
ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಮಂದಿ ಕಾರ್ಮಿಕರ ಸಾವನ್ನಪ್ಪಿದ್ರು. ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ರಾಜ್ಯ ಸರ್ಕಾರದಿಂದ ಮೃತ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಿಎಂ, ಗಾಯಾಳುಗಳ ಆಸ್ಪತ್ರೆ ವೆಚ್ಚ ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಶಾಸಕ ಭೈರತಿ ಬಸವರಾಜ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡಿದ್ದಾರೆ. 125 ವರ್ಷದಲ್ಲೇ ಅತ್ಯಧಿಕ ಮಳೆಯಾಗಿದೆ. ಹಾಗಾಗಿ ಬೆಂಗಳೂರಲ್ಲಿ ಮಳೆಯಿಂದ ಸಮಸ್ಯೆ ಎದುರಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡದಲ್ಲಿ ಸಮಸ್ಯೆ ಎದುರಾಗಿದೆ. ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡವೊಂದು ವಾಲಿದೆ. ಹೊರಮಾವು ನಂಜಪ್ಪ ಗಾರ್ಡನ್ನಲ್ಲಿರುವ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ವಾಲಿದೆ. ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಸೂಚನೆ ನೀಡಿದ್ದಾರೆ. ಪುಟ್ಟಪ್ಪ ಎಂಬುವರ ಕಟ್ಟಡ ಇದಾಗಿದ್ದು, ಸ್ವಂತ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ಕಟ್ಟಿದ್ದರು. ಐದಾರು ದಿನ ಮಳೆ ಬಂದ ಕಾರಣ ಕೆಳಗೆ ಬಿರುಕು ಬಿಟ್ಟಿದೆ. ಎಂಟು ಅಡಿ ಅಗಲ, 21 ಉದ್ದ ಇರೋ ಮಹಡಿ ಮನೆ ಕೆಡವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಳೆಗೆ ಅವಾಂತರದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಬ್ರಾಂಡ್ ಬೆಂಗಳೂರಿನಲ್ಲಿ ಅವಘಡಗಳ ಮೇಲೆ ಅವಘಡಗಳು ನಡೆಯುತ್ತಿದೆ. ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತವಾಗಿ 8 ಮಂದಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಈ ಹಿಂದೆ ಕರೆಂಟ್ ಶಾಕ್ ಹೊಡೆದು ಮಗು ಸತ್ತಾಗ , ಇಲಿ ಕಚ್ಚಿತ್ತು ಅಂದ್ರು. ಕೆಂಗೇರಿಯಲ್ಲಿ ಅಣ್ಣ-ತಂಗಿ ನೀರಿನಲ್ಲಿ ಕೊಚ್ಚಿಹೋದ್ರು ಎಂದು ಕಿಡಿಕಾರಿದ್ದಾರೆ. ಮಳೆ ಸೇರಿ ಸಾಕಷ್ಟು ಅನಾಹುತಗಳಿಂದ ಸಾಕಷ್ಟು ಜನ ಸತ್ತಿದ್ದು ಅವ್ರ ಶಾಪ ಈ ಸರ್ಕಾರಕ್ಕೆ ತಟ್ಟುತ್ತೆ ಎಂದಿದ್ದಾರೆ.

ಬೆಂಗಳೂರಿನ ಕಟ್ಟಡ ಕುಸಿತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಬೀದಿಗಿಳಿದು ಚುನಾವಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಪಾಲಿಕೆ ಕಮಿಷನರ್ ನೀಡಿದ ಸ್ಟೇಟ್ಮೆಂಟ್ ಹೇಳಿ ಮನೆಗೆ ಹೋಗ್ತಿದ್ದಾರೆ.. ಮೃತರ ಕುಟುಂಬಕ್ಕೆ ಸರ್ಕಾರ 50 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ










