ನಳ ಮಹರಾಜನಂತೆ ರುಚಿ ರುಚಿಯಾದ ಅಡುಗೆ ಮಾಡುವ ನಾಯಕ, ಮದುವೆ -ಮುಂಜಿ, ಸಮಾರಂಭಗಳಿಗೆ ಕೇಟ್ರಿನ್ ಮಾಡುವುದೇ ಈತನ ಕಾಯಕ. ಎಲ್ಲರ ಮದುವೆಗೂ ಅಡುಗೆ ಮಾಡಿ ಬಡಿಸುವ 40ರ ಹರೆಯದ ಹಯವದನನಿಗೆ, ತನ್ನ ಮದುವೆ ಊಟ ಮಾಡುವ ಭ್ಯಾಗವೇ ಇಲ್ಲ. ಎಂತೆಂತವ್ರಿಗೋ ಮದುವೆಯಾಗ್ತಿದೆ, ತನಗೆ ಇನ್ನೂ ಹೆಣ್ಣು ಸಿಗ್ತಿಲ್ಲ ಅಂತ ತಂದೆಯ ಬಳಿ ಅಳಲು ತೋಡಿಕೊಳ್ಳುವ ನಾಯಕನಿಗೆ, ಮದುವೆಯಾಗುತ್ತೋ ಇಲ್ಲವೋ ಅಂತ ತಿಳ್ಕೋಬೇಕು ಅಂದ್ರೆ, ನೀವು ಥಿಯೇಟರ್ಗೆ ಹೋಗಿ ಸಿನಿಮಾ ನೋಡ್ಬೇಕು. ಭರಪೂರ ಹಾಸ್ಯದ ಜೊತೆಗೆ ಒಂದೊಳ್ಳೆ ಸಂದೇಶ ಸಾರುವ ಸಿನಿಮಾ, ʻರಾಘವೇಂದ್ರ ಸ್ಟೋರ್ಸ್ʼ.
![](https://pratidhvani.com/wp-content/uploads/2023/04/Raghavendra-Stores-Kannada-Movie-Box-Office-Hit-or-Flop.jpg)
ಚಿತ್ರದ ನಾಯಕ ಜಗ್ಗೇಶ್ ಸಂಪೂರ್ಣ ಸಿನಿಮಾವನ್ನ ಆವರಿಸಿಕೊಂಡಿದ್ದಾರೆ. ತಮ್ಮ ಮ್ಯಾನರಿಸಂನಿಂದಲೇ ಸಿನಿಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡಿದ್ದಾರೆ ನಟ ಜಗ್ಗೇಶ್. ಅವರ ಅಭಿಮಾನಿಗಳು ಮಿಸ್ ಮಾಡ್ದೇ ನೋಡಲೇ ಬೇಕಾದ ಸಿನಿಮಾ ʻರಾಘವೇಂದ್ರ ಸ್ಟೋರ್ಸ್ʼ. ಎಲ್ಲೋ ಒಂದು ಕಡೆ ಈ ಸಿನಿಮಾ ಮಹಿಳೆಯರ ಅಂತರಾಳವನ್ನ ತಟ್ಟುತ್ತೆ. ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ಗಳು ಹೆಚ್ಚು ಎನಿಸಿದ್ರೂ, ಜಗ್ಗೇಶ್ ಸಿನಿಮಾ ಅಂದ್ಮೇಲೆ ಡಬಲ್ ಮೀನಿಂಗ್ ಡೈಲಾಗ್ ಇಲ್ದೇ ಇರುತ್ತಾ ಅಂತ ನಾವೇ ಸ್ವಲ್ಪ ಅಡ್ಜೆಸ್ಟ್ ಮಾಡ್ಕೋಬೇಕು. ಕೆಲವೊಂದು ಸನ್ನಿವೇಶಗಳು ಸ್ವಲ್ವ ಓವರ್ ಆಯ್ತು ಎನಿಸಿದ್ರೂ , ಅಂತಹ ಸನ್ನಿವೇಶಗಳಿಂದಲೇ ಜನರನ್ನು ನಗಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕರು.
![](https://pratidhvani.com/wp-content/uploads/2023/04/Capture-2-3.jpg)
ʻಮಿಸ್ಟರ್ & ಮಿಸೆಸ್ ರಾಮಾಚಾರಿʼ, ʻರಾಜಕುಮಾರʼ, ʻಯುವರತ್ನʼದಂತಹ ಮಾಸ್ ಎಂಟರ್ಟೈನರ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾನ್ನಾಗಿ ನೀಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಹೊಸ ಪ್ರಯತ್ನಕ್ಕೆ ಕೈ ಹಾಕಿ, ಯಶಸ್ವಿಯಾಗಿದ್ದಾರೆ. ಕಾಮಿಡಿ ಕಚಗುಳಿಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕೆಲಸ ಮಾಡಿದ್ದಾರೆ ನಿರ್ದೇಶಕರು. ಉತ್ತಮ ಸ್ಕ್ರೀನ್ ಪ್ಲೇ, ಕಿವಿಗೆ ಹಿತವೆನಿಸುವ ಒಂದೆರಡು ಹಾಡುಗಳು ಕೂಡ ʻರಾಘವೇಂದ್ರ ಸ್ಟೋರ್ಸ್ʼ ಚಿತ್ರದಲ್ಲಿದೆ. ಕೆಜಿಎಫ್, ಕಾಂತಾರದಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿಯಲ್ಲಿ ʻರಾಘವೇಂದ್ರ ಸ್ಟೋರ್ಸ್ʼ ಸಿನಿಮಾ ಮೂಡಿಬಂದಿದೆ.
![](https://pratidhvani.com/wp-content/uploads/2023/04/Capture-3-3.jpg)
ಚಿತ್ರದ ಕೊನೆಯಲ್ಲಿ ಸ್ಯಾಂಡಲ್ವುಡ್ನ ಧ್ರುವತಾರೆ, ಅಭಿಮಾನಿಗಳ ಆರಾಧ್ಯದೈವ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ರವರನ್ನು, ಅವರ ಸಮಾಜಸೇವೆಯನ್ನ ಸ್ಮರಿಸುವ ಕೆಲಸವನ್ನ ಕೂಡ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಬರುವ ಪಾತ್ರಗಳ ಬಗ್ಗೆ ಹೇಳುವುದಾದರೆ, ನಟಿ ಶ್ವೇತಾ ಶ್ರೀವತ್ಸವ್ ತಮಗೆ ಕೊಟ್ಟಿರೋ ಪಾತ್ರವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ನಟ ಅಚ್ಯುತ್ ಕುಮಾರ್ ಅವರದು ಆಗಾಗ ಬಂದು ಹೋಗುವ ಪಾತ್ರ. ಹಿರಿಯ ಕಲಾವಿದ ದತ್ತಣ್ಣ ನಾಯಕನಿಗೆ ತಂದೆಯಾಗಿ ಉತ್ತಮ ನಟನೆ. ರವಿಶಂಕರ್ ಗೌಡ, ಮಿತ್ರ, ರಜಿನಿ ಸೇರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ನಲ್ಲಿ ಬಹಳ ದಿನಗಳ ನಂತರ ಸ್ಯಾಂಡಲ್ವುಡ್ನಲ್ಲಿ ಒಂದೊಳ್ಳೆ ಕಾಮಿಡಿ ಜಾನರ್ ಸಿನಿಮಾ ಬಿಡುಗಡೆಯಾಗಿದೆ. ಎಲ್ಲರೂ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ.
![](https://pratidhvani.com/wp-content/uploads/2023/04/Capture-26.jpg)