ಚುನಾವಣೆ ಎಂದರೆ ಗೆದ್ದವರ ಮತ್ತು ಸೋತವರ ಕುರಿತ ಕತೆ. ಬಹುತೇಕ ಬಾರಿ ಚುನಾವಣೆಯಲ್ಲಿ ಗೆದ್ದವರ ಕುರಿತು ಪುಂಖಾನುಪುಂಖವಾಗಿ ವಿಶ್ಲೇಷಣೆಗಳು ಕಾಣಸಿಗುತ್ತವೆ. ಆದರೆ, ಈ ವಿಶ್ಲೇಷಣೆ ಸೋತವರ ಕುರಿತು. ಯೋಗಿ ಆದಿತ್ಯನಾಥ್ ಹಾಗು ಬಿಜೆಪಿಯ ನಿರಾಯಸ ಗೆಲುವು ಹಾಗೂ ಆಮ್ ಆದ್ಮಿ ಪಕ್ಷದ ಗಮನಾರ್ಹ ಸಾಧನೆ ಕಾಂಗ್ರೆಸ್’ನ ಸ್ಥಿರವಾದ ಹಾಗೂ ಪ್ರಾಯಶಃ ಇನ್ನೆಂದೂ ಬದಲಾಯಿಸಲಾಗದಂತಹ ಪತನವನ್ನು ಸೂಚಿಸುತ್ತದೆ.
ಲೋಕಸಭೆಗೆ 80 ಜನ ಸಂಸದರನ್ನು ನೀಡುವ ಉತ್ತರ ಪ್ರದೇಶದಲ್ಲಿ ಹಿಂದೊಮ್ಮೆ ಕಾಂಗ್ರೆಸ್ ಆಳವಾಗಿ ಬೇರೂರಿತ್ತು. ಮೊದಲ ಮೂರು ಜನ ಪ್ರಧಾನಿಗಳನ್ನು ದೇಶಕ್ಕೆ ನೀಡಿದ ರಾಜ್ಯವಿದು. 1960ರ ಕೊನೆಯಿಂದ ಆರಂಭವಾದ ಕಾಂಗ್ರೆಸ್’ನ ಪತನದಿಂದ ಈಗ ಅಸ್ಥಿತ್ವ ಉಳಿಸಿಕೊಳ್ಳಲೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಉ.ಪ್ರ.ದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಗಾಂಧಿ ಪರಿವಾರದ ಪ್ರಿಯಾಂಕ ಗಾಂಧಿ ವಾದ್ರ ಪಣತೊಟ್ಟಿದ್ದರಾದರೂ, ಅದು ಕೇವಲ ಪ್ರಯತ್ನವಾಗಿಯೇ ಉಳಿಯಿತಷ್ಟೇ. ದೆಹಲಿಯಿಂದ ತಮ್ಮ ನಿವಾಸವನ್ನು ಲಕ್ನೋಗೆ ವರ್ಗಾಯಿಸಲು ಅವರು ನಿರಾಕರಿಸಿದರೂ, ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದರೂ ಉತ್ತರ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಅವರ ಪ್ರತಿ ಭೇಟಿಯನ್ನು ಕೂಡಾ ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ಎಂಬಂತೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಯಿತು. ಇಷ್ಟೆಲ್ಲಾ ಅಬ್ಬರದ ಪ್ರಚಾರ ನೀಡಿದರೂ, ಕಾಂಗ್ರೆಸ್ ಪಡೆದುಕೊಂಡಿದ್ದು 2% ಮತಗಳನ್ನು ಮಾತ್ರ.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಪ್ರಯತ್ನಕ್ಕೆ ಅಷ್ಟಾದರು ಫಲ ದೊರೆಯಿತೆನ್ನಿ. ಆದರೆ, ಆಡಳಿತರೂಢ ಪಂಜಾಬಿನಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತು. ಚುನಾವಣೆಗೆ ಒಂದು ವರ್ಷಕ್ಕಿಂತಲು ಕಡಿಮೆ ಸಮಯ ಇರುವಾಗ ಸಿಎಂ ಬದಲಾವಣೆ ಮಾಡಿ ಪ್ರಿಯಾಂಕ ಸಹೋದರ ರಾಹುಲ್ ಗಾಂಧಿ ಪಂಜಾಬಿನಲ್ಲಿ ಮತ್ತೆ ಅಧಿಕಾರಕ್ಕೇರುವ ಎಲ್ಲಾ ಸಾಧ್ಯತೆಗಳನ್ನು ಮುಚ್ಚಿಹಾಕಿದರು. ಪಂಜಾಬ್ ಶಾಸಕಾಂಗ ನಾಯಕರಿಗೆ ಅಮರಿಂದರ್ ಅಷ್ಟೊಂದು ಹತ್ತಿರವಿಲ್ಲದಿದ್ದರೂ ಹಿರಿಯ ರಾಜಕಾರಣಿಯ ಅನುಭವವನ್ನು ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಯಿತು.
ಒಂದು ವರ್ಷದ ಹಿಂದೆ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್’ಗೆ 50-50 ಅವಕಾಶಗಳಿದ್ದವು. ಆ ಬಳಿಕ ನಡೆದಂತಹ ಘಟನೆಗಳು ಪಂಜಾಬ್ ರಾಜ್ಯದ ಅಧಿಕಾರವನ್ನು ಆಪ್ ಜೋಳಿಗೆಗೆ ಹಾಕಿದವು.

ಇನ್ನು ಗೋವಾ, ಉತ್ತರಾಖಂಡದಲ್ಲಿಯೂ ಆಡಳಿತ ವಿರೋಧಿ ಅಲೆ ದಟ್ಟವಾಗಿ ಹಬ್ಬಿದ್ದರೂ ಅದರ ಪ್ರಯೋಜನವನ್ನು ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಅಲ್ಲಿನ ಜನವಿರೋಧಿ ನೀತಿಗಳು, ಭೃಷ್ಟಾಚಾರದಂತಹ ಪ್ರಮುಖ ಸಮಸ್ಯೆಗಳನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವಲ್ಲಿ ಪಕ್ಷ ವಿಫಲವಾಯಿತು. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿತ್ತು. ಆದರೂ, ಸರ್ಕಾರದ ವಿರುದ್ದ ಹೊರಾಟವನ್ನು ಹುಟ್ಟುಹಾಕುವಲ್ಲಿ ನಾಯಕರು ವಿಫಲರಾದರು.
ಇನ್ನು ಒಂದು ಕಾಲದಲ್ಲಿ ಮಣಿಪುರವೆಂದರೆ ಅಲ್ಲಿ ‘ನೈಸರ್ಗಿಕ’ ಸರ್ಕಾರವೆಂದು ಕಾಂಗ್ರೆಸ್’ನ್ನು ಕರೆಯಲಾಗುತ್ತಿತ್ತು. ಅಂತಹ ರಾಜ್ಯದಲ್ಲಿ ಕಳೆದ ಬಾರಿಗಿಂತಲೂ 23 ಸೀಟುಗಳನ್ನು ಕಡಿಮೆ ಪಡೆದುಕೊಳ್ಳುವ ಮೂಲ ಕಾಂಗ್ರೆಸ್ ತನ್ನ ಶವಪೆಟ್ಟಿಗೆಯ ಕೊನೆಯ ಮೊಳೆಯನ್ನು ಹೊಡೆದುಕೊಳ್ಳುವಂತಹ ಪರಿಸ್ಥಿತಿಗೆ ತಲುಪಿದೆ.
ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನಿಷ್ಕ್ರೀಯತೆಯನ್ನು ತೋರಿಸುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಪಕ್ಷವಾಗಿ ಮತ್ತೆ ಬೆಳೆಯಲು ಬೇಕಾಗಿರುವ ನಾಯಕತ್ವದ ಗುಣಗಳೇ ಕಾಂಗ್ರೆಸ್’ನಲ್ಲಿ ಕಾಣುತ್ತಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ತಮ್ಮ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಅವರ ತಾಯಿ ಸೋನಿಯಾ ಗಾಂಧಿಯನ್ನು ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಇದಾದ ಎರಡೂವರೆ ವರ್ಷಗಳ ಬಳಿಕವು ಒಬ್ಬ ಸಮರ್ಥ ನಾಯಕ/ನಾಯಕಿಯನ್ನು ಹುಡುಕುವಲ್ಲಿ ಕಾಂಗ್ರೆಸ್ ವಿಫಲವಾಯಿತು.
2019ರ ಬಳಿಕ ಪಕ್ಷವನ್ನು ಮರುಸಂಘಟಿಸುವ ಅಮೂಲ್ಯ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಮುಂದೇನು ಎಂಬ ಪ್ರಶ್ನೆಗೆ ಸಿಗುವ ಸುಲಭ ಉತ್ತರವೇನೆಂದರೆ, ಗಾಂಧಿ ಕುಟುಂಬ ಕಾಂಗ್ರೆಸ್ ನಾಯಕತ್ವದಿಂದ ಮಾತ್ರವಲ್ಲ ಸಂಪೂರ್ಣ ರಾಜಕೀಯದಿಂದಲೇ ಹೊರಗುಳಿಯಬೇಕು. ಇದು ಕಾಂಗ್ರೆಸ್ ಪಕ್ಷದ ಹಾಗೂ ದೇಶದ ಪ್ರಜಾಪ್ರಭುತ್ವದ ದೃಷ್ಟಿಕೋನದಲ್ಲಿ ತೆಗೆದುಕೊಳ್ಳಬಹುದಾದಂತಹ ಉತ್ತಮ ನಿರ್ಧಾರ. ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳಲ್ಲಿ ಕಾಮಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ರಾಹುಲ್ ಹಾಗೂ ಪ್ರಿಯಾಂಕ ತಮ್ಮ ವೈಫಲ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಮುಖ್ಯವಾಗಿ, ಕಾಂಗ್ರೆಸ್ನಲ್ಲಿ ಗಾಂಧಿ ಪರಿವಾರದವರ ಉಪಸ್ಥಿತಿಯೇ ಬಿಜೆಪಿಗೆ ಹಾಗೂ ಪ್ರಧಾನಿ ಮೋದಿಗೆ ಉತ್ತಮ ಪ್ರಚಾರವನ್ನು ತಂದುಕೊಡುತ್ತಿದೆ. ಸರ್ಕಾರದ ವೈಫಲ್ಯತೆಗಳನ್ನು ಮರೆಮಾಚಲು ಗಾಂಧಿ ಪರಿವಾರದ ವೈಫಲ್ಯತೆಗಳನ್ನು ಜನರ ಮುಂದಿಡಲಾಗುತ್ತಿದೆ.

ರಫೇಲ್ ಹಗರಣದ ಕುರಿತು ಮಾತನಾಡಿದರೆ ರಾಜೀವ್ ಗಾಂಧಿಯ ಬೋಫೋರ್ಸ್ ಹಗರಣ ಉತ್ತರವಾಗಿ ಲಭಿಸುತ್ತದೆ. ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ಹಾಗೂ ಸಾಮಾಜಿಕ ಕಾರ್ಯಕರ್ತರ ಶೋಷಣೆಯ ಕುರಿತು ಮಾತನಾಡಿದರೆ, ಇಂದಿರಾ ಗಾಂಧಿ ಹಾಗೂ ತುರ್ತುಪರಿಸ್ಥಿಯನ್ನು ನೆನಪಿಸಿಕೊಳ್ಳುತ್ತಾರೆ. ಚೀನಾ ಆಕ್ರಮಣ ಹಾಗೂ ಚೀನಾ ಗಡಿಯಲ್ಲಿ ಸೈನಿಕರು ಹುತಾತ್ಮರಾಗುವ ಕುಎಇರು ಮಾತನಾಡಿದರೆ, ಜವಾಹರ ಲಾಲ್ ನೆಹರೂ ಹಾಗೂ 1962ರ ಇಂಡೋ-ಚೀನಾ ಯುದ್ಧವನ್ನು ಕೆದಕುತ್ತಾರೆ. ಹೀಗೆ ಬಿಜೆಪಿಯ ಪ್ರತಿ ವೈಫಲ್ಯಕ್ಕೂ ಗಾಂಧಿ ಪರಿವಾರದ ವೈಫಲ್ಯಗಳು ಶ್ರೀರಕ್ಷೆಯಾಗಿವೆ.
ವರ್ತಮಾನದ ಕುರಿತು ಚರ್ಚೆ ನಡೆಸದೆ ಭೂತಕಾಲವನ್ನೇ ಮುಂದಿಟ್ಟುಕೊಂಡು ರಾಜಕೀಯ ನಡೆಸಲು ಗಾಂಧಿ ಪರಿವಾರ ಬಿಜೆಪಿಗೆ ಅವಕಾಶವನ್ನು ತಂದುಕೊಡುತ್ತಿದೆ. ಹೀಗಾಗಿ, ರಾಜಕೀಯದಿಂದ ಗಾಂಧಿ ಪರಿವಾರ ಹೊರಗುಳಿದರೆ ಕಾಂಗ್ರೆಸ್ ಮುಂದಿನ ಕೆಲವು ವರ್ಷಗಳಿಗೆ ನೆಲಕಚ್ಚಬಹುದೇನೋ, ಆದರೆ ಯಾರಾದರೂ ಸಮರ್ಥ ನಾಯಕ ಪಕ್ಷವನ್ನು ಮುನ್ನಡೆಸಲು ಖಂಡಿತಾ ಲಭಿಸುತ್ತಾರೆ ಎಂಬ ಭರವಸೆಯಿದೆ.
ಗಾಂಧಿ ಕುಟುಂಬ ನಿರ್ಗಮಿಸಿದರೆ, ಕಾಂಗ್ರೆಸ್ ಛಿದ್ರಗೊಂಡರೂ, ಅವರ ಸ್ಥಾನವನ್ನು ಯಾರೋ ಹೆಚ್ಚು ರಾಜಕೀಯ ವಿಶ್ವಾಸಾರ್ಹತೆ ಹೊಂದಿರುವವರು ತೆಗೆದುಕೊಳ್ಳುತ್ತಾರೆ. ಆಗ ಹಿಂದುತ್ವವನ್ನು ವಿರೋಧಿಸುವ ನಮ್ಮಂತಹವರು ಭೀಕರವಾದ ವರ್ತಮಾನವನ್ನು ಮೀರಿ ಭಾರತದ ಭವಿಷ್ಯದ ಬಗ್ಗೆ ಯೋಚಿಸಲು ಮತ್ತು ಉತ್ತಮವಾಗಿ ಹೋರಾಡಲು ಸಾಧ್ಯವಾಗುತ್ತದೆ. ಹಾಗಾಗಿ ಗಾಂಧಿ ಕುಟುಂಬ ಕಾಂಗ್ರೆಸ್ನಿಂದ ಮಾತ್ರವಲ್ಲ, ಭಾರತದ ರಾಜಕೀಯದಿಂದಲೇ ದೂರ ಸರಿಯಬೇಕು ಎಂದು ರಾಮಚಂದ್ರ ಗುಹಾ ಅವರು ಅಭಿಪ್ರಾಯ ಪಟ್ಟಿದ್ದಾರೆ.