನ್ನು ಗುರುತಿಸಬೇಕು ಎನ್ನುತ್ತಾರೆ ಸಿದ್ದಕಿಯವರು.

ಕಲ್ಪನೆ ಮತ್ತು ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ವರ್ಣಿಸಲು ಬಹುಶಃ ಒಂದು ಬೃಹತ್ ಗ್ರಂಥವನ್ನೆ ಬರೆಯಬಹುದು. ಆದಾಗ್ಯೂ, ಪದಗಳ ಮೂಲ ಅರ್ಥಗಳು ತಿಳಿದುಕೊಳ್ಳುವ ಮೂಲಕ ನಾವು ಅವುಗಳ ನಡುವಿನ ವ್ಯತ್ಯಾಸವನ್ನು ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸಬೇಕು. ಕಲ್ಪನೆ ಎಂಬ ಪದವು ಗ್ರೀಕ್ ಈಡೋಸ್ನಿಂದ ಹುಟ್ಟಿಕೊಂಡಿದೆ, ಇದರರ್ಥ ಕೇವಲ ಕಣ್ಣಿನಿಂದ ನೋಡಿರುವುದು ಅಥವಾ ಒಂದು ಚಿತ್ರವಲ್ಲದೆˌ ಅದು ಸ್ವತಃ ನೋಡುವ ಕ್ರಿಯೆಯಾಗಿದೆ. ಐಡಿಯಾಲಜಿ, ನಮಗೆ ತಿಳಿದಿರುವಂತೆ, ಗ್ರೀಕ್ ‘ಐಡಿಯಾ’ ಮತ್ತು ‘ಲಾಜಿ’ ಯ ಇತ್ತೀಚಿನ ಫ್ರೆಂಚ್ ಪದಪುಂಜವಾಗಿದೆ. ಹೀಗಾಗಿ ಸಿದ್ಧಾಂತವನ್ನು ಮೂಲಭೂತವಾಗಿ “ನೋಡಿದ ಚಿತ್ರಣವನ್ನು ಒಟ್ಟುಗೂಡಿಸುವ ಅಥವಾ ಕಂಡದ್ದನ್ನು ಸಂರಕ್ಷಿಸುವˌ ಕ್ರೋಢೀಕರಿಸುವ ಮತ್ತು ಗಟ್ಟಿಗೊಳಿಸುವ” ಎಂದು ಹೇಳಬಹುದು. ಯಾವುದೆ ಒಂದು ಸಿದ್ಧಾಂತವು ಕಲ್ಪನೆಯನ್ನು ಗಣನೀಯ ಹಿಂಸೆಯೊಂದಿಗೆ ಸಂಯೋಜಿಸುತ್ತದೆ, ಏಕೆಂದರೆ ಹಿಂಸೆಯಿಲ್ಲದೆ ಕಲ್ಪನೆಯು ಕ್ಷಣಿಕವಾಗಿರುತ್ತದೆ. ಒಂದು ಕಲ್ಪನೆ ಕಾಣಿಸಿಕೊಳ್ಳುವ ಹಾಗು ಮತ್ತು ಕಣ್ಮರೆಯಾಗುವ ಕಣ್ಣಾಮುಚ್ಚಾಲೆ ಆಟ ಆಡಿದರೆ ಅದೇ ಸಿದ್ಧಾಂತವು, ಅದು ಫ್ಯಾಸಿಸ್ಟ್ ಅಥವಾ ಸ್ಟಾಲಿನಿಸ್ಟ್, ಮಾವೋವಾದಿ ಅಥವಾ ಬಂಡವಾಳಶಾಹಿ ಯಾವುದೆ ಆಗಿರಲಿ, ಅದರ ಉದ್ದೇಶˌ ಇಷ್ಟ ಮತ್ತು ವಾಸ್ತವ್ಯದ ಅವಧಿಯನ್ನು ಹೆಚ್ಚಿಸುವ ಸಾಮರ್ಥ್ಯದ ಮೇಲೆ ಸ್ಥಾಪಿಸಲಾಗುತ್ತದೆ ಎನ್ನುತ್ತಾರೆ ಸಿದ್ದಕಿ.
ಈ ಮೇಲಿನ ವಿಶ್ಲೇಷಣೆಯ ಮೂಲಕವೇ ನಾವು ಮುಸೊಲಿನಿಯೊಂದಿಗಿನ ಮೂಂಜೆಯವರ ಭೇಟಿಯ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಭಾರತದಲ್ಲಿ ಸಂಘ ಅಥವಾ ಇನ್ನಾವುದೆ ಹಿಂದೂ ಉಗ್ರವಾದಿ ಸಂಸ್ಥೆಗಳ ಶಾಖೆಗಳಲ್ಲಿ ಇಟಲಿಯ ಫ್ಯಾಸಿಸ್ಟ್, ಮಿಲಿಟರಿ ಸಿದ್ಧಾಂತವನ್ನು ಆಮದು ಮಾಡಿಕೊಂಡು ಅದನ್ನು ಕಾರ್ಯಗತಗೊಳಿಸಲು ಮಾತ್ರ ಮೂಂಜೆ ಬಯಸಿರಲಿಲ್ಲ. ಬದಲಿಗೆ, ಅವರು ಈ ಸಿದ್ಧಾಂತಕ್ಕೆ ಭದ್ರವಾದ ಅಡಿಪಾಯ ಹಾಕಲು, ಅದರ ಆಳ್ವಿಕೆಯನ್ನು ಸ್ಥಾಪಿಸಲು, ಅದರ ವಾಸ್ತವ್ಯವನ್ನು ಸ್ವಾಭಾವಿಕವಾಗಿಸಲು ಮತ್ತು ಹಿಂದೂಗಳಲ್ಲಿ ಅದರ ಆಕರ್ಷಣೆಯನ್ನು ಬಲಪಡಿಸಲು ಆಸಕ್ತಿ ಹೊಂದಿದ್ದರು. ಮತ್ತೊಂದೆಡೆ, ಕವಿ ಇಕ್ಬಾಲ್ರಿಗೆ ಮುಸೊಲಿನಿಯ ಸಂಪೂರ್ಣ ಬಲಿತ ಅಹಂನ ಕಲ್ಪನೆಯ ಸ್ಪಷ್ಟ ಅಭಿವ್ಯಕ್ತಿಯಾಗಿತ್ತು. ೧೯೩೫ ರಲ್ಲಿ ಇಕ್ಬಾಲ್ ಅವರು ಬರೆದ ‘ಮುಸೊಲಿನಿ’ ಎಂಬ ಶೀರ್ಷಿಕೆಯ ಎರಡನೇ ಕವಿತೆಯಲ್ಲಿ ಅವರು ಫ್ಯಾಸಿಸ್ಟ್ ಮುಸೊಲಿನಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅದೇ ರೀತಿಯಾಗಿ ಅವರು ಮುಸೊಲಿನಿಯನ್ನು ಸರ್ವಾಧಿಕಾರಿ ಎಂದು ಟೀಕಿಸುತ್ತಿದ್ದ ಯುರೋಪಿಯನ್ ವಸಾಹತುಶಾಹಿಗಳ ಬೂಟಾಟಿಕೆ ಹಾಗು ಅವರು ತಮ್ಮ ಪ್ರಜೆಗಳ ಮೇಲೆ ಎಸಗುತ್ತಿದ್ದ ದಬ್ಬಾಳಿಕೆಯನ್ನು ಸಹ ಅಷ್ಟೆ ತೀಕ್ಷ್ಣವಾಗಿ ಖಂಡಿಸಿದ್ದಾರೆ ಎಂದು ಸಿದ್ದಕಿಯವರು ವಿವರಿಸಿದ್ದಾರೆ.
ಆದ್ದರಿಂದ ನಾವು ಮುಸೊಲಿನಿಯೊಂದಿಗಿನ ಮೂಂಜೆ ಅವರ ಭೇಟಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾದರೆ, ಸಮಕಾಲೀನ ಭಾರತದಲ್ಲಿ ಖಾಕಿ ಹಾಫ್ ಪ್ಯಾಂಟ್ ಮತ್ತು ಕಪ್ಪು ಟೋಪಿಗಳಲ್ಲಿ ಕವಾಯತ್ತು ಮಾಡುವ, ಸ್ಥೂಲಕಾಯದ ಮೇಲ್ಜಾತಿಯ ಹಿರಿಯ ಹಿಂದೂ ಪುರುಷರ ದೃಶ್ಯದಿಂದ ಉಂಟಾಗುವ ಅಸಂಗತೆಯನ್ನು ಅರ್ಥಮಾಡಿಕೊಳ್ಳಬೇಕು. ಆಗಾಗ್ಗೆ ಕೆಲವರ ಉಲ್ಲಾಸಕ್ಕೆ ಕಾರಣವಾಗುವ ಈ ಅಸಂಗತತೆಯು ಸ್ವತಃ ಸಿದ್ಧಾಂತದ ಸ್ವರೂಪದ ಸೂಚನೆಯಾಗಿರುತ್ತದೆ. ಐಡಿಯಾಲಜಿಯು ಹಿಂಸಾತ್ಮಕ ಒಟ್ಟುಗೂಡಿಸುವಿಕೆ ಮತ್ತು ಕಲ್ಪನೆಯ ನಿರಂತರತೆಯ ಮೇಲೆ ಸ್ಥಾಪಿತವಾಗಿರುತ್ತದೆ. ಅದು ಇಟಲಿಯಿಂದ ಆ ಸಮಯದಲ್ಲಿ ಹೊರಗೆ ಬಂದಿರಬಹುದು. ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳು ಪ್ರತಿಪಾದಿಸುವ ಫ್ಯಾಸಿಸ್ಟ್ ಸಿದ್ಧಾಂತವು ವಿದೇಶಿ ನೆಲದಿಂದ ತನ್ನ ಬೇರುಗಳನ್ನು ಎರವಲು ಪಡೆದಿದೆ ಮತ್ತು ಅದು ನಮ್ಮ ದೇಶದ ಬಹುತ್ವ ಪರಂಪರೆಗೆ ಅಸಮಂಜಸ ಮತ್ತು ಅಸಂಬದ್ಧವಾಗಿ ಪರಿಣಮಿಸಿದೆ. ಐಡಿಯಾಲಜಿಗಳ ಒಳಿತು ಅಥವಾ ಕೆಡುಕನ್ನು ನಾವು ಅವುಗಳ ಮೂಲ ಬೇರುಗಳಿಂದಲ್ಲದೆ ಅವುಗಳ ಕಾರ್ಯಗಳ ಫಲದಿಂದ ನಿರ್ಣಯಿಸಬೇಕು ಎಂಬ ಹಳೆಯ ಬೆಡೋಯಿನ್ ಗಾದೆಯನ್ನು ಸ್ಮರಿಸುತ್ತ ಅವು ಎಲ್ಲಿಂದ ಬಂದಿವೆ ಎಂದು ಯೊಚಿಸಬಾರದು ಎನ್ನುತ್ತಾರೆ ಸಿದ್ದಕಿಯವರು.
ಫ್ಯಾಸಿಸ್ಟ್ ಇಟಲಿಯಿಂದ ಪ್ರಭಾವಿತಗೊಂಡ ಮೂಂಜೆಯವರ ಹಿಂದುತ್ವದ ಉಗ್ರವಾದಿ ಸಿದ್ಧಾಂತವು ಈ ದೇಶದಲ್ಲಿ ಕಾಲಕಾಲಕ್ಕೆ ಆಗಲೆಬೇಕಾದ ಬದಲಾವಣೆಗಳನ್ನು ಬಲವಾಗಿ ಪ್ರತಿರೋಧಿಸುತ್ತದೆ. ಅಂದರೆ ಹಿಂದುತ್ವ ಸಿದ್ಧಾಂತವು ಪ್ರಗತಿವಿರೋಧಿ ಹಾಗು ಯಥಾಸ್ಥಿತಿವಾದಿಯಾದದ್ದು ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ. ಭಾರತದ ಬೀದಿಗಳಲ್ಲಿ ಕಪ್ಪು ಟೋಪಿ, ಬಿಳಿ ಅಂಗಿ ಮತ್ತು ಖಾಕಿ ಚಡ್ಡಿಯ ಯುವಕರನ್ನು ನೋಡಿದಾಗ ನಮಗೆ ತಟ್ಟನೆ ಮೂಂಜೆಯವರು ಮತ್ತು ಆಮೂಲಕ ಇಟಲಿ ಫ್ಯಾಸಿಷ್ಟ್ ಮುಸೊಲಿನಿ ಕಣ್ಮುಂದೆ ಬರುತ್ತಾರೆ. ಸಂಘಿಗಳು ಪ್ರತಿಪಾದಿಸುವ ಫ್ಯಾಸಿಷ್ಟ್ ಐಡಿಯಾಲಜಿ ಸದಾ ಹೊಸ ಪ್ರಗತಿಪರ ಆಲೋಚನೆಗಳಿಗೆ ಹೆದರುತ್ತದೆ. ಜೆಎನ್ಯುನಲ್ಲಿನ ಆಜಾದ್ ಬ್ಲಾಕ್ನಾದ್ಯಂತ ಪ್ರತಿಧ್ವನಿಸುವ ಪ್ರಗತಿಪರ ಯುವಕರ ಆಜಾದಿಯ ಸಂಗೀತ ನಾದವು ಖಂಡಿತವಾಗಿಯೂ ಯಥಾಸ್ಥಿತಿವಾದಿ ಸಂಘಿಗಳನ್ನು ಬೆಚ್ಚಿಬೀಳಿಸುತ್ತದೆ. ಹಿಂದುಗಳಿಗೆ ಒಂದು ಉಗ್ರಗಾಮಿ ಸಂಸ್ಥೆಯ ಅಗತ್ಯತೆ ಮತ್ತು ಅದರ ಅನುಷ್ಟಾನಕ್ಕಾಗಿ ಮೂಂಜೆ ಇಟಲಿ ಸರ್ವಾಧಿಕಾರಿ ಮುಸೊಲಿನಿಯನ್ನು ಭೇಟಿಯಾದರು ಎನ್ನುತ್ತಾಸೆ ಸಿದ್ದಕಿ.
ಸಂಘದಂತ ಪ್ರತಿಗಾಮಿ ಸಂಘಟನೆಗಳು ಯಥಾಸ್ಥಿತಿವಾದಿ ಯುವಶಕ್ತಿಯನ್ನು ಉತ್ಪಾದಿಸುವ ಕಾರ್ಖಾನೆಯಾಗಿ ಕೆಲಸ ಮಾಡುತ್ತವೆಯೆ ಹೊರತು ಅವು ಒಂದು ರಾಷ್ಟ್ರವನ್ನು ಅಂದಂದಿನ ಅಗತ್ಯಗಳಿಗೆ ಅನುಗುಣವಾಗಿ ಕಟ್ಟುವ ಸಾಮರ್ಥ್ಯದ ಯುವಶಕ್ತಿಯನ್ನು ರೂಪಿಸಲಾರವು. ಹಾಗಾಗಿ ಯಾವುದೇ ಫ್ಯಾಸಿಷ್ಟ್ ಸಂಘಟನೆಗಳ ಮಿತಿ ಎಂದರೆ ಅವು ಒಂದು ವಿಶ್ವವಿದ್ಯಾಲಯದಂತೆ ಕಾರ್ಯ ಮಾಡಲಾರದ ಅನಿವಾರ್ಯತೆ. ವಿಶ್ವವಿದ್ಯಾನಿಲಯಗಳು ಹೊಸ ಆಲೋಚನೆಗಳನ್ನು ಉತ್ಪಾದಿಸುವ ಕಾರ್ಖಾನೆಯಂತೆ ಕಾರ್ಯವೆಸಗುತ್ತವೆ. ಪ್ರಸ್ತುತ ಫ್ಯಾಸಿಷ್ಟ್ ಆಡಳಿತದ ಸಮಸ್ಯೆಯೆಂದರೆ ಅದು ಹೊಸ ಆಲೋಚನೆಗಳಿಗೆ ಹೆದರುತ್ತದೆ ಮತ್ತು ಕಾಶ್ಮೀರದ ಬೀದಿಗಳಿಂದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದವರೆಗೆ ಅಥವಾ ಅಲ್ಲಿಂದ ಜಾದವ್ಪುರದವರೆಗೆ ಹೊಸ ಆಲೋಚನೆಗಳ ಸರಾಗ ಸಂಚಾರವನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತದೆ ಎನ್ನುತ್ತಾರೆ ಸಿದ್ದಕಿಯವರು.
ಹಾಗಾಗಿ ದೇಶದ ಪ್ರಗತಿಪರರಾದ ನಾವೆಲ್ಲರು ಇಂದು ಇಟಲಿಯಿಂದ ಎರವಲು ಪಡೆದ ಹಿಂದುತ್ವವೆಂಬ ಫ್ಯಾಸಿಷ್ಟ್ ಐಡಿಯಾಲಜಿಯಿಂದ ಭಾರತದ ಬಹು ಸಂಸ್ಕೃತಿಗೆ ತೀವ್ರವಾಗಿ ಆಗುತ್ತಿರುವ ಅಘಾತ ಮತ್ತು ಅಪಾಯಗಳನ್ನು ತಪ್ಪಿಸಲು ಪ್ರಗತಿಪರ ಯುವಶಕ್ತಿಯನ್ನು ಸಂಘಟಿಸಬೇಕಿದೆ. ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳ ಆಂದೋಲನದ ನಿಜವಾದ ಆತ್ಮವಾಗಿರುವ ಈ ಹೊಸ ಆಲೋಚನೆಗಳ ಸಂಚಾರವನ್ನು ಜೀವಂತವಾಗಿಡುವ ಸಮರಮಾಗಿ ನಾವು ಇದನ್ನು ರೂಪಿಸುವ ಅಗತ್ಯವಿದೆ. ಹಾಗಾದಾಗ ಮಾತ್ರ ಇಟಲಿ ಮೂಲದ ಹಿಂದೂ ಫ್ಯಾಸಿಜಮ್ ನ ಅಪಾಯದಿಂದ ಈ ದೇಶವನ್ನು ನಾವು ರಕ್ಷಿಸಬಹುದಾಗಿದೆ.