ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆ.19ರಂದು ಶಾಸಕರ ಕಛೇರಿ ಆವರಣದಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಸಹೋದರಿಯರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಶಾಸಕರಿಗೆ ಆರತಿ ಬೆಳಗಿಸಿ, ಹೂಗಳನ್ನು ಸುರಿಸಿ, ಕೈಗೆ ರಾಖಿಯನ್ನು ಕಟ್ಟುವ ಮೂಲಕ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು. ನಂತರ ಔರಾದ(ಬಿ) ಹಾಗೂ ಕಮಲನಗರ ತಾಲ್ಳೂಕುಗಳ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ಸಾಲು ಸಾಲಾಗಿ ಶಾಸಕರಿಗೆ ರಾಖಿ ಕಟ್ಟಿ ಹಾರೈಸಿದರು. ಎಲ್ಲ ಸಹೋದರಿಯರಿಗೆ ಕಾಣಿಕೆ ನೀಡಿ ಶಾಸಕರು ಗೌರವ ಸಲ್ಲಿಸಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕಿಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತೆಯರು, ಬಂಜಾರಾ ಸಮಾಜದ ಬಾಂಧವರು ಹಾಗೂ ಸಾವಿರಾರು ಸಂಖ್ಯೆಯ ಮಹಿಳೆಯರು ಆಗಮಿಸಿ ಶಾಸಕರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಹಿಂದೂ ಪದ್ದತಿಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದು ಅಣ್ಣ-ತಮ್ಮಂದಿರ ನಡುವೆ ವಾತ್ಸಲ್ಯವನ್ನು ಬೆಳೆಸುವ ಹಬ್ಬವಾಗಿದೆ. ಸಹೋದರರಿಂದ ರಕ್ಷಣೆ ಬಯಸಿ ಹೆಣ್ಣು ಮಕ್ಕಳು ರಾಖಿ ಕಟ್ಟುತ್ತಾರೆ. ಅಕ್ಕ ತಂಗಿಯರಿಗೆ ರಕ್ಷಣೆ ಕೊಡುವ ಸಹೋದರರಿಗೆ ಯಾವುದೇ ರೀತಿಯ ಕೊರತೆಯಾಗುವುದಿಲ್ಲ ಎಂದರು.
ಹೆಣ್ಣು ಮಕ್ಕಳು ಲಕ್ಷ್ಮಿ, ಸರಸ್ವತಿ, ತಾಯಿ ಭವಾನಿ ದೇವಿಯ ಅವತಾರವಾಗಿರುತ್ತಾರೆ. ಸಹೋದರಿಯರ ಆಶೀರ್ವಾದ ನನ್ನ ಮೇಲಿರುವುದರಿಂದ ನನಗೆ ಎದುರಾದ ಎಲ್ಲ ತೊಡಕುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗಿದೆ. ನಾನು ಕೂಡ ಸದಾ ಎಲ್ಲ ಸಹೋದರಿಯರ ರಕ್ಷಣೆಗೆ ಸದಾ ಬದ್ಧನಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿಯ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ ಕೌಟಗೆ, ತಾಲ್ಲೂಕು ಅಧ್ಯಕ್ಷೆ ಶಕುಂತಲಾ ಮುತ್ತಂಗೆ. ಪ್ರಧಾನ ಕಾರ್ಯದರ್ಶಿಗಳಾದ ಗೀತಾ ಗೌಡ, ಕಲ್ಪನಾ ಪಾಟೀಲ್, ಮಂಡಲ ಉಪಾಧ್ಯಕ್ಷರಾದ ಭಾರತಿ ಬೋಚರೆ, ಕೋಮಲ್ ಭಾನುದಾಸ ಪಾಟೀಲ, ಪಟ್ಟಣ ಪಂಚಾಯತ್ ಸದಸ್ಯೆ ಪ್ರೇರಣಾ ಬಾಬು ರಾಠೋಡ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಧೊಂಡಿಬಾ ನರೋಟೆ, ಕೇರಬಾ ಪವಾರ್, ಸಂಜು ವಡೆಯರ್, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ರಾಜಪ್ಪ ಸೋರಾಳೆ, ರವೀಂದ್ರ ರೆಡ್ಡಿ, ಸಚಿನ ಬಿರಾದಾರ, ಹಾಗೂ ಇತರರರು ಉಪಸ್ಥಿತರಿದ್ದರು. ಬೆಳಗ್ಗೆ ಶಾಸಕರ ನಿವಾಸ ಬೋಂತಿ ತಾಂಡಾದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ಶಾಸಕರ ಸಹೋದರಿಯರು ರಾಖಿ ಕಟ್ಟಿ ಶುಭ ಹಾರೈಸಿದರು.