ರಾಹುಲ್ ಗಾಂಧಿ ವೈಯಕ್ತಿಕವಾಗಿ ಒಳ್ಳೆಯ ವ್ಯಕ್ತಿ. ಆದರೆ ರಾಜಕಾರಣಕ್ಕೆ ಅವರು ಸೂಕ್ತ ಅಲ್ಲ. ಸದಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರವನ್ನು ಟೀಕಿಸುತ್ತಾ ಮಕ್ಕಳಂತೆ ಆಡ್ತಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಹಿರಿಯ ರಾಜಕಾರಣಿ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷವನ್ನು ಸೇರುವ ವದಂತಿಯನ್ನು ತಳ್ಳಿಹಾಕಿದ್ದು, ಜಮ್ಮು ಕಾಶ್ಮೀರದಲ್ಲಿ ತಮ್ಮದೇ ನೇತೃತ್ವದಲ್ಲಿ ಪಕ್ಷ ಸ್ಥಾಪಿಸುವುದಾಗಿ ಘೊಷಿಸಿದರು.

ಕಾಂಗ್ರೆಸ್ ಪಕ್ಷದ ನಡವಳಿ ಕುರಿತು ತೀರ್ಮಾನಗಳನ್ನು ಕೈಗೊಳ್ಳುವ ಪರಮಾಧಿಕಾರ ಸಮಿತಿಗೆ ಅರ್ಥವೇ ಇಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಕಿಕೊಟ್ಟ ಬುನಾದಿಯನ್ನು ಧ್ವಂಸಗೊಳಿಸಲಾಗಿದೆ ಎಂದು 73 ವರ್ಷದ ಹಿರಿಯ ರಾಜಕಾರಣಿ ಗುಲಾಮ್ ನಬಿ ಆಜಾದ್ ಹೇಳಿದರು.
1998ರಿಂದ 2004ರವರೆಗೆ ಸೋನಿಯಾ ಗಾಂಧಿ ನಾಯಕತ್ವ ವಹಿಸಿದ್ದಾಗ ಹಿರಿಯ ನಾಯಕರನ್ನು ಸಂಪರ್ಕಿಸುತ್ತಿದ್ದರು. ಎಲ್ಲರ ಸಲಹೆ ಪಡೆದು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರು. ಆದರೆ ರಾಹುಲ್ ಗಾಂಧಿ ಬಂದ ನಂತರ ಸೋನಿಯಾ ಅವರನ್ನು ಹೆಚ್ಚಾಗಿ ಅವಲಂಬಿಸಿದರು. ಆದರೆ ರಾಹುಲ್ ರಾಜಕಾರಣದ ಬಗ್ಗೆ ಅಪ್ರಪ್ರಬುದ್ಧರಾಗಿರುವುದರಿಂದ ಪಕ್ಷಕ್ಕೆ ಭಾರೀ ಹಿನ್ನಡೆ ಆಗುತ್ತಿದೆ ಎಂದು ಅವರು ಆರೋಪಿಸಿದರು.