ಮಲೆನಾಡಿನಲ್ಲಿ ಬಹುತೇಖ ರೈತರು ಮಳೆಯಾಶ್ರಿತ ಬೆಳೆಗಳನ್ನೇ ಬೆಳೆಯುತ್ತಾರೆ. ಮೇ ತಿಂಗಳಿನಿಂದ ಜುಲೈವರೆಗೆ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಚಳಿಗಾಲದ ಸಮಯಕ್ಕೆ ಸರಿಯಾಗಿ ಬೆಳೆ ಕಟಾವಿಗೆ ಬಂದಿರುತ್ತೆ. ಅಹಾರ ಬೆಳೆಗಳಂತೆ ವಾಣಿಜ್ಯ ಬೆಳೆಗಳೂ ಸಹ ಇದೇ ಸಮಯದಲ್ಲಿ ಕೊಯ್ಲು ಮಾಡಬೇಕಿದೆ. ಇಲ್ಲಿನ ಪ್ರಮುಖ ಬೆಳೆಗಳೆಂದರೆ ಅಡಕೆ, ಜೋಳ, ಶುಂಠಿ ಹಾಗೂ ಭತ್ತ. ಹೆಚ್ಚೂ ಕಡಿಮೆ ಶಿವಮೊಗ್ಗ ಜಿಲ್ಲೆಯ ಅರ್ಥ ವ್ಯವಸ್ಥೆ ನಿಂತಿರುವುದೇ ಅಡಕೆ ಬೆಳೆ ಮೇಲೆ.
ಸದ್ಯ ಮಲೆನಾಡು ಜಿಲ್ಲೆಯಲ್ಲಿ ಅಡಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ಎಲ್ಲಾ ಬೆಳೆಗಳು ಕಟಾವಿಗೆ ಬಂದಿದ್ದವು. ಆದರೆ ಅನಿರೀಕ್ಷಿತ ಮಳೆಯಿಂದಾಗಿ ಯಾವುದೇ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಹಿಂದೆ ಸರಿಯಬಹುದು ಎಂದು ಕೊಯ್ಲು ಮಾಡಿದವರೂ ಸಹ ಸಂಸ್ಕರಣೆ ಮಾಡಲಾಗದೇ ಪರಿತಪಿಸುತ್ತಿದ್ದಾರೆ. ವರ್ಷವಿಡೀ ಪ್ರತಿಕೂಲ ವಾತಾವರಣ ಸೃಷ್ಟಿಸಿದ್ದ ಮಳೆಗೆ ಮಲೆನಾಡಿನ ರೈತರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಆಂತಕದಲ್ಲಿದ್ದಾರೆ. ಕಳೆದ ವರ್ಷದ ಪರಿಹಾರವೇ ಕೈ ಸೇರದ ಹಿನ್ನೆಲೆ ಈ ವರ್ಷ ಸರ್ಕಾರ ಕೃಪೆ ತೋರಬಹುದಾ ಎಂಬ ನಿರೀಕ್ಷೆ ಹೊತ್ತಿರುವ ರೈತರು ಅಧಿಕಾರಿಗಳು ಸಮೀಕ್ಷೆ ಮಾಡೋದಕ್ಕೆ ಬರುತ್ತಾರಾ ಎದಿರು ನೋಡುತ್ತಿದ್ದಾರೆ. ಇದುವರೆಗೆ ಯಾವುದೇ ಅಧಿಕಾರಿ ರೈತರ ಯೋಗಕ್ಷೇಮ ವಿಚಾರಿಸಲು ಹೋಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಜನಸ್ವರಾಜ್ ಯಾತ್ರೆ ಎಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನವೆಂಬರ್ ತಿಂಗಳ ಆರಂಭದಿಂದಲೇ ಮಲೆನಾಡಿನಲ್ಲಿ ಅಡಕೆ ಹಾಗೂ ಭತ್ತದ ಕೊಯ್ಲು ಶುರುವಾಗುತ್ತೆ. ಆದರೆ ನವೆಂಬರ್ ತಿಂಗಳ ಆರಂಭದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಯಾವುದೇ ಬೆಳೆಗಳ ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗಿರಲಿಲ್ಲ. ಭತ್ತದ ಬೆಳೆ ಕಟಾವು ಮಾಡದಿದ್ದರೆ ಭತ್ತ ಉದುರಿ ಹೋಗುತ್ತದೆ. ಭತ್ತದ ಪೈರನ್ನು ಕಟಾವು ಮಾಡಲು ಮಳೆ ಬಿಡದೇ ವಿಳಂಭವಾಗುತ್ತಿತ್ತು. ಮಳೆಯ ಮಧ್ಯೆಯೂ ಹೇಗೋ ಭತ್ತದ ಪೈರನ್ನು ಕಟಾವು ಮಾಡಿದ ರೈತರ ಸ್ಥಿತಿಯಂತೂ ಹೇಳತೀರದಾಗಿದೆ. ಭತ್ತ ಕಟಾವು ಮಾಡಿ ಗದ್ದೆಯಲ್ಲೇ ಇದೆ. ಇದೇ ಸಮಯದಲ್ಲಿ ವಕ್ಕರಿಸಿಕೊಂಡ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಕೊಯ್ದು ಹಾಕಿರುವ ಭತ್ತದ ಫಸಲು ಗದ್ದೆಯಲ್ಲೇ ಮೊಳಕೆಯೊಡೆಯುತ್ತಿದೆ.

ಈ ಅವಧಿಯಲ್ಲಿ ಮಳೆ ಇಲ್ಲದಿದ್ದರೆ ಅಡಕೆ ಕೊಯ್ಲು ಬಿರುಸಿನಿಂದ ಸಾಗಿರುತಿತ್ತು. ಆದರೆ ನವೆಂಬರ್ ಆರಂಭದಿಂದಲೇ ಮಳೆ ಹಿಡಿದುಕೊಂಡಿರುವುದರಿಂದ ಅಡಕೆ ಕೊಯ್ಲು ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಡಕೆಯನ್ನು ಮರದಲ್ಲೇ ಬಿಟ್ಟರೆ ಅಡಕೆ ಕಾಯಿಗಳು ಗೋಟಾಗಿ ಬೆಲೆಯೇ ಇಲ್ಲದಂತಾಗುತ್ತದೆ. ಅಡಕೆ ಗೊನೆ ತೆಗೆದರೆ ಅಡಕೆಯನ್ನು ಒಣಗಿಸಲು ಮಳೆ ಬಿಡುತ್ತಿಲ್ಲ. ಮಳೆ ಮಧ್ಯೆಯೂ ಅಡಕೆ ಕೊಯ್ಲು ಮಾಡಿದರ ಪಾಡು ಹೇಳತೀರದಾಗಿದೆ. ತಟ್ಟಿಗಳ ಮೇಲೆ ಅಡಕೆ ಒಣಗಿಸಿ ತಟ್ಟಿಯ ಕೆಳಗೆ ಬೆಂಕಿ ಹಾಕಿ ಅಡಕೆಯನ್ನು ಒಣಗಿಸುವ ಸ್ಥಿತಿ ಬಂದಿದೆ. ಇನ್ನು ಕೆಲ ರೈತರು ಗ್ಯಾಸ್ ಸಿಲಿಂಡರ್ ಬೆಂಕಿಯ ಮೂಲಕ ಅಡಕೆಯನ್ನು ಒಣಗಿಸುತ್ತಿದ್ದಾರೆ.
ಸರಿಯಾಗಿ ರೈತರು ಬೆಳೆದ ಬೆಳೆಗಳು ಕಟಾವಿಗೆ ಬರುವ ಸಮಯಕ್ಕೇ ಮಳೆ ಆರಂಭಗೊಂಡಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಮಲೆನಾಡಿನ ರೈತರ ಸ್ಥಿತಿ. ಸರ್ಕಾರ ರೈತರ ನೆರವಿಗೆ ಧಾವಿಸದೇ ಇದ್ದಲ್ಲಿ ರೈತರ ಈ ಬಾರಿ ಸಾಲದ ಶೂಲಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ. ಶಿವಮೊಗ್ಗ ಸಮೀಪದ ಕೂಡ್ಲಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಕೂಡ್ಲಿ ಗ್ರಾಮದಲ್ಲಿ ಮನೆಯೊಂದು ಕುಸಿದುಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಚಿಕ್ಕಕೂಡ್ಲಿ ಗ್ರಾಮದ ಪಾರ್ವತಮ್ಮ ಅವರ ಮನೆ ಇಂದು ಬೆಳಗಿನ ಜಾವ ಕುಸಿದು ಬಿದ್ದಿದೆ. ಕುಟುಂಬದವರೆಲ್ಲರೂ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಶಬ್ದ ಕೇಳಲಾರಂಭಿಸಿದೆ. ಇದರಿಂದ ಎಚ್ಚರಗೊಂಡ ಮನೆಯವರೆಲ್ಲಾ ಮನೆಯಿಂದ ಹೊರಬರುತ್ತಿದ್ದಂತೆ ಮನೆತ ಗೋಡೆಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಸದ್ಯ ಬಿಡುವು ನೀಡಿದೆ. ಆದರೆ ನೂರಾರು ಹೆಕ್ಟೇರ್ ಭತ್ತ, ಜೋಳ ಹಾಗೂ ಅಡಕೆ ಬೆಳೆ ನಾಶವಾಗಿದೆ. ಸರ್ಕಾರ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡದಿದ್ದರೆ ರೈತರು ಬದುಕುವುದೇ ಕಷ್ಟ ಎಂಬಂತಾಗಿದೆ.











