
ರಾಜು ತಾಳಿಕೋಟೆ (Raju Talikote) ಅವರನ್ನು ಉಳಿಸಲು ಇಡೀ ಚಿತ್ರತಂಡ ಪ್ರಯತ್ನ ಮಾಡಿತ್ತು. ಆದರೆ ಇಂದು ಸಂಜೆ 6 ಗಂಟೆ ಸುಮಾರಿಗೆ ನಮ್ಮನ್ನು ಅಗಲಿದ್ದಾರೆ ಎಂದು ರಾಜು ತಾಳಿಕೋಟೆ ಪುತ್ರ ಭರತ್ ಹೇಳಿದ್ದಾರೆ.
ಮೂರು ದಿವಸ ಹಿಂದೆ ಶೈನ್ ಶೆಟ್ಟಿ ನಾಯಕತ್ವದ ಚಿತ್ರದ ಶೂಟಿಂಗ್ಗೆ ಹೆಬ್ರಿಗೆ ಬಂದಿದ್ದರು. ಈ ಹಿಂದೆ ಒಮ್ಮೆ ಹೃದಯಾಘಾತವಾದಗ ಬೆಂಗಳೂರು ಜಯದೇವದಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ನಿನ್ನೆ ರಾತ್ರಿ ಎರಡನೇ ಬಾರಿಗೆ ತೀವ್ರ ಹೃದಯಘಾತವಾಗಿತ್ತು. ತಂದೆಯವರನ್ನು ಉಳಿಸಲು ಚಿತ್ರತಂಡ ಬಹಳ ಪ್ರಯತ್ನಪಟ್ಟಿತ್ತು ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ 35 ವರ್ಷದಿಂದ ನಾಟಕ ಮಾಡುತ್ತಿದ್ದರು. ಈ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. ಇಂದು ಮೃತದೇಹವನ್ನು ಧಾರವಾಡ ರಂಗಾಯಣಕ್ಕೆ ತಗೆದುಕೊಂಡು ಹೋಗುತ್ತೇವೆ. ನಂತರ ಅವರ ಇಷ್ಟಪಡುವ ಸ್ಥಳವಾದ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕು ಚಿಕ್ಕಸಿಂಧಗಿಯಲ್ಲಿರುವ ತೋಟದ ಮನೆಯಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಹೇಳಿದರು.
ತಂದೆಯವರು ಹೆಚ್ಚಾಗಿ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲೇ ಅವರ ಅಂತ್ಯ ಸಂಸ್ಕಾರ ಮಾಡುತ್ತೇವೆ ಅವರ ಪ್ರೀತಿಸುವವರು ಅಭಿಮಾನಿಗಳು ಸಂಬಂಧಿಕರು ಚಿಕ್ಕ ಸಿಂಧಗಿಗೆ ಬನ್ನಿ ಎಂದು ಮನವಿ ಮಾಡಿದರು.

ನಮ್ಮ ತಂದೆಯವರಿಗೆ ಎರಡು ಮದುವೆಯಾಗಿತ್ತು. ಇಬ್ಬರು ಗಂಡು ಮೂರು ಹೆಣ್ಣು ಮಕ್ಕಳಿದ್ದರು. 5 ಮಕ್ಕಳು ಬಹಳ ಅನ್ಯೋನ್ಯವಾಗಿದ್ದೇವೆ. ಕಲಿಯುಗದ ಕುಡುಕ ಅವರಿಗೆ ಬಹಳ ಹೆಸರು ತಂದ ನಾಟಕವಾಗಿತ್ತು. ಇಡೀ ಕುಟುಂಬ ನಾಟಕದಲ್ಲಿ ನಟಿಸುತ್ತಿದ್ದೆವು. ಸುಮಾರು 70 ಕನ್ನಡ ಚಿತ್ರದಲ್ಲಿ ನಟಿಸಿದ್ದು ಸುಮಾರು 10 ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಾಗಿದೆ ಎಂದರು.