ಬೆಂಗಳೂರು: ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನವೆಂಬರ್ ಕ್ರಾಂತಿ ಹೇಳಿಕೆ ಮೂಲಕ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದ ಕೆ.ಎನ್.ರಾಜಣ್ಣ ಇಂದು ಸಿಎಂ ಸಿದ್ದರಾಮಯ್ಯಗೆ ಔತಣಕೂಟ ಏರ್ಪಡಿಸಿದ್ದಾರೆ.

ರಾಜಣ್ಣ ತುಮಕೂರಿನ ತಮ್ಮ ನಿವಾಸಲ್ಲಿ ಶುಕ್ರವಾರ ಆಯೋಜಿಸಿರುವ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇದು ಕಾಂಗ್ರೆಸ್ ಮಾತ್ರವಲ್ಲದೆ, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. ಹೈಕಮಾಂಡ್ ವಿರುದ್ದ ಮಾತನಾಡಿದರೆಂಬ ಕಾರಣಕ್ಕೆ ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಮುಂದುವರೆಯಬೇಕು ಎಂದು ರಾಜಣ್ಣ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.

ಹೈಕಮಾಂಡ್ನಿಂದ ಕ್ರಮ ಎದುರಿಸಿರುವ ನಾಯಕ ತಾವು ನೀಡಿದ್ದ ಕ್ರಾಂತಿ ಹೇಳಿಕೆಗೆ ಪೂರಕವಾಗಿ ನವೆಂಬರ್ ತಿಂಗಳಲ್ಲೇ ಔತಣಕೂಟ ಆಯೋಜಿಸಿರುವುದು, ಆ ಔತಣಕೂಟದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ. ಇನ್ನು ಈ ಔತಣಕೂಟದಲ್ಲಿ ಸಿದ್ದರಾಮಯ್ಯ ಬಣದ ಕೆಲ ಸಚಿವರೂ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇನ್ನು ಮಧ್ಯಾಹ್ನ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸಭೆ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ 2 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ತುಮಕೂರು ನಗರಕ್ಕೆ ತಲುಪಲಿದ್ದಾರೆ. ಜಿಲ್ಲೆಯ ವಿವಿಧೆಡೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಅಂದರೆ ಮಧ್ಯಾಹ್ನ 2.30ರಿಂದ 3.30 ರವರೆಗೆ ರಾಜಣ್ಣ ಅವರ ಕ್ಯಾತ್ಸಂದ್ರ ನಿವಾಸದಲ್ಲಿ ಆಯೋಜಿಸಿರುವ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಸಮಯವನ್ನೂ ಕಾಯ್ದಿರಿಸಲಾಗಿದೆ.


