ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಎಲ್ಲ ಅಧಿಕಾರಿಗಳ, ಶಾಸಕರ ಸಭೆ ಕರೆಯಲಾಗಿದೆ. ಯಾವ ಭಾಗದಲ್ಲಿ ಎಷ್ಟು ಹಾನಿ ಆಗಿದೆ? ಎಲ್ಲೆಲ್ಲಿ ಭೇಟಿ ಮಾಡಬೇಕು? ಏನಾಗಿದೆ ಎಂದು ಕೇಳಿದ್ದೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಳೆ ಹಾನಿ ಕುರಿತು ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗಿದೆ ಎಂದರು.
ಶಾಲೆಗಳಿಗೆ ರಜೆ ಕೊಟ್ಟಿದ್ದಾರೆ ಎನ್ನುವ ಕುರಿತು ಈಗ ತಾನೆ ಮಾಹಿತಿ ಲಭಿಸಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆ ಆರಂಭವಾದ ಮೇಲೆ ರಜೆ ಕೊಟ್ಟಿದ್ದರಿಂದ ತೊಂದರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಳೆ ಹಾನಿ ಕುರಿತ ಸಭೆಯಲ್ಲಿ ಎಲ್ಲ ಚರ್ಚಿಸಲಾಗುವುದು ಎಂದರು.
ಮೈಸೂರು ದಸರಾ ಕುರಿತು ಪ್ರತಿಕ್ರಿಯಿಸಿ, ಹೈಪವರ್ ಕಮಿಟಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅದ್ಧೂರಿ ದಸರಾ ತೀರ್ಮಾನವಾಗಿರುವಂಥದ್ದು. ಈಗಾಗಲೇ ಸಮಿತಿ ರಚಿಸಿದ್ದೇವೆ. ಇಂದು ಮಧ್ಯಾಹ್ನ ಅದರ ಸಭೆ ಕೂಡ ಕರೆದಿದ್ದೇನೆ. ಮಳೆ ನಿಂತ ನಂತರ ದಸರಾ ಕೆಲಸ ಆರಂಭವಾಗಲಿದೆ ಎಂದರು.

ರಾಮನಗರ ಹೆದ್ದಾರಿ ಜಲಾವೃತ ಕುರಿತು ಪ್ರತಿಕ್ರಿಯಿಸಿ, ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳೆಲ್ಲರನ್ನೂ ಕರೆದು ಸಭೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನಿನ್ನೆ ರಾಮನಗರ, ಮಂಡ್ಯ, ಮೈಸೂರು ವರ್ಚುವಲ್ ಮೂಲಕ ಚರ್ಚೆ ನಡೆಸಿದ್ದಾರೆ. ನಾಗಮಂಗಲ ಹೋಗುವ ರಸ್ತೆ ಮತ್ತೆ ಕನಕಪುರ ಹೋಗುವ ರಸ್ತೆಯಲ್ಲಿ ಬದಲಾವಣೆ ಮಾಡಬೇಕು. ಯಾಕೆಂದರೆ ಕೆರೆ ಕೋಡಿ ಎಲ್ಲ ನೀರು ತುಂಬಿದೆ. ಈ ಮಾರ್ಗವಾಗಿ ಮೈಸೂರಿಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು ಎಂದು ಹೇಳಿದ್ದಾರೆ. ಎರಡು ದಿನದಲ್ಲಿ ಮಳೆ ಕಡಿಮೆಯಾದರೆ ರಸ್ತೆಯಲ್ಲಿ ಹೋಗಬಹುದು ಎಂದರು.
ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ ನಮಗೆ ಏನೂ ಯಾವುದೇ ಸೂಚನೆ ಬಂದಿಲ್ಲ. ಪ್ರಧಾನಿ ಸೆಪ್ಟೆಂಬರ್ 2ರಂದು ಮಂಗಳೂರಿಗೆ ಬರುತ್ತಿರುವುದರಿಂದ ಪಕ್ಷದ ಅಧ್ಯಕ್ಷರು ನಮಗೆ ಏನೂ ಹೇಳಿಲ್ಲ. ಪ್ರಧಾನಿಯವರು ಬಂದು ಹೋದ ಮೇಲೆ ತಿಳಿಸುತ್ತಾರೆ. ಇನ್ನೂ ಸಮಯವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನವರ ಐಕ್ಯತೆ ನಡಿಗೆ ಕುರಿತು ಪ್ರತಿಕ್ರಿಯಿಸಿ, ಅವರದ್ದು ಏನು ಐಕ್ಯತೆ ನನಗೆ ಅರ್ಥವಾಗುತ್ತಿಲ್ಲ. ಪ್ರಧಾನಿಯವರು ಇಡೀ ವಿಶ್ವವೇ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು. ಮುರುಘಾ ಶ್ರೀಗಳ ಕುರಿತು ಸಿಎಂ, ಗೃಹಮಂತ್ರಿಗಳು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾನೂ ಏನು ವರದಿ ಬರಬಹುದೆನ್ನುವ ಕಾತುರದಲ್ಲಿದ್ದೇನೆ. ತನಿಖೆ ಹೊರ ಬಂದ ನಂತರ ಎಲ್ಲವೂ ತಿಳಿಯಲಿದೆ ಎಂದರು.
ದಸರಾ ಉದ್ಘಾಟಕರ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಇನ್ನೂ ಚರ್ಚೆ ಆಗಿಲ್ಲ ಎಂದರು. ತಾಲೂಕುಗಳಲ್ಲಿ ಮನೆ ಬೀಳುವ ಕುರಿತು ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಭಾಗಶಃ ಹಾನಿ ಆದವರಿಗೆ ತಕ್ಷಣ ಪರಿಹಾರ ಸಿಗಲಿದೆ ಎಮದು ತಿಳಿಸಿದರು.