
ಗೆ
ಸನ್ಮಾನ್ಯ ಸಿದ್ದರಾಮಯ್ಯನವರು
ಗೌರವಾನ್ವಿತ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರು
ಮಾನ್ಯರೇ
ವಿಷಯ: ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿರುವ “ಭಾರತ ಬಿಟ್ಟು ತೊಲಗಿ” ಚಳುವಳಿಯಲ್ಲಿ ಹುತಾತ್ಮರಾದ ವಿದ್ಯಾರ್ಥಿಗಳ ಸ್ಮಾರಕದ ಬಗ್ಗೆ.
ಉಲ್ಲೇಖ: ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಹೆಚ್ಎಸ್ ದೊರೆಸ್ವಾಮಿ ವೇದಿಕೆಯಿಂದ ದಿನಾಂಕ: 01/08/23 ರಂದು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಬರೆದ ಪತ್ರ.
ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಾದ ಶಾಮಣ್ಣ ಬಿನ್ ಬೇಟೆ ರಂಗಪ್ಪ, ಪ್ರಹ್ಲಾದ ಶೆಟ್ಟಿ, ಗುಂಡಪ್ಪ ಮತ್ತು ಜಿ .ವಿ ತಿರುಮಲಯ್ಯ ಎಂಬ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದಾಗ ಸ್ವಾತಂತ್ರ್ಯಕ್ಕಾಗಿ ತಮ್ಮ ಎದೆಯನೊಡ್ಡಿ ಬ್ರಿಟಿಷರ ಗುಂಡಿಗೆ ಬಲಿಯಾದ ನೆನಪಿಗಾಗಿ 1972ರಲ್ಲಿ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿದ ಸ್ಮಾರಕ ಸ್ತಂಭ ವನ್ನು 1973 ರಲ್ಲಿ ಅಂದಿನ ಬೆಂಗಳೂರು ನಗರ ಸಭೆ ಅನಾವರಣಗೊಳಿಸಿತು.

ಇದುವರೆಗೂ ರಾಜ್ಯವನ್ನಾಳಿದ ಸರ್ಕಾರ ಹಾಗೂ ಪಾಲಿಕೆಯ ದಿವ್ಯನಿರ್ಲಕ್ಷದಿಂದ ಈ ಸ್ವಾತಂತ್ರ್ಯ ಯೋಧರ ಸ್ಮಾರಕ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ದೇವಸ್ಥಾನ ಒಂದು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಕಿರುವುದರಿಂದ ಸಾರ್ವಜನಿಕರಿಗೆ ಸ್ಮಾರಕದ ಬಗ್ಗೆ ಮಾಹಿತಿಯೂ ಇಲ್ಲ ಅದು ಸಾರ್ವಜನಿಕರ ದೃಷ್ಟಿಗೆ ಬೀಳುವುದಿಲ್ಲ.
ಈ ವಿಚಾರವಾಗಿ ನೈಜ ಹೋರಾಟಗಾರರ ವೇದಿಕೆಯು 3-4 ವರ್ಷಗಳಿಂದ ದೇವಸ್ಥಾನದ ಕಾಂಪೌಂಡಿನಿಂದ ಸ್ಮಾರಕವನ್ನು ವಿಂಗಡಿಸಿ ಸಾರ್ವಜನಿಕರಿಗೆ ಕಾಣುವಂತೆ ಮತ್ತು ಮೈಸೂರು ಬ್ಯಾಂಕ್ ಸರ್ಕಲ್ ಹೆಸರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿಗಳ ನೆನಪಿಗಾಗಿ ವೀರ ಯೋಧರ ವೃತ್ತ ಎಂದು ಮರುನಾಮಕರಣ ಮಾಡಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸುತ್ತಾ ಬಂದಿದ್ದೇವೆ.
ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 75ಕ್ಕೂ ಹೆಚ್ಚು ವರ್ಷಗಳಾದರೂ ಸಹಿತ ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ನಡೆಸಿದ ಪಕ್ಷಗಳಿಗೆ, ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆಯಿಂದ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳ ಬಲಿದಾನ ಸಾರ್ವಜನಿಕರ ಗಮನಕ್ಕೆ ಬರದೇ ವ್ಯರ್ಥವಾಗುತ್ತಿದೆ.
ಗೌರವಾನ್ವಿತ ಮುಖ್ಯಮಂತ್ರಿಗಳಾದ ತಾವು ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಗಳ ನೆನಪಿಗಾಗಿ ಸದರಿ ಸ್ಮಾರಕವನ್ನು ದೇವಸ್ಥಾನದವರು ಅಕ್ರಮಿಸಿಕೊಂಡು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತಕ್ಷಣ ತೆರವುಗೊಳಿಸಿ ದೇವಸ್ಥಾನದಿಂದ ಸ್ಮಾರಕವನ್ನು ಬೇರ್ಪಡಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕೆಂದು ನೈಜ ಹೋರಾಟಗಾರರು ವೇದಿಕೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದೆ.

ಈ ಸ್ಮಾರಕವನ್ನು ತೆರವುಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮತ್ತು ವಿದ್ಯಾರ್ಥಿಗಳ ಬಲಿದಾನಕ್ಕೆ ಗೌರವ ನೀಡಿ ಮೈಸೂರ್ ಬ್ಯಾಂಕ್ ಸರ್ಕಲ್ ಹೆಸರನ್ನು ತಕ್ಷಣ ಬದಲಾವಣೆ ಮಾಡಿ ವೀರಯೋಧ ವಿದ್ಯಾರ್ಥಿಗಳ ವೃತ್ತ ಎಂದು ಮರುನಾಮಕರಣ ಮಾಡಬೇಕೆಂದು ನೈಜ್ಯ ಹೋರಾಟಗಾರರು ವೇದಿಕೆ ಯು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದೆ.
ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ವಿದ್ಯಾರ್ಥಿಗಳ ನೆನಪಿಗಾಗಿ ನಿರ್ಮಾಣವಾಗಿರುವ ಕಣ್ಮರೆಯಾದ ಸ್ಮಾರಕವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲು ನಾವು ಮತ್ತೊಂದು ಹೋರಾಟವನ್ನು ಮಾಡಬೇಕಾಗಿ ಬಂದಿರುವುದು ದುರಾದೃಷ್ಟಕರವಾಗಿದೆ.
ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಇದೇ ಆಗಸ್ಟ್ 15ರ ಸ್ವಾತಂತ್ರೋತ್ಸವದ ದಿನ ವೀರಯೋಧ ವಿದ್ಯಾರ್ಥಿಗಳಿಗೆ ಗೌರವ ನಮನ ಸಲ್ಲಿಸಲು ಮತ್ತು ಸ್ಮಾರಕವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲು ತಾವು ಪ್ರಮುಖ ಪಾತ್ರ ವಹಿಸುತ್ತೀರೆಂಬ ಭರವಸೆ ಮತ್ತು ವಿಶ್ವಾಸ ನಮಗಿದೆ.
ಏನೇ ಆಗಲಿ ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ
ಗೌರವಪೂರ್ವಕ ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
ಹೆಚ್ಎಂ ವೆಂಕಟೇಶ್
ಹಿರಿಯ ಸಾಮಾಜಿಕ ಹೋರಾಟಗಾರರು
ಕುಣಿಗಲ್ ನರಸಿಂಹಮೂರ್ತಿ
ನೈಜ ಹೋರಾಟಗಾರರ ವೇದಿಕೆ ಪರವಾಗಿ