ಬಿಗ್ ಬಾಸ್ ಕನ್ನಡ ಸೀಸನ್ 12( Bigg Boss Kannada season 12) ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಚರ್ಚೆ ಜೋರಾಗಿದ್ದು, ಬಿಗ್ ಬಾಸ್ ಮನೆಯ ಟಗರು ಪುಟ್ಟಿ, ಸೋಶಿಯಲ್ ಮೀಡಿಯಾದ ಸೆನ್ಸೇಷನ್ ರಕ್ಷಿತಾ ಶೆಟ್ಟಿ ಗೆಲುವಿಗೆ ಒಂದು ಹೆಜ್ಜೆ ಮುಂದಿದ್ದಾರೆ. ಈ ಸೀಸನ್ನಲ್ಲಿ ಹೆಚ್ಚು ಚರ್ಚೆ, ಮಾತು, ಇಷ್ಟ, ವಿವಾದ ಎಲ್ಲವೂ ಒಂದೇ ಹೆಸರಿನ ಸುತ್ತ ತಿರುಗಿದೆ ಅಂದರೆ ಅದು ರಕ್ಷಿತಾ ಶೆಟ್ಟಿ(Rakshitha Shetty). ಮೊದಲ ದಿನದ ಎಲಿಮಿನೇಷನ್ನಿಂದ ಹಿಡಿದು, ಫಿನಾಲೆ ಹಂತದವರೆಗೂ ರಕ್ಷಿತಾ ಪಯಣ ಹೇಗಿತ್ತು ಎನ್ನುವುದರ ಸಂಪೂರ್ಣ ವರದಿ ಇಲ್ಲಿದೆ.

ಯೂಟ್ಯೂಬ್ ಮತ್ತು ರೀಲ್ಸ್ ಮೂಲಕ ಗಮನ ಸೆಳೆದ ರಕ್ಷಿತಾ ಶೆಟ್ಟಿ, ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಾಲಿಟ್ಟಾಗ ಹೆಚ್ಚಿನವರಿಗೆ ಅವರು ಅಪರಿಚಿತ ಮುಖವೇ ಆಗಿದ್ದರು. ಇವರು ಯಾರು? ಎನ್ನುವ ಪ್ರಶ್ನೆಗಳು ಗೂಗಲ್ ಸರ್ಚ್ನಲ್ಲಿ ಹೆಚ್ಚಾಗಿದ್ದವು. ಆದರೆ ಕೆಲವೇ ದಿನಗಳಲ್ಲಿ ತಮ್ಮ ಸರಳತೆ, ನಗು ಮತ್ತು ಹಾಸ್ಯ ಶೈಲಿ, ನೇರ ಮಾತಿನ ಮೂಲಕ ರಕ್ಷಿತಾ ಶೆಟ್ಟಿ ಎಲ್ಲರ ಗಮನ ಸೆಳೆದರು.

ಸೀಸನ್ನ ಮೊದಲ ದಿನವೇ ಒಂಟಿಗಳ ನಿರ್ಧಾರದಂತೆ ರಕ್ಷಿತಾ ಎಲಿಮಿನೇಟ್ ಆಗಿದ್ದು, ಈ ಸೀಸನ್ನ ಅತಿದೊಡ್ಡ ಶಾಕ್ ಎಂದೇ ಹೇಳಬಹುದು. ಯಾವುದೇ ದೊಡ್ಡ ತಪ್ಪಿಲ್ಲದೆ ಬಂದ ಮೊದಲ ದಿನವೇ ನಡೆದ ಈ ಎಲಿಮಿನೇಷನ್ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟುಹಾಕಿತು. ಸೋಶಿಯಲ್ ಮೀಡಿಯಾದಲ್ಲಿ “ಜಸ್ಟಿಸ್ ಫಾರ್ ರಕ್ಷಿತಾ” ಎನ್ನುವ ಟ್ರೆಂಡ್ ಕೂಡ ಕಾಣಿಸಿಕೊಂಡಿತು.

ಅಭಿಮಾನಿಗಳ ಒತ್ತಾಯ, ಪ್ರೇಕ್ಷಕರ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತೆ ಮನೆಯೊಳಗೆ ಬಿಗ್ ಬಾಸ್ ಮನೆಗೆ ಮರಳಿದರು. ಇದು ರಕ್ಷಿತಾ ಪಯಣದ ಟರ್ನಿಂಗ್ ಪಾಯಿಂಟ್. ಎರಡನೇ ಅವಕಾಶ ಸಿಕ್ಕಿದ ಬಳಿಕ, ಈ ಬಾರಿ ಆಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ರಕ್ಷಿತಾ ಮನಸ್ಸು ಮಾಡಿಕೊಂಡರು. ಜೊತೆಗೆ ಅದರಂತೆ ನಡೆದುಕೊಂಡರು ರಕ್ಷಿತಾ ಶೆಟ್ಟಿ ಶಕ್ತಿಶಾಲಿ ಅಥವಾ ಆಕ್ರಮಣಕಾರಿ ಆಟಗಾರ್ತಿ ಅಲ್ಲ. ಆದರೆ ಎಮೋಷನಲ್, ರಿಲೇಷನ್ಶಿಪ್ ಬೇಸ್ಡ್ ಆಟವೇ ಇವರ ಶಕ್ತಿ. ಟಾಸ್ಕ್ಗಳಲ್ಲಿ ಗೇಮ್ ಮೈಂಡ್ಗಿಂತ ಮನಸ್ಸಿಗೆ ಆದ್ಯತೆ ನೀಡಿದ ರಕ್ಷಿತಾ, ಕೆಲವೊಮ್ಮೆ ಇದೇ ಕಾರಣಕ್ಕೆ ಟೀಕೆಗೂ ಒಳಗಾದರು.

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ಮನೆಯ ಸದಸ್ಯರನ್ನೇ ತಮ್ಮವರಂತೆ ಕಂಡರು. ಗಿಲ್ಲಿ ಜೊತೆಗಿನ ಸ್ನೇಹ, ರಘು ಮತ್ತು ಮಾಳು ಜೊತೆಗೆ ಬೆಳೆದ ಸಹೋದರ ಸಂಬಂಧ, ಮಲ್ಲಮ್ಮನನ್ನು ಅಜ್ಜಿ ಅಜ್ಜಿ ಎಂದು ಹಚ್ಚಿಕೊಂಡ ಪರಿ, ಮನಸ್ಸಿಗೆ ನೋವು ಮಾಡಿದ ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರ ಬಗೆಗಿನ ಮೆಚ್ಚುಗೆಯ ಮಾತು ಎಲ್ಲರ ಮನಸ್ಸು ಕದ್ದಿತು. ಯಾರ ಬಗ್ಗೆ ಎಷ್ಟೇ ಕೋಪ ಸಿಟ್ಟು ಇದ್ದರೂ ಎಲ್ಲರನ್ನೂ ಕಾಳಜಿ ಮಾಡುವ ವಿಚಾರದಲ್ಲಿ ರಕ್ಷಿತಾ ಎತ್ತಿದ ಕೈ.

ಸದ್ಯ ಗೆಲುವಿನ ಹಾದಿಯಲ್ಲಿರುವ ಗಿಲ್ಲಿಯಷೇ ರಕ್ಷಿತಾ ಶೆಟ್ಟಿಗೂ ಕನ್ನಡಿಗರ ಬೆಂಬಲವಿದ್ದು, ಮಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ ಕನ್ನಡದ ಮೇಲಿನ ಪ್ರೀತಿಗೆ ಕನ್ನಡ ಕಲಿತಿರುವುದಕ್ಕೆ ಹಾಗೂ ಬಿಗ್ ಬಾಸ್ಗೆ ಬಂದ ದಿನದಿಂದಲೂ ಈವರೆಗೂ ಅತಿ ಹೆಚ್ಚು ಕನ್ನಡ ಬಳಸಿರುವುದಕ್ಕೆ ಕನ್ನಡಿಗರ ಫಿದಾ ಆಗಿದ್ದಾರೆ. ಆಟ, ವ್ಯಕ್ತಿತ್ವ, ಗುಣ ಎಲ್ಲದರಲ್ಲಿಯೂ ಇತರ ಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿರುವ ರಕ್ಷಿತಾ ಶೆಟ್ಟಿ ಗೆಲುವಿಗೆ ಅನೇಕರು ಆಶಿಸುತ್ತಿದ್ದು, ಈಗಾಗಲೇ ವೋಟಿಂಗ್ ಕ್ಯಾಂಪೇನ್ ಕೂಡ ನಡೆಯುತ್ತಿದೆ.

ಇಷ್ಟೆಲ್ಲಾ ಬೆಂಬಲವಿರುವ ರಕ್ಷಿತಾ ಕೈಗೆ ಈ ಬಾರಿ ಬಿಗ್ ಬಾಸ್ ಟ್ರೋಫಿ ಸೇರುತ್ತದೆಯೇ ಎಂಬುದು ಈಗ ಎಲ್ಲರ ಕುತೂಹಲವಾಗಿದೆ. ಒಟ್ಟಿನಲ್ಲಿ ಮೊದಲ ದಿನದ ಎಲಿಮಿನೇಷನ್ನಿಂದ ಫಿನಾಲೆ ಹಂತದವರೆಗೂ ರಕ್ಷಿತಾ ಶೆಟ್ಟಿ ಪಯಣವು ಪ್ರೇಕ್ಷಕರ ಹೃದಯ ಗೆದ್ದಿದ್ದು, ಈ ಪಯಣ ಗೆಲುವಿನ ಗರಿ ಮೂಲಕ ಅಂತ್ಯವಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.






